‘ಎಸ್ಐಆರ್’ ಇಂದು ಮೊದಲ ಹಂತ ಮುಕ್ತಾಯ

ಬೆಂಗಳೂರು, ಆ.16: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್)ಯ ಮೊದಲ ಹಂತದ ಮನೆ-ಮನೆ ಗಣತಿ ಹಾಗೂ ಡಿಜಿಟೈಸೇಷನ್ ಪ್ರಕ್ರಿಯೆ ಆ.17ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಅವಧಿ ವಿಸ್ತರಿಸಬೇಕೆಂಬ ಕೂಗು ವಿವಿಧ ಸಂಘಟನೆಗಳ ಮುಖಂಡರಿಂದ ಕೇಳಿಬಂದಿದೆ.
ಚುನಾವಣಾ ಆಯೋಗ ಆ.16ರಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಜೂ.16ರಂದು ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರು ಇದ್ದರು. ಆದರೆ ಆ.15ರ ವರೆಗೆ 4,45,97,719 ಮತದಾರರ ಗಣತಿ ನಮೂನೆಗಳು ಮಾತ್ರ ಡಿಜಿಟಲೀಕರಣ ಆಗಿದ್ದು, ಇದು ಶೇ.80.45ರಷ್ಟಾಗಿದೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕಿಂತ ಮೊದಲೇ ಮತ್ತು ಮೊದಲ ಹಂತ ಮುಕ್ತಾಯಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಸುಮಾರು 1.083 ಕೋಟಿ ಮತದಾರರು ಮತಪಟ್ಟಿಯಿಂದ ಡಿಲೀಟ್ ಆಗಿದ್ದಾರೆ.
ಮೊದಲ ಹಂತ ಮುಕ್ತಾಯ :
ಎಎಸ್ಡಿಡಿಒ-ಡಿಲೀಟ್ ಆದ ಪಟ್ಟಿಯಲ್ಲಿ ಶಾಶ್ವತ ಸ್ಥಳಾಂತರ ಆದವರು 65,62,586(ಶೇ.11.84), ಪತ್ತೆಯಾಗದ/ಗೈರು ಆದವರು 15,30,449(ಶೇ.2.76), ಮೃತಪಟ್ಟವರು 16,38,600(ಶೇ.2.96), ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು(ನಕಲಿ) 7,07,095(ಶೇ.1.28), ಇತರೆ ವರ್ಗಕ್ಕೆ ಸೇರಿದವರು 3,95,865(ಶೇ.0.71).
ಎಎಸ್ಡಿಡಿಒ ಪಟ್ಟಿಯಲ್ಲಿ 65.62 ಲಕ್ಷ ಮಂದಿಯನ್ನು ‘ಶಾಶ್ವತ ಸ್ಥಳಾಂತರ’ ಎಂದು ಗುರುತಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಸ್ವಂತ ಮನೆ ಇಲ್ಲದೆ ಉದ್ಯೋಗ, ಕೂಲಿ, ವಲಸೆ ಸೇರಿದಂತೆ ವಿವಿಧ ಕಾರಣಗಳಿಂದ ಸ್ಥಳ ಬದಲಾಯಿಸುವ ಅಲೆಮಾರಿ ಹಾಗೂ ವಲಸೆ ಸಮುದಾಯಗಳ ಮತದಾರರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಉದ್ಯೋಗಕ್ಕಾಗಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡವರನ್ನು ಸರಿಯಾಗಿ ಪರಿಶೀಲಿಸದೆ ‘ಶಾಶ್ವತ ಸ್ಥಳಾಂತರ’, ‘ಗೈರು’ ಎಂದು ಗುರುತಿಸಿರುವುದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ಎಂದು ನಾಗರಿಕ ಮತಕಾವಲು ಸಮಿತಿಯ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಧಿ ವಿಸ್ತರಣೆಗೆ ಆಗ್ರಹ :
ಮನೆ-ಮನೆ ಗಣತಿ ಮತ್ತು ಡಿಜಿಟೈಸೇಷನ್ಗೆ ನಿಗದಿಪಡಿಸಿರುವ ಅವಧಿ ಆ.17ಕ್ಕೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಉಳಿದಿರುವ ಸುಮಾರು 1.08 ಕೋಟಿ ಮತದಾರರ ಮಾಹಿತಿಯನ್ನು ಆತುರದಲ್ಲಿ ಪೂರ್ಣಗೊಳಿಸುವ ಬದಲು ಸಮರ್ಪಕ ಪರಿಶೀಲನೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕು. ಶಾಶ್ವತ ಸ್ಥಳಾಂತರ, ಗೈರು ಸೇರಿದಂತೆ ವಿವಿಧ ಕಾರಣಗಳಿಂದ ಮತದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತಪ್ಪುಗಳಾಗುವ ಸಾಧ್ಯತೆ ಇರುವುದರಿಂದ, ಪ್ರತಿಯೊಬ್ಬ ಮತದಾರನಿಗೂ ತನ್ನ ವಿವರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ತಪ್ಪಾಗಿ ಗುರುತಿಸಿದ್ದರೆ ಸರಿಪಡಿಸಿಕೊಳ್ಳಲು ಸಮಯ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರುಗಳು ಆಗ್ರಹಿಸಿದ್ದಾರೆ.
