ಬಸವ ಪುತ್ಥಳಿ ಎದುರು ಆರೆಸ್ಸೆಸ್ ಗೀತೆ; ವಿವಾದ

ಬೀದರ್ : ಬಿಜೆಪಿ ಮುಖಂಡರು ವಾಯುವಿಹಾರಕ್ಕೆಂದು ತೆರಳಿ ಬಸವಕಲ್ಯಾಣದ ಬಸವಣ್ಣರ ಮೂರ್ತಿ ಎದುರು ಆರೆಸ್ಸೆೆಸ್ ಗೀತೆ ಗಾಯನ ಮಾಡಿದ ವಿಷಯವು ಬಸವಾಭಿಮಾನಿಗಳು, ಹಿಂದುತ್ವವಾದಿಗಳು, ಬಿಜೆಪಿ ಮುಖಂಡರ ನಡುವೆ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಈಚೆಗೆ ಬಸವಕಲ್ಯಾಣದ 108 ಅಡಿಯ ಬಸವೇಶ್ವರ ಮಂದಿರದ ಕಲ್ಯಾಣ ಮಂಟಪದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು. ಮೇ 17ರ ಮುಂಜಾನೆ ಕೆಲ ಬಿಜೆಪಿ ಮುಖಂಡರು ವಾಯು ವಿಹಾರಕ್ಕೆಂದು ತೆರಳಿ ಬಸವ ಮೂರ್ತಿಯ ಎದುರು ಆರೆಸ್ಸೆೆಸ್ ಗೀತೆ ಹಾಡಿದ್ದರು. ಈವೇಳೆ ಶಾಸಕ ಪ್ರಭು ಚೌವ್ಹಾಣ್, ಬಿಜೆಪಿಯ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಸೇರಿ ಇತರ ಬಿಜೆಪಿ ನಾಯಕರು ಭಾಗವಹಿಸಿದ್ದರು. ಘಟನೆಗೆ ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ್ ಮಹಾಸಭಾ ಖಂಡಿಸಿದೆೆ.
ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷ ರವೀಂದ್ರ ಕೊಳಕುರ್ ಮಾತನಾಡಿ, ‘ಬಿಜೆಪಿ ಎರಡು ದಿನದ ಕಾರ್ಯಕ್ರಮಕ್ಕೆ ಸಭಾಭವನ ಬಾಡಿಗೆ ಪಡೆದುಕೊಂಡಿತ್ತು. ಬಿಜೆಪಿಗರು ಬಸವಣ್ಣ ಪುತ್ಥಳಿ ಎದುರು ಆರೆಸ್ಸೆೆಸ್ ಗೀತೆ ಹಾಡುವ ಮೂಲಕ ಲಿಂಗಾಯತ ಧರ್ಮೀಯರ ಮನಸ್ಸಿಗೆ ನೋವುಂಟು ಮಾಡಿರುವುದನ್ನು ಖಂಡಿಸುತ್ತೇವೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾದ ಹುಲಸೂರ್ ತಾಲೂಕಾಧ್ಯಕ್ಷ ಪ್ರವೀಣ್ ಕಾಡಾದಿ ಪ್ರತಿಕ್ರಿಯೆ ನೀಡಿ, ‘ಬಸವೇಶ್ವರ ಹಾಗೂ ಆರೆಸ್ಸೆೆಸ್ ತತ್ವ, ಸಿದ್ಧಾಂತಗಳು ಬೇರೆಯೇ ಇವೆ. ಬಿಜೆಪಿಗರು ಬಾಡಿಗೆ ಪಡೆದ ಸಭಾ ಭವನದಲ್ಲಿಯೇ ಏನಾದರೂ ಒಳ್ಳೆಯ ಕಾರ್ಯಕ್ರಮ ಮಾಡಬೇಕಾಗಿತ್ತು. ಬಸವೇಶ್ವರ್ ಪ್ರತಿಮೆ ಬಳಿ ಸಂಘ ಪರಿವಾರದ ಗೀತೆ ಹಾಡಿರುವುದನ್ನು ಖಂಡಿಸುತ್ತೇವೆ’ ಎಂದಿದ್ದಾರೆ.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ್, ವಿಶ್ವಗುರು ಬಸವಣ್ಣ ಹಿಂದು ಧರ್ಮ ವಿರೋಧಿಸಿಲ್ಲ. ಕೆಲ ಮುಖಂಡರು ಬಸವಣ್ಣನವರ ಪ್ರತಿಮೆ ಸಂಘ ಪರಿವಾರದ ಗೀತೆ ಹಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪೀಳಿಗೆಯೇ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.
ವಿಶ್ವಗುರು ಬಸವಣ್ಣ ಪುತ್ಥಳಿ ಎಲ್ಲಾ ಬಸವಾಭಿಮಾನಿಗಳಿಗೂ ಪ್ರೇಕ್ಷಣೀಯ ತಾಣ. ಜಾತಿ, ಜನಾಂಗ, ಧರ್ಮ, ಮತ, ಪಂಥ, ಸಮುದಾಯ, ಪಕ್ಷ, ರಾಷ್ಟ್ರ ಭೇಧವಿಲ್ಲದೆ ಎಲ್ಲರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸಂಘ ಪರಿವಾರದವರಿಗಾಗಲಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ, ಶಿವಸೇನಾ, ಮುಸ್ಲಿಮ್ ಲೀಗ್ ಸೇರಿ ಎಲ್ಲಾ ಪಕ್ಷದವರಿಗೂ ಬಸವಣ್ಣ ಒಂದೇ ಆಗಿದ್ದಾರೆ. ಬಸವಣ್ಣ ಹಿಂದೂಗಳಿಗೂ, ಹಿಂದೂಯೇತರರಿಗೂ ಸಮಾನ ಗುರು. ಅವರನ್ನು ಒಂದು ಜಾತಿ, ಮತ, ರಾಷ್ಟ್ರಗಳಿಗೆ ಸೀಮಿತಗೊಳಿಸಬಾರದು. ಮಾತೆ ಮಹಾದೇವಿ ಭಕ್ತರೆಂದು ಹೇಳಿಕೊಂಡು ನನ್ನನ್ನು ಪೀಠದಿಂದ ಹೊರಹಾಕುತ್ತೇವೆ ಎಂಬವರ ಸಂಕುಚಿತ ಪ್ರವೃತ್ತಿ, ಧಮ್ಕಿ, ಭಯೋತ್ಪಾದನೆ ಮಾಡುವುದು ಖಂಡನೀಯ. ಸಮಾಜದ ಸ್ವಾಸ್ತ್ಯ ಕದಡುವವರು ಕಾನೂನು ಕ್ರಮ ಎದುರಿಸಬೇಕಾಗಬಹುದು.
- ಸಿದ್ದರಾಮೇಶ್ವರ್ ಸ್ವಾಮೀಜಿ
ಅಲ್ಲಮಪ್ರಭು ಶೂನ್ಯ ಪೀಠ ಬಸವ ಧರ್ಮ ಪೀಠದ ಅಧ್ಯಕ್ಷ, ಬಸವಕಲ್ಯಾಣ
ವಿಶ್ವಗುರು ಬಸವಣ್ಣರ ಪ್ರತಿಮೆ ಎದುರು ತರಬೇತಿ ಶಿಬಿರದ ನೆಪದಲ್ಲಿ ಬಸವಣ್ಣನವರ ಮೂರ್ತಿ ಎದುರು ಆರೆಸ್ಸೆೆಸ್ ಗೀತೆ ಹಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟ ಬಸವ ಮಹಾಮನೆ ಪೀಠಾಧಿಪತಿ ಸಿದ್ದರಾಮೇಶ್ವರ್ ಸ್ವಾಮೀಜಿ ಅವರನ್ನು ಕೂಡಲೇ ಸ್ಥಾನದಿಂದ ಉಚ್ಚಾಟಿಸಬೇಕು.
-ಬಸವರಾಜ್ ಪಾಟೀಲ್
ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ






