ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ

ಭಾರತದ ಮೊದಲ ಶಿಕ್ಷಕಿ, ಅಪ್ಪಟ ಸ್ತ್ರೀವಾದದ ಚಿಂತಕಿ ಮಾತೆ ಸಾವಿತ್ರಿ ಬಾಯಿ ಫುಲೆಯವರಿಗೆ ಮಹಿಳೆಯರ ಬಗ್ಗೆ ಇದ್ದ ಕಾಳಜಿ, ಪ್ರೇಮ ಅವರ ಬದುಕು ಮತ್ತು ಬರಹದಲ್ಲಿ ಕಾಣಸಿಗುತ್ತದೆ. ಈ ನೆಲದಲ್ಲಿ ಶೂದ್ರಾತಿಶೂದ್ರ, ಅಸ್ಪಶ್ಯರಷ್ಟೇ ಅಪಮಾನಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು, ಅಕ್ಷರಬೀಜವನ್ನು ಬಿತ್ತಿ, ಅಕ್ಷರ ಕ್ರಾಂತಿ ಹುಟ್ಟು ಹಾಕಿದ ದಿಟ್ಟ ಮಹಿಳೆ ಅವ್ವ ಸಾವಿತ್ರಿ ಬಾಯಿ ಫುಲೆ.
ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದ ಶಿರವಳ ಹತ್ತಿರವಿರುವ ನಾಯಗಾಂವ್ ಎಂಬ ಹಳ್ಳಿಯ ಬಡ ರೈತ ಕುಟುಂಬದಲ್ಲಿ ಝಗಡೆ ಪಾಟೀಲರ ಮಗಳಾಗಿ ಜನವರಿ 3, 1831ರಲ್ಲಿ ಜನಿಸಿದರು. ಸಾವಿತ್ರಿಬಾಯಿ ಅವರಿಗೆ ಎಂಟು ವರ್ಷವಿದ್ದಾಗ ಗೋವಿಂದರಾವ್ರವರ ಮಗ ಜ್ಯೋತಿಬಾ ಫುಲೆಯವರೊಂದಿಗೆ ವಿವಾಹ ಮಾಡುತ್ತಾರೆ. ಆಗ ಜ್ಯೋತಿಬಾ ಅವರಿಗೆ ಹದಿಮೂರು ವರ್ಷ. ಸಾವಿತ್ರಿಬಾಯಿ ಹುಟ್ಟಿದ ಊರಲ್ಲಿ ಶಿಕ್ಷಣದ ಪರಂಪರೆ ಇರಲಿಲ್ಲ. ಅನಕ್ಷರಸ್ಥಳಾದ ಸಾವಿತ್ರಿಬಾಯಿಯನ್ನು ಮದುವೆಯಾದ ಜ್ಯೋತಿಬಾ ಪತ್ನಿಗೆ ಅಕ್ಷರ ಕಲಿಸಲು ಓರ್ವ ಶಿಕ್ಷಕನನ್ನು ನೇಮಿಸುತ್ತಾರೆ. ಅವರು ಸಾವಿತ್ರಿಬಾಯಿಯವರಿಗೆ ಕಲಿಸಲು ಒಪ್ಪಿಕೊಂಡು, ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಅಲ್ಲದೆ ಸಮಯ ಸಿಕ್ಕಾಗ ಜ್ಯೋತಿಬಾ ಫುಲೆಯವರು ಕೂಡಾ ಪಾಠ ಮಾಡುತ್ತಿರುತ್ತಾರೆ. ಹೀಗಾಗಿ ಸಾವಿತ್ರಿಬಾಯಿ ಫುಲೆಯವರು ಸಂಗಾತಿ ಜ್ಯೋತಿಬಾ ಫುಲೆಯವರ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿಯ ಜ್ಯೋತಿಯನ್ನು ಬೆಳಗಲು ಕಾರಣರಾದರು. ಸಮಾಜದ ಅನೇಕ ಮೌಢ್ಯಗಳನ್ನು ಶಿಕ್ಷಣದ ಅರಿವಿನ ಮುಖಾಂತರ ಹೊರದೂಡುವ ಕೆಲಸವನ್ನು ಈ ದಂಪತಿ ಅಹರ್ನಿಶಿ ಮಾಡಿದರು. ಅಕ್ಷರ ಕಲಿತ ಸಾವಿತ್ರಿಬಾಯಿ ಫುಲೆಯವರು ತಮ್ಮ ಮನೆಯನ್ನೇ ಮೊತ್ತ ಮೊದಲಿಗೆ ಶಾಲೆಯನ್ನಾಗಿ ಮಾಡಿ ಗಂಡ-ಹೆಂಡತಿ ಇಬ್ಬರು ಸೇರಿ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಜ್ಯೋತಿಬಾ ಫುಲೆಯವರು ಹಿಂದೂ ಸ್ತ್ರೀಯರ ವಿಮೋಚನೆ ಮಾಡುವುದು ಆದ್ಯ ಕರ್ತವ್ಯವೆಂದು ತಿಳಿದು, ಎಲ್ಲ ಹೆಣ್ಣುಮಕ್ಕಳಿಗೆ ಹಾಗೂ ಶೂದ್ರರಿಗೆ ಶಿಕ್ಷಣವನ್ನು ಕೊಡಲು ನಿರ್ಧರಿಸುತ್ತಾರೆ.
ಒಂದು ದಿನ ಜ್ಯೋತಿಬಾ ಫುಲೆಯವರು ಮಿಸ್ ಫೆರಾರ್ರ ನಗರದಲ್ಲಿ ಅಮೆರಿಕನ್ ಮಿಷನ್ ನಡೆಸುತ್ತಿದ್ದ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡುತ್ತಾರೆ. ಅಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿ, ತಾವು ಕೂಡ ಹಾಗೆ ಶಿಕ್ಷಣವನ್ನು ನಮ್ಮ ನೆಲದ ಹೆಣ್ಣು ಮಕ್ಕಳಿಗೆ ಕೊಡಿಸಬೇಕು ಎಂದು ಬಹಳವಾಗಿ ಪ್ರಭಾವಿತರಾಗುತ್ತಾರೆ. 1848ರಲ್ಲಿ ಶೂದ್ರಾತಿಶೂದ್ರ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸುತ್ತಾರೆ. ಆದರೆ ಸಂಪ್ರದಾಯವಾದಿಗಳ ಹಠಮಾರಿತನದಿಂದ ಈ ಶಾಲೆ ಬಹುಬೇಗ ಮುಚ್ಚಿ ಹೋಗುತ್ತದೆ. ಮರಳಿ ಪ್ರಯತ್ನ ಮಾಡು ಎಂಬಂತೆ ಪುಣೆಯ ಬುಧವಾರ ಪೇಟೆಯಲ್ಲಿರುವ ಭಿಡೆ ಎಂಬವರ ಮನೆಯಲ್ಲಿ ಶಾಲೆ ತೆರೆಯುತ್ತಾರೆ. ಅಹಮದ್ ನಗರದ ಮಿಸ್ ಫೆರಾರ್ ಫಾರ್ಮಲ್ ಸ್ಕೂಲಿಗೆ ತಮ್ಮ ಪತ್ನಿಯನ್ನು ಶಿಕ್ಷಕ ತರಬೇತಿ ಪಡೆದುಕೊಳ್ಳಲು ಕಳಿಸುತ್ತಾರೆ. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಎಂಬಾಕೆಯೂ ಕೂಡಾ ಕಲಿಯುತ್ತಿರುತ್ತಾರೆ. ಸಾವಿತ್ರಿಬಾಯಿ ಫುಲೆಯವರ ಕನಸಿಗೆ ನೀರೆರೆಯುವಂತೆ ಫಾತಿಮಾ ಕೂಡಾ ಶಿಕ್ಷಕವೃತ್ತಿಯನ್ನು ಜೊತೆಗೂಡಿ ಮಾಡುತ್ತಾರೆ. ಸಾವಿತ್ರಿ ಬಾಯಿ ಫುಲೆಯವರ ಶಿಕ್ಷಕ ವೃತ್ತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ.
ಶಾಲೆ ಪ್ರಾರಂಭಿಸಿದ ಮೊದಲಲ್ಲಿ ಎಂಟು ಜನ ಹೆಣ್ಣು ಮಕ್ಕಳು ಮಾತ್ರ ಪ್ರವೇಶ ಪಡೆದುಕೊಂಡಿದ್ದರು. ನಂತರದ ದಿನದಲ್ಲಿ ನಲವತ್ತೆಂಟು ಜನರಿಂದ ಶಾಲೆ ಕಂಗೊಳಿಸಹತ್ತಿತು. ಅದೇ ಶಾಲೆಗೆ ಸಾವಿತ್ರಿಬಾಯಿ ಫುಲೆಯವರನ್ನು ಮುಖ್ಯ ಶಿಕ್ಷಕಿನ್ನಾಗಿ ನೇಮಿಸಿಕೊಳ್ಳಲಾಯಿತು. ನಿರಂತರವಾಗಿ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಶೈಕ್ಷಣಿಕವಾಗಿ ಉತ್ತಮ ಪ್ರಗತಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಪಡೆಯಿತು. ಆ ಶಾಲೆಗೆ ಬರುವವರೆಲ್ಲರೂ ಕಡುಬಡತನದಲ್ಲಿ ಇದ್ದ ಹೆಣ್ಣು ಮಕ್ಕಳು ಶೂದ್ರರು, ದಮನಿತರು. ಇಂತಹ ಪರಿಸ್ಥಿತಿಯಲ್ಲಿ ಶಾಲೆಗೆ ದುಡ್ಡು ಖರ್ಚು ಮಾಡುವುದು ಹರಸಾಹಸವೇ ಆಗಿತ್ತು. ಅದನ್ನು ಅರಿತ ಫುಲೆ ದಂಪತಿ ಹೆಣ್ಣು ಮಕ್ಕಳಿಗೆ ಊಟ, ಸಮವಸ್ತ್ರ, ಆಟಕ್ಕೆ ಬೇಕಾದ ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಬರಲು ಮತ್ತೆ ಮರಳಿ ಮನೆಗೆ ಕಳಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು. ಇದರಿಂದ ಅದೆಷ್ಟೋ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲು ಸಾಧ್ಯವಾಯಿತು.
ಶೂದ್ರರು ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆದುಕೊಳ್ಳುವುದನ್ನು ಸಹಿಸದ ಕೆಲ ಜಾತಿವಾದಿ ಪುಣೆಯ ಬ್ರಾಹ್ಮಣರು ವಿರೋಧಿಸಿದರು. ಜ್ಯೋತಿಬಾ ಫುಲೆಯವರಿಗೆ ಬೆದರಿಕೆಗಳನ್ನು ಹಾಕಿದರು. ಆದರೆ ಇಂತಹ ಗೊಡ್ಡು ಬೆದರಿಕೆಗೆ ಹೆದರದೆ ತಮ್ಮ ಗುರಿ ಮತ್ತು ಉದ್ದೇಶವನ್ನು ಫುಲೆಯವರು ಬಿಡಲಿಲ್ಲ. ಪ್ರಸ್ತುತದಲ್ಲಿ ಸಂವಿಧಾನ ಜಾರಿಯಲ್ಲಿದ್ದರೂ, ಪುರುಷ ಸಮಾನವಾದ ಎಲ್ಲ ಹಕ್ಕುಗಳನ್ನು ಮಹಿಳೆಯರಿಗೆ ಅಂಬೇಡ್ಕರ್ ಸಂವಿಧಾನಬದ್ಧವಾಗಿ ಕೊಡಿಸಿದ್ದರೂ ಸಂಘಿಗಳು ಅಡೆತಡೆಯೊಡ್ಡುತ್ತಿದ್ದಾರೆ. ಸಂವಿಧಾನ ಜಾರಿಯಲ್ಲಿರದ ಕಾಲದಲ್ಲಿ, ಜ್ಯೋತಿಬಾ ಫುಲೆ ದಂಪತಿ ಈ ಉಸಾಬರಿ ನಮಗ್ಯಾಕೆ ಬೇಕು ಎಂದು ಮಾಡುವ ಕೆಲಸದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದರೆ ಎಲ್ಲ ಹೆಣ್ಣುಮಕ್ಕಳ ಪರಿಸ್ಥಿತಿ ಏನಾಗುತ್ತಿತ್ತು? ಎಂದು ವಿವೇಚಿಸಿದರೆ ಮೈಯೆಲ್ಲ ನಡುಕ ಹುಟ್ಟುತ್ತದೆ. ಪರಿಸ್ಥಿತಿ ತುಂಬಾ ಹದಗೆಟ್ಟು, ಕಲಿಸಲು ಬಂದ ಶಿಕ್ಷಕರನ್ನು ಕೂಡಾ ಬೆದರಿಸಿ ಹೆದರಿಸಿ ಅವರನ್ನು ಶಾಲೆಗೆ ಬರದಂತೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿಯವರನ್ನೇ ಪಾಠ ಮಾಡಲು ನೇಮಿಸಿಕೊಳ್ಳುತ್ತಾರೆ. ಇದನ್ನು ಅರಿತ ಪುಣೆಯ ಬ್ರಾಹ್ಮಣ ಸಮುದಾಯ ತಲ್ಲಣಕ್ಕೆ ಈಡಾಗುತ್ತದೆ. ಮಹಿಳೆಯಾದವಳು ಮನೆಯಿಂದ ಹೊರಹೋಗಿ ಶಿಕ್ಷಕಿಯಾಗಿ ಕೆಲಸ ಮಾಡುವುದು ಮಹಾ ಅಪರಾಧವೆಂಬಂತೆ ಸಂಪ್ರದಾಯಸ್ಥರೆಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ. ಇದು ರಾಷ್ಟ್ರೀಯ ಗೌರವಕ್ಕೆ ಮಾಡಿದ ಅಪಮಾನವೆಂದೂ, ಇಂತಹ ಕೆಲಸ ಮಾಡುವುದು ಅಪವಿತ್ರವೆಂದೂ ಅವರು ಸಾವಿತ್ರಿಬಾಯಿ ಫುಲೆಯವರು ಶಾಲೆಗೆ ಹೋಗುವಾಗ ಅವರ ಮೇಲೆ ಕೆಸರು, ಸೆಗಣಿಯನ್ನು ಎಸೆಯುತ್ತಾರೆ. ಆದರೆ ಸಾವಿತ್ರಿಬಾಯಿ ಫುಲೆಯವರು ಧೃತಿಗೆಡದೆ ಪತಿಯ ಸಲಹೆಯಂತೆ ಶಾಲೆಗೆ ಹೋಗುವಾಗ ಬ್ಯಾಗಿನಲ್ಲಿ ಹೆಚ್ಚುವರಿ ಸೀರೆಯನ್ನು ಹಿಡಿದುಕೊಂಡು, ಶಾಲೆ ಪ್ರವೇಶಿಸಿದ ನಂತರ ಸೆಗಣಿಯಿಂದ ಹೊಲಸಾದ ಸೀರೆಯನ್ನು ಕಳಚಿ, ಬ್ಯಾಗಿನಲ್ಲಿರುವ ಸೀರೆಯನ್ನು ಉಟ್ಟುಕೊಂಡು ಪಾಠ ಮಾಡಿ ಮರಳಿ ಬರುವಾಗ ಮತ್ತೆ ಸೀರೆ ಬದಲಿಸಿಕೊಂಡು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ನಿರತರಾಗುತ್ತಾರೆ. ಆನಂತರ ಅವರು ಸ್ತ್ರೀಯರ ಸುಧಾರಣೆಗಾಗಿ ಜ್ಯೋತಿಬಾರ ಮಾರ್ಗದರ್ಶನದಲ್ಲಿ ಮಹಿಳಾ ಸೇವಾ ಮಂಡಳವನ್ನು ಸ್ಥಾಪನೆ ಮಾಡುತ್ತಾರೆ. ಪುಣೆಯ ಕಲೆಕ್ಟರ್ರ ಪತ್ನಿ ಇ.ಸಿ. ಜೋನ್ಸ್ ಎಂಬವರು ಮಹಿಳಾ ಸೇವಾಮಂಡಳದ ಅಧ್ಯಕ್ಷರಾಗುತ್ತಾರೆ. ಮಹಿಳೆಯರನ್ನೆಲ್ಲಾ ಒಟ್ಟು ಗೂಡಿಸಲು 1852ರಲ್ಲಿ ದೊಡ್ಡ ಪ್ರಮಾಣದ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲದೆ, ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮವನ್ನು ವಿತರಿಸಿ, ಅವರಿಗೆಲ್ಲ ಉಡಿಯನ್ನು ತುಂಬಲು 1871ರಲ್ಲಿ ‘ಸ್ತ್ರೀ ವಿಚಾರವತಿ ಸಭಾ’ವನ್ನು ಸ್ಥಾಪನೆ ಮಾಡುತ್ತಾರೆ.
ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಹೆಚ್ಚಿನ ಕಟ್ಟುಪಾಡುಗಳಿದ್ದವು, ಅದರಲ್ಲೂ ವಿಧವೆಯರಾದರೆ; ಬ್ರಾಹ್ಮಣ ಮನೆತನದ ಮಾವ, ಮೈದುನ ಮುಂತಾದವರು ಅವರ ಮೇಲೆ ಕೆಟ್ಟ ದೃಷ್ಟಿ ಬೀರುತ್ತಿದ್ದರು. ಲೈಂಗಿಕ ಶೋಷಣೆಗೆ ಗುರಿ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಅವರಿಗೆ ಮಕ್ಕಳಾದರೆ ಬಾಲಹತ್ಯೆ ಮಾಡುತ್ತಿದ್ದರು. ಇಲ್ಲವೇ ಗರ್ಭವತಿಯಾದರೆ ಸ್ವತಃ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಡೆಗಟ್ಟುವ ಉದ್ದೇಶದಿಂದ ಜ್ಯೋತಿಬಾ ಅವರು ಬಾಲಹತ್ಯಾ ಪ್ರತಿಬಂಧಕ ಗೃಹ ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಈ ಗೃಹ ದೊಡ್ಡ ಆಧಾರವಾಗಿತ್ತು. 1863ರಲ್ಲಿ ಸ್ವಂತ ಮನೆಯಲ್ಲಿ ಸ್ಥಾಪಿಸಿದ ಅನಾಥ ಬಾಲಾಶ್ರಮದಲ್ಲಿ ಸಾವಿತ್ರಿಬಾಯಿ ಫುಲೆಯವರು 35 ಜನರಿಗೆ ಬಾಣಂತನವನ್ನು ಮಾಡಿದರು. ವಿಧವೆಯರ ಸೇವೆ ಮಾಡುವಾಗ ಸಾವಿತ್ರಿಬಾಯಿ ಫುಲೆಯವರಿಗೆ ಅದು ಎಂದೂ ಕೀಳಾಗಿ ತೋರಲಿಲ್ಲ. 1873ರಲ್ಲಿ ಕಾಶೀಬಾಯಿ ಎಂಬ ಬ್ರಾಹ್ಮಣ ವಿಧವೆಯು ಲೈಂಗಿಕ ಶೋಷಣೆಯಿಂದ ತಾಯಿಯಾಗಿ ಬಾವಿಗೆ ಬೀಳಲು ಹೋದಾಗ ಅದನ್ನು ಫುಲೆ ದಂಪತಿ ತಡೆದು ಅವಳಿಗೆ ಹುಟ್ಟಿದ ಮಗನನ್ನು ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಎಂದು ನಾಮಕರಣ ಮಾಡುತ್ತಾರೆ. ಯಶವಂತನಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿ, ಡಾಕ್ಟರ್ನನ್ನಾಗಿ ಮಾಡುತ್ತಾರೆ. ಹೀಗೆ ಮಹಿಳೆಯರಿಗಾಗಿ ವಿಧವೆಯರ ಪುನರ್ವಸತಿ, ವಿಧವಾಶ್ರಮಗಳನ್ನು ಕೂಡಾ ಸ್ಥಾಪಿಸುತ್ತಾರೆ. ಫುಲೆಯವರು ಸ್ಥಾಪಿಸಿದ್ದ ವಿಧವಾಶ್ರಮಗಳು ದೇಶದಲ್ಲಿಯೇ ಪ್ರಥಮ ಸಾಮಾಜಿಕ ಸಂಸ್ಥೆಗಳಾಗಿದ್ದವು. 1868ರಲ್ಲಿ ತಮ್ಮ ನೀರಿನ ಬಾವಿಯನ್ನು ಕೆಳಜಾತಿಗಳಿಗೆ ಮುಕ್ತಗೊಳಿಸಿ ಬಳಸಲು ಬಿಟ್ಟು ಕೊಡುತ್ತಾರೆ. ಇಂಥದೊಂದು ನಿರ್ಧಾರ ಆ ಕಾಲದ ಬಹುದೊಡ್ಡ ಸಾಮಾಜಿಕ ಕ್ರಾಂತಿಯ ಭಾಗವೇ ಸರಿ.
