ಯಡ್ರಾಮಿಯಲ್ಲಿ ಇಲ್ಲ ಅಗ್ನಿಶಾಮಕ ಠಾಣೆ

ಯಡ್ರಾಮಿ: ಸದ್ಯ ಸುಡು ಬಿಸಿಲು ಇರುವುದರಿಂದ ಬೀಡಿ, ಸಿಗರೇಟ್ ಸೇದಿ ಬಿಸಾಕಿದ ಕಿಡಿಯೂ ಅಗ್ನಿ ಅನಾಹುತ ಸೃಷ್ಟಿಸುತ್ತದೆ. ಕಬ್ಬಿನ ಗದ್ದೆ, ಪೈರು ಹೊಲಗಳು, ಬಣವೆಗಳಿಗೆ ಕಿಡಿ ಬೆಂಕಿಯಿಂದ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೆಲವೇ ಹೊತ್ತಿನಲ್ಲಿ ಬೂದಿಯಾಗುವ ಪರಿಸ್ಥಿತಿ ಜಿಲ್ಲೆಯಲ್ಲಿ ಆಗಾಗ ವರದಿಯಾಗುತ್ತಿದೆ.
ಹೊಸ ತಾಲೂಕು ಆಗಿರುವ ಯಡ್ರಾಮಿಯಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ್ದರಿಂದ ಬೆಂಕಿ ಅವಘಡ ಸಂಭವಿಸಿದಾಗ ತ್ವರಿಗತಿಯ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿದೆ. ಹೀಗಾಗಿ ತ್ವರಿತವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಬೇಡಿಕೆ ಪ್ರಬಲವಾಗಿದೆ. ಅದರಲ್ಲೂ, ಬೇಸಿಗೆಯಲ್ಲಿ ಈ ಕುರಿತು ಚರ್ಚೆ ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ತಾಲೂಕಿನಲ್ಲಿ ನಾನಾ ಕಾರಣಗಳಿಂದ ಆಕಸ್ಮಿಕ ಅಗ್ನಿ ಅವಘಡಗಳಿಂದ ಸಾರ್ವಜನಿಕ, ಖಾಸಗಿ ಆಸ್ತಿ-ಪಾಸ್ತಿಗಳಿಗೆ ಪಾರ ಹಾನಿಯಾಗಿದೆ. ವೈಯಕ್ತಿಕ ದ್ವೇಷಗಳಿಗೆ, ಹಗೆತನಗಳಿಂದಲೂ ಬೆಂಕಿ ಹೊತ್ತಿಸುವ ಪ್ರಕರಣಗಳು ಹೆಚ್ಚುತ್ತಿವೆ. ಜೇವರ್ಗಿಯಲ್ಲಿ ಈಗಿರುವ ಅಗ್ನಿಶಾಮಕ ಠಾಣೆಗಳು ಹಾಗೂ ಸಿಬ್ಬಂದಿಗಳನ್ನೇ ಯಡ್ರಾಮಿ ಜನತೆ ಅವಲಂಬಿಸಬೇಕಾಗಿದೆ. ಜೇವರ್ಗಿ ವಿಭಾಗದ ಸಿಬ್ಬಂದಿಗಳು ಉತ್ತಮ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದರೂ ಘಟನಾ ಸ್ಥಳದ ಅಂತರ ಹಾಗೂ ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚುಕಡೆ ಬೆಂಕಿ ಅನಾಹುತಗಳು ಸಂಭವಿಸಿದರೆ ತ್ವರಿಗತಿಯಲ್ಲಿ ಬೆಂಕಿ ಶಮನ ಕಾರ್ಯ ಕಷ್ಟವಾಗುತ್ತಿದೆ.
ಬೆಂಕಿ ನಂದಿಸಲು ಕಷ್ಟಸಾಧ್ಯ: ತಾಲೂಕಿನ ಸುಂಬಡ, ಕುಳಗೇರಿ, ಯತ್ನಾಳ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಜೇವರ್ಗಿದಿಂದ ರಕ್ಷಣಾ ತಂಡ, ಫೈರ್ ಫೈಟರ್ ಆಗಮಿಸಬೇಕು. ಕೆಲ ಊರುಗಳು ತುಂಬಾ ದೂರದಲ್ಲಿದ್ದರಿಂದ ತಂಡವು ಬರುವಷ್ಟರಲ್ಲಿ ಬೆಂಕಿ ನಿಯಂತ್ರಣಕ್ಕೆ ಬಾರದಷ್ಟು ಅಥವಾ ಅಪಾರ ಹಾನಿಯ ಹಂತ ತಲುಪಿರುತ್ತದೆ. ಹೀಗಾಗಿ ಹೊಸ ತಾಲೂಕುಗಳಿಗೂ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಬೇಡಿಕೆ ಪ್ರಬಲವಾಗಿದೆ.
ಹೊಸ ತಾಲೂಕಿಗೆ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಯಡ್ರಾಮಿ ಪಟ್ಟಣದಲ್ಲಿ ಠಾಣೆ ಸ್ಥಾಪನೆಗಾಗಿ ಜಾಗ ಗುರುತಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕಡತಗಳನ್ನು ಅಗ್ನಿ ಶಾಮಕ ಇಲಾಖೆ ಹೆಸರಿನಲ್ಲಿ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಅಗ್ನಿ ಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ.
ಯಡ್ರಾಮಿ ತಾಲೂಕು ಕೇಂದ್ರದಲ್ಲಿ ಹೊಸ ಅಗ್ನಿ ಶಾಮಕ ಠಾಣೆ ಸ್ಥಾಪಿಸಲು ರಾಜ್ಯ ಸರಕಾರ ಎರಡು ವರ್ಷಗಳ ಹಿಂದೆಯೇ ಅನುಮೋದನೆ ನೀಡಿದ್ದಾರೆ, ಸೂಕ್ತವಾದ ಜಾಗ ಇದ್ದರೂ, ಇಲಾಖೆಗಳ ಸಮನ್ವಯ ಕೊರತೆಯಿಂದ ಇಲ್ಲಿವರೆಗೆ ಠಾಣೆ ಸ್ಥಾಪನೆ ಆಗಿಲ್ಲ.
-ಶಾಂತಪ್ಪ, ಅಗ್ನಿಶಾಮಕ ಠಾಣಾಧಿಕಾರಿ ಜೇವರ್ಗಿ
ತಾಲೂಕಿನ ಹಲವು ಗ್ರಾಮಗಳು ಅಗ್ನಿ ಅಪಘಾತಗಳ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಾಗಿವೆ. ಪ್ರಸ್ತುತ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ಸೌಲಭ್ಯಗಳಿಗೆ, ಸಹಾಯಕ್ಕೆ ದೂರದ ತಾಲೂಕುಗಳಿಗೆ ಅವಲಂಬಿಸಬೇಕಾಗುತ್ತಿದೆ.
-ಅಶೋಕ ಕುಳಗೇರಿ, ರೈತ
ಯಡ್ರಾಮಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ವಿಳಂಬವಾಗುತ್ತಿರುವುದಕ್ಕೆ ಶಾಸಕ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಸಮನ್ವಯದ ಕೊರತೆ ಮತ್ತು ನಿರ್ಲಕ್ಷ್ಯ ಕಾರಣ
-ಹೆಸರು ಹೇಳಲು ಇಚ್ಛಿಸದ,
ಅಗ್ನಿಶಾಮಕ ಸಿಬ್ಬಂದಿ, ಜೇವರ್ಗಿ






