ತಿಪ್ಪೆಗುಂಡಿ ನಿರ್ಮಾಣದಿಂದ ಸಿದ್ದಾಪೂರ, ಜಟ್ಟಗಿ ರಸ್ತೆ ಹಾಳು

ಮುದ್ದೇಬಿಹಾಳ: ತಾಲೂಕಿನ ಸಿದ್ದಾಪುರ ಪಿಟಿಯಿಂದ ಜಟ್ಟಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರೀಕರಣ ರಸ್ತೆ ಕೆಬಿಜೆಎನ್ನೆಲ್ ವತಿಯಿಂದ ಕೆಲವೇ ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ರಸ್ತೆಯನ್ನು ದುರ್ಬಳಕೆ ಮಾಡಿಕೊಂಡ ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಮೂರು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ರಸ್ತೆ ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕೆ ನೆರವಾಗಿತ್ತು. ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಈ ರಸ್ತೆಯನ್ನು ಪ್ರತಿದಿನ ಬಳಸುತ್ತಿದ್ದು, ಉತ್ತಮ ಗುಣಮಟ್ಟದ ರಸ್ತೆಯಾಗಿ ಹೆಸರು ಪಡೆದಿತ್ತು. ಆದರೆ ಇದೀಗ ಕೆಲವರು ರಸ್ತೆ ಬದಿಯಲ್ಲಿ ತಿಪ್ಪೆ ಹಾಕಿ, ತದನಂತರ ಜಮೀನಿಗೆ ಗೊಬ್ಬರವಾಗಿ ಸಾಗಿಸುವ ಸಂದರ್ಭದಲ್ಲಿ ಜೆಸಿಬಿ ಯಂತ್ರ ಬಳಸಿಕೊಂಡು ರಸ್ತೆ ಅಗೆದು ಹಾನಿಗೊಳಪಡಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಯುವ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ಗುರಪಾದ ಗೋಡೇಕಾರ, ಸರಕಾರದ ಹಣದಲ್ಲಿ ನಿರ್ಮಾಣವಾದ ಸಾರ್ವಜನಿಕ ರಸ್ತೆ ಎಲ್ಲರಿಗೂ ಸೇರಿದ್ದು. ಕೆಲವರ ವೈಯಕ್ತಿಕ ಅನುಕೂಲಕ್ಕಾಗಿ ರಸ್ತೆ ಹಾಳು ಮಾಡುವುದು ಸರಿಯಲ್ಲ. ಜೆಸಿಬಿ ಯಂತ್ರಗಳಿಂದ ರಸ್ತೆ ಅಗೆದ ಪರಿಣಾಮ ಡಾಂಬರು ಕಿತ್ತು ಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮಳೆಗಾಲದ ಸಮಯ ಇರುವುದರಿಂದ ರಸ್ತೆ ಇನ್ನಷ್ಟು ಹಾಳಾಗುವ ಸಾಧ್ಯತೆ ಇದ್ದು, ಅಪಘಾತಗಳಿಗೂ ಕಾರಣವಾಗಬಹುದು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಹಾಳು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರು ಕೂಡ ರಸ್ತೆ ಹಾನಿಗೆ ಆತಂಕ ವ್ಯಕ್ತಪಡಿಸಿದ್ದು, ದಿನನಿತ್ಯ ಶಾಲಾ ಮಕ್ಕಳು, ರೈತರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸುವ ಮಾರ್ಗದಲ್ಲಿ ಗುಂಡಿಗಳು ಉಂಟಾಗಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಸಿದ್ದಾಪುರ ಪಿಟಿ ಗ್ರಾಮದಿಂದ ಜಟ್ಟಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗೊಬ್ಬರ ತುಂಬುವ ಸಂದರ್ಭದಲ್ಲಿ ಜೆಸಿಬಿ ಯಂತ್ರದಿಂದ ರಸ್ತೆ ಅಗೆದ ಪರಿಣಾಮ ಗುಂಡಿ ಬಿದ್ದಿದೆ. ಇದು ನಮ್ಮ ಹೊಲದ ಮುಂದೆ ಆಗಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ತೀವ್ರ ತೊಂದರೆಯಾಗುತ್ತಿದೆ.
-ಪರಸಪ್ಪ ಸೋಮನಾಳ ಗ್ರಾಮಸ್ಥ






