ಕತ್ತಲ ಗಣಿಗೆ ಶಿವನಸಮುದ್ರದ ಜಲಬೆಳಕು
ಏಷ್ಯಾದಲ್ಲೇ ಕೈಗಾರಿಕಾ ಕ್ರಾಂತಿ ಹಚ್ಚಿದ್ದ ಕೆಜಿಎಫ್ ವಿದ್ಯುದೀಕರಣಕ್ಕೆ 120ರ ಸಂಭ್ರಮ

ಪ್ರಮುಖ ಅಂಶಗಳು
► 1897-1901 ಸಮೀಕ್ಷೆ ಪ್ರಸರಣ ಜಾಲದ ಸಮಗ್ರ ಯೋಜನೆ
► 1901 ಟ್ರಾನ್ಸ್ಮಿಷನ್ ಲೈನ್, ಸಬ್ಸ್ಟೇಷನ್ ನಿರ್ಮಾಣ ಭರದಿಂದ ಪೂರ್ಣ
► 30 ಜೂನ್ 1902 700 ಕೆಡಬ್ಲ್ಯು ಸಾಮರ್ಥ್ಯದ ಹೈಡ್ರೊ-ಇಲೆಕ್ಟ್ರಿಕ್ ಸ್ಟೇಷನ್ ಅಧಿಕೃತ ಉದ್ಘಾಟನೆ
► 1902ರ ನಂತರ ಗಣಿಗಳಿಂದ ವರ್ಕ್ಶಾಪ್, ವಸತಿ ಪ್ರದೇಶಗಳಿಗೆ ವಿದ್ಯುತ್ ವಿಸ್ತರಣೆ ದೂತದರ್ಶಿಗಳು ಮತ್ತು ತಾಂತ್ರಿಕ ನೈಪುಣ್ಯತೆಯ ಸಂಗಮ
► 30 ಜೂನ್ 1902ರಂದು ಮೈಸೂರಿನಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ ಜನರಲ್ ಡೊನಾಲ್ಡ್ ರಾಬರ್ಟ್ಸನ್ ಅವರಿಂದ ಯೋಜನೆಗೆ ಚಾಲನೆ. 4,000 ಎಚ್.ಪಿ. ವಿದ್ಯುತ್ ಸ್ವೀಕರಿಸಲು ಕೆಜಿಎಫ್ನ ‘ಊರಿಗಾಂ’ ಎಂಬಲ್ಲಿ ಬೃಹತ್ ‘ಟ್ರಾನ್ಸ್ಫಾರ್ಮರ್ ಹೌಸ್’ ನಿರ್ಮಾಣ.
ಶತಮಾನದ ಹಿಂದೆ ಶಿವನ ಸಮುದ್ರದಿಂದ ತಯಾರಾದ (25 ಸೈಕಲ್) ವಿದ್ಯುತ್ ನೇರವಾಗಿ ಕೆಜಿಎಫ್ ಗಣಿ ಸಂಸ್ಥೆಗೆ ನೀಡಲಾಗುತ್ತಿತ್ತು, ಇಂದು ಅದೇ ವಿದ್ಯುತ್ ತಯಾರಿಕಾ ಘಟಕದಿಂದ (50 ಸೈಕಲ್) ವಿದ್ಯುತ್ ಜಿಲ್ಲೆಯ ಎಲ್ಲ ಭಾಗಗಳಿಗೆ ಸರಬರಾಜು ಆಗುತ್ತಿದೆ. ಇಂದು ವಿದ್ಯುತ್ ಪ್ರಸರಣ ವ್ಯವಸ್ಥೆ ಉನ್ನತೀಕರಣಗೊಂಡಿದೆ. ಸಪ್ಲೈ ಚೈನ್ ಸಹ ಬದಲಾವಣೆಗಳನ್ನು ಕಂಡಿದೆ. ಆಧುನೀಕರಣಗೊಂಡು ಮೇಲ್ದರ್ಜೆಗೇರಿದೆ.
► ದೇವರೆಡ್ಡಿ, ಸೂಪರಿಂಟೆಂಡೆಂಟ್ ಇಂಜಿನಿಯರ್, ಕೋಲಾರ ವಿಭಾಗ
ಕೋಲಾರ (ಕೆಜಿಎಫ್), ಸೆ.15: ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ, ಇಡೀ ವಿಶ್ವದ ಬೃಹತ್ ನಗರಗಳೇ ಕತ್ತಲಲ್ಲಿ ಮುಳುಗಿದ್ದ ಕಾಲದಲ್ಲೊಂದು ಅಚ್ಚರಿ ನಡೆದಿತ್ತು. ಕೇವಲ ಕತ್ತಲ ಕೂಪಗಳಾಗಿದ್ದ ಕೋಲಾರ ಚಿನ್ನದ ಗಣಿಗಳು (ಕೆಜಿಎಫ್) ಜಗತ್ತಿನ ಗಮನ ಸೆಳೆದದ್ದು ಕೇವಲ ತನ್ನೊಡಲಿನಲ್ಲಿದ್ದ ಅಪಾರ ಬಂಗಾರದ ನಿಕ್ಷೇಪದಿಂದ ಮಾತ್ರವಲ್ಲ, ಇಡೀ ಏಷ್ಯಾ ಖಂಡದಲ್ಲೇ ಹೊಸ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದ ಚಾರಿತ್ರಿಕ ‘ವಿದ್ಯುದೀಕರಣ’ ಯೋಜನೆಯಿಂದ.
1880ರಲ್ಲಿ ಕೋಲಾರ ಚಿನ್ನದ ಗಣಿ ಪ್ರಾರಂಭವಾದಾಗಿನಿಂದ 1902ರವರೆಗೂ ಗಣಿಯಲ್ಲಿದ್ದ ಎಲ್ಲಾ ಯಂತ್ರೋಪಕರಣಗಳು ಉಗಿ (ಸ್ಟೀಮ್) ಶಕ್ತಿಯಿಂದಲೇ ನಡೆಯುತ್ತಿದ್ದವು. ಆದರೆ, ಭೂಮಿಯ ಆಳಕ್ಕೆ ಇಳಿದಂತೆಲ್ಲಾ ನಿರಂತರ ಮತ್ತು ಅಪಾರ ಪ್ರಮಾಣದ ವಿದ್ಯುತ್ ಅಗತ್ಯ ಕಂಡುಬಂತು. ಈ ವೇಳೆ ಗಣಿ ನಿರ್ವಹಣೆ ಮಾಡುತ್ತಿದ್ದ ಲಂಡನ್ನ ‘ಜಾನ್ ಟೇಲರ್ ಆ್ಯಂಡ್ ಸನ್ಸ್’ ಕಂಪೆನಿಯ ಮನವಿಗೆ ಸ್ಪಂದಿಸಿದ ಮೈಸೂರು ಸಂಸ್ಥಾನ, 1899ರಲ್ಲಿ ಜಲವಿದ್ಯುತ್ ಯೋಜನೆಗೆ ಯೋಜನಾ ರೂಪ ನೀಡಿತು.
ಮೈಸೂರು ಸಂಸ್ಥಾನವು ಶಿವನಸಮುದ್ರದ ಕಾವೇರಿ ಜಲಪಾತದಿಂದ ಸುಮಾರು 147 ಕಿಲೋಮೀಟರ್ (80 ಮೈಲಿಗೂ ಹೆಚ್ಚು) ದೂರದ ಕೆಜಿಎಫ್ಗೆ ವಿಶ್ವದಲ್ಲೇ ಅತಿ ಉದ್ದದ ಪ್ರಸರಣ ಮಾರ್ಗವನ್ನು ನಿರ್ಮಿಸಿ ಜಾಗತಿಕ ದಾಖಲೆ ಬರೆಯಿತು. ಅಲ್ಲಿಯ ತನಕ ಅಮೆರಿಕ-ಕೆನಡಾ ಗಡಿಯ ‘ನಯಾಗರಾ ಫಾಲ್ಸ್’ ಹೊಂದಿದ್ದ 13 ಮೈಲಿಗಳ ವಿದ್ಯುತ್ ಮಾರ್ಗವೇ ಜಗತ್ತಿನ ಸುದೀರ್ಘ ಮಾರ್ಗವಾಗಿ ದಾಖಲೆ ಇತ್ತು.
► ಸಾಮಾಜಿಕ ಚಿತ್ರಣವೇ ಬದಲು: ಈ ಯೋಜನೆಯು ಕೇವಲ ಗಣಿಗಾರಿಕೆಗೆ ಸೀಮಿತವಾಗದೆ ಇಡೀ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಚಿತ್ರಣವನ್ನೇ ಬದಲಿಸಿತು.
ಕೈಗಾರಿಕಾ ಪ್ರಗತಿ, ಕ್ರಷಿಂಗ್, ಸ್ಟಾಂಪಿಂಗ್ ಮತ್ತು ಸುರಂಗ ಗಣಿಗಾರಿಕೆ ಕಾರ್ಯಾಚರಣೆಗಳು ಆಧುನಿಕಗೊಂಡು ಉತ್ಪಾದನೆ ಶೇಖಡಾವಾರು ಹೆಚ್ಚಳವಾಯಿತು. ಭಾರತದಲ್ಲೇ ಪ್ರಥಮ ಬಾರಿಗೆ ಸ್ಥಳೀಯ ವಿದ್ಯುತ್ ತಂತ್ರಜ್ಞರು ಮತ್ತು ಇಂಜಿನಿಯರ್ಗಳ ಪಡೆ ನಿರ್ಮಾಣವಾಯಿತು.
ಸ್ಥಳೀಯವಾಗಿ ಆಸ್ಪತ್ರೆ, ಶಾಲೆ, ಕ್ಲಬ್ಗಳು ಸ್ಥಾಪನೆಯಾಗಿ ಕಾರ್ಮಿಕರ ಜೀವನಮಟ್ಟ ಯುರೋಪಿಯನ್ ಮಾದರಿಗೆ ಭಡ್ತಿ ಪಡೆಯಿತು.
ರೈಲ್ವೆ ಸಂಪರ್ಕ ಹಾಗೂ ಉಪ-ಉದ್ಯಮಗಳಿಗೆ ಶಕ್ತಿ ನೀಡುವ ಮೂಲಕ ಭದ್ರ ಬುನಾದಿ ಹಾಕಿ ಸಮುದಾಯ ವಿಕಾಸಕ್ಕೆ ನಾಂದಿಯಾಯಿತು.
ಮೈಸೂರು ಸರಕಾರದ ದೃಢ ಸಂಕಲ್ಪ ಮತ್ತು ವಿದೇಶಿ ತಂತ್ರಜ್ಞರ ತಾಂತ್ರಿಕ ಸಮ್ಮಿಲನದಿಂದ ಮೂಡಿಬಂದ ಈ ಐತಿಹಾಸಿಕ ಪಯಣ, ಭಾರತದ ತಾಂತ್ರಿಕ ಸಾಮರ್ಥ್ಯಕ್ಕೆ ಇಂದಿಗೂ ಶಾಶ್ವತ ಸಂಕೇತವಾಗಿ ಮಿನುಗುತ್ತಿದೆ.






