ಕಾರ್ಖಾನೆಗಳ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ

ರಾಯಚೂರು: ತಾಲೂಕಿನ ಶಕ್ತಿನಗರ, ವಡ್ಲೂರು, ಗಂಜಳ್ಳಿ ಸುತ್ತಮುತ್ತ ಗ್ರಾಮಸ್ಥರು ಕಲುಷಿತ ನೀರು, ಕಲುಷಿತ ಗಾಳಿಯಿಂದ ನಲುಗುತ್ತಿದ್ದು, ಆರೋಗ್ಯ ಸಮಸ್ಯೆಗೆ ಸಿಲುಕಿದ್ದಾರೆ.
ರಾಯಚೂರು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಮ ಪಾಲನೆ ಮಾಡದೇ ಜನ, ಜಾನುವಾರುಗಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರಿಗೆ ಆರೋಗ್ಯವಂತ ಪರಿಸರ ನಿರ್ಮಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಪರಿಸರವೆಂದರೆ ಕೇವಲ ಗಿಡಮರಗಳಲ್ಲ,ಅದು ನೀರು, ವಾಯು, ಅರಣ್ಯ, ಬೆಟ್ಟ, ಗುಡ್ಡ ನೈಸರ್ಗಿಕ ಸಂಪತ್ತು ಕೂಡಿದೆ. ಯಾವುದೇ ಕಾರ್ಖಾನೆಗಳು ಪ್ರಾರಂಭಿಸಬೇಕಾದರೆ ಜನವಸತಿಯಿಂದ ಸಾಕಷ್ಟು ದೂರವಿರಬೇಕು ಹಾಗೂ ಜನ ಜೀವನಕ್ಕೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಆದರೆ ರಾಯಚೂರು ತಾಲೂಕಿನ ಯದ್ಲಾಪೂರು ಗ್ರಾಪಂ ವ್ಯಾಪ್ತಿಗೆ ಬರುವ ವಡ್ಲೂರು ಬಳಿಯ ಟ್ರೈಮಾಕ್ಸ್, ಮಂಚಿಕೊಂಡ ಆಗ್ರೋ ಹಾಗೂ ಸುತ್ತಮುತ್ತಲಿನ ಕಾರ್ಖಾನೆಗಳು ಕೆಮಿಕಲ್, ರಸಾಯನಿಕ ಮಿಶ್ರಿತ ನೀರು ಕುಡಿಯುವ ನೀರಿಗೆ ಸೇರುತ್ತಿದೆ ಹಾಗೂ ಹಳ್ಳ, ಕೆರೆಗಳಿಗೆ ತ್ಯಾಜ್ಯ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ವೈಜ್ಞಾನಿಕ ವಿಲೇವಾರಿ ಮಾಡದೆ ಪರಿಣಾಮ ಇಲ್ಲಿನ ಜನರು ಚರ್ಮರೋಗ, ಅಸ್ತಮಾ ಹಾಗೂ ಇತರೆ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ.
ಕಾರ್ಖಾನೆಗಳ ನೀರು ಹಳ್ಳಗಳಿಗೆ ಬಿಡುವ ಕಾರಣ ಜಾನುವಾರುಗಳು ಕುಡಿದು ಸಾಯುತ್ತಿವೆ. ಅನೇಕ ಬಾರಿ ರೈತರು, ಜಾನುವಾರುಗಳ ಮಾಲಕರು ಸ್ಥಳೀಯ ಆಡಳಿತಕ್ಕೆ ಪರಿಹಾರಕ್ಕಾಗಿ ದೂರು ನೀಡಿದ್ದು, ಕಾರ್ಖಾನೆಗಳ ಮಾಲಕರು ಅಲ್ಪಸ್ವಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ವರದಿಯಲ್ಲಿ ಸುಳ್ಳು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಳೆದ ವರ್ಷಾಂತ್ಯದ ವೇಳೆ ಉಪ ಲೋಕಾಯುಕ್ತ ಬಿ.ವೀರಪ್ಪನವರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗ ಕಾರ್ಖಾನೆಗಳ ಬೇಜವಾಬ್ದಾರಿ, ಅವ್ಯವಸ್ಥೆ ಕಂಡು ಪಿಡಿಒ ಹಾಗೂ ಪರಿಸರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳೀಯರ ಅಹವಾಲು ಸ್ವೀಕರಿಸುವಾಗ ಕೆಮಿಕಲ್ ನೀರು ಹೊರಬಿಡುವ ಕಾರ್ಖಾನೆಗಳಿಗೆ ನೊಟೀಸ್ ನೀಡಬೇಕು. ಕಾರ್ಖಾನೆ ಮುಚ್ಚಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದರು. ಕಾರ್ಖಾನೆಗಳಿಂದ ಹೊರಬರುವ ಕಲುಷಿತ ನೀರಿನಿಂದ ಭತ್ತದ ಬೆಳೆಗೆ ಹಾನಿಯಾಗುತ್ತಿದೆ. ಜನತೆಗೆ ಚರ್ಮ ರೋಗ ಭಾದೆ ಕಾಡುತ್ತಿದೆ ಎಂದು ಸಾರ್ವಜನಿಕರು ದೂರಿದಾಗ ಅನೇಕರ ವಿರುದ್ಧ ಸುಮೋಟೊ ಪ್ರಕರಣವೂ ದಾಖಲಿಸಿ ಬಿಸಿ ಮುಟ್ಟಿಸಿದ್ದರು. ಆದರೆ ಕೆಲ ದಿನಗಳ ನಂತರ ಮತ್ತದೇ ಪರಿಸ್ಥಿತಿ ಮುಂದುವರೆದಿದೆ.
ಗಂಜಳ್ಳಿ ಗ್ರಾಮಕ್ಕೆ ರಾಸಾಯನಿಕ ಮಿಶ್ರಿತ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಸರಬರಾಜಾಗುತ್ತಿರುವ ಕುಡಿಯುವ ನೀರು ತಪಾಸಣೆ ಮಾಡದೇ ಶುದ್ಧ ಕುಡಿಯುವ ನೀರಿನ ಸ್ಯಾಂಪಲ್ ಪಡೆದು ಕುಡಿಯಲು ಯೋಗ್ಯವಾಗಿದೆ ಎಂದು ವರದಿ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ನಮಗೆ ಶುದ್ಧ ನೀರಿನ ಸೌಲಭ್ಯವಿಲ್ಲ, ಕಾರ್ಖಾನೆಗಳ ಅವೈಜ್ಞಾನಿಕ ನಿರ್ವಹಣಾ ವಿಧಾನದಿಂದ ಕಲುಷಿತ ಗಾಳಿಸೇವನೆ ಮಾಡುತ್ತಿದ್ದೇವೆ.
-ಬಸವರಾಜ, ಗಂಜಳ್ಳಿ ಗ್ರಾಮಸ್ಥ






