ಸೋನಮ್ ವಾಂಗ್ಚುಕ್ರದ್ದು ಕಡೆಗಣಿಸಬೇಕಾದ ಪ್ರತಿಭಟನೆಯೇ?

ಜಂತರ್ ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ಅವರು ನಡೆಸುತ್ತಿರುವ ಉಪವಾಸ 16ನೇ ದಿನ ದಾಟಿದೆ.
ಈ 16 ದಿನಗಳಲ್ಲಿ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದೆ. ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತಿದೆ, ರಕ್ತದೊತ್ತಡವೂ ಕಡಿಮೆಯಾಗುತ್ತಿದೆ ಮತ್ತು ಅವರ ತೂಕ ಸುಮಾರು 8 ಕೆಜಿ ಕಡಿಮೆಯಾಗಿದೆ. ಸೋನಮ್ ವಾಂಗ್ಚುಕ್ ಅವರ ಬೆಂಬಲಿಗರು ಆತಂಕಕ್ಕೊಳಗಾಗುತ್ತಿದ್ದಾರೆ. ಈ ಸ್ಥಿತಿಯಲ್ಲಿ ಅವರು ಎಷ್ಟು ದಿನ ಉಪವಾಸ ಮುಂದುವರಿಸಬಹುದು ಎಂದು ಚಿಂತೆಗೀಡಾಗಿದ್ದಾರೆ. ಅವರಿಗೆ ಸೋನಮ್ ವಾಂಗ್ಚುಕ್ ಅವರ ಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಉಪವಾಸ ಕೊನೆಗೊಳಿಸುವಂತೆ ಬೆಂಬಲಿಗರು ಕೇಳಿಕೊಳ್ಳುತ್ತಿದ್ದಾರೆ.
ಸರಕಾರ ಸೋನಮ್ ವಾಂಗ್ಚುಕ್ ಅವರೊಂದಿಗೆ ಮಾತನಾಡಬೇಕೆಂದು ಜನರು ಸಹ ಬಯಸುತ್ತಾರೆ.
ಸರಕಾರದೊಂದಿಗೆ ಮಾತನಾಡಲು ಅವರು ಪ್ರಾಣವನ್ನೇ ಪಣಕ್ಕಿಡಬೇಕಾದ ಸ್ಥಿತಿ ಬಂದಿದೆಯೇ ಎಂಬುದು ಪ್ರಶ್ನೆ.
ಮೋದಿ ಸರಕಾರ ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ? ಸರಕಾರ ತನ್ನ ಯಾವುದೇ ಸಚಿವರನ್ನು ಜಂತರ್ ಮಂತರ್ಗೆ ಕಳುಹಿಸದಷ್ಟು ಮಟ್ಟಿಗೆ ಇದು ಕಡೆಗಣಿಸಬೇಕಾದ ಪ್ರತಿಭಟನೆಯೆ? ಪ್ರತಿಭಟನಾಕಾರರೊಂದಿಗೆ ಮಾತನಾಡುವ ಯಾವುದೇ ಜವಾಬ್ದಾರಿ ಸರಕಾರಕ್ಕೆ ಇಲ್ಲವೇ?
ವಾಂಗ್ಚುಕ್ ಅವರೊಂದಿಗೆ ಉಪವಾಸ ಶುರುಮಾಡಿದ್ದ ಆರು ವಿದ್ಯಾರ್ಥಿಗಳಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾಕಾರರು 25 ದಿನಗಳಿಂದ ಈ ತಾಪಮಾನ ಮತ್ತು ಮಳೆ ನಡುವೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸುಲಭವಲ್ಲ. ಆದರೆ ಸರಕಾರ ಅದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಸಿಜೆಪಿ ವಕ್ತಾರ ಮತ್ತು ಪತ್ರಕರ್ತ ಸೌರಭ್ ದಾಸ್ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ, ಸೋನಮ್ ವಾಂಗ್ಚುಕ್ ಅವರ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿರುವ ಬಗ್ಗೆ ಬರೆದಿದ್ದಾರೆ. ‘ಸೋನಮ್ ಅವರು ಈ ಪರಿಸ್ಥಿತಿಯನ್ನು ಎಷ್ಟು ಕಾಲ ಸಹಿಸಿಕೊಳ್ಳಬಹುದೆಂದು ನನಗೆ ತಿಳಿದಿಲ್ಲ. ಅವರು ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಸಬಹುದು’ ಎಂದು ಹೇಳುತ್ತಾರೆ. ಆದರೆ ಅವರೊಂದಿಗೆ ಇರುವ ನಾವು ತೀವ್ರ ಚಿಂತಿತರಾಗಿದ್ದೇವೆ ಎಂದಿದ್ದಾರೆ.
