ರೋಹಿತ್ ವೇಮುಲಾ ಕಾಯ್ದೆ: ಪದಗಳ ವ್ಯಾಖ್ಯಾನಗಳು ಅಸಷ್ಟ

ರೋಹಿತ್ ವೇಮುಲಾ (Photo credit: The Hindu)
ಬೆಂಗಳೂರು : ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು ಎಂಬುದನ್ನು ಖಾತ್ರಿಪಡಿಸುವ ಉದ್ದೇಶ ಹೊಂದಿರುವ ರೋಹಿತ್ ವೇಮುಲಾ ಕಾಯ್ದೆಯಲ್ಲಿನ ಅನೇಕ ಪದಗಳ ವ್ಯಾಖ್ಯಾನಗಳು ಅಸ್ಪಷ್ಟವಾಗಿವೆ. ಹೀಗಾಗಿ ಈ ಕಾಯ್ದೆಯು ಕಾನೂನು ಬಲವನ್ನು ಹೊಂದಿಲ್ಲ ಎಂದು ಗೃಹ ಇಲಾಖೆಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಗೌರವದ ಹಕ್ಕು) ವಿಧೇಯಕಕ್ಕೆ ಸಮಾಜ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವವನ್ನು ಸಚಿವ ಸಂಪುಟವು ಪರಿಶೀಲಿಸಿತ್ತು. ನಂತರ ಒಳಾಡಳಿತ ಇಲಾಖೆಯ ಅಭಿಪ್ರಾಯ ಪಡೆದು ನಂತರ ಸಚಿವ ಸಂಪುಟಕ್ಕೆ ಮರು ಮಂಡಿಸಬೇಕು ಎಂದು ಸೂಚಿಸಿ, ಪ್ರಸ್ತಾವವನ್ನು ಮುಂದೂಡಿತ್ತು.
ಈ ಬೆಳವಣಿಗೆ ನಡುವೆಯೇ ಒಳಾಡಳಿತ ಇಲಾಖೆಯು ಈ ವಿಧೇಯಕಕ್ಕೆ ಸಂಬಂಧಿಸಿದಂತೆ ನೀಡಿದ್ದ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ. ಈ ಅಭಿಪ್ರಾಯದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಅಭಿಪ್ರಾಯದಲ್ಲೇನಿದೆ?: ಮಸೂದೆಯಲ್ಲಿ ಅನೇಕ ಪದಗಳ ವ್ಯಾಖ್ಯಾನಗಳು ಅಸ್ಪಷ್ಟವಾಗಿವೆ ಮತ್ತು ಕಾನೂನುಬದ್ಧ ಬಲವನ್ನು ಹೊಂದಿಲ್ಲದಿರಬಹುದು. ಉದಾಹರಣೆಗೆ, ‘ವಿವೇಚನೆ’ ಎಂಬ ವ್ಯಾಖ್ಯಾನದಲ್ಲಿ, ಯಾವುದೇ ಉದ್ದೇಶಪೂರ್ವಕ ಅಥವಾ ಅನುದ್ದೇಶಿತ ಕ್ರಿಯೆ ಅಥವಾ ನಿರ್ಲಕ್ಷ್ಯವು ವ್ಯಕ್ತಿ ಅಥವಾ ಸಮೂಹದ ಮೇಲೆ ಹಾನಿಕರ ಪರಿಣಾಮ ಬೀರುವುದಾಗಿ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಮಸೂದೆಯ ಸೆಕ್ಷನ್ 12 ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿವಾದಿಯನ್ನು ಅಮಾನತು ಮಾಡಲು ಅಥವಾ ರಜೆ ನೀಡಲು ಕಡ್ಡಾಯ ಶಿಫಾರಸುಗಳನ್ನು ಮಾಡಬೇಕು ಎಂದು ಹೇಳುತ್ತದೆ. ಇಂತಹ ವಿಧಾನವು ಸಾಮರ್ಥ್ಯ ಮತ್ತು ವಿವೇಕಾಧೀನತೆಯ ತತ್ವವನ್ನು ಹಾನಿಗೊಳಿಸಬಹುದು. ಸಮಾನತೆ ಸಮಿತಿ ತನ್ನ ವಿವೇಕವನ್ನು ಅನ್ವಯಿಸಿ, ಸಂಬಂಧಿತ ಸಂಸ್ಥೆಗೆ ಪ್ರತಿವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬಹುದು. ಆ ಸಂಸ್ಥೆಯು ಸಮರ್ಪಕ ಕಾರಣಗಳು ಮತ್ತು ಕಂಡುಹಿಡಿಕೆಗಳೊಂದಿಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದು ಒಳಾಡಳಿತ ಇಲಾಖೆಯು ಹೇಳಿದೆ.
