ಈ ಬಾರಿ ಬೂಕರ್ ವಿಜೇತೆಯಿಂದ ದಸರಾಗೆ ಚಾಲನೆ

ಮೈಸೂರು, ಆ.22: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಈ ಬಾರಿಯ ಐತಿಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ರಉದ್ಘಾಟನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೊಬ್ಬರಿಗೆ ದಸರಾ ಉದ್ಘಾಟನೆ ಅವಕಾಶ ಸಿಕ್ಕಿರುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಂಗಳೂರಿನಲ್ಲಿ ಈ ಬಾರಿಯ ದಸರಾ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಲಭಿಸುತ್ತಿದ್ದಂತೆ ಬಳ್ಳಾರಿಯಲ್ಲಿ ಡಿಸೆಂಬರ್ನಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ದಸರಾ ಉದ್ಘಾಟನೆಯ ಅವಕಾಶ ಸಹ ಲಭಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವವಾಗಿದೆ.
ಸೆ.22ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2025ರ ಮೈಸೂರು ದಸರಾ ಉದ್ಘಾಟನೆಗೆ ಚಾಲನೆ ದೊರೆಯಲಿದೆ. ಈ ಬಾರಿ 11 ದಿನಗಳವರಗೆ ದಸರಾ ಆಚರಣೆಗಳು ನಡೆಯಲಿದೆ. ಅಕ್ಟೋಬರ್ 2 ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಜಂಬೂ ಸವಾರಿ ಸ್ತಬ್ಧಚಿತ್ರಗಳಲ್ಲಿ ಗ್ಯಾರಂಟಿ, ಗಾಂಧೀಜಿ ವಿಚಾರಧಾರೆಗಳಿಗೆ ಆದ್ಯತೆ ನೀಡಲಾಗಿದೆ. 2017ರಲ್ಲಿ ಸಾಹಿತಿ ನಿಸಾರ್ ಅಹ್ಮದ್ ಹೊರತುಪಡಿಸಿ ಮುಸ್ಲಿಮ್ ಸಮುದಾಯದ ಬೇರಾರಿಗೂ ಇಂತಹ ಅವಕಾಶ ಸಿಕ್ಕಿಲ್ಲ.
ಕಳೆದ 25 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಮುಖರ ಪಟ್ಟಿ ಈ ಕೆಳಗಿನಂತಿವೆ.
1999ರಿಂದ 2024
1999 ಗಂಗೂಬಾಯಿ ಹಾನಗಲ್
2000 ಎಂ.ಎನ್.ಜೋಯಿಷ್
2001 ಬಿ.ಸರೋಜಾದೇವಿ
2002 ದಸರಾ ನಡೆದಿಲ್ಲ
2003 ಡಾ.ಸಿ.ಎನ್.ಆರ್.ರಾವ್
2004 ಡಾ.ಎಚ್.ಎನ್.ನರಸಿಂಹಯ್ಯ
2005 ಬರಗೂರು ರಾಮಚಂದ್ರಪ್ಪ
2006 ಜಿ.ನಾರಾಯಣ
2007 ಬಾಲಗಂಗಾಧರನಾಥ ಸ್ವಾಮೀಜಿ
2008 ಡಾ.ಶಿವಕುಮಾರ ಸ್ವಾಮೀಜಿ
2009 ರವಿಶಂಕರ ಗುರೂಜಿ
2010 ಡಾ.ವೀರೇಂದ್ರ ಹೆಗಡೆ,
2011 ವಿಶ್ವೇಶ್ವರ ತೀರ್ಥ ಶ್ರೀಪಾದರು
2012 ಸಿದ್ದೇಶ್ವರ ಸ್ವಾಮೀಜಿ
2013 ಡಾ.ಚಂದ್ರಶೇಖರ ಕಂಬಾರ
2014 ಗಿರೀಶ್ ಕಾರ್ನಾಡ್
2015 ಪುಟ್ಟಯ್ಯ
2016 ಡಾ.ಚನ್ನವೀರ ಕಣವಿ
2017 ಡಾ.ನಿಸಾರ್ ಅಹ್ಮದ್
2018 ಸುಧಾ ಮೂರ್ತಿ
2019 ಡಾ.ಎಸ್.ಎಲ್.ಭೈರಪ್ಪ
2020 ಡಾ.ಸಿ.ಎನ್.ಮಂಜುನಾಥ್
2021 ಎಸ್.ಎಂ.ಕೃಷ್ಣ
2022 ದ್ರೌಪದಿ ಮುರ್ಮು
2023 ಹಂಸಲೇಖ
2024 ಡಾ.ಹಂಪಾ ನಾಗರಾಜಯ್ಯ







