ಯುವಕರ ರೀಲ್ಸ್ಗಳ ಹುಚ್ಚಾಟಕ್ಕೆ ನೀರಿನ ಟ್ಯಾಂಕ್ ವೇದಿಕೆ

ಕಂಪ್ಲಿ : ಪಟ್ಟಣದ ಜನರ ನೀರಿನ ದಾಹ ನೀಗಿಸಲು ಸರಬರಾಜು ಮಾಡುವ ನೀರು ಸಂಗ್ರಹಣ ಘಟಕದ ಬೃಹತ್ ಟ್ಯಾಂಕ್ಗಳು ಈಗ ಯುವಕರ ರೀಲ್ಸ್ಗಳಿಗೆ ವಿಷಯದ ವೇದಿಕೆಯಂತಾಗಿದ್ದು, ರಕ್ಷಣಾ ಕಂಬಿಗಳಿಲ್ಲದ ಅವು ಯುವಕರ ರೀಲ್ಸ್ ಹುಚ್ಚಾಟಕ್ಕೆ ಕಾರಣವಾಗಿವೆ.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ವಿವಿಧ ಭಾಗಗಳಲ್ಲಿ ನಾಲ್ಕು ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿ ಸಮರ್ಪಕವಾಗಿ ರಕ್ಷಣಾ ವ್ಯವಸ್ಥೆ ಇಲ್ಲದಿರುವುದರಿಂದ ನೀರು ಬೃಹತ್ ಸಂಗ್ರಹ ಮೇಲ್ತೊಟ್ಟಿಗಳು ಯುವಕರಿಗೆ ರೀಲ್ಸ್ ಮಾಡಲು ಅನುಕೂಲವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಿಸಿ ಮುಟ್ಟಿಸುತ್ತಿಲ್ಲ.
ಪಟ್ಟಣದಲ್ಲಿ ಸರಾಗವಾಗಿ ಕುಡಿಯುವ ನೀರು ಸರಬರಾಜು ಮಾಡಲು ನಾಲ್ಕು ಮೂಲೆಗಳಲ್ಲಿ ಬೃಹತ್ ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತುಂಗಭದ್ರಾ ನದಿಯಿಂದ ನೀರನ್ನು ಪಟ್ಟಣದ ಮೂಲ ನೀರು ಸಂಗ್ರಹಗಾರಕ್ಕೆ ಸರಬರಾಜು ಮಾಡಿ ಅಲ್ಲಿ ನೀರನ್ನು ಶುದ್ಧೀಕರಿಸಿ ನಂತರ ಮೇಲ್ತೊಟ್ಟಿಗಳಿಗೆ ಸರಬರಾಜು ಮಾಡಲಾಗುತ್ತದೆ. ನಂತರ ಅಲ್ಲಿಂದ ಪಟ್ಟಣದ ವಿವಿಧ ಭಾಗಗಳಿಗೆ ನೀರನ್ನು ಸರಬರಾಜಾಗುತ್ತದೆ.
ಆದರೆ ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಿಸಿದ ಸ್ಥಳದಲ್ಲಿ ಮುಳ್ಳಿನ ಗಿಡಗಂಟೆಗಳು ಬೆಳೆದು ಪರಿಸರವೆಲ್ಲ ಕಾಡಿನಂತಾಗಿದೆ. ಜೊತೆಗೆ ಈ ನೀರು ಸಂಗ್ರಹ ಮೇಲ್ತೊಟ್ಟಿಗಳಿಗೆ ರಕ್ಷಣಾ ಗೋಡೆಗಳು ಇಲ್ಲದೆ ಇರುವುದರಿಂದ ಸಾರ್ವಜನಿಕರು ಬೇಕಾಬಿಟ್ಟಿ ಸಂಚರಿಸುತ್ತಿದ್ದಾರೆ. ರಾತ್ರಿಯಾದರೆ ಕುಡುಕರ ಅಡ್ಡವಾಗುತ್ತದೆೆ. ಮೇಲ್ತೊಟ್ಟಿಯ ಸ್ಥಳದಲ್ಲಿ ತಂತಿ ಬೇಲಿ ಹಾಕಿ ಗೇಟುಗಳನ್ನು ಅಳವಡಿಸಿದ್ದಾರೆ, ಆದರೆ ಅದಕ್ಕೆ ಬೀಗಗಳನ್ನು ಹಾಕದೆ ಇರುವುದರಿಂದ ಸಾರ್ವಜನಿಕರು, ಕಿಡಿಗೇಡಿಗಳು ಅಲ್ಲಿ ವಿವಿಧ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇನ್ನು ಕೆಲವರಂತೂ ನೀರು ಸಂಗ್ರಹ ಮೇಲ್ತೊಟ್ಟಿಯ ಮೇಲೆ ಹೋಗಿ ರೀಲ್ಸ್ ಮಾಡುತ್ತಾರೆ.
ಅಕಸ್ಮಾತ್ ರೀಲ್ಸ್ ಮಾಡುವ ಸಂದರ್ಭದಲ್ಲಿ ಮೇಲಿಂದ ಕೆಳಗೆ ಬಿದ್ದರೆ ಗತಿ ಏನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಪುರಸಭೆ ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಜೊತೆಗೆ ನೀರು ಸಂಗ್ರಹ ತೊಟ್ಟಿಗಳಿಗೆ ರಕ್ಷಣಾ ಗೋಡೆಗಳನ್ನು ನಿರ್ಮಿಸುತ್ತಿಲ್ಲ. ಅಪಾಯಗಳು ಸಂಭವಿಸುವ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ನೀರು ಸಂಗ್ರಹ ಮೇಲ್ತೊಟ್ಟಿಗಳಿವೆ. ಅಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವುಗೊಳಿಸಲು ನೈರ್ಮಲ್ಯ ವಿಭಾಗಕ್ಕೆ ಸೂಚಿಸಲಾಗಿದೆ. ಈ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ನಾಮಫಲಕ ಅಳವಡಿಸಲು ತಿಳಿಸಿದ್ದು, ಸಂಗ್ರಹ ತೊಟ್ಟಿಗಳ ತಂತಿ ಬೇಲಿಯನ್ನು ತಾತ್ಕಾಲಿಕವಾಗಿ ಹಾಕಿಸಿ ಬೀಗ ಹಾಕಲಾಗುವುದು ಮತ್ತು ನಿರಂತರ ಕಾವಲು ಮಾಡಲಾಗುವುದು. ಒಂದು ವೇಳೆ ನೀರು ಸಂಗ್ರಹ ಮೇಲ್ತೊಟ್ಟಿ ಮೇಲೆ ಯುವಕರು, ಕಿಡಿಗೇಡಿಗಳು ರೀಲ್ಸ್ ಮಾಡುವುದು ಕಂಡು ಬಂದರೆ ಪೊಲೀಸ್ ಇಲಾಖೆ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಬಿ. ಮಲ್ಲಿಕಾರ್ಜುನ, ಪ್ರಭಾರಿ ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ






