Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಪರಾಧಿಕ ಪ್ರಪಂಚವೂ ಸಾರ್ವಜನಿಕ...

ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ

ನಾ. ದಿವಾಕರನಾ. ದಿವಾಕರ9 May 2025 11:38 AM IST
share
ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ
ಕರ್ನಾಟಕ ಬಿಹಾರ/ಉತ್ತರ ಪ್ರದೇಶವಾಗುತ್ತಿದೆ ಎಂದು ಹಲುಬುವ ಮೂಲಕ ಆ ರಾಜ್ಯದಲ್ಲಿರುವ ಮಾನವೀಯ ನೆಲೆಗಳನ್ನು ಅಪಮಾನಗೊಳಿಸುವ ಬದಲು, ನಮ್ಮ ಸಮಾಜವೇ ವ್ಯತಿರಿಕ್ತ ಹಾದಿಯಲ್ಲಿ ಸಾಗುತ್ತಿರುವುದೇಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ವರ್ತಮಾನದ ತುರ್ತು ಮತ್ತು ಜವಾಬ್ದಾರಿ. ಸಾಂಘಿಕವಾಗಿ ಪ್ರಗತಿಪರ-ಎಡಪಂಥೀಯ ಸಂಘಟನೆಗಳು, ಸಾಂಸ್ಥಿಕವಾಗಿ ಸಾಂಸ್ಕೃತಿಕ ವೇದಿಕೆ ಮತ್ತು ಸಂವಹನ ಮಾಧ್ಯಮಗಳು ಈ ನೊಗವನ್ನು ಹೊರಬೇಕಿದೆ. ಬದಲಾವಣೆ ಅನಿವಾರ್ಯ ಆದರೆ ನಕಾರಾತ್ಮಕ ಬದಲಾವಣೆ ವಿನಾಶದತ್ತ ಕೊಂಡೊಯ್ಯುತ್ತದೆ. ಈ ಅರಿವು ಮತ್ತು ಪ್ರಜ್ಞೆ ಸಾಮಾಜಿಕ-ರಾಜಕೀಯ ನೆಲೆಗಳಲ್ಲಿ ಮೂಡಿದರೆ ಸಾರ್ಥಕವಾದೀತು.

ಯಾವುದೇ ಭೂಪ್ರದೇಶ ವಾದರೂ, ಆಧುನಿಕ ನಾಗರಿಕತೆಯಲ್ಲಿ, ಸಾಮಾಜಿಕ ಜೀವನದಲ್ಲಿ ಸಹಜವಾಗಿ ತಲೆದೋರುವ ಸಮಾಜಘಾತುಕ ಚಟುವಟಿಕೆಗಳು ಮತ್ತು ಘಟನೆಗಳನ್ನು ಆದಷ್ಟೂ ಕಡಿಮೆ ಮಾಡುವ ಬೌದ್ಧಿಕ-ಭೌತಿಕ ಪ್ರಯತ್ನಗಳು ನಡೆಯದೆ ಹೋದಲ್ಲಿ, ಅಂತಹ ಪ್ರದೇಶಗಳು ಕ್ರಮೇಣವಾಗಿ ಅರಾಜಕತೆಯೆಡೆಗೆ ಸಾಗಿಬಿಡುತ್ತವೆ. ವಿಶಾಲ ನೆಲೆಯಲ್ಲಿ ಇದನ್ನು ಕಾನೂನು ಸುವ್ಯವಸ್ಥೆ ಎಂಬ ಆಳ್ವಿಕೆಯ ಪರಿಭಾಷೆಯಲ್ಲಿ ನಿರ್ವಚಿಸಬಹುದಾದರೂ, ಇದು ಇಡೀ ಸಮಾಜವನ್ನು ಕಾಡಬೇಕಾದ ಜಿಜ್ಞಾಸೆ ಮತ್ತು ಎಚ್ಚರಿಸಬೇಕಾದ ಅಂಶ. ಹಿಂಸೆ-ಪ್ರತಿಹಿಂಸೆ ಎನ್ನುವುದು ರಾಜಕೀಯ ಸಿದ್ಧಾಂತವಾದಾಗ, ಒಂದು ಕಣ್ಣಿಗೆ ಒಂದು ಕಣ್ಣು ಎಂಬ ಪ್ರಾಚೀನ ಬರ್ಬರ ಆಲೋಚನೆ ಪ್ರಧಾನವಾದಾಗ, ಈ ಅರಾಜಕತೆಯೂ ಸಹ ಸಾಂಸ್ಥಿಕ ಸ್ವರೂಪವನ್ನೂ, ಸಾಂಘಿಕ ಚೌಕಟ್ಟುಗಳನ್ನೂ ಪಡೆದುಬಿಡುತ್ತದೆ.

ಕರ್ನಾಟಕದ ಕರಾವಳಿ ಪ್ರದೇಶ ಬಹುಶಃ ಈ ಹಂತವನ್ನು ತಲುಪಿದಂತೆ ಕಾಣುತ್ತದೆ. ಮೂಲತಃ ಶಿಕ್ಷಣ-ಆರೋಗ್ಯ-ವಾಣಿಜ್ಯ ವಲಯಗಳ ಸೌಲಭ್ಯಗಳು ಮತ್ತು ಉನ್ನತ ಸಾಂಸ್ಕೃತಿಕ ಚಿಂತನೆಗಳಿಗಾಗಿ ಪ್ರಸಿದ್ಧಿ ಯಾಗಿದ್ದ ಪ್ರದೇಶ ಕರಾವಳಿಯ ದಕ್ಷಿಣ ಕನ್ನಡ. ಬಂಡವಾಳಶಾಹಿ ಆರ್ಥಿಕತೆ ಹೆಚ್ಚು ಆವರಿಸಿಕೊಂಡಂತೆಲ್ಲಾ ಸಮಾಜವೂ ಸಹ ಮನ್ವಂತರದ ಹಾದಿಯಲ್ಲಿ, ಮಾನವೀಯ ಅಂತಃಕರಣದ ವಾತಾವರಣಕ್ಕೆ ವ್ಯತಿರಿಕ್ತವಾದ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಸಮಾಜ ತನ್ನ ಸಮಗ್ರ ಏಳಿಗೆಯ ಬಗ್ಗೆ ಸಮಷ್ಟಿ ಪ್ರಜ್ಞೆಯೊಂದಿಗೆ, ಸದಾ ಜಾಗೃತಿಯಿಂದ ಇರುವುದೇ ಆದಲ್ಲಿ, ರಾಜಕೀಯ ಭಿನ್ನಮತ, ತಾತ್ವಿಕ ವೈರುಧ್ಯ, ಸೈದ್ಧಾಂತಿಕ ವೈವಿಧ್ಯತೆಗಳ ನಡುವೆಯೂ ಈ ಔನ್ನತ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯ. ಈ ಜಾಗೃತಿ ಮೂಡಿಸುವುದು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿಯುವುದೇ ಹೆಚ್ಚು.

ಕರಾವಳಿಯ ಕರಾಳ ವಾತಾವರಣ

ಬಹುಶಃ ಕರ್ನಾಟಕದ ಕರಾವಳಿ ಇಂತಹ ಒಂದು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿಯ ತಂದೆ ಆಡಿರುವ ಮನದಾಳದ ಮಾತುಗಳನ್ನು ಆಲಿಸಿದಾಗ, ಕಾನೂನಿನ ದೃಷ್ಟಿಯಲ್ಲಿ ರೌಡಿ ಶೀಟರ್ ಆಗಿ ಕಾಣುವ, ಬಿಜೆಪಿ-ಸಂಘಪರಿವಾರದ ದೃಷ್ಟಿಯಲ್ಲಿ ಹಿಂದುತ್ವ ಕಾರ್ಯಕರ್ತನಾಗಿ ಕಾಣುವ, ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ಸಾಮಾಜಿಕ ಪೀಡಕನಾಗಿ ಕಾಣುವ ಸುಹಾಸ್ ಶೆಟ್ಟಿ ಮತ್ತು ಆತನಂತೆಯೇ ಕೋಮು ದ್ವೇಷಕ್ಕೆ, ಮತದ್ವೇಷಕ್ಕೆ ಹತ್ಯೆಗೊಳಗಾದ ಅನೇಕ ಯುವಕರು, ಈ ಅರಾಜಕತೆಯ ಭೌತಿಕ ಸಂಕೇತಗಳಾಗಿ ಕಾಣುತ್ತಾರೆ. ‘‘ಎಲ್ಲರಂತೆ ಬದುಕುತ್ತಾನೆಂಬ ಆಸೆ ಈಡೇರಲಿಲ್ಲ’’ ಎಂಬ ಸುಹಾಸ್ ತಂದೆಯ ಮಾತುಗಳು ಹೀಗೆ ದ್ವೇಷದ ಅಲೆಗೆ ಬಲಿಯಾದ ಪ್ರತೀ ವ್ಯಕ್ತಿಯ ಪೋಷಕರ ಮಾತೂ ಆಗಿರಲು ಸಾಧ್ಯ.