ಸೆಕ್ಷನ್ 27(2) ಪ್ರಕಾರ, ಮೆಟ್ರೊಪಾಲಿಟನ್ ಮ್ಯಾಜಿ ಘಸ್ಟ್ರೇಟ್ ಅಥವಾ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾ ಜಿಸ್ಟ್ರೇಟ್ಕಿಂತ ಕೆಳಮಟ್ಟದ ಯಾವುದೇ ನ್ಯಾಯಾಲಯವು ಸೆಕ್ಷನ್ 15 ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಆದರೆ, ಮಸೂದೆ ಯಾವುದೇ ನಿರ್ದಿಷ್ಟ ಅಪರಾಧ ಅಥವಾ ಶಿಕ್ಷೆಯನ್ನು ನೀಡುವುದಿಲ್ಲ. ಹೀಗಾಗಿ, ಮಸೂದೆ ಅಪೂರ್ಣವಾಗಿದೆ ಎಂದು ಅಭಿಪ್ರಾಯಿಸಿದೆ.
ಈ ಅಭಿಪ್ರಾಯವನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು 2026ರ ಮಾರ್ಚ್ 10ರಂದೇ ಅನುಮೋದಿಸಿರುವುದು ಗೊತ್ತಾಗಿದೆ.
ರೋಹಿತ್ ವೇಮುಲಾ ಹೆಸರಿನ ಕಾನೂನನ್ನು ಕರ್ನಾಟಕದಲ್ಲೂ ರೂಪಿಸುವಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಜಾತಿ ತಾರತಮ್ಯ ತಡೆಯಲು ರಾಜ್ಯ ಸರಕಾರ ಮುಂದಾಗಿತ್ತು.
ರಾಹುಲ್ ಗಾಂಧಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿಯವರೇ ನಿಮ್ಮ ಸಹಾನುಭೂತಿಯ ಪತ್ರ ಮತ್ತು ನ್ಯಾಯಕ್ಕಾಗಿ ಅಚಲ ಧ್ವನಿಗೆ ಧನ್ಯವಾದಗಳು. ಜಾತಿ, ವರ್ಗ ಅಥವಾ ಗುರುತಿನ ಹೆಸರಿನಲ್ಲಿ ಯಾವುದೇ ವಿದ್ಯಾರ್ಥಿ ಎಂದಿಗೂ ತಾರತಮ್ಯ ಅಥವಾ ಬಹಿಷ್ಕಾರವನ್ನು ಎದುರಿಸದಂತೆ ನೋಡಿಕೊಳ್ಳಲು ನಮ್ಮ ಸರಕಾರ ಬದ್ಧ ಎಂದು ಹೇಳಿದ್ದರು.
ರೋಹಿತ್, ಪಾಯಲ್, ದರ್ಶನ್ ಮತ್ತು ಘನತೆಗೆ ಅರ್ಹರಾದ ಅಸಂಖ್ಯಾತರ ಕನ ಸುಗಳನ್ನು ಗೌರವಿಸಲು ಕಾ ನೂ ನನ್ನು ಆದಷ್ಟು ಶೀಘ್ರ ಸಿದ್ಧಪಡಿಸಲಾಗುವುದು. ಬಿ.ಆರ್. ಅಂಬೇಡ್ಕರ್ ಅವರ ಸಮಾನ, ಸಹಾನುಭೂತಿಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಡಲಾಗುವುದು. ಆದಷ್ಟು ಬೇಗ ಈ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದರು.
