ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ವೇತನ ತಾರತಮ್ಯ

ರಾಯಚೂರು: ತುಂಗಭದ್ರಾ ನೀರಾವರಿ ಯೋಜನೆ ವಿವಿಧ ಉಪ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಬಾಕಿ ವೇತನ ಹಾಕಿದ್ದು, ಕಾರ್ಮಿಕ ನ್ಯಾಯಾಲಯದ ಆದೇಶದ ಮೇರೆಗೆ ವೇತನ ಹಾಕದೇ ತಾರತಮ್ಯ ಮಾಡಿದ್ದು, ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಂಗಭದ್ರಾ ನೀರಾವರಿ ಯೋಜನೆ ವಿವಿಧ ಉಪ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಬಾಕಿ ವೇತನ ಪಾವತಿ ಮಾಡುವಲ್ಲಿ ವಿಳಂಬ ಧೋರಣೆ ಖಂಡಿಸಿ ವಾರ್ತಾಭಾರತಿ ಪತ್ರಿಕೆಯಲ್ಲಿ ನಿರಂತರ ವರದಿಯ ಬಳಿಕ ವೇತನ ಪಾವತಿ ಮಾಡಲಾಗಿತ್ತು. ಆದರೆ ವೇತನ ಪಾವತಿ ವಿಳಂಬ ಖಂಡಿಸಿ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಗಿಲ್ಲೆಸುಗೂರು ವಲಯ ಸೇರಿ ಕೆಲವೆಡೆ ವೇತನ ತಡೆ ಹಿಡಿಯಲಾಗಿತ್ತು.
ನ್ಯಾಯಾಲಯದ ಅದೇಶದ ಪ್ರಕಾರ ವೇತನ ಪಾವತಿ ಮಾಡಬೇಕಿದ್ದರೂ ಪಾವತಿ ಮಾಡಿರಲಿಲ್ಲ, ಬುಧವಾರ ಹಾಗೂ ಗುರುವಾರ ಕೆಲ ಕಾರ್ಮಿಕರಿಗೆ ಮನಸೋಇಚ್ಛೆ ವೇತನ ಪಾವತಿ ಮಾಡಿದ್ದು, ನ್ಯಾಯಾಲಯದ ಅದೇಶ ಉಲ್ಲಂಘನೆ ಮಾಡಿದ್ದಲ್ಲದೇ ಬಚವಾಗಲು ಮನಸಿಗೆ ಬಂದಂತೆ ಹಣ ಹಾಕಿದ್ದಾರೆ. ಆಮೂಲಕ ಕಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ.
ಎಂಜಿನಿಯರ್ಗಳಿಗೆ ಶೋಕಾಸ್ ನೋಟೀಸ್: ಕಾರ್ಮಿಕರು ಸಲ್ಲಿಸಿದ ದೂರಿನ ಮೇರೆಗೆ ಕಲಬುರಗಿ ಉಪ ಕಾರ್ಮಿಕ ಆಯುಕ್ತ ಮುಂದೆ ದಾಖಲಾಗಿದ್ದ ಪ್ರಕರಣದಲ್ಲಿ ವಿಚಾರಣೆ ನಡೆಸಿ, ವೇತನ ಪಾವತಿ ಕಾಯ್ದೆ ಅನ್ವಯ 30 ದಿನಗಳ ಒಳಗಾಗಿ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕು ಎಂದು ಸ್ಪಷ್ಟ ಆದೇಶ ಹೊರಡಿಸಿದ್ದರು.