ಸುಹಾಸ್ ಆಗಲೀ, ಫಾಝಿಲ್ ಆಗಲೀ ಅಥವಾ ತನ್ನ ನಿತ್ಯ ಬದುಕಿಗಾಗಿ ದುಡಿಯಲು ವಲಸೆ ಬಂದು ಗುಂಪು ಹತ್ಯೆಗೀಡಾದ ಅಶ್ರಫ್ ಆಗಲೀ ಇಂತಹ ಅಂತಃಕರಣದ ಒಡಲ ಮಾತುಗಳ ಹಿಂದಿನ ಅಮಾಯಕ ಯುವಕರಾಗಿಯೇ ಕಾಣುತ್ತಾರೆ. ಸೈದ್ಧಾಂತಿಕ ನೆಲೆಗಳಲ್ಲಿ ನಿಂತು ಹಿಂಸೆ-ಪ್ರತಿಹಿಂಸೆಗೆ ಬಲಿಯಾದ ಅಥವಾ ಮತ್ತಾರದೋ ದ್ವೇಷಕ್ಕೆ ಬಲಿಯಾದ ಇಂತಹ ಜೀವಗಳನ್ನು ವಿಂಗಡಿಸಿ ನೋಡುವುದರ ಬದಲು, ವರ್ತಮಾನ ಭಾರತದ ಯುವ ಸಮೂಹದ ಒಂದು ಭಾಗವಾಗಿ ನೋಡಿದಾಗ, ನಮ್ಮ ಇಡೀ ಸಮಾಜ ಮತ್ತು ಸಂಸ್ಕೃತಿಯೇ ಎಲ್ಲೋ ಎಡವುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ಜಿಂದಾಬಾದ್, ಒಂದು ಜೈಕಾರ, ಒಂದು ಧಿಕ್ಕಾರ ಮನುಷ್ಯನ ಜೀವ ಹರಣಕ್ಕೆ ಸಕಾರಣವಾಗುವುದೇ ಆದರೆ ಅಂತಹ ಸಮಾಜವನ್ನು ಹೇಗೆ ಬಣ್ಣಿಸಬಹುದು? ಇಲ್ಲಿ ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ಗುರುತಿಸಬೇಕಿರುವುದು, ಒಂದು ಸಮಾಜವಾಗಿ ನಾವು ಕಳೆದುಕೊಳ್ಳುತ್ತಿರುವ ಮೌಲ್ಯಗಳನ್ನು ಹಾಗೂ ಹಲವು ಕಾರಣಗಳಿಗಾಗಿ ನಿಶ್ಶೇಷವಾಗುತ್ತಿರುವ ಮನುಜಸೂಕ್ಷ್ಮ ಕಾಳಜಿಗಳನ್ನು.

ಕಳೆದ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣ, ತನ್ನದೇ ಆದ ಸೈದ್ಧಾಂತಿಕ ನೆಲೆಗಳನ್ನು ನಿರ್ವಚಿಸಿಕೊಂಡು ಅದನ್ನೇ ಸಾರ್ವತ್ರೀಕರಿಸುತ್ತಾ, 21ನೇ ಶತಮಾನದ ಯುವ ತಲೆಮಾರಿನ ನಡುವೆ ಸೃಷ್ಟಿಸಿರುವ ಕಂದಕಗಳು, ಕಟ್ಟಿರುವ ಗೋಡೆಗಳು, ಕೆಡವಿ ಹಾಕಿರುವ ಚರಿತ್ರೆಯ ಸ್ಮಾರಕಗಳು, ಇಂದು ಕೇವಲ ಐವತ್ತು ವರ್ಷಗಳ ಹಿಂದೇ ನಾವೇ ಕಂಡ, ಬದುಕಿ ಬಾಳಿದ ಸುಂದರ ಸಮಾಜದ ಅವಶೇಷಗಳ ಸಂಕೇತವಾಗಿ ಕಾಣುತ್ತದೆ. ಹತ್ಯೆಯಾದ ಯುವಕ ರೌಡಿ ಶೀಟರ್, ಮತಾಂಧ, ಕೋಮುದ್ವೇಷಿ, ಸಮಾಜಘಾತುಕ, ಅತ್ಯಾಚಾರಿ ಹೀಗೆ ನಿರ್ವಚಿಸುವಾಗ, ಪ್ರಬುದ್ಧ ಸಮಾಜವೊಂದು, ಈ ಅವಲಕ್ಷಣಗಳನ್ನು ಯುವ ಸಮೂಹದ ಕೆಲವೇ ಗುಂಪುಗಳು ರೂಢಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆಗೆ ಎದುರಾಗಬೇಕಲ್ಲವೇ?