ರಾಜ್ಯದ ಸಾರ್ವಜನಿಕ, ಖಾಸಗಿ, ಡೀಮ್ಡ್ ಸೇರಿದಂತೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕು ರಕ್ಷಣೆ ಮಾಡಲು ’ರೋಹಿತ್ ವೇಮುಲ’ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರಲು ಉತ್ಸುಕವಾಗಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೂಚನೆ ಆಧರಿಸಿ ರಾಜ್ಯ ಸರಕಾರ ‘ಕರ್ನಾಟಕ ರೋಹಿತ್ ವೇಮುಲ ಶಿಕ್ಷಣ ಮತ್ತು ಘನತೆಯ ಹಕ್ಕು (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) ವಿಧೇಯಕ -2025’ ಕರಡು ಅಂತಿಮಗೊಂಡಿತ್ತು. ಆಗಸ್ಟ್ 2ನೇ ವಾರದಲ್ಲಿ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಗೆ ಬಯಸಿತ್ತು.
ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯ. ಕಾಯ್ದೆ ಉಲ್ಲಂಘನೆಯು ಜಾಮೀನು ರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ ಸರಕಾರದ ಎಲ್ಲ ರೀತಿಯ ಹಣಕಾಸು ನೆರವು ಮತ್ತು ಅನುದಾನ ನಿಲ್ಲಿಸಲು ವಿಧೇಯಕದಲ್ಲಿಅವಕಾಶ ಕಲ್ಪಿಸಲಾಗಿದೆ. ನೂತನ ವಿಧೇಯಕವು ಕಾನೂನು ಇಲಾಖೆ ಪರಾಮರ್ಶೆಗೆ ಒಳಪಟ್ಟಿದೆ.
ಮುಕ್ತ ಪ್ರವೇಶ: ವರ್ಗ, ಜಾತಿ, ಧರ್ಮ ಮತ್ತು ಲಿಂಗ ಬೇಧವಿಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶವು ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಅರ್ಹತಾ ಪರೀಕ್ಷೆ ಮತ್ತು ಮೀಸಲು ನೀತಿ ಅನ್ವಯ ಇರಬೇಕು. ಈ ವಿಚಾರದಲ್ಲಿ ಯಾವುದೇ ವ್ಯಕ್ತಿಗೆ ತಾರತಮ್ಯ ಇರಬಾರದು ಎಂದು ಉದ್ದೇಶಿತ ಕಾಯ್ದೆಯಲ್ಲಿ ಸ್ಪಷ್ಟಪಡಿಸಿದೆ. ತಾರತಮ್ಯಕ್ಕೆ ಒಳಗಾದ ವ್ಯಕ್ತಿ, ಅವನ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತ ಸಂಬಂಧಿ ಅಥವಾ ಸಹೋದ್ಯೋಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಯ್ದೆ ಉಲ್ಲಂಘನೆಗಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಸರಕಾರ ಸಿದ್ಧಪಡಿಸಿರುವ ಈ ವಿಧೆಯಕವು ಜಾರಿಯಾದ ನಂತರ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಗಳು, ಜಾತಿಗಳು, ಮತಗಳೂ, ಲಿಂಗ, ದೇಶ ಎಂಬ ತಾರತಮ್ಯ ಇಲ್ಲದ ಮುಕ್ತ ಸಮಾಜ ವಾತಾವರಣ ನಿರ್ಮಾಣವಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವು ಜಾತಿ, ವರ್ಗ, ಮತ, ಲಿಂಗ ಅಥವಾ ದೇಶ ಎಂಬ ಭೇದ ಇಲ್ಲದೇ ಎಲ್ಲರಿಗೂ ಮುಕ್ತವಾಗಿರುತ್ತದೆ.
ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷಗಳ ಹರೆಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿತ್ತು. ರಾಜ್ಯ ಪ್ರಾಯೋಜಿತ ಜಾತಿ ತಾರತಮ್ಯದಿಂದ ಈ ಸಾವು ಸಂಭವಿಸಿದೆ ಎಂದು ದೇಶಾದ್ಯಂತ ನಾನಾ ವಿಶ್ವವಿದ್ಯಾನಿಲಯಗಳಲ್ಲಿಪ್ರತಿಭಟನೆ ನಡೆದಿದ್ದವು. ಈ ಪ್ರಕರಣದಲ್ಲಿಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆ ಹಾಗೂ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಘನತೆ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸುವ ಅಗತ್ಯವನ್ನು ಕಾಂಗ್ರೆಸ್ ಪ್ರತಿಪಾದಿಸಿತ್ತು.
ರೋಹಿತ್ ವೇಮುಲಾ ಕಾಯ್ದೆಯನ್ನು ಇದೇ ಅಧಿವೇಶನದಲ್ಲಿ ಜಾರಿಗೆ ತಂದರೆ ಇಂತಹ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಇದು ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವಲ್ಲಿ ರಾಷ್ಟ್ರವ್ಯಾಪಿ ಸುಧಾರಣೆಗಳಿಗೆ ಪೂರ್ವನಿದರ್ಶನ ಸೃಷ್ಟಿಸಲಿದೆ ಎಂದು ಹೇಳಲಾಗಿದೆ.
ಅಲ್ಲದೇ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಭೇದಭಾವ ವಿರೋಧಿ ಘಟಕಗಳನ್ನು ಸ್ಥಾಪಿಸಲು ಮತ್ತು ಜಾತಿ ಆಧಾರಿತ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಜಾಮೀನು ರಹಿತ ಅಪರಾಧ
ರೋಹಿತ್ ವೇಮುಲ ಕಾಯ್ದೆಯಡಿ ಪ್ರತಿಯೊಂದು ಅಪರಾಧವು ಸಂಜ್ಞೆಯ ಮತ್ತು ಜಾಮೀನು ರಹಿತವಾಗಿರುತ್ತದೆ. ಕಾಯ್ದೆ ಉಲ್ಲಂಘನೆಗೆ ಸಂಬಂಧಿತ ಸಂಸ್ಥೆಯ ವ್ಯವಹಾರಗಳ ಉಸ್ತುವಾರಿ ಹೊಂದಿರುವ ವ್ಯಕ್ತಿ ಅಥವಾ ವ್ಯಕ್ತಿಗಳು ಹೊಣೆಗಾರರಾಗಲಿದ್ದಾರೆ. ಒಂದು ವರ್ಷದ ಅವಧಿಗೆ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧ 2ನೇ ಬಾರಿಗೆ ಪುನಾವರ್ತನೆಯಾದರೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ವಿಧೇಯಕದಲ್ಲಿ ವಿವರಿಸಿದೆ.
ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯ ಅಥವಾ ಘನತೆಗೆ ಕುಂದು ತರುವ ಜತೆಗೆ ಅದಕ್ಕೆ ಪ್ರಚೋದನೆ ನೀಡುವ ವ್ಯಕ್ತಿ ಅಥವಾ ವ್ಯಕ್ತಿಗಳೂ ಶಿಕ್ಷೆ ಮತ್ತು ದಂಡ ಅನ್ವಯ ಆಗಲಿದೆ. ಜತೆಗೆ ಅಂತಹ ಸಂಸ್ಥೆಗೆ ರಾಜ್ಯ ಸರ್ಕಾರದ ಯಾವುದೇ ಹಣಕಾಸಿನ ನೆರವು ಅಥವಾ ಅನುದಾನ ನೀಡುವಂತಿಲ್ಲ ಎಂಬ ಅಂಶವನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಿತ್ತು.