ಸೋನಮ್ ಆರಾಮ ಮತ್ತು ಖ್ಯಾತಿಯ ಜೀವನ ನಡೆಸಬಹುದಿತ್ತು. ಆದರೆ ಅವರು ನಮ್ಮ ಮಕ್ಕಳಿಗಾಗಿ, ಈ ದೇಶದ ಯುವಕರಿಗಾಗಿ ಮತ್ತು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ.
ಭ್ರಷ್ಟ ಶಿಕ್ಷಣ ವ್ಯವಸ್ಥೆಯಿಂದ ಮುರಿದುಬಿದ್ದ ವಿದ್ಯಾರ್ಥಿಗಳ ಬದುಕು ಮತ್ತು ಸತ್ತ ಮಕ್ಕಳ ಪರವಾಗಿ ಅವರು ದುಃಖದಲ್ಲಿ ಕುಳಿತಿದ್ದಾರೆ. ಅವರು ತಮ್ಮ ದೇಹವನ್ನು ಒಂದು ದೊಡ್ಡ ಉದ್ದೇಶಕ್ಕಾಗಿ ನೀಡುತ್ತಿದ್ದಾರೆ ಎಂದು ಸೌರಭ್ ದಾಸ್ ಬರೆದಿದ್ದಾರೆ.
ಈ ಸರಕಾರ ಏಕೆ ಇಷ್ಟು ಅಜ್ಞಾನದಿಂದ ಕೂಡಿದೆ ಎಂದು ನನಗೂ ಅರ್ಥವಾಗುತ್ತಿಲ್ಲ ಎಂದು ಅಭಿಜೀತ್ ದೀಪ್ಕೆ ಹೇಳುತ್ತಿದ್ದಾರೆ.
‘‘ನಾವು ಏನು ಕೇಳುತ್ತಿದ್ದೇವೆ? ಆತ್ಮಹತ್ಯೆ ಮಾಡಿಕೊಂಡ 20 ಮಕ್ಕಳ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ನೀಡಬೇಕೆಂದು ನಾವು ಕೇಳುತ್ತಿದ್ದೇವೆ. ಎರಡನೆಯದಾಗಿ, ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಮತ್ತು ಯಾವುದೇ ವಿದ್ಯಾರ್ಥಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕಿದ್ದ ಶಿಕ್ಷಣ ಸಚಿವರನ್ನು ತೆಗೆದುಹಾಕಬೇಕು’’ ಎಂದು ಕೇಳುತ್ತಿದ್ದೇವೆ ಎಂದು ದೀಪ್ಕೆ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿಲ್ಲ.
ವಿರೋಧ ಪಕ್ಷಗಳು ಕೂಡ ಇದಕ್ಕಾಗಿ ಒತ್ತಾಯಿಸಿವೆ.
ವೈದ್ಯಕೀಯ ಪರೀಕ್ಷೆಗಳಲ್ಲಿ ವಂಚನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರತ್ಯೇಕ ಘಟನೆಗಳಲ್ಲ. ಸಿಬಿಎಸ್ಇ ಪ್ರಶ್ನೆಪತ್ರಿಕೆ ಪರಿಶೀಲನಾ ಪ್ರಕ್ರಿಯೆ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದರೂ, ಸಚಿವರ ಹೊಣೆಗಾರಿಕೆ ಬಗ್ಗೆ ನಿರ್ಧರಿಸಿಲ್ಲ. ಈಗ ಒಬ್ಬ ಹೋರಾಟಗಾರನ ಜೀವ ಅಪಾಯದಲ್ಲಿದೆ. ಹೀಗಿರುವಾಗಲೂ ಸರಕಾರ ಸೂಕ್ಷ್ಮತೆ ತೋರಿಸುತ್ತಿಲ್ಲ.