ಸಮಾಜ ಪರಿವರ್ತನೆಯ ಹಾದಿಗಳು

ಒಂದು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಮೂರು ವಲಯಗಳು ಸಕ್ರಿಯವಾಗಿರುತ್ತವೆ. ರಾಜಕೀಯ ಮತ್ತು ಅಧಿಕಾರ ರಾಜಕಾರಣದ ನೆಲೆಗಳು ಸಮಾಜಕ್ಕೆ ಒಂದು ಆರೋಗ್ಯಕರ ಸಂದೇಶವನ್ನು ರವಾನಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಹೊಂದಿರುತ್ತವೆ. ವಿಶಾಲ ಸಮಾಜವನ್ನು, ತಳಮಟ್ಟದಲ್ಲೂ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಶಕ್ತಿ ಮತ್ತು ಸಂಪನ್ಮೂಲಗಳು ಇಲ್ಲಿರುತ್ತವೆ. ಹಾಗಾಗಿ ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು, ವಿಶೇಷವಾಗಿ ಚುನಾಯಿತ ಪ್ರತಿನಿಧಿಗಳು ಬಳಸುವ ಭಾಷೆ, ರಾಜಕೀಯ ಪರಿಭಾಷೆ ಮತ್ತು ಅನುಸರಿಸುವ ಮಾರ್ಗಗಳು ಸಮಾಜವನ್ನು ನಿರ್ದೇಶಿಸುತ್ತವೆ. ನವ ಭಾರತದ ಸಮಸ್ಯೆ ಎಂದರೆ ಈ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ. ಸೂಕ್ಷ್ಮ ಸಂವೇದನೆಯಿಲ್ಲದ ಭಾಷೆಯನ್ನು ಬಳಸುವುದರಲ್ಲಿ ಹಿರಿಯ ತಲೆಮಾರಿನ ನಾಯಕರನ್ನು ಕಾಣುವುದು ಅಪೇಕ್ಷಣೀಯವಲ್ಲ.

ಇತ್ತೀಚಿನ ರಾಜಕೀಯ ಚರ್ಚೆಗಳಲ್ಲಿ ಈ ರೀತಿ ಹಿಂಸೆಯನ್ನು ವೈಭವೀಕರಿಸುವ ಮಾತುಗಳು ಹೆಚ್ಚಾಗಿರುವುದಷ್ಟೇ ಅಲ್ಲದೆ, ಸಮಾಜದ ಒಂದು ವರ್ಗದ ಸಮ್ಮತಿಯನ್ನೂ ಪಡೆದುಕೊಂಡಿದೆ. ಇದು ಸಮಾಜಕ್ಕೆ, ವಿಶೇಷವಾಗಿ ಭಾವನಾತ್ಮಕ ರಾಜಕಾರಣದಲ್ಲಿ ಉನ್ಮತ್ತರಾಗಿರುವ ಯುವ ತಲೆಮಾರಿಗೆ, ಯಾವ ಸಂದೇಶ ನೀಡಲು ಸಾಧ್ಯ ? ‘‘ನಿಮ್ಮ ವಿರೋಧಿಗಳನ್ನು ಅಥವಾ ನೀವು ಒಪ್ಪದವರನ್ನು ಹತ್ಯೆ ಮಾಡುವುದೂ ತಪ್ಪಲ್ಲ’’ ಎಂಬ ವಿಕೃತ ಸಂದೇಶ ರವಾನಿಸುವುದಿಲ್ಲವೇ? ಸಮಾಜಘಾತುಕ ಪ್ರವೃತ್ತಿಯ ಉಗಮವಾಗುವುದು ಇಲ್ಲಿ.

