ಭಾರತದ ಇತಿಹಾಸಕ್ಕೆ ಅಂದು ಕಪ್ಪು ಮಸಿ ಅಂಟಿತು

ಹಿಂದೂಸ್ಥಾನದ ಸಮುದ್ರಮಂಥನದಿಂದ ಒಂದು ಕಡೆ ಸ್ವಾತಂತ್ರ್ಯದ ಅಮೃತ ಚಿಮ್ಮಿದರೆ ಮತ್ತೊಂದೆಡೆ ಕೋಮು ದ್ವೇಷದ ಭಯಂಕರ ವಿಷ ಚಿಮ್ಮಿತು. ಭಾರತ ಮತ್ತು ಪಾಕಿಸ್ತಾನದಲ್ಲಿ ಲಕ್ಷಾಂತರ ನಿರಪರಾಧಿ ಸ್ತ್ರೀ ಪುರುಷರು ಮತ್ತು ಮಕ್ಕಳು ಧರ್ಮಾಂಧರ ಖಡ್ಗಕ್ಕೆ ಬಲಿಯಾದರು. ಅಹಿಂಸೆ ಮತ್ತು ರಕ್ತಪಾತದಿಂದ ನಿರಪರಾಧಿಗಳನ್ನು ಹೇಗೆ ರಕ್ಷಿಸಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಬಾಪು ಅವರ ಒಂಟಿ ಧ್ವನಿಯು ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರತಿಧ್ವನಿಸಿತು. ‘‘ಈ ಬೆಂಕಿಯನ್ನು ನಂದಿಸಿ ಇಲ್ಲ ಅಂದರೆ ಇಬ್ಬರೂ ಸುಟ್ಟು ಭಸ್ಮರಾಗುತ್ತಾರೆ’’. ಬಾಪು ವ್ಯಾಕುಲರಾಗಿ ಪ್ರಾರ್ಥಿಸಿದರು- ‘‘ಹೇ ಈಶ್ವರ! ಈ ಜ್ವಾಲೆಯನ್ನು ನಂದಿಸು. ಇಲ್ಲ ಅಂದರೆ ನನಗೂ ಜ್ವಾಲೆಯಲ್ಲಿ ಭಸ್ಮ ಮಾಡಿಬಿಡು. ನಾನು ಇದಕ್ಕೆ ಸಾಕ್ಷಿಯಾಗಲಾರೆ.’’
ಶುಕ್ರವಾರ 30 ಜನವರಿ 1948ರ ಸಾಯಂಕಾಲ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ದಾರಿ ತಪ್ಪಿದ ತಮ್ಮ ದೇಶದ ಪ್ರಜೆಯ ಪಿಸ್ತೂಲಿನ ಗುಂಡಿಗೆ ಬಲಿಯಾಗಿ ಚಿರನಿದ್ರೆಗೆ ಜಾರಿದರು. ಹಿಂದೂಸ್ಥಾನ ಉಳಿಯಲೆಂದು ಕೋಮುವಾದದ ವಿಷವನ್ನು ಅವರೊಬ್ಬರೇ ನುಂಗಿದರು.
ಬಾಪುಗೆ ಗುಂಡುಗಳು ತಾಗಿ ಧರೆಗುರುಳಿದಾಗ ಅವರ ಬಾಯಿಯಿಂದ ಬಂದ ಎರಡೇ ಎರಡು ಶಬ್ದಗಳು ‘‘ಹೇ ರಾಮ್’’. ಅವರು ಪ್ರಾಣ ಬಿಡುತ್ತಾ ಗುಂಡು ಹಾರಿಸಿದ ಹಂತಕನಿಗೆ ಕೈಜೋಡಿಸಿ ನಮಸ್ಕರಿಸಿದರು.
ನಿಗದಿತ ಸಮಯಕ್ಕೆ ಶುಕ್ರವಾರದ ಸಂಜೆ, ರೇಡಿಯೊ ಮತ್ತು ಟೆಲಿಪ್ರಿಂಟರ್ಗಳಲ್ಲಿ ಈ ವಾರ್ತೆ ಪ್ರಸಾರವಾದಾಗ ದೇಶದ ಹೃದಯ ಬಡಿತವೇ ನಿಂತು ಹೋಯಿತು.
ಸ್ವಲ್ಪ ಹೊತ್ತು ದೇಶದ ಮೂಲೆ ಮೂಲೆಯಲ್ಲಿ ಭಯಂಕರ ಮೌನ ಮತ್ತು ಶೋಕ ಆವರಿಸಿತು. ಮೌನ ಮುರಿದ ನಂತರ ಕೋಟ್ಯಂತರ ಹೃದಯಗಳು ರೋದಿಸಿದವು, ಇಡೀ ದೇಶ ದುಃಖಸಾಗರದಲ್ಲಿ ಮುಳುಗಿ ಹೋಯಿತು. ದುಃಖದ ಧ್ವನಿ ತರಂಗಗಳು ಇಡೀ ಪ್ರಪಂಚವನ್ನೇ ರೋಧನದಲ್ಲಿ ಮುಳುಗಿಸಿತು. ಆ ರಾತ್ರಿ ಭಾರತ ಮಾತ್ರವಲ್ಲದೆ, ಇಡೀ ಪ್ರಪಂಚ ರೋದಿಸುತ್ತಿತ್ತು.