ಶಿಕ್ಷಣ ನೀಡುವ ದಾಹವು ಫುಲೆಯವರು ವಯಸ್ಕ ರೈತರು, ದುಡಿಯುವ ವರ್ಗದವರಿಗೆ ರಾತ್ರಿ ಶಾಲೆಯನ್ನು ಪ್ರಾರಂಭಿಸುವಂತೆ ಮಾಡಿತು. ತಮ್ಮ ಮನೆಯಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿ, ಪ್ರತಿದಿವಸ ಎರಡು ಗಂಟೆಗಳ ಕಾಲ ಫುಲೆ ದಂಪತಿ ಅಶಿಕ್ಷಿತ ವಯಸ್ಕ, ರೈತರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ನಿರಂತರ ಹೋರಾಟದಿಂದ 73 ವರ್ಷದ ಮಹಾತ್ಮ ಜ್ಯೋತಿಬಾ ಫುಲೆಯವರು ದೀರ್ಘ ಅನಾರೋಗ್ಯದಿಂದ 1890ರಲ್ಲಿ ನವೆಂಬರ್ 28ರಂದು ನಿಧನರಾದರು. ಮಕ್ಕಳಾಗದ ದಂಪತಿಯಾಗಿದ್ದರಿಂದ ದತ್ತು ಪುತ್ರ ಯಶವಂತನಿಗೆ ಸಂಸ್ಕಾರ ಮಾಡಲು ಕುಟುಂಬದವರು ಒಪ್ಪದೆ ಇದ್ದಾಗ ಸ್ವತಃ ಕೈಯಲ್ಲಿ ದೀವಟಿಗೆಯನ್ನು ಹಿಡಿದು ಜ್ಯೋತಿಬಾರವರ ಅಂತ್ಯ ಸಂಸ್ಕಾರ ಮಾಡಿದ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಫುಲೆ. ಹಾಗೆಯೇ ಅವರು ತಮ್ಮ ಇಡೀ ಜೀವನದುದ್ದಕ್ಕೂ ಹೆಣ್ಣುಮಕ್ಕಳಿಗಾಗಿ, ಅಸ್ಪಶ್ಯರಿಗಾಗಿ ಹಗಲಿರುಗಳು ಶ್ರಮಿಸಿದರು. ಬ್ರಾಹ್ಮಣ ವಿಧವೆಯರ ತಲೆ ಬೋಳಿಸುವುದನ್ನು ವಿರೋಧಿಸಿ ಕ್ಷೌರಿಕ ಸಮಾಜದ ಸಹಕಾರದಿಂದ ಹೀನ ಪದ್ಧತಿಯನ್ನು ನಿಲ್ಲಿಸಿದರು. ದೇವದಾಸಿ ಪದ್ಧತಿ ನಿರ್ಮೂಲ ಮಾಡುವ ಪ್ರಯತ್ನದಲ್ಲಿ ತೊಡಗಿದರು. ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿ ಶಾಲೆಗಳನ್ನು ತೆರೆದರು. ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವ ಪದ್ಧತಿಯವನ್ನು ವಿರೋಧಿಸಿದರು. ವಿಧವೆಯರ ಹಕ್ಕುಗಳನ್ನು ಎತ್ತಿ ಹಿಡಿದು ಮರುವಿವಾಹವನ್ನು ಪ್ರತಿಪಾದಿಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ಹೀಗೆ ಎಲ್ಲ ರೀತಿಯ ಸಾಮಾಜಿಕ ಕ್ರಾಂತಿ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದರೆ ತಪ್ಪಾಗಲಾರದು.