ಈ ಪ್ರಜ್ಞೆ ಮತ್ತು ಅರಿವು ರಾಜಕೀಯ ನಾಯಕರಲ್ಲಿ ಇಲ್ಲದೆ ಹೋದಾಗ ಸಮಾಜಘಾತುಕತೆಯೂ ಸಹ ಸಾಂಸ್ಥಿಕ ರೂಪ ಪಡೆದುಕೊಳ್ಳುತ್ತದೆ. ಕಳೆದ ಹಲವು ದಶಕಗಳಲ್ಲಿ ತಳಮಟ್ಟದ ಸಮಾಜವನ್ನೂ ಆವರಿಸಿರುವ ‘ಗುಂಪು ಥಳಿತ’ ಎಂಬ ವಿದ್ಯಮಾನವನ್ನು ಈ ನೆಲೆಯಲ್ಲಿ ನೋಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಇದು ರಾಜಕೀಯ ಚೌಕಟ್ಟುಗಳನ್ನೂ ದಾಟಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾತೀಯ-ಧಾರ್ಮಿಕ ನೆಲೆಗಳಲ್ಲೂ ಸಾಂಸ್ಥೀಕರಣಕ್ಕೊಳಗಾಗಿರುವುದು ಸಮಾಜದಲ್ಲಿ ಅಪರಾಧಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ. ಇದೊಂದು ಸಾಮಾಜಿಕ ಪಿಡುಗು. ಈ ಪಿಡುಗನ್ನು ಹೋಗಲಾಡಿಸುವ ಜವಾಬ್ದಾರಿ ಪ್ರಜಾಪ್ರಭುತ್ವ ಆಳ್ವಿಕೆಯ ವಾರಸುದಾರರಾದ ರಾಜಕಾರಣಿಗಳಿಗಲ್ಲವೇ? ಈ ಅಂಶವನ್ನು ಪರಿಶೀಲಿಸುವ ಕನಿಷ್ಠ ವ್ಯವಧಾನವನ್ನೂ ಸಹ ರಾಜಕೀಯ ಪಕ್ಷಗಳಲ್ಲಿ ಕಾಣಲಾಗುವುದಿಲ್ಲ.