ಆಯೋಗದ ಅಂಕಿ-ಅಂಶಗಳೇ ಪ್ರಕ್ರಿಯೆಯ ವೇಗ ಮತ್ತು ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಒಂದು ಕಡೆ ಶೇ.100ರಷ್ಟು ಗಣತಿ ನಮೂನೆಗಳನ್ನು ಮುದ್ರಿಸಿ ವಿತರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ಆ.15ರ ವರೆಗೆ ಕೇವಲ ಶೇ.80.45ರಷ್ಟು ಮಾತ್ರ ಡಿಜಿಟೈಸ್ ಆಗಿದೆ. ಹೀಗಾಗಿ ಉಳಿದ ಶೇ.19.55ರಷ್ಟು ಮತದಾರರ ಮಾಹಿತಿಯ ಪರಿಶೀಲನೆ ಮತ್ತು ಡಿಜಿಟೈಸೇಷನ್ನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಜಮಾಅತೆ ಇಸ್ಲಾಮ್ ಹಿಂದ್ನ ಮುಹಮ್ಮದ್ ಯೂಸುಫ್ ಕನ್ನಿ ಪ್ರಶ್ನಿಸಿದ್ದಾರೆ.
‘ರೋಲ್ ಬ್ಯಾಕ್’ ಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ :
ಎಎಸ್ಡಿಡಿಒ ಪಟ್ಟಿಯಲ್ಲಿ ಬಿಎಲ್ಒಗಳು ಮತದಾರರ ಮಾಹಿತಿಯನ್ನು ತಪ್ಪಾಗಿ ಗುರುತಿಸಿದ್ದಲ್ಲಿ, ಮತದಾರರು ಆ.5ರಿಂದ ಆ.17ರೊಳಗೆ ಬಿಎಲ್ಒಗಳನ್ನು ಸಂಪರ್ಕಿಸಿ ‘ರೋಲ್ಬ್ಯಾಕ್’ ಮಾಡಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಲಾಗಿತ್ತು. ಮತದಾರರು ರೋಲ್ ಬ್ಯಾಕ್ ಮಾಡಿಕೊಳ್ಳಲು ಕೇವಲ ಕೆಲವು ಗಂಟೆಗಳು ಮಾತ್ರ ಉಳಿದಿವೆ.
ಎರಡು ಬಾರಿ ದಿನಾಂಕ ವಿಸ್ತರಣೆ :
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಜೂ.30ರಂದು ಪ್ರಾರಂಭವಾಗಿ ಜು.29ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಮೊದಲ ಬಾರಿಗೆ ಜು.15ರಂದು 10 ದಿನಗಳ ಕಾಲ ಅವಧಿ ವಿಸ್ತರಿಸಿ, ಕೊನೆಯ ದಿನಾಂಕವನ್ನು ಆ.8ಕ್ಕೆ ಮುಂದೂಡಲಾಯಿತು. ನಂತರದಲ್ಲಿ ಎರಡನೇ ಬಾರಿಗೆ ಆ.7 ರಂದು ಎಎಸ್ಡಿಡಿಒ ಪಟ್ಟಿಯ ಗೊಂದಲದಿಂದ ಅರ್ಹ ಮತದಾರರು ಮತಪಟ್ಟಿಯಿಂದ ಬಿಟ್ಟು ಹೋಗಬಾರದೆಂಬ ಉದ್ದೇಶದೊಂದಿಗೆ ಆ.17ರ ವರಗೆ ಅವಧಿ ವಿಸ್ತರಣೆ ಮಾಡಲಾಯಿತು. ಇದೀಗ ರಾಜ್ಯದ ಅಂತಿಮ ಮತದಾರರ ಪಟ್ಟಿಯು ಅ.27ರಂದು ಪ್ರಕಟಗೊಳ್ಳಲಿದೆ.