ಸಾವಿತ್ರಿಬಾಯಿ ಫುಲೆ ಪತಿ ಜ್ಯೋತಿಬಾ ಅವರಂತೆ ಕವಿತೆಗಳನ್ನು ಬರೆದರು. ಧರ್ಮ-ಶಾಸ್ತ್ರ-ಪುರಾಣ ಗ್ರಂಥಗಳನ್ನು ನಿರಾಕರಿಸಿ, ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಹೊಸ ಗ್ರಂಥಗಳನ್ನು ರಚಿಸಿ ಓದುಗರ ಮನಸ್ಸನ್ನು ಸೂರೆಗೊಂಡ ಮಹಾ ಕ್ರಾಂತಿಕಾರಿ ತಾಯಿಯಾಗಿ ನಮಗೆಲ್ಲ ಮಾರ್ಗ ತೋರಿದರು. ಇದೆಲ್ಲದರ ಪರಿಣಾಮವಾಗಿ ಅವರು ಕಟ್ಟಿದ ಕನಸು ನನಸಾಗಲು ಬಹಳ ಸಮಯ ಹಿಡಿಯಲಿಲ್ಲ 1848ರಿಂದ 1852ರ ಅವಧಿಗೆ 18 ಶಾಲೆಗಳನ್ನು ತೆರೆದದ್ದು ಬಹುದೊಡ್ಡ ಸಾಧನೆ.
ಜ್ಯೋತಿಬಾ ಫುಲೆಯವರ ನಿಧನದ ನಂತರ ಸಾವಿತ್ರಿಬಾಯಿ ಎಂದಿಗೂ ಧೃತಿಗೆಡಲಿಲ್ಲ. ಸತ್ಯಶೋಧಕ ಸಮಾಜದ ಮುಂದಾಳತ್ವವನ್ನು ವಹಿಸಿಕೊಂಡು, ಪತಿಯ ಎಲ್ಲ ಕೆಲಸಗಳನ್ನು ಮುನ್ನಡೆಸುತ್ತಾರೆ. 1897ರಲ್ಲಿ ಪ್ಲೇಗ್ ಮಹಾಮಾರಿ ರೋಗ ಬಂದ ಕಾರಣ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅನೇಕ ಜನರು ಮಹಾ ಮಾರಿಗೆ ಬಲಿ ಕೂಡಾ ಆಗುತ್ತಾರೆ. ಸತ್ಯಶೋಧಕ ಸದಸ್ಯರ ಜೊತೆ ಮಾತೆ ಸಾವಿತ್ರಿಬಾಯಿ ಫುಲೆಯವರು ಮತ್ತು ಅವರ ಪುತ್ರ ಹಗಲು-ರಾತ್ರಿ ಎನ್ನದೆ ಪ್ಲೇಗ್ ರೋಗದ ವಿರುದ್ಧ ಜಾಗೃತಿಗೆ ಇಳಿಯುತ್ತಾರೆ. ಪಾಂಡುರಂಗ ಬಾಬಾಜಿ ಗಾಯಕವಾಡ ಎಂಬವರ ಪುತ್ರನಿಗೆ ಪ್ಲೇಗ್ ಹೆಮ್ಮಾರಿ ಆವರಿಸಿರುವುದು ಗೊತ್ತಾಗುತ್ತಿದ್ದಂತೆ, ತಮ್ಮ ಜೀವದ ಹಂಗನ್ನು ತೊರೆದು ಅವನ ಶುಶ್ರೂಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಮಾತೆ ಸಾವಿತ್ರಿಬಾಯಿ ಫುಲೆಯವರಿಗೆ ಪ್ಲೇಗ್ ರೋಗ ತಗಲುತ್ತದೆ. 1897ರ ಮಾರ್ಚ್ 10ರಂದು ಮಾತೆ ಇಹಲೋಕ ತ್ಯಜಿಸುತ್ತಾರೆ. ಇಂತಹ ಮಹಾ ಮಾತೆ, ಶಿಕ್ಷಕಿ, ಸಮಾಜ ಸುಧಾರಕಿ, ಲೇಖಕಿಯನ್ನು ಸಮಾಜ ಸದಾ ಸ್ಮರಿಸಿಕೊಳ್ಳಬೇಕಾಗಿದೆ.