ಸಮಾಜ ಸಂಸ್ಕೃತಿ ಮತ್ತು ಔನ್ನತ್ಯ

ಸಮಾಜವನ್ನು ನಿರ್ದೇಶಿಸುವ ಮತ್ತೊಂದು ಕ್ಷೇತ್ರ ಎಂದರೆ ನಾಗರಿಕ ಸಮಾಜ ಮತ್ತು ಅದನ್ನು ಪ್ರತಿನಿಧಿಸುವ ಸಂಘಟನೆಗಳು, ಸಂಸ್ಥೆಗಳು, ಸಾಂಸ್ಕೃತಿಕ ವೇದಿಕೆಗಳು. ವಿಶೇಷವಾಗಿ ಸಾಂಸ್ಕೃತಿಕ-ಧಾರ್ಮಿಕ ನೆಲೆಯಲ್ಲಿ ಸಮಾಜವನ್ನು ತಿದ್ದುವಂತಹ ಬೌದ್ಧಿಕ ಶಕ್ತಿ ಮತ್ತು ಸಂಪನ್ಮೂಲಗಳು ಇರುತ್ತವೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ವ್ಯಾಪ್ತಿಯನ್ನು ಹೊಂದಿರುತ್ತದೆ. ಆದರೆ ಸಮಕಾಲೀನ ಭಾರತದಲ್ಲಿ ಈ ಸಾಂಸ್ಕೃತಿಕ ನೆಲೆಗಳಲ್ಲೇ, ಹಿಂಸೆ-ಪ್ರತಿ ಹಿಂಸೆಯನ್ನು ಪ್ರಚೋದಿಸುವ ಶಕ್ತಿಗಳು ಅನಿರ್ಬಂಧಿತವಾಗಿ ಹುಟ್ಟಿಕೊಳ್ಳುತ್ತಿವೆ, ಬೆಳೆಯುತ್ತಿವೆ. ಮತೀಯ ದ್ವೇಷ, ಜಾತಿ ಅಹಮಿಕೆ ಮತ್ತು ಮೇಲರಿಮೆಯ ಮನಸ್ಥಿತಿ ನಿರಂತರವಾಗಿ ಪ್ರತಿಯೊಂದು ಹಂತದಲ್ಲೂ ‘ಅನ್ಯರನ್ನು’ ಸೃಷ್ಟಿಸುತ್ತಲೇ ಇದ್ದು, ಈ ‘ಅನ್ಯ’ರು ದಾಳಿಗೊಳಗಾಗುತ್ತಲೇ ಇರುತ್ತಾರೆ. ಮತದ್ವೇಷ ಮತ್ತು ಮತಾಂಧತೆ ಎಲ್ಲ ಮತಗಳಲ್ಲೂ-ಧಾರ್ಮಿಕ ನೆಲೆಗಳಲ್ಲೂ ಸಾಂಸ್ಥೀಕರಣಕ್ಕೊಳಗಾಗಿರುವುದು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಸಾಂಸ್ಕೃತಿಕ-ಧಾರ್ಮಿಕ ನೆಲೆಗಳಲ್ಲಿ ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಸಾಂತ್ವನದ ನೆಲೆಗಳನ್ನು ಕಂಡುಕೊಳ್ಳುವ ಸಾಮಾನ್ಯ ಜನತೆ ಎಷ್ಟೇ ಶಾಂತಿಪ್ರಿಯರಾಗಿದ್ದರೂ, ಹಿಂಸೆ-ಪ್ರತಿಹಿಂಸೆಯ ಮನೋಭಾವವನ್ನು ಸಮಾಜದಿಂದ ತೊಡೆದುಹಾಕುವ ಮಾರ್ಗದರ್ಶನ ಪಡೆಯುತ್ತಿಲ್ಲ. ಇಲ್ಲಿ ಸೃಷ್ಟಿಯಾಗುವ ಸಮಾಜಘಾತುಕತೆಗೆ ನಿರ್ದಿಷ್ಟ ಮತದ ಅಥವಾ ಧರ್ಮ-ಜಾತಿ ಹೊದಿಕೆಯನ್ನು ಹೊದಿಸಿ, ಸ್ವೀಕೃತಗೊಳಿಸಲಾಗುತ್ತದೆ. ಜೀವ ಹಂತಕ ಚಟುವಟಿಕೆಗಳನ್ನೂ ಸಮ್ಮತಿಸುವ ಒಂದು ಸಮಾಜ ನಮ್ಮೊಳಗೇ ಸೃಷ್ಟಿಯಾಗಿದೆ ಎಂದರೆ ಅದರ ಹಿಂದೆ ಈ ಸಾಂಸ್ಥೀಕರಣ ಮತ್ತು ಸಾಂಸ್ಥಿಕ ರಾಜಕೀಯಕರಣವನ್ನು ಮುಖ್ಯವಾಗಿ ಗಮನಿಸಬೇಕಿದೆ. ಎಲ್ಲ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ ಆಧ್ಯಾತ್ಮಿಕ ನೆಲೆಗಳು ಸಮಾಜದ ಉದ್ದಗಲವನ್ನೂ ಆವರಿಸಿದ್ದರೂ, ಈ ಸಮಾಜಘಾತುಕ ಮನಸ್ಥಿತಿಯನ್ನು ಯುವ ಮನಸ್ಸುಗಳಿಂದ ದೂರಮಾಡುವುದರಲ್ಲಿ ವಿಫಲವಾಗುತ್ತಿವೆ. ಇಲ್ಲಿ ಸ್ವಹಿತಾಸಕ್ತಿ ಒಂದು ಕಾರಣವಾದರೆ, ಇಚ್ಛಾಶಕ್ತಿಯ ಕೊರತೆ ಮತ್ತೊಂದು ಕಾರಣವಾಗುತ್ತದೆ ಅಥವಾ ತಟಸ್ಥ ಧೋರಣೆ ಮುಖ್ಯವಾಗುತ್ತದೆ.