2023ರಲ್ಲಿ ಒಲಿಂಪಿಕ್ ಕುಸ್ತಿ ಕ್ರೀಡಾಪಟುಗಳು ಇದೇ ಜಂತರ್ ಮಂತರ್ನಲ್ಲಿ ದೀರ್ಘಕಾಲದ ಪ್ರತಿಭಟನೆ ನಡೆಸಿದರು. ಸರಕಾರ ಅವರೊಂದಿಗೆ ಮಾತನಾಡಲು ಸಹ ಬರಲಿಲ್ಲ. ಹತಾಶೆಯಿಂದ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಜಂತರ್ ಮಂತರ್ ಮತ್ತು ಮಾಧ್ಯಮಗಳ ನಡುವಿನ ಸಂಬಂಧ ಬದಲಾಗಿದೆ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳನ್ನು ಮಡಿಲ ಮೀಡಿಯಾಗಳು ನಿರ್ಲಕ್ಷಿಸಿವೆ.
ಜನರು ಅಣ್ಣಾ ಚಳವಳಿಯ ಸಂದರ್ಭವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆ ಸಮಯದಲ್ಲಿ, ಮನಮೋಹನ್ ಸಿಂಗ್ ಸರಕಾರದ ಸಚಿವರು ಪ್ರತಿಭಟನಾಕಾರರನ್ನು ಭೇಟಿ ಮಾಡಲು ಜಂತರ್ ಮಂತರ್ಗೆ ಬರುತ್ತಿದ್ದರು.
ಆ ಚಳವಳಿಯಲ್ಲಿ ಭಾಗಿಯಾಗಿರುವ ಅನೇಕ ಜನರು ಇಂದು ಮೋದಿ ಸರಕಾರದ ಜೊತೆ ನಿಂತಿದ್ದಾರೆ. ಸರಕಾರ ಈ ಪ್ರತಿಭಟನಾಕಾರರೊಂದಿಗೆ ಮಾತನಾಡಬೇಕೆಂದು ಅವರು ಒತ್ತಾಯಿಸುವುದಿಲ್ಲ.
ಇಂದಿನ ಮಾಧ್ಯಮ ಅಥವಾ ಮಡಿಲ ಮಾಧ್ಯಮ ಪ್ರಜಾಪ್ರಭುತ್ವವನ್ನು ಕೊಲ್ಲುವ ಅಸ್ತ್ರವಾಗಿದೆ.
ರೈತ ಚಳವಳಿಯ ಹೊತ್ತಲ್ಲಿ ಮಡಿಲ ಮಾಧ್ಯಮ ಚಳವಳಿಯಲ್ಲಿ ಭಾಗವಹಿಸುವ ರೈತರನ್ನು ಭಯೋತ್ಪಾದಕರು ಎಂದು ಕರೆಯಿತು. ರೈತರ ಚಳವಳಿಗೆ ಹಲವಾರು ರೀತಿಯಿಂದ ಅಡ್ಡಿಪಡಿಸಲಾಯಿತು. ದಿಲ್ಲಿ ಗಡಿಯಲ್ಲಿ ಮೊಳೆಗಳನ್ನು ಹೊಡೆಯಲಾಯಿತು, ಮುಳ್ಳುತಂತಿ ಅಳವಡಿಸಲಾಯಿತು ಮತ್ತು ಟ್ರ್ಯಾಕ್ಟರ್ಗಳು ದಾಟದಂತೆ ರಸ್ತೆಗಳಲ್ಲಿ ಹೊಂಡಗಳನ್ನು ತೋಡಲಾಯಿತು. ರೈತರು ದಿಲ್ಲಿಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ರೈತರು ಒಂದು ವರ್ಷ ಮೂರು ತಿಂಗಳಿಗಿಂತ ಹೆಚ್ಚು ಕಾಲ ದಿಲ್ಲಿ ಗಡಿಯಲ್ಲಿಯೇ ಇದ್ದರು.