ಶ್ರೀಮತಿ ಬರ್ಲೇ ಅವರು ಹೇಳುವಂತೆ- ‘‘ಪ್ರಪಂಚ ಎರಡನೇ ಬಾರಿಗೆ ಏಸು ಶಿಲುಬೆಗೆ ಏರುವುದನ್ನು ನೋಡಿದೆ’’
ಐನ್ಸ್ಟೀನ್, ಬರ್ನಾಡ್ ಶಾರಂತಹ ಮಹನೀಯರು ದಿಗ್ಭ್ರಾಂತರಾದರೆ ಮೈಕ್ ಆರ್ಥರ್ನಂತಹ ಸೇನಾಧಿಪತಿ ದುಃಖತಪ್ತನಾಗಿ ಹೀಗೆ ಹೇಳಿದ:
‘‘ಆಧುನಿಕ ಇತಿಹಾಸದಲ್ಲಿ ಪವಿತ್ರಾತ್ಮ ಗಾಂಧೀಜಿಯನ್ನು ಮೃಗೀಯವಾಗಿ ಹತ್ಯೆ ಮಾಡುವುದಕ್ಕಿಂತ ನಾಚಿಕೆಗೇಡು ಮತ್ತು ಮೂರ್ಖತನದ ಪಾಪ ಮತ್ತೊಂದಿಲ್ಲ. ತಮ್ಮ ಜೀವನ, ತಮ್ಮ ಕೆಲಸ ಮತ್ತು ವಿಚಾರಗಳ ಮೂಲಕ ಅವರು ಏನು ಸಾಧಿಸಿ ತೋರಿಸಿದ್ದಾರೋ ಅದಕ್ಕೆ ನಾವು ಅವರಿಗೆ ಶಾಂತಿಯ ಅವತಾರ ಎಂದು ಹೇಳಬೇಕು. ಶಾಂತಿಯ ಯುಗಪುರುಷ ಗುಂಡಿಗೆ ಬಲಿಯಾಗಿರುವುದು ಮಾನವತೆಯ ದುರ್ಭಾಗ್ಯ. ಒಂದು ವೇಳೆ ಪ್ರಪಂಚದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿಯ ಸಮನ್ವಯ ಆಗಬೇಕೆಂದರೆ ಗಾಂಧೀಜಿಯ ತತ್ವಗಳನ್ನು ಪಾಲಿಸಬೇಕು. ಹಿಂಸೆಯಿಂದ ವಿಚಾರಗಳನ್ನು ಹರಡುವುದು ಸೈದ್ಧಾಂತಿಕವಾಗಿ ತಪ್ಪು. ಅಲ್ಲದೆ ಅದರ ಮೂಲ ಆತ್ಮಹತ್ಯೆ ಆಗಿರುತ್ತದೆ. ಯಾರು ತಮ್ಮ ಕಾಲಕ್ಕೂ ಮುಂಚೆ ಹುಟ್ಟುತ್ತಾರೋ ಗಾಂಧೀಜಿ ಅಂತಹ ಮಹಾಪುರುಷರಲ್ಲಿ ಒಬ್ಬರು.’’
ಪ್ರಪಂಚದ ಅತಿ ಹೆಚ್ಚು ಪೀಡಿತ ಮತ್ತು ದಲಿತ ನೀಗ್ರೋ ಜನಾಂಗದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ತನ್ನ ಭಾಷಣದಲ್ಲಿ ಹೀಗೆ ಹೇಳಿದರು:
‘‘ಹೇಗೆ ಭಾರತದ ಶೋಷಿತ ಮತ್ತು ತಳಸಮುದಾಯದವರು ಮಹಾತ್ಮಾ ಗಾಂಧಿಯನ್ನು ತಮ್ಮ ಮಾರ್ಗದರ್ಶಕ ಎಂದು ಭಾವಿಸುತ್ತಾರೋ ಹಾಗೆಯೇ ಪ್ರಪಂಚದ ಎಲ್ಲಾ ಶೋಷಿತ ಮತ್ತು ತಳಸಮುದಾಯದ ಜನರು ಗಾಂಧೀಜಿಯನ್ನು ತಮ್ಮ ಮಾರ್ಗದರ್ಶಕ ಮತ್ತು ಉದ್ಧಾರಕ ಎಂದು ಭಾವಿಸಿದ್ದಾರೆ....ಗಾಂಧೀಜಿಯ ಹತ್ಯೆಯಿಂದ ನಮಗೆ ಒಬ್ಬ ತಂದೆಯಂತಹವರು, ಒಂದು ಆಸರೆ ಮತ್ತು ಒಬ್ಬ ಮಾರ್ಗದರ್ಶಕ ಇಲ್ಲದಂತಾಗಿದೆ. ಈಗ ನಾವು ಯಾರಿಂದ ಮಾರ್ಗದರ್ಶನದ ಆಸೆಯನ್ನಿಡುವುದು?’’
