ಕುದುರೆಮುಖದ ಬೆಟ್ಟಗಳಲ್ಲಿ ʼನೀಲಕುರಿಂಜಿʼಯ ನೀಲಿ ಲೋಕ
►ಚಾರಣಪ್ರಿಯರ ಗಮನ ಸೆಳೆಯುತ್ತಿರುವ ವಿಶೇಷ ಹೂವುಗಳು ►12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು

ಬೆಂಗಳೂರು : ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಸುಂದರ ಗಿರಿಧಾಮವಾದ ಕುದುರೆಮುಖದ ಬೆಟ್ಟಗಳಲ್ಲಿ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ನೀಲಕುರಿಂಜಿ(Neelakurinji) ಹೂವುಗಳು ಭವ್ಯವಾಗಿ ಅರಳಿ ನಿಂತಿವೆ. ಈ ನೈಸರ್ಗಿಕ ಅದ್ಭುತದಿಂದಾಗಿ ಇಡೀ ಹಸಿರು ಬೆಟ್ಟಗಳು ನೀಲಿ-ನೇರಳೆ ಬಣ್ಣದ ರೇಷ್ಮೆ ಹಾಸಿನಂತೆ ಕಂಗೊಳಿಸುತ್ತಿದ್ದು, ಚಾರಣಪ್ರಿಯರು ಹಾಗೂ ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿವೆ.
ಈ ಹಿಂದೆ ಕುದುರೆಮುಖದ ಕೆಲವು ಬೆಟ್ಟ ಪ್ರದೇಶಗಳಲ್ಲಿ ಈ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದರೆ, ಈ ಬಾರಿ ಸೀಮಿತ ಪ್ರಮಾಣದಲ್ಲಿ ಅರಳಿರುವುದು ಕಂಡುಬಂದಿದೆ. ಹಸಿರು ಬೆಟ್ಟಗಳ ನಡುವೆ ಅಲ್ಲಲ್ಲಿ ಅರಳಿರುವ ನೀಲಿನೇರಳೆ ಹೂವುಗಳು ಕುದುರೆಮುಖದ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಆಕರ್ಷಣೆ ನೀಡುತ್ತಿವೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ವಿವಿಧ ಚಾರಣ ಮಾರ್ಗಗಳಿದ್ದು, ಇಲ್ಲಿನ ಹುಲ್ಲುಗಾವಲು, ಶೋಲಾ ಕಾಡುಗಳು, ಜಲಧಾರೆಗಳು ಹಾಗೂ ಸಮೃದ್ಧ ಜೀವವೈವಿಧ್ಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ.
ನೀಲಕುರಿಂಜಿಯ ನೀಲಿ ಲೋಕ: ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ನೀಲಿನೇರಳೆ ಬಣ್ಣದಲ್ಲಿ ಕಂಗೊಳಿಸುವ ಅಪರೂಪದ ಹೂವುಗಳೆಂದೇ ನೀಲಕುರಿಂಜಿ ಜನಪ್ರಿಯವಾಗಿವೆ. ಹೂವುಗಳ ಅರಳುವಿಕೆ ಪ್ರಕೃತಿಯ ವಿಶಿಷ್ಟ ಎಕಲಾಜಿಕಲ್ ಸೈಕಲ್ನ ಭಾಗವಾಗಿದೆ. ಈ ಅವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹೂವುಗಳನ್ನು ಕೀಳದಂತೆ, ಗಿಡಗಳಿಗೆ ಹಾನಿ ಮಾಡದಂತೆ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.
ಕರ್ನಾಟಕ ಪ್ರವಾಸೋದ್ಯಮವೂ ಕುದುರೆಮುಖವನ್ನು ಪ್ರಕೃತಿ ಮತ್ತು ಪರಿಸರ ಆಧಾರಿತ ಪ್ರವಾಸೋದ್ಯಮ ತಾಣವಾಗಿ ಗುರುತಿಸಿದೆ.
ಪ್ರವಾಸಿಗರಿಗೆ ಮಾಹಿತಿ ಮತ್ತು ಸೌಲಭ್ಯಕ್ಕೆ ಒತ್ತು:
ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ ಹಾಗೂ ಅವುಗಳ ಪರಿಸರ ಮಹತ್ವದ ಕುರಿತು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಒದಗಿಸುವುದು, ನೈಸರ್ಗಿಕ ತಾಣಗಳಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಹಾಗೂ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಕುದುರೆಮುಖದ ಬೆಟ್ಟಗಳಲ್ಲಿ ಅರಳಿರುವ ನೀಲಕುರಿಂಜಿಯಂತಹ ಹೂವುಗಳು ಕರ್ನಾಟಕದ ಪ್ರಕೃತಿ ಸಂಪತ್ತಿನ ಅಪೂರ್ವ ಸೌಂದರ್ಯವನ್ನು ನಮಗೆ ಪರಿಚಯಿಸುತ್ತವೆ. ಇಂತಹ ನೈಸರ್ಗಿಕ ವಿಶೇಷತೆಗಳನ್ನು ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಪರಿಸರ ಸ್ನೇಹಿಯಾಗಿರಬೇಕು. ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ, ಅದರ ಸಂರಕ್ಷಣೆಯ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು.
-ಕೆ.ಜೆ.ಜಾರ್ಜ್, ಇಂಧನ ಹಾಗೂ
ಪ್ರವಾಸೋದ್ಯಮ ಸಚಿವ
ಕುದುರೆಮುಖದಲ್ಲಿ ಈ ಬಾರಿ ಸೀಮಿತ ಪ್ರಮಾಣದಲ್ಲಿ ಕಂಡುಬರುತ್ತಿರುವ ನೀಲಿನೇರಳೆ ಹೂವುಗಳು ಚಾರಣಪ್ರಿಯರು ಮತ್ತು ಪ್ರವಾಸಿಗರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ. ಇಂತಹ ನೈಸರ್ಗಿಕ ವಿದ್ಯಮಾನಗಳನ್ನು ಪರಿಸರಸ್ನೇಹಿ ಪ್ರವಾಸೋದ್ಯಮದೊಂದಿಗೆ ಪರಿಚಯಿಸುವ ಅಗತ್ಯವಿದೆ. ಹೂವುಗಳು ಮತ್ತು ಅವುಗಳ ಆವಾಸಸ್ಥಳಕ್ಕೆ ಯಾವುದೇ ಹಾನಿಯಾಗದಂತೆ ಪ್ರವಾಸಿಗರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಒದಗಿಸುವ ಕುರಿತು ಜಿಲ್ಲೆಯ ಪ್ರವಾಸೋ ದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಡಾ.ರಾಮ್ ಪ್ರಸಾತ್ ಮನೋಹರ್,
ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ






