ಸುರಪುರ: ಬರಗಾಲದ ಮಧ್ಯೆ ಪಂಪ್ಸೆಟ್ ಕಳ್ಳರ ಕಾಟ

ಸುರಪುರ: ಮಳೆ ಇಲ್ಲದೆ ಬೆಳೆ ಒಣಗಿ ಮುಲಿನತ್ತ ಮುಖ ಮಾಡಿ ಕುಳಿತಿರುವ ರೈತರಿಗೆ ಈಗ ಜಮೀನುಗಳಲ್ಲಿ ನೀರಾವರಿಗಾಗಿ ಅಳವಡಿಸಿರುವ ಪಂಪ್ಸೆಟ್ಗಳ ಕಳ್ಳತನದ ಕಾಟ ತೀವ್ರವಾಗಿದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲೂಕಿನ ಬಾಚಿಮಟ್ಟಿ ಗ್ರಾಮದ 70ಕ್ಕೂ ಹೆಚ್ಚು ರೈತರು ಹಳ್ಳದ ದಂಡೆಯಲ್ಲಿರುವ ಜಮೀನುಗಳಿಗೆ ನೀರು ಹಾಯಿಸಲು ಪಂಪ್ಸೆಟ್ಗಳನ್ನು ಅಳವಡಿಸಿದ್ದಾರೆ. ಹಳ್ಳದಲ್ಲಿ ನೀರು ಇಲ್ಲದ್ದರಿಂದ ರೈತರು ಅತ್ತ ಹೋಗದೆ ಇರುವುದನ್ನು ಗಮನಿಸಿದ್ದ ಕಳ್ಳರು ಪಂಪ್ಸೆಟ್ಗಳಿಗೆ ಅಳವಡಿಸಿರುವ ಸ್ಟಾರ್ಟರ್ಗಳನ್ನು ಕಳ್ಳತನಗೈದಿದ್ದಾರೆ.
ಹಳ್ಳದ ದಂಡೆಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ 200ಕ್ಕೂ ಹೆಚ್ಚು ಮೋಟರ್ಗಳನ್ನು ಅಳವಡಿಸಲಾಗಿದೆ. ಈ ಮೋಟರುಗಳಿಗೆ ಹಾಕಲಾಗಿರುವ ತಾಮ್ರ ಮಿಶ್ರಿತ ಕೇಬಲ್ಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳ್ಳತನದ ಕುರಿತು ರೈತ ಹನುಮಂತರಾಯ ಬಿ.ತಿಮ್ಮರೆಡ್ಡಿ ನೀಡಿರುವ ಮಾಹಿತಿ ಪ್ರಕಾರ, ಸುಮಾರು 200ಕ್ಕೂ ಹೆಚ್ಚು ಮೋಟರ್ಗಳಿಗೆ ಹಾಕಲಾಗಿದ್ದ ವೈರ್ಗಳನ್ನು ಕತ್ತರಿಸಿ ನಂತರ ಅಲ್ಲಿಯೇ ಸುಟ್ಟು ಅದರ ಒಳಗಡೆ ಇರುವ ಕಾಪರ್ ತಂತಿಯನ್ನು ತೆಗೆದುಕೊಂಡು ಹೋಗಿದ್ದಾರೆ.
ಕಾಪರ್ ಪ್ರತಿ ಕಿಲೋಗೆ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಬೆಲೆ ಇದ್ದು, 5 ಮೋಟರ್ಗಳ ಸ್ಟಾರ್ಟರ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಬೆಳೆ ಇಲ್ಲದೆ ಕಂಗಲಾಗಿರುವ ರೈತರಿಗೆ ಕಳ್ಳರಿಂದ ಮತ್ತಷ್ಟು ತೊಂದರೆ ಉಂಟಾಗಿದೆ. ಇದರ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಠಾಣೆಯ ಪಿಎಸ್ಐ ಸಿದ್ದಣ್ಣ ಯಡ್ರಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ರೈತರು ಈಗಾಗಲೇ ತುಂಬಾ ಸಂಕಷ್ಟದಲ್ಲಿರುವಾಗ ಕಳ್ಳರು ಇಂತಹ ಕೃತ್ಯ ಎಸಗಿದ್ದು ಇದರಿಂದ ರೈತರಿಗೆ ಮತ್ತಷ್ಟು ತೊಂದರೆಯಾಗಿದೆ. ಎರಡು ಕಿಲೋ ಮೀಟರ್ ವರೆಗೂ ವೈರ್ಗಳ ಕಳ್ಳತನ ನಡೆದಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಿವರೆಡ್ಡಿ ಬಿರಾದಾರ್, ಬಸನಗೌಡ ಬಂಟನೂರ್, ಪ್ರವೀಣಗೌಡ ಬಿರಾದಾರ್, ಬಾಪುಗೌಡ ಬಿರಾದಾರ್ ಇತರೆ ರೈತರು ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಹಳ್ಳದ ಹೊಸ ಬ್ರಿಡ್ಜ್ನಿಂದ ಇರುವ ಎರಡುನೂರಕ್ಕೂ ಹೆಚ್ಚು ಪಂಪ್ಸೆಟ್ ಮೋಟರ್ಗಳ ಕೇಬಲ್ ಕಳ್ಳತನ ನಡೆದಿದೆ. ರೈತರಿಗೆ ಮತ್ತಷ್ಟು ತೊಂದರೆ ಉಂಟಾಗಿದೆ. ಪೊಲೀಸರು ಕಳ್ಳರನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು.
-ಹಣಮಂತರಾಯ ತಿಮ್ಮರಡ್ಡಿ ಬಾಚಿಮಟ್ಟಿ ರೈತ
ಬೆಳೆ ಇಲ್ಲದೆ ಜೀವನ ನಡೆಸಲು ಕಷ್ಟವಾಗಿರುವಾಗ ಕೇಬಲ್ ಕಳ್ಳತನದಿಂದ 70ಕ್ಕೂ ಹೆಚ್ಚು ರೈತರಿಗೆ ತೊಂದರೆಯಾಗಿದೆ. ಸರಕಾರ ರೈತರಿಗೆ ಪರಿಹಾರ ನೀಡಿ ನೆರವಾಗಬೇಕು.
-ಈರಣ್ಣಗೌಡ ಬಂಟನೂರ ಬಾಚಿಮಟ್ಟಿ ರೈತ