ಸಮಾಜವನ್ನು ನಿರ್ದೇಶಿಸುವ ಮೂರನೆಯ ವಲಯ ಎಂದರೆ ಇದೇ ನಾಗರಿಕ ಸಮಾಜದ ಗಣ್ಯ ವರ್ಗ. ಆಧುನಿಕ ಬಂಡವಾಳಶಾಹಿ ಅಭಿವೃದ್ಧಿಯ ಪ್ರಧಾನ ಫಲಾನುಭವಿಗಳಾಗಿ, ಹಿತವಲಯಗಳಲ್ಲಿರುವ ಈ ಬೃಹತ್ ಸಮಾಜ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡಿರುವುದಷ್ಟೇ ಅಲ್ಲದೆ, ನಿರ್ಲಿಪ್ತ ಮೌನದ ಮೂಲಕ, ಸಮಾಜದ ಎಲ್ಲ ಸ್ತರಗಳಲ್ಲೂ ವ್ಯಾಪಿಸುತ್ತಿರುವ ಸಮಾಜಘಾತುಕತೆ ಮತ್ತು ಹಿಂಸೆ-ಪ್ರತಿಹಿಂಸೆಯ ಮನಸ್ಥಿತಿಯನ್ನು ಸಮ್ಮತಿಸುತ್ತಿದೆ. ಈ ವರ್ಗದ ‘ಮೌನ ಸಂಸ್ಕೃತಿ’ ಹೇಗೆ ಸಾಮಾಜಿಕ-ಸಾಂಸ್ಕೃತಿಕ ಉನ್ನತಿಯ ಹಾದಿಗೆ ತೊಡಕಗಾಗುತ್ತದೆ ಎನ್ನುವುದನ್ನು ಪಾಲೋ ಫ್ರೇರಿ ತಮ್ಮ ‘Pedagogy of the Oppressed’ ಕೃತಿಯಲ್ಲಿ ‘‘ದಮನಿತ ಜನರ ಅಭಿವ್ಯಕ್ತಿಯನ್ನು ತಡೆಗಟ್ಟುವುದು, ತನ್ಮೂಲಕ ಯಥಾಸ್ಥಿತಿಯನ್ನು ಪ್ರಶ್ನಿಸುವ ಅವಕಾಶಗಳನ್ನು ಕಸಿದುಕೊಳ್ಳುವುದರಿಂದ, ಸಮಾಜದ ಪ್ರಬಲ ಶಕ್ತಿಗಳು ದಮನಿತರು ಏನೂ ಅರಿಯದವರು, ಹಾಗಾಗಿ ಅಧಿಕಾರಸ್ಥರನ್ನು ಪ್ರಶ್ನಿಸುವಂತಿಲ್ಲ ಎಂಬ ಅಭಿಪ್ರಾಯವನ್ನು ಸೃಷ್ಟಿಸುತ್ತವೆ. ಸಾಮಾಜಿಕ ಪರಿವರ್ತನೆ ಮತ್ತು ವಿಮೋಚನೆಗೆ ಈ ಸಂಸ್ಕೃತಿಯನ್ನು ಭಂಜಿಸುವುದು ಮುಖ್ಯವಾಗುತ್ತದೆ’’ ಎಂದು ವಿವರಿಸುತ್ತಾರೆ.

ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಉನ್ನತಿ ಪಡೆದಿರುವ ಸಮಾಜವೊಂದು ಇದೇ ಮೌನ ಸಂಸ್ಕೃತಿಯನ್ನು ತನ್ನದೇ ನಿಯಮವನ್ನಾಗಿಸಿಕೊಂಡಾಗಲೂ ಇದೇ ಪರಿಣಾಮ ಉಂಟಾಗುತ್ತದೆ. ‘‘ಅಪರಾಧಿಗಳು ಹುಟ್ಟುವುದಿಲ್ಲ ಅವರನ್ನು ರೂಪಿಸಲಾಗುತ್ತದೆ’’ ಎಂಬ ನಾಣ್ಣುಡಿಯನ್ನು ಮರುನಿರ್ವಚನೆಗೊಳಪಡಿಸಿದಾಗ ಭಾರತದಲ್ಲಿ, ಇತ್ತೀಚೆಗೆ ಕರ್ನಾಟಕದಲ್ಲೂ ಸಹ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗುರುತಿಸಲು ಸಾಧ್ಯ. ನಾಗರಿಕತೆಯನ್ನು ಪ್ರತಿನಿಧಿಸುವ ನಾಗರಿಕ ಸಮಾಜದ ಅಕ್ಷರಲೋಕ, ಅಭಿವ್ಯಕ್ತಿ ಮಾಧ್ಯಮಗಳು ಈ ರೀತಿಯ ಮೌನ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡಾಗ, ಸಮಾಜಘಾತುಕತೆ ಸುಲಭವಾಗಿ ಯುವ ಸಮೂಹವನ್ನು ಆವರಿಸುತ್ತದೆ. ಇದಕ್ಕೆ ಬಲಿಯಾಗುವವರು ಯುವಜನತೆ. ಈ ವಿಷವರ್ತುಲದಿಂದ ಯುವ ಸಮೂಹವನ್ನು ಹೊರತರುವ ಪ್ರಯತ್ನಗಳನ್ನು ಯಾರು ಮಾಡಬೇಕು?