ಗಾಂಧೀಜಿಯ ಮಹಾನ್ ಪ್ರಯಾಣದ ಬಗ್ಗೆ ಫ್ರಾನ್ಸ್ನ ಪ್ರಸಿದ್ಧ ಸಮಾಜವಾದಿ ನಾಯಕ ಮತ್ತು ಒಂದು ಕಾಲದ ಪ್ರಧಾನಮಂತ್ರಿ ಮೋಷಿಯೋಬ್ರೌ ಗಾಢವಾದ ಸಂವೇದನೆಯನ್ನು ವ್ಯಕ್ತಪಡಿಸುತ್ತಾ ತನ್ನ ಭಾಷಣದಲ್ಲಿ ಹೀಗೆ ಹೇಳಿದರು:
‘‘ಪಿಸ್ತೂಲಿನ ಗುಂಡುಗಳು ಬರಿ ಗಾಂಧೀಜಿಯ ವೃದ್ಧ ಶರೀರವನ್ನು ಕೊಲ್ಲಲಿಲ್ಲ. ದೀರ್ಘ ಕಾಲದ ಭಾರತದ ನೈತಿಕತೆಯನ್ನೇ ಕೊಂದಿವೆ ಆ ಗುಂಡುಗಳು. ಕ್ರೈಸ್ತನ ಹತ್ಯೆಯ ಪಾಪದಿಂದ ಹೇಗೆ ಹತ್ಯೆ ಮಾಡಿದವರು ಮುಕ್ತರಾಗಲಿಲ್ಲವೋ ಹಾಗೆ ಗಾಂಧೀಜಿಯ ಹತ್ಯೆಯಿಂದ ಸಂಘದವರು ಸಹ ತಮ್ಮನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.’’
ಅವರ ಬಲಿದಾನಕ್ಕೂ ಎರಡು ದಿನಗಳ ಹಿಂದೆ ಗಾಂಧೀಜಿ ಅವರು ಹೀಗೆ ಹೇಳಿದ್ದರು:
‘‘ನಾನು ನಗುನಗುತ್ತಾ ಗುಂಡಿನ ಸುರಿಮಳೆಯನ್ನು ಎದುರಿಸುವುದಕ್ಕಿಂತ ಅದೃಷ್ಟ ಬೇರೆ ಇಲ್ಲ’’ ಭಗವಂತ ಅವರ ಆಸೆಯನ್ನು ಪೂರೈಸಿದ.
ಗಾಂಧೀಜಿಯ ಬಲಿದಾನಕ್ಕೂ ಮುಂಚೆ ಭಾರತದಲ್ಲಿ ವೈಮನಸ್ಸಿನಿಂದ ವಿಚಾರಗಳಿಗಾಗಿ ಯಾವ ಮಹಾಪುರುಷನ ಹತ್ಯೆಯೂ ಆಗಿರಲಿಲ್ಲ. ಗೌತಮ ಬುದ್ಧ ಸಹ ಬಹಳ ಕಹಿ ಮತ್ತು ಕಠೋರ ಮಾತುಗಳಿಂದ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದರು. ಆದರೂ ಸಹ ಅವರು ತಮ್ಮ ಇಡೀ ಆಯಸ್ಸನ್ನು ಮುಗಿಸಿದ ನಂತರ ಮುಕ್ತಿಯನ್ನು ಪಡೆದರು. ಮಹಾವೀರನ ವಿಚಾರದಲ್ಲೂ ಸಹ ಬಹಳಷ್ಟು ವಿರೋಧಗಳಿದ್ದರೂ ಜನ ಅವರನ್ನು ಹತ್ಯೆ ಮಾಡುವಂತಹ ಪಾಪ ಮಾಡಿರಲಿಲ್ಲ. ಇಂತಹ ಹೇಯ ಕೃತ್ಯ ನಮ್ಮ ಇಡೀ ಇತಿಹಾಸದಲ್ಲಿಲ್ಲ. ಭಾರತೀಯ ಸಂಸ್ಕೃತಿ ಯಾವುದರಿಂದ ಅಪರಿಚಿತವಾಗಿತ್ತೋ ಅದರ ಕಪ್ಪು ಮಸಿ ನಮ್ಮ ಇತಿಹಾಸಕ್ಕಂಟಿತು.