ಉಪ ಕಾರ್ಮಿಕ ಆಯುಕ್ತರ ಆದೇಶ ಹೊರಬಂದಿದ್ದರೂ ವೇತನ ಪಾವತಿ ಮಾಡಿಲ್ಲ ಎಂದು ಯರಮರಸ್, ಕವಿತಾಳ, ತುರ್ವಿಹಾಳ, ಆರ್ಡಿಎಸ್, ತುರ್ವಿಹಾಳ ಜವಳಗೇರಾ ಹಾಗೂ ಇತರೆ ವಲಯದ ನೀರಾವರಿ ಅಧಿಕಾರಿಗಳು ಆದೇಶ ಪಾಲನೆ ಮಾಡದೇ ಕಾಲಹರಣ ಮಾಡಿದ್ದರು. ಹೀಗಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ನೋಟೀಸ್ಗೆ ಉತ್ತರಿಸದ ಅನೇಕ ಅಭಿಯಂತರರು ಈಗ ಅರ್ಧಮರ್ಧ ವೇತನ ಪಾವತಿಸಿ ಕಾರ್ಮಿಕರಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸುಳ್ಳು ಮಾಹಿತಿ ನೀಡಿ, ದಿಕ್ಕು ತಪ್ಪಿಸುತ್ತಿರುವ ಅಧಿಕಾರಿಗಳು: ವೇತನ ಪಾವತಿಯಲ್ಲಿ ವ್ಯತ್ಯಾಸ ಉಂಟಾದ ಬಗ್ಗೆ ವಾರ್ತಾಭಾರತಿಯಿಂದ ಕೇಳಲಾದ ಪ್ರಶ್ನೆಗೆ ಯರಮರಸ್ ಅಧೀಕ್ಷಕ ಅಭಿಯಂತರ ಸತ್ಯನಾರಾಯಣ ಶೆಟ್ಟಿ ಹಾಗೂ ಗಿಲ್ಲೆಸುಗೂರು ವಲಯದ ಶಾಂತರಾಜ ಅವರು ಎಲ್ಲಾ ವಲಯಗಳಿಗೆ ‘ಬೇರೆ ಬೇರೆ ಗುತ್ತೇದಾರರು ಇರುವುದರಿಂದ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.
ವಾಸ್ತವವಾಗಿ, ಕಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಮೂಲಗಳ ಪ್ರಕಾರ ಯರಮರಸ್ ಮತ್ತು ಆರ್ಡಿಎಸ್ ಎರಡು ಉಪ ವಿಭಾಗಗಳಿಗೆ ಟಿ.ಪ್ರಕಾಶ್ ಎಂಬ ಒಬ್ಬರೇ ಗುತ್ತೇದಾರರಾಗಿದ್ದು, ಅಧಿಕಾರಿಗಳು ವಾಸ್ತವಾಂಶ ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡುವ ಮೂಲಕ ಸಾರ್ವಜನಿಕರನ್ನು ಹಾಗೂ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕರೆ ಸ್ವೀಕರಿಸದ ಸಹಾಯಕ ಕಾರ್ಯಪಾಲಕ ಅಭಿಯಂತರ: ಆರ್ಡಿಎಸ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಾಂತರಾಜ್ ಅವರಿಗೆ ಈ ಕುರಿತಂತೆ ಹಲವು ಬಾರಿ ಕರೆ ಮಾಡಿದರೂ ಕಳೆದ 2-3 ದಿನಗಳಿಂದ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ,
ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ,‘ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಇಲಾಖೆಯ ಆದೇಶಗಳನ್ನೇ ಪಾಲಿಸದ ಅಧಿಕಾರಿಗಳಿಂದ ಸಾಮಾನ್ಯ ಕಾರ್ಮಿಕರಿಗೆ ಯಾವ ರೀತಿಯ ನ್ಯಾಯ ಮತ್ತು ಭದ್ರತೆ ನಿರೀಕ್ಷಿಸಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.
ಕಾರ್ಮಿಕರಿಗೆ ಬಾಕಿ ವೇತನ ಪಾವತಿ ಮಾಡುವಲ್ಲಿ ಕಾರ್ಮಿಕರಲ್ಲಿ ವ್ಯತ್ಯಾಸ ಮಾಡಿದ ಬಗ್ಗೆ ಗಮನಕ್ಕೆ ಬಂದಿದೆ. ಯಾವ ವಲಯದ ಅಧಿಕಾರಿಗಳು, ಎಷ್ಟು ಕಾರ್ಮಿಕರಿಗೆ ಕಡಿಮೆ ವೇತನ ಹಾಕಿರುವ ಬಗ್ಗೆ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು.
-ಎಂ.ಎಸ್ ಗೋಡೆಕರ್
ಕಾರ್ಯಪಾಲಕ ಅಭಿಯಂತರರು ಯರಮರಸ್ ವಿಭಾಗ






