‘ಗೃ-ಹಲಕ್ಷ್ಮಿ’ ಹಣದಿಂದ ರೊಟ್ಟಿ ಕೇಂದ್ರ ಆರಂಭ

ಕುಷ್ಟಗಿ: ಜಿಲ್ಲೆಯ ಕುಷ್ಟಗಿಯ ತೆಗ್ಗಿನ ಓಣಿಯ ಒಂದೇ ಕುಟುಂಬದ ಮೂವರು ಮಹಿಳೆಯರು ‘ಗೃಹಲಕ್ಷಿ’ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ ರೂ.2 ಸಾವಿರ ನೆರವನ್ನು ಉಳಿತಾಯ ಮಾಡಿಕೊಂಡು, ಇಂದು ಸ್ವಂತ ಉದ್ಯಮ ಕಟ್ಟಿ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.
ಮಖ್ತೂಂ ಬಿ. ಕೊಪ್ಪದ, ಸಾಜನಬಿ ದಾದಿಬಾಯಿ ಮತ್ತು ಹುಸೇನಬಿ ಕಮ್ಮಾರ ಎಂಬ ಮೂವರು ಸೇರಿ ಆರಂಭಿಸಿರುವ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ ಈಗ ಕುಷ್ಟಗಿಯಲ್ಲಿ ಚರ್ಚೆಯ ವಿಷಯವಾಗಿದೆ.
ಸಾಮಾನ್ಯ ಕುಟುಂಬ ಹಿನ್ನೆಲೆಯ ಈ ಮಹಿಳೆಯರು, ಸರಕಾರದಿಂದ ಬಂದ ನೆರವನ್ನು ತಲಾ ರೂ. 58 ಸಾವಿರದಂತೆ ಉಳಿತಾಯ ಮಾಡಿದ್ದರು. ಮೂವರ ಉಳಿತಾಯ ಒಟ್ಟುಗೂಡಿ ರೂ. 1.74 ಲಕ್ಷವಾಯಿತು. ಉಳಿದ ಹಣವನ್ನು ತಮ್ಮ ಶ್ರಮ ಮತ್ತು ನೆರವಿನಿಂದ ಸೇರಿಸಿ, ಸುಮಾರು 2 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹುಬ್ಬಳ್ಳಿಯಿಂದ ಅತ್ಯಾಧುನಿಕ ರೊಟ್ಟಿ ತಯಾರಿಕಾ ಯಂತ್ರವನ್ನು ಖರೀದಿಸಿದರು.
ಮೊದಲು ಮನೆಯ ಕೆಲಸಗಳಲ್ಲಿ ಸೀಮಿತವಾಗಿದ್ದ ಈ ಮಹಿಳೆಯರು ಈಗ ತಮ್ಮದೇ ಉದ್ಯಮ ನಡೆಸುತ್ತಿದ್ದಾರೆ. ಬೆಳಗ್ಗಿನಿಂದಲೇ ರೊಟ್ಟಿ ತಯಾರಿಕಾ ಕೇಂದ್ರದಲ್ಲಿ ಕಾರ್ಯನಿರತರಾಗಿರುವ ಅವರು, ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ರೊಟ್ಟಿಗಳನ್ನು ಪೂರೈಸುತ್ತಿದ್ದಾರೆ. ಒಂದು ರೊಟ್ಟಿಗೆ 4ರೂ.ನಂತೆ ದಿನಕ್ಕೆ 700-800 ರೊಟ್ಟಿಗಳನ್ನು ಮಾರುತ್ತಿದ್ದಾರೆ. ಉದ್ಯಮದಿಂದ ಆದಾಯವೂ ಬರತೊಡಗಿದ್ದು, ಕುಟುಂಬದ ಆರ್ಥಿಕ ಸ್ಥಿತಿಯೂ ಉತ್ತಮಗೊಂಡಿದೆ
ಸಚಿವೆ ಮೆಚ್ಚುಗೆ
ಮಹಿಳೆಯರ ಈ ಸಾಧನೆ ರಾಜ್ಯ ಮಟ್ಟದಲ್ಲೂ ಗಮನ ಸೆಳೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಈ ಮಹಿಳೆಯರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
‘ಗ್ಯಾರಂಟಿ ಯೋಜನೆಗಳು ಕೇವಲ ಉಚಿತ ಕೊಡುಗೆಗಳಲ್ಲ, ಅವು ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಗೆ ದಾರಿದೀಪ ಎಂಬುದಕ್ಕೆ ಈ ಸಾಧಕ ಮಹಿಳೆಯರೇ ಪ್ರತ್ಯಕ್ಷ ಸಾಕ್ಷಿ. ಇವರ ಈ ಹೊಸ ಹೆಜ್ಜೆಗೆ ಹಾಗೂ ಉದ್ಯಮಶೀಲತೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಇವರ ಸಾಧನೆ ನಾಡಿನ ಸಾವಿರಾರು ಮಹಿಳೆಯರಿಗೆ ಪ್ರೇರಣೆಯಾಗಲಿ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನನ್ನ ತಂಗಿ, ಅತ್ತಿಗೆ ಹಾಗೂ ನನಗೆ ಗೃಹಲಕ್ಷ್ಮಿ ಯೋಜನೆಯಡಿ ಸಿಗುವ ಎಲ್ಲಾ ಕಂತುಗಳ ಹಣ ಸೇರಿಸಿ ರೊಟ್ಟಿ ತಯಾರಿಸುವ ಯಂತ್ರವನ್ನು ಖರೀದಿಸಿದೆವು. ಇದರಿಂದ ನಮ್ಮ ಜೀವನಕ್ಕೆ ಒಂದು ದಾರಿಯಾಗಿದೆ, ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ನೆರವು ನೀಡಿದ್ದಕ್ಕಾಗಿ ಸರಕಾರಕ್ಕೆ ಧನ್ಯವಾದಗಳು.
-ಮಖ್ತೂಂ ಬಿ. ಕುಷ್ಟಗಿ






