ವೃದ್ಧ ದಂಪತಿಯ ಪೋಷಣೆಯಲ್ಲಿರುವ ಮೂವರು ಮಕ್ಕಳಿಗೆ ಬೇಕಿದೆ ಅಭಯ ಹಸ್ತ

ಕಲಬುರಗಿ : ಉತ್ತರ ಕರ್ನಾಟಕದ ಏಕೈಕ ಶುಷ್ಕ ಅರಣ್ಯ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಂಚೋಳಿ ವನ್ಯಜೀವಿಧಾಮದ ಪ್ರದೇಶ ಹಲವು ಸಮಸ್ಯೆಗಳಿಂದ ಕೂಡಿದೆ. ಸದ್ಯ ಅರಣ್ಯದೊಳಗಿರುವ ಗ್ರಾಮ, ತಾಂಡಾಗಳ ಪರಿಸ್ಥಿತಿ, ಯುವಕರ ನಿರುದ್ಯೋಗ, ಅನಕ್ಷರತೆ ನಡುವೆಯೇ ತಂದೆ ತಾಯಿ ಇಲ್ಲದ ಮೂವರು ಅನಾಥ ಮಕ್ಕಳ ಪರಿಸ್ಥಿತಿಯೂ ಕಷ್ಟಕರವಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಯ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇವಾ ನಾಯಕ ತಾಂಡಾದಲ್ಲಿ ತಂದೆ-ತಾಯಿ ಕಳೆದುಕೊಂಡ ಮೂವರು ಚಿಕ್ಕ ಮಕ್ಕಳು, ಅಜ್ಜ ಅಜ್ಜಿಯ ಪೋಷಣೆಯಲ್ಲಿ ಈಗ ಭವಿಷ್ಯದ ಭರವಸೆಗಾಗಿ ಕಾದು ಕುಳಿತಿದ್ದಾರೆ.
ತಾಂಡಾದಲ್ಲಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿಗಳಾದ ಚಂದ್ರ ಜಾಧವ್ ಹಾಗೂ ದೇವಿಬಾಯಿ ಎಂಬವರು ತಮ್ಮ ಮಕ್ಕಳ ಬದಲಿಗೆ ಮೊಮ್ಮಕ್ಕಳನ್ನು ಸಾಕುವಂತಹ ದಯನೀಯ ಸ್ಥಿತಿ ಬಂದೊದಗಿದೆ. ಜೀವನ ಸಾಗಿಸಲು ಆರ್ಥಿಕವಾಗಿ ಬಲ ತುಂಬುತ್ತಿದ್ದ ಪುತ್ರ ಹಾಗೂ ಸೊಸೆಯನ್ನು ಕಳೆದುಕೊಂಡ ಚಂದ್ರ ಜಾಧವ್ ದಂಪತಿ, ಈಗ ಮೊಮ್ಮಕ್ಕಳನ್ನು ಸಾಕುವುದು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಮಕ್ಕಳ ಭವಿಷ್ಯ ರೂಪಿಸಲು ಅವರು ‘ಅಭಯ ಹಸ್ತ’ಕ್ಕಾಗಿ ಭರವಸೆಯಲ್ಲಿದ್ದಾರೆ.
ಮೊಮ್ಮಕ್ಕಳನ್ನು ಸಾಕುತ್ತಿರುವ ವೃದ್ಧ ದಂಪತಿ: ಚಂದ್ರ ಜಾಧವ್ ಹಾಗೂ ದೇವಿಬಾಯಿ ದಂಪತಿಯ ಪುತ್ರ ಪೂರಣ್ ಜಾಧವ್ ಹಾಗೂ ಸೊಸೆ ರೇಣುಕಾ ಅವರು ಜೀವನ ನಡೆಸುವುದಕ್ಕಾಗಿ ಬೇರೆ ನಗರಗಳಿಗೆ ವಲಸೆ (ಗುಳೆ) ಹೋಗಿ ತಮ್ಮ ಬದುಕು ಸಾಗಿಸುತ್ತಿದ್ದರು. ಗುಳೆ ಹೋದ ಪ್ರದೇಶದಲ್ಲಿ ಏಕಾಏಕಿ ಸೊಸೆ ನಿಧನರಾಗಿದ್ದರಿಂದ ಮಗ ಪೂರಣ್, ತನ್ನ ಮಕ್ಕಳನ್ನು ಕರೆದುಕೊಂಡು ಪಾಲಕರ ಜೊತೆಗೆ ಸೇವಾ ನಾಯಕ ತಾಂಡಾದಲ್ಲಿ ನೆಲೆಸಿದ್ದ. ಬಳಿಕ ಪತ್ನಿ ತೀರಿಹೋದ ಕೆಲ ತಿಂಗಳಲ್ಲೇ ಪೂರಣ್ ಕೂಡ ಮೃತಪಟ್ಟರು. ಹಾಗಾಗಿ ಮೃತಪಟ್ಟ ಮಗ ಸೊಸೆಯ ಮಕ್ಕಳನ್ನು ಸಾಕುವ ಹೊಣೆ ಅಜ್ಜ, ಅಜ್ಜಿಯದಾಗಿದೆ. ಅಜ್ಜಿ ಮಾತ್ರ ಕೂಲಿ ಕೆಲಸ ಮಾಡುತ್ತ ಅಜ್ಜ ಹಾಗೂ ಮೂರು ಮೊಮ್ಮಕ್ಕಳನ್ನು ಸಾಕುತ್ತಿದ್ದಾರೆೆ. ಬೆಳ್ಳಂಬೆಳಗ್ಗೆ 4 ಗಂಟೆಗೆ ಎದ್ದು ಕೂಲಿಗಾಗಿ ಅರಸುತ್ತಾ ಹೋಗುವ ಅಜ್ಜಿ ದೇವಿಬಾಯಿ ಮರಳಿ ಬರುವುದು ಸಂಜೆಯ ಹೊತ್ತಿನಲ್ಲಿ, ಅಲ್ಲಿಯವರೆಗೆ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅಜ್ಜನ ಕೆಲಸವಾಗಿದೆ.
8 ವರ್ಷದೊಳಗಿರುವ ಮೂವರು ಮಕ್ಕಳಿಗಿಲ್ಲ ಆಧಾರ್ ಕಾರ್ಡ್:
ಮೃತ ಪೂರಣ್ ಹಾಗೂ ರೇಣುಕಾ ದಂಪತಿಗೆ ಒಂದು ಗಂಡು, ಎರಡು ಹೆಣ್ಣುಮಕ್ಕಳಿವೆ. 8 ವರ್ಷದ ದೀಪಿಕಾ, 5 ವರ್ಷದ ದಿವ್ಯಾ ಹಾಗೂ ಮೂರುವರೆ ವರ್ಷದ ಸಾಯಿರಾಂ ಎಂಬ ಬಾಲಕನಿದ್ದಾನೆ. ಈ ಮೂರೂ ಮಕ್ಕಳಿಗೆ ತಂದೆ ತಾಯಿಯಷ್ಟೇ ಅಲ್ಲದೆ ಗುರುತಿಗಾಗಿ ಇರುವ ‘ಆಧಾರ್ ಕಾರ್ಡ್’ ಕೂಡ ಇಲ್ಲ. ದುಡಿಯುವ ವಯಸ್ಸು ಮೀರಿದರೂ ಅಜ್ಜಿ ನಿತ್ಯವೂ ಮಕ್ಕಳಿಗಾದರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆಯಿದೆ. ಇಂತಹ ಸನ್ನಿವೇಶದಲ್ಲೂ ಅನಾಥ ಮಕ್ಕಳನ್ನು ಸಾಕುವುದು, ಶಿಕ್ಷಣ ಕೊಡಿಸುವುದು ತುಂಬಾ ಕಷ್ಟವಾಗಿದೆ. ಅವರಿಗೆ ಸರಕಾರ, ಸಂಘ ಸಂಸ್ಥೆಗಳು ಸಹಾಯಕ್ಕೆ ಬರಬೇಕು, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತಿತ್ತರ ದಾಖಲೆಗಳನ್ನು ಸೃಷ್ಟಿಸಿ, ಸರಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಅರಣ್ಯ ಪ್ರದೇಶದಲ್ಲಿರುವ ಈ ತಾಂಡಕ್ಕೆ ಹೋಗಲು ಚಿಂಚೋಳಿಯಿಂದ ಕೇವಲ 12 ಕಿಮೀ ದೂರವಿದ್ದರೂ ಅಧಿಕಾರಿಗಳು, ಶಾಸಕ, ಸಂಸದರು, ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಬರುವುದಿಲ್ಲ. ಪಕ್ಕದಲ್ಲಿ ತೆಲಂಗಾಣ ರಾಜ್ಯವಿದೆ, ಗಡಿ ಪ್ರದೇಶದಲ್ಲಿರುವ ಜನರ ಅಭ್ಯುದಯಕ್ಕೆ, ಮಕ್ಕಳ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಆಸಕ್ತಿ ತೋರಬೇಕು. ಜನಜೀವನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನರೇಶ್ ಜಾಧವ್ ಒತ್ತಾಯಿಸಿದ್ದಾರೆ.
ಒಂದೊತ್ತಿನ ಊಟಕ್ಕೂ ಪರದಾಡುವ ಕುಟುಂಬಕ್ಕೆ ಮಕ್ಕಳನ್ನು ಸಾಕುವುದು ಕಷ್ಟವಾಗಿದೆ, ಸರಕಾರ, ಸಂಘ ಅಥವಾ ಮಕ್ಕಳಿಗೆ ಸಂಬಂಧಪಟ್ಟಂತೆ ಇರುವ ಆಯೋಗ, ಸಂಸ್ಥೆಗಳು ಇತ್ತ ಕಡೆ ಗಮನ ಹರಿಸಬೇಕು, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ, ವಸತಿ, ಇತರ ಸೌಲಭ್ಯಗಳನ್ನು ಒದಗಿಸಬೇಕು.
-ಪ್ರಕಾಶ್ ರಾಠೋಡ್, ಸ್ಥಳೀಯ ಕೂಲಿ ಕಾರ್ಮಿಕ







