‘ಎಸ್ಐಆರ್’ ಜನ ಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ನೋಟಿಸ್: ಅಡೂರ್ ಬಿ.ಇಬ್ರಾಹೀಂ

ಬೆಂಗಳೂರು, ಸೆ.10: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಮೂಲಕ ಮತದಾರರಿಗೆ ನೀಡುತ್ತಿರುವ ನೋಟಿಸ್ನಲ್ಲಿರುವ ಸೂಚನೆಗಳು ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸುವಂತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅಡೂರ್ ಬಿ.ಇಬ್ರಾಹೀಂ ಬೇಸರ ವ್ಯಕ್ತಪಡಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕ ನೌಕರನಿಗೆ ತಪ್ಪು ಮಾಹಿತಿ ನೀಡುವುದು ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 217ರ ಅಡಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವ ಕ್ರಿಮಿನಲ್ ಅಪರಾಧವಾಗಿದೆ. ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನು ಸಿದ್ಧಪಡಿಸುವ, ಪರಿಷ್ಕರಿಸುವ, ಸರಿಪಡಿಸುವ, ಸೇರಿಸುವ ಅಥವಾ ಕೈಬಿಡುವ ಸಂಬಂಧ ಯಾವುದೇ ಸುಳ್ಳು ಘೋಷಣೆಯನ್ನು ನೀಡುವುದು 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಜೈಲು ಶಿಕ್ಷೆ ಅಥವಾ ದಂಡ, ಎರಡೂ ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧವಾಗಿದೆ’ ಎಂದು ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ ಎಂದರು.
ಅಲ್ಲದೇ, ‘ವಿಚಾರಣೆಯ ಸಮಯದಲ್ಲಿ ಮಾಡಿದ ಘೋಷಣೆಗಳನ್ನು ಬೆಂಬಲಿಸಲು ನೀವು ಸಲ್ಲಿಸಿದ ಎಲ್ಲ ದಾಖಲೆಗಳನ್ನು ಸ್ವತಂತ್ರ ಪರಿಶೀಲನೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗಳಿಗೆ ಕಳುಹಿಸಲಾಗುವುದು. ಯಾವುದೇ ದಾಖಲೆ ಅಥವಾ ಘೋಷಣೆಯು ನಕಲಿ, ಸುಳ್ಳು, ಕಟ್ಟುಕಥೆ ಅಥವಾ ಉದ್ದೇಶಪೂರ್ವಕವಾಗಿ ತಪ್ಪಾಗಿದೆ ಎಂದು ಕಂಡುಬಂದಲ್ಲಿ, ಭಾರತೀಯ ನ್ಯಾಯ ಸಂಹಿತೆ ಮತ್ತು ಅನ್ವಯವಾಗುವ ಇತರೆ ಯಾವುದೇ ಕಾನೂನಿನ ನಿಬಂಧನೆಗಳ ಅನುಸಾರವಾಗಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಬಹುದು’ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ನಾಗರಿಕರಾಗಿ, ತೆರಿಗೆ ಪಾವತಿದಾರರಾಗಿ, ತಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾದ ಜನರಿಗೆ ಚುನಾವಣಾ ಆಯೋಗದಿಂದ ಕಳುಹಿಸುತ್ತಿರುವ ನೋಟಿಸ್ನಲ್ಲಿರುವ ಸೂಚನೆಗಳು ಆತಂಕ, ಅಭದ್ರತೆಗೆ ಕಾರಣವಾಗುತ್ತಿದೆ. 30-35 ವರ್ಷಗಳ ಕಾಲ ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡಿರುವ ನನಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್ ನೋಡಿದಾಗ ಆತಂಕವಾಯಿತು ಎಂದು ಇಬ್ರಾಹೀಂ ತಿಳಿಸಿದರು.
ಹಿಂದಿನ ಎಸ್ಐಆರ್ ಸಮಯದಲ್ಲಿ ಸಿದ್ಧಪಡಿಸಿದ ಮತದಾರರ ಪಟ್ಟಿಯೊಂದಿಗೆ ನಿಮ್ಮ ಹೆಸರು ಹೊಂದಾಣಿಕೆ ಆಗುತ್ತಿಲ್ಲ ಎಂದು ಮತದಾರರ ನೋಂದಣಾಧಿಕಾರಿ ನೋಟಿಸ್ ನೀಡಿದ್ದಾರೆ. 2003-06ರವರೆಗೆ ನಾನು ಮೈಸೂರು ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ, 2013-14ರವರೆಗೆ ಮಂಗಳೂರು ಜಿಲ್ಲಾಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.
ಆರು ವರ್ಷಗಳಿಂದ ಮೈಸೂರಿನ ನಿವಾಸಿಯಾಗಿದ್ದೇನೆ. ಇದೀಗ ನನಗೆ ಸೆ.29ರಂದು ಚುನಾವಣಾ ಆಯೋಗ ಪಟ್ಟಿ ಮಾಡಿರುವ ಮೂಲ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನರಸಿಂಹರಾಜ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಇಬ್ರಾಹೀಂ ತಿಳಿಸಿದರು.






