25 ದಿನಗಳಿಂದ ಟ್ರಾನ್ಸ್ಫಾರ್ಮರ್ ದುರಸ್ತಿ ಇಲ್ಲ

ಸಂಡೂರು: ತಾಲೂಕಿನ ಚೂರು ಹೋಬಳಿ ವ್ಯಾಪ್ತಿಯ ಕಾಟಿನಕಂಬ ಹಾಗೂ ಕೊಂಡಾಪುರ ಗ್ರಾಮಗಳ ರೈತರು ಕಳೆದ 25 ದಿನಗಳಿಂದ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪಂಪ್ಸೆಟ್ಗಳಿಗೆ ಸಂಬಂಧಿಸಿದ ಐಪಿ ಸೆಟ್ ಟ್ರಾನ್ಸ್ಫಾರ್ಮರ್ ಕೆಟ್ಟು ಹಲವು ದಿನಗಳಾದರೂ ಇದುವರೆಗೆ ದುರಸ್ತಿ ಮಾಡದೇ ಅಥವಾ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸದೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬೇಸಿಗೆಯ ತೀವ್ರ ಬಿಸಿಲಿನ ನಡುವೆ ನೀರಿನ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವಾರು ಎಕರೆ ಪ್ರದೇಶದಲ್ಲಿ ಬೆಳೆದ ಸೌತೆಕಾಯಿ ಸೀಡ್ಸ್ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.
‘ಒಂದು ಎಕರೆ ಬೆಳೆ ಬಿತ್ತನೆಗೆ ಏಳುರಿಂದ ಹತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ನೀರಿನ ಕೊರತೆಯಿಂದ ಸಂಪೂರ್ಣ ಬೆಳೆ ಮಣ್ಣು ಪಾಲಾಗುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪ್ರತಿದಿನ ಸ್ಥಳೀಯ ಲೈನ್ಮ್ಯಾನ್ರನ್ನು ಸಂಪರ್ಕಿಸಿ ಸಮಸ್ಯೆ ಕುರಿತು ಕೇಳಿದರೂ, ‘ಇದು ನಮ್ಮ ಕೈಯಲ್ಲಿಲ್ಲ, ಮೇಲಾಧಿಕಾರಿಗಳು ಟ್ರಾನ್ಸ್ಫಾರ್ಮರ್ ಕಳುಹಿಸಿದರೆ ಅಳವಡಿಸುತ್ತೇವೆ’ ಎಂಬ ಉತ್ತರ ಮಾತ್ರ ಸಿಗುತ್ತಿದೆ ಎಂದು ರೈತರು ದೂರಿದ್ದಾರೆ. ಬಳಿಕ ಎಇಇ ಅಧಿಕಾರಿಗಳನ್ನು ಸಂಪರ್ಕಿಸಿದಾಗ ‘ನಾಳೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದ್ದರೂ, ಮೂರು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಟ್ರಾನ್ಸ್ ಫಾರ್ಮರ್ ಕೆಟ್ಟರೆ ಸಾಮಾನ್ಯವಾಗಿ 24ರಿಂದ 48 ಗಂಟೆಗಳೊಳಗೆ ದುರಸ್ತಿ ಅಥವಾ ಬದಲಾವಣೆ ಮಾಡಬೇಕೆಂಬ ನಿಯಮವಿದ್ದರೂ, 25 ದಿನಗಳಾದರೂ ವಿದ್ಯುತ್ ಪೂರೈಕೆ ಪುನಃಸ್ಥಾಪನೆ ಆಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ‘ದೇಶದ ಬೆನ್ನೆಲುಬಾಗಿರುವ ರೈತರೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ’ ಎಂದು ರೈತರು ಕಿಡಿಕಾರಿದ್ದಾರೆ.