ಸಮಾಜದ ಉತ್ತರದಾಯಿತ್ವ-ಜವಾಬ್ದಾರಿ

ನಮ್ಮ ಇಡೀ ಸಮಾಜವೇ ಈ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು, ಸಾಮಾಜಿಕ ತಾಣಗಳು, ಸಿನೆಮಾಗಳು ಮತ್ತು ಐಪಿಎಲ್‌ನಂತಹ ಮನರಂಜನೆಯ ಕ್ರೀಡೆಗಳಲ್ಲೂ ಬಳಸಲಾಗುತ್ತಿರುವ ಪರಿಭಾಷೆ ಹಿಂಸೆ ಮತ್ತು ಕ್ರೌರ್ಯವನ್ನು ವೈಭವೀಕರಿಸುವಂತೆಯೇ ಇರುವುದು ವರ್ತಮಾನದ ದುರಂತಗಳಲ್ಲೊಂದು. ಹಾಗಾಗಿಯೇ ಹೊಡಿ-ಬಡಿ ಸಂಸ್ಕೃತಿ, ಸಾಂಸ್ಥೀಕರಣಗೊಂಡು ‘ಗುಂಪುಥಳಿತ’ ಮತ್ತು ವ್ಯಕ್ತಿ ದ್ವೇಷದ ಹತ್ಯೆಗಳು ಹೆಚ್ಚಾಗುತ್ತಿವೆ. ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ ಈ ಪಿಡುಗನ್ನು ಹೋಗಲಾಡಿಸಲು ಅಡ್ಡಿಯಾಗುತ್ತದೆ. ಜಾತಿ-ಮತಗಳ ಅಸ್ಮಿತೆಗಳನ್ನೇ ಸಾಮಾಜಿಕ ಅಸ್ತಿತ್ವವನ್ನಾಗಿ ಪರಿವರ್ತಿಸಿರುವ ಸಾಂಸ್ಕೃತಿಕ ನೆಲೆಗಳು ಅದರೊಳಗೇ ಸೃಷ್ಟಿಯಾಗುವ ಸಮಾಜಘಾತುಕತೆಯನ್ನು ಸಹನೀಯಗೊಳಿಸಿಬಿಡುತ್ತವೆ. ಹಾಗಾದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಯಾರದು? ತಮ್ಮದಲ್ಲದ ಗುರಿಯನ್ನು ಸಾಧಿಸಲು ಜೀವ ತೆರಲು ಮುಂದಾಗುವ ಯುವ ತಲೆಮಾರಿಗೆ ಶಾಂತಿ-ಅಹಿಂಸೆ-ಸಹಬಾಳ್ವೆ- ಸಹನಶೀಲತೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಪರಿಚಯಿಸುವ ಜವಾಬ್ದಾರಿ ಯಾರದು?

ಈ ಪ್ರಶ್ನೆ ಕೇವಲ ಅಧಿಕಾರ ರಾಜಕಾರಣವನ್ನಷ್ಟೇ ಅಲ್ಲದೆ, ಇಡೀ ಸಮಾಜವನ್ನು ಕಾಡಬೇಕಿದೆ. ಇದಕ್ಕೆ ಉತ್ತರವನ್ನೂ ಕಂಡುಕೊಳ್ಳಬೇಕಿದೆ. ಕರ್ನಾಟಕ ಬಿಹಾರ/ಉತ್ತರ ಪ್ರದೇಶವಾಗುತ್ತಿದೆ ಎಂದು ಹಲುಬುವ ಮೂಲಕ ಆ ರಾಜ್ಯದಲ್ಲಿರುವ ಮಾನವೀಯ ನೆಲೆಗಳನ್ನು ಅಪಮಾನಗೊಳಿಸುವ ಬದಲು, ನಮ್ಮ ಸಮಾಜವೇ ವ್ಯತಿರಿಕ್ತ ಹಾದಿಯಲ್ಲಿ ಸಾಗುತ್ತಿರುವುದೇಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ವರ್ತಮಾನದ ತುರ್ತು ಮತ್ತು ಜವಾಬ್ದಾರಿ. ಸಾಂಘಿಕವಾಗಿ ಪ್ರಗತಿಪರ-ಎಡಪಂಥೀಯ ಸಂಘಟನೆಗಳು, ಸಾಂಸ್ಥಿಕವಾಗಿ ಸಾಂಸ್ಕೃತಿಕ ವೇದಿಕೆ ಮತ್ತು ಸಂವಹನ ಮಾಧ್ಯಮಗಳು ಈ ನೊಗವನ್ನು ಹೊರಬೇಕಿದೆ. ಬದಲಾವಣೆ ಅನಿವಾರ್ಯ ಆದರೆ ನಕಾರಾತ್ಮಕ ಬದಲಾವಣೆ ವಿನಾಶದತ್ತ ಕೊಂಡೊಯ್ಯುತ್ತದೆ. ಈ ಅರಿವು ಮತ್ತು ಪ್ರಜ್ಞೆ ಸಾಮಾಜಿಕ-ರಾಜಕೀಯ ನೆಲೆಗಳಲ್ಲಿ ಮೂಡಿದರೆ ಸಾರ್ಥಕವಾದೀತು.

share
ನಾ. ದಿವಾಕರ
ನಾ. ದಿವಾಕರ
Next Story
X