ಆ ಸಮಯದಲ್ಲಿ, ರೈತರೊಂದಿಗೆ ಮಾತನಾಡುವ ಹೆಸರಿನಲ್ಲಿ ತುಂಬಾ ನಾಟಕವಾಡಲಾಯಿತು.
ಸರಕಾರ ಇತರ ರೈತ ನಾಯಕರನ್ನು ಕರೆತಂದಿತು ಮತ್ತು ಸುಪ್ರೀಂ ಕೋರ್ಟ್ ಒಂದು ಸಮಿತಿ ರಚಿಸಿತು. ಇದನ್ನು ಒಂದು ಆಟವೆಂದು ಪರಿಗಣಿಸಿದ ರೈತರು ತಮ್ಮ ಪ್ರತಿಭಟನೆಯಲ್ಲಿ ದೃಢವಾಗಿ ಉಳಿದರು.
ಕೊನೆಗೆ, ಪ್ರಧಾನಿ ಮೋದಿ ಕ್ಷಮೆಯಾಚಿಸಿದರು. ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಲಾಯಿತು. ನವೆಂಬರ್ 2021ರಲ್ಲಿ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲು ಸಮಿತಿ ರಚಿಸಲಾಗುತ್ತಿದೆ ಎಂದು ಘೋಷಿಸಲಾಯಿತು.
ಆದರೆ, ನ್ಯೂಸ್ಲ್ಯಾಂಡ್ರಿ ಆರ್ಟಿಐ ಮೂಲಕ ಪಡೆದ ಮಾಹಿತಿಯ ಪ್ರಕಾರ, ನಾಲ್ಕು ವರ್ಷಗಳು ಕಳೆದಿದ್ದರೂ, ಸಮಿತಿ ಇನ್ನೂ ತನ್ನ ವರದಿ ಸಲ್ಲಿಸಿಲ್ಲ. ಈ ಸಮಿತಿಯ ಆರು ಪೂರ್ಣ ಸಭೆಗಳು ನಡೆದಿವೆ ಮತ್ತು 42ಕ್ಕೂ ಹೆಚ್ಚು ಉಪಸಮಿತಿಗಳು ಸಭೆ ಸೇರಿವೆ. 54 ಲಕ್ಷ ರೂ. ಖರ್ಚು ಮಾಡಲಾಗಿದೆ. ವರದಿ ಮಾತ್ರ ಇಲ್ಲ.
ಉಪವಾಸ ನಿರತ ಸೋನಮ್, ಸತ್ಯದ ಪರವಾಗಿ ನಿಲ್ಲುವುದು, ನ್ಯಾಯದ ಪರವಾಗಿ ನಿಲ್ಲುವುದು ಮುಖ್ಯ ಎಂದಿದ್ದಾರೆ. ‘‘ನೀವು ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುತ್ತೀರೋ ಅಥವಾ ನಿಮ್ಮ ಸಂಪತ್ತಿನೊಂದಿಗೆ ನಿಲ್ಲುತ್ತೀರೋ?’’ ಎಂದು ನಿರ್ಧರಿಸಿ ಎಂದಿದ್ದಾರೆ.
ಸೋನಮ್ ವಾಂಗ್ಚುಕ್, ಸರಿಯಾದ ಹಾದಿಯಲ್ಲಿ ಹೋಗಲು ಮತ್ತು ತಪ್ಪುಗಳನ್ನು ವಿರೋಧಿಸಲು ಬಿಜೆಪಿ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಸೋನಮ್ ವಾಂಗ್ಚುಕ್ ತಮ್ಮ ಉದ್ದೇಶಗಳಿಂದ ಹಿಂದೆ ಸರಿಯುವುದಿಲ್ಲ ಮತ್ತು ಸರಕಾರ ಮಾತನಾಡಲು ಬರುತ್ತಿಲ್ಲ. ಸರಕಾರ ಪ್ರತಿಭಟನಾಕಾರರೊಂದಿಗೆ ಮಾತನಾಡಿದರೆ, ಈ ದೇಶದಲ್ಲಿ ಏನಾಗುತ್ತದೆ?
ಹಲವು ದೇಶಗಳಲ್ಲಿ ಸಾಮಾನ್ಯ ಜನರು ಸಂಸತ್ತಿನ ಮುಂದೆಯೇ ಪ್ರತಿಭಟನೆ ನಡೆಸುತ್ತಾರೆ. ಭಾರತದಲ್ಲಿ ಸಾಮಾನ್ಯ ಜನರು ಸಂಸತ್ತನ್ನು ತಲುಪುವುದು ಏಕೆ ಕಷ್ಟ ಎಂಬ ಪ್ರಶ್ನೆಯನ್ನು ಸೋನಮ್ ಎತ್ತಿದ್ದಾರೆ.
ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಂಸತ್ತಿಗೆ ಮುಕ್ತ ಪ್ರವೇಶವಿದೆ. ಹೆಚ್ಚಿನ ದೇಶಗಳಲ್ಲಿ ಸಂಸತ್ ಮುಂದೆ ಪ್ರತಿಭಟನೆಗೆ ನಿಗದಿತ ಸ್ಥಳವಿರುತ್ತದೆ. ಸ್ವಿಟ್ಸರ್ಲ್ಯಾಂಡ್, ಲಂಡನ್ನ ವೆಸ್ಟ್ಮಿನಿಸ್ಟರ್, ಅದೇ ರೀತಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ನಲ್ಲಿ ಸಂಸತ್ತು ಒಂದು ಮುಕ್ತ ಸ್ಥಳವಾಗಿದೆ ಎಂದು ಅವರು ಹೇಳುತ್ತಾರೆ. ಹಾಗಾದರೆ ಎಲ್ಲಾ ಪ್ರಜಾಪ್ರಭುತ್ವಗಳ ತಾಯಿಯಾದ ಹೊಸದಿಲ್ಲಿಯಲ್ಲಿ ಇದು ಹೇಗೆ ಸಾಧ್ಯವಾಗುವುದಿಲ್ಲ ಎಂದು ಅವರು ಕೇಳಿದ್ದಾರೆ.
ಜುಲೈ 20ರಂದು ಸಂಸತ್ ಕಡೆ ನಡೆಸುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವರು ಜನರನ್ನು ವಿನಂತಿಸಿದ್ದಾರೆ.
ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿದೆ. ಅವರನ್ನಷ್ಟೇ ಅಲ್ಲ, ಪ್ರಶ್ನೆಗಳನ್ನು ಎತ್ತುವ ಯಾರನ್ನಾದರೂ ಖಳನಾಯಕರನ್ನಾಗಿ ಮಾಡಲಾಗುತ್ತಿದೆ. ಮತ್ತು ಅಸಮರ್ಥರನ್ನು, ತಮ್ಮ ಕೆಲಸ ಸರಿಯಾಗಿ ಮಾಡಲು ಸಾಧ್ಯವಾಗದವರನ್ನು ಹೀರೋಗಳನ್ನಾಗಿ ಮಾಡಲಾಗುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳಿಗೆ ಮಹತ್ವವಿರಬೇಕು. ಆದರೆ ಇಲ್ಲಿ ಪ್ರತಿಭಟನೆಗಳನ್ನು ಸರಕಾರ ಕಡೆಗಣಿಸುತ್ತಿದೆ.
ದೇಶದ ದೊಡ್ಡ ಹೋರಾಟಗಾರನ ಜೀವಕ್ಕೆ ಅಪಾಯವಿರುವಾಗಲೂ ಸರಕಾರ ಯಾವ ಕಳವಳವಿಲ್ಲದೆ ಕುಳಿತಿದೆ ಎಂಬುದು ಪ್ರಜಾಪ್ರಭುತ್ವದ ಘೋರ ವ್ಯಂಗ್ಯ.