ಇದೀಗ, ರೈತರು ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಉಳಿದಿರುವ ಬೆಳೆಗಳನ್ನು ಉಳಿಸಲು ತುರ್ತು ವಿದ್ಯುತ್ ಸಂಪರ್ಕ ಒದಗಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಸಂಡೂರು ತಾಲೂಕಿನ 72 ಮಲ್ಲಾಪುರ ಗ್ರಾಮದಲ್ಲಿಯೂ ವಿದ್ಯುತ್ ಸಮಸ್ಯೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಟ್ರಾನ್ಸ್ಫಾರ್ಮರ್ ಸಾಮರ್ಥ್ಯ ಕಡಿಮೆ ಇರುವುದರಿಂದ ಹಗಲಿನ ವೇಳೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪರಿಣಾಮ ರಾತ್ರಿ ವೇಳೆ ಮಾತ್ರ ನೀರು ತುಂಬಲಾಗುತ್ತಿದ್ದು, ಬೆಳಿಗ್ಗೆ ವೇಳೆಗೆ ನೀರು ಸಂಪೂರ್ಣ ಖಾಲಿಯಾಗುತ್ತಿದೆ. ಈ ಘಟಕದ ನೀರನ್ನು ಸುತ್ತಮುತ್ತಲಿನ ಗ್ರಾಮಸ್ಥರೂ ಅವಲಂಬಿಸಿರುವುದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಒಂದು ಕಡೆ ರೈತರ ಬೆಳೆಗಳು ಒಣಗುತ್ತಿವೆ, ಮತ್ತೊಂದು ಕಡೆ ಜನರಿಗೆ ಕುಡಿಯುವ ನೀರೂ ಸಿಗದ ಪರಿಸ್ಥಿತಿ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಸ್ಕಾಂನ ಮೇಲ್ವರ್ಗದ ಅಧಿಕಾರಿಗಳ ವಿರುದ್ಧ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಂಡು, ರೈತರಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂದು ಸಂಡೂರು ತಾಲೂಕಿನ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸಮಸ್ಯೆ ನನ್ನ ಗಮನಕ್ಕೆ ತಡವಾಗಿ ಬಂದಿದೆ. ಇದೀಗ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಹಾಗೂ ವಿದ್ಯುತ್ ಪೂರೈಕೆ ಪುನಃಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಆಗಿರುವ ತೊಂದರೆಯನ್ನು ಮನಗಂಡು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ.
-ಉಮೇಶ್, ಎಇಇ, ಸಂಡೂರು
ಬೇಸಿಗೆ ಸಮಯದಲ್ಲಿ ರೈತರು ಸಾಲಸೋಲ ಮಾಡಿ, ಕಷ್ಟಪಟ್ಟು ಬೆಳೆ ಬೆಳೆದಿರುತ್ತಾರೆ. ಆದರೆ ಪಂಪ್ಸೆಟ್ಗಳಿಗೆ ಸರಿಯಾದ ಸಮಯಕ್ಕೆ ಕರೆಂಟ್ ಸಿಗದೇ ನೀರಿನ ಅಭಾವ ಉಂಟಾದರೆ ರೈತರು ಹಾಕಿದ ಬಂಡವಾಳವನ್ನೇ ಮರಳಿ ಪಡೆಯುವುದು ಕಷ್ಟವಾಗುತ್ತದೆ. ಈಗಾಗಲೇ ಹಲವಾರು ಬೆಳೆಗಳು ಒಣಗುವ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಟ್ರಾನ್ಸ್ಫಾರ್ಮರ್ ಅಳವಡಿಸಿ ವಿದ್ಯುತ್ ಪೂರೈಕೆ ಕಲ್ಪಿಸಿ ರೈತರನ್ನು ಉಳಿಸುವ ಪ್ರಾಮಾಣಿಕ ಕೆಲಸ ಮಾಡಬೇಕು.
-ವಿಜಯ್ ಕುಮಾರ್ ಯು.ಎ.
ಯುವ ರೈತ, ಕಾಟಿನಕಂಬ






