ಶಾಲೆಯ ಮುಂದೆ ನಿಂತ ಚರಂಡಿ ನೀರು

ಬಸವಕಲ್ಯಾಣ: ನಗರದ ತ್ರಿಪುರಾಂತ ಪ್ರದೇಶದಲ್ಲಿರುವ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿದೆ.
ಹೊಸ ಶೈಕ್ಷಣಿಕ ವರ್ಷದ ಆರಂಭದ ಸಂದರ್ಭದಲ್ಲಿ ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕಾದರೆ, ಶಾಲೆಯ ಅಡುಗೆ ಕೊಠಡಿಯ ಪಕ್ಕದಲ್ಲೇ ಕೊಳಚೆ ನೀರು ಕೆರೆಯಂತೆ ನಿಂತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಶಾಲೆಯ ಮುಖ್ಯ ದ್ವಾರದ ಎದುರೇ ನೀರು ನಿಲ್ಲುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಶಾಲಾ ಆವರಣದಲ್ಲಿ ದುರ್ವಾಸನೆ ವ್ಯಾಪಿಸಿದೆ.
ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಚಿಕ್ಕ ಮಕ್ಕಳು ಈ ನೀರಿನಲ್ಲಿ ಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆಯೂ ಇರುವುದರಿಂದ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿಯು 2024ರಿಂದಲೇ ಈ ಸಮಸ್ಯೆ ಕುರಿತು ನಗರಸಭೆ ಪೌರಾಯುಕ್ತರಿಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕ ಮನವಿ ಸಲ್ಲಿಸಿದೆ. ಆದಾಗ್ಯೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ನಗರಸಭೆ ಸಿಬ್ಬಂದಿ ಸಾಂದರ್ಭಿಕವಾಗಿ ಬಂದು ನೀರು ಹರಿದುಹೋಗುವಂತೆ ತಾತ್ಕಾಲಿಕ ಕ್ರಮ ಕೈಗೊಳ್ಳುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ನೀರು ನಿಂತು ಸಮಸ್ಯೆ ಮರುಕಳಿಸುತ್ತದೆ. ಆದ್ದರಿಂದ ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ದೊಡ್ಡ ಪೈಪ್ಲೈನ್ ಅಳವಡಿಸಿ ನೀರು ಸುಗಮವಾಗಿ ಹರಿದುಹೋಗುವಂತೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಶಾಲೆಯಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಡುಗೆ ಕೊಠಡಿಯ ಪಕ್ಕದಲ್ಲೇ ಚರಂಡಿ ನೀರು ನಿಂತಿರುವುದು ಆತಂಕಕಾರಿ. ಮಕ್ಕಳು ನೀರಿನಲ್ಲಿ ಬಿದ್ದು ಅನಾಹುತವಾದರೆ ಯಾರು ಹೊಣೆ? ಸೊಳ್ಳೆಗಳ ಕಾಟದಿಂದ ರೋಗ ಹರಡುವ ಅಪಾಯವೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
-ನಿತ್ಯಾನಂದ ಮಂಠಾಳಕರ್, ಸಾಮಾಜಿಕ ಕಾರ್ಯಕರ್ತ
ನಗರಸಭೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಶಾಲೆಯ ಮುಂದೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಸಮಸ್ಯೆ ಪರಿಹರಿಸುವುದಾಗಿ ನಗರಸಭೆ ಪೌರಾಯುಕ್ತರು ಭರವಸೆ ನೀಡಿದ್ದಾರೆ.
-ಸಿದ್ದವಿರಯ್ಯ ರೂದನೂರ್, ಕ್ಷೇತ್ರ ಶಿಕ್ಷಣಾಧಿಕಾರಿ, ಬಸವಕಲ್ಯಾಣ
ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಖಾಸಗಿ ಮನೆಗಳ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
-ರಾಜು ಡಿ. ಬಣಕಾರ್, ಪೌರಾಯುಕ್ತರು, ಬಸವಕಲ್ಯಾಣ






