ಕಲ್ಯಾಣ ಕರ್ನಾಟಕ ಶೈಕ್ಷಣಿಕ ದುಸ್ಥಿತಿಗೆ ಕಾರಣವೇನು?

ಕಳೆದ ವಾರ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟವಾಯಿತು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಫಲಿತಾಂಶವು ಶೇ. 50ಕ್ಕಿಂತಲೂ ಕಡಿಮೆ ಇದೆ. ಒಟ್ಟು 58 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಇದು ಆಘಾತಕಾರಿ ಬೆಳವಣಿಗೆಯಾಗಿದೆ. ಗುಡ್ಡಗಾಡು ಮಲೆನಾಡು, ಕರಾವಳಿ ತೀರದ ಪ್ರದೇಶದಲ್ಲಿ ಶೇ.90ಕ್ಕೂ ಹೆಚ್ಚು ಮಕ್ಕಳು ಉತ್ತೀರ್ಣರಾಗುತ್ತಾರೆ. ಇಲ್ಲಿ ಉತ್ತೀರ್ಣರಾಗುವ ಮಕ್ಕಳು ಕಲ್ಯಾಣ ಕರ್ನಾಟಕದಲ್ಲಿ ಏಕೆ ಆಗುವುದಿಲ್ಲ? ಇದಕ್ಕೆ ಅಸಲಿ ಕಾರಣವೇನು?
ಪ್ರತೀ ಶೈಕ್ಷಣಿಕ ವರ್ಷದಲ್ಲಿಯೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಒಟ್ಟು ಫಲಿತಾಂಶ ಕ್ರಮವಾಗಿ ಕೆಳಗಿನಿಂದಲೇ ನೋಡಬೇಕು. ಯಾವತ್ತೂ ಟಾಪ್ ಟೆನ್ ಪಟ್ಟಿಯಲ್ಲಿ ಕಂಡ ಉದಾಹರಣೆ ಇಲ್ಲ. ಇದಕ್ಕೆ ಯಾರು ಹೊಣೆ? ಪೋಷಕರೋ, ಶಿಕ್ಷಕರೋ, ಕಲಿಕೆಯಲ್ಲಿ ನಿರಾಸಕ್ತಿ ತೋರುವ ಮಕ್ಕಳೋ, ತೂಕಡಿಸುವ ಆಡಳಿತ ವ್ಯವಸ್ಥೆಯೋ ಅಥವಾ ಮೇಲ್ವಿಚಾರಣೆ ಮಾಡದ ಜನಪ್ರತಿನಿಧಿಗಳೋ? ಯಾರನ್ನು ಹೊಣೆ ಮಾಡುವುದು? ಯಾರಿಗೆ ಹಣೆಪಟ್ಟಿ ಕಟ್ಟುವುದು? ಯಾರನ್ನು ದೂಷಿಸುವುದು?
ಕಲ್ಯಾಣ ಕರ್ನಾಟಕ ಪ್ರದೇಶವನ್ನು ತಳಮಟ್ಟದಲ್ಲಿ ಸಿಂಹಾವಲೋಕನ ಮಾಡಿದರೆ, ಅಲ್ಲಿ ಸಕಾರಾತ್ಮಕತೆಗಿಂತ ನಕಾರಾತ್ಮಕ ನ್ಯೂನತೆಗಳೇ ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿಯಲು ಹತ್ತು ಹಲವು ಆಯಾಮಗಳಿಂದ ಅವಲೋಕಿಸಬೇಕಿದೆ.
ಅಸಲಿ ಕಾರಣಗಳು:
ಭೌಗೋಳಿಕ ಸ್ಥಿತಿಗತಿ
ಇದು ಬಯಲು ಸೀಮೆ, ಸಮತಟ್ಟಾದ ಕಪ್ಪು ಮಣ್ಣಿನ ಭೂ ಪ್ರದೇಶ, ಸದಾ ಸುಡುವ ಬಿಸಿಲು, ನದಿಗಳಿದ್ದರೂ ನೀರಿನ ಹಾಹಾಕಾರ, ಕೃಷಿಯೇ ಜನರ ಜೀವನಾಡಿ, ಲಾಭದಾಯಕ ವಾಣಿಜ್ಯ ಬೆಳೆಗಳಾಗಲಿ, ವಾಣಿಜ್ಯೋದ್ಯಮವಾಗಲಿ, ಕೈಗಾರಿಕೆಗಳಾಗಲಿ ಹೆಚ್ಚಾಗಿ ಕಾಣಸಿಗದು. ಒಣ ಬೇಸಾಯವನ್ನೇ ನೆಚ್ಚಿಕೊಂಡು ಬದುಕುವ ಜನರೇ ಹೆಚ್ಚು ಮತ್ತು ತೃತೀಯ ವಲಯದ ಉದ್ಯೋಗಗಳು ಹೆಚ್ಚು ಸೃಷ್ಟಿಯಾಗದೇ ಇರುವುದು ಈ ಭೌಗೋಳಿಕ ಸ್ಥಿತಿಗತಿಯು ಶಿಕ್ಷಣದ ಮೇಲೆ ಬಹುದೊಡ್ಡ ಪ್ರಭಾವ ಬೀರಿದೆ.
ಪೋಷಕರಲ್ಲಿ ಅರಿವಿನ ಕೊರೆ
ಈ ಪ್ರದೇಶದಲ್ಲಿ ಕೃಷಿ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಕುಟುಂಬಗಳೇ ಹೆಚ್ಚಾಗಿರುವುದರಿಂದ ಶಿಕ್ಷಣದಿಂದ ತಮ್ಮ ಪ್ರಗತಿ ಸಾಧ್ಯ ಎಂಬ ತಿಳುವಳಿಕೆ ಕಡಿಮೆ. ಕೂಡುಕುಟುಂಬಗಳಲ್ಲಿ ಮಕ್ಕಳು ಮನೆ ಕೆಲಸ, ಕೂಲಿ ನಾಲಿ ಮಾಡುತ್ತಾ ಶಾಲೆಗೆ ಬಂದು ಹೋಗುತ್ತಾರೆ. ಎಷ್ಟೋ ಪೋಷಕರಿಗೆ ತಮ್ಮ ಮಗು ಎಷ್ಟನೇ ತರಗತಿ ಓದುತ್ತಿದೆ ಎಂಬ ಕನಿಷ್ಠ ತಿಳುವಳಿಕೆಯೂ ಇರುವುದಿಲ್ಲ.
ಗುಣಮಟ್ಟದ ಶಿಕ್ಷಣದ ಕೊರತೆ
ಗುಣಮಟ್ಟದ ಶಿಕ್ಷಣ ಅಪೇಕ್ಷಿಸಬೇಕಾದರೆ, ಉತ್ತಮ ಮೂಲಭೂತ ಸೌಲಭ್ಯಗಳು ಇರಬೇಕು. ಕಾಲ ಕಾಲಕ್ಕೆ ವ್ಯವಸ್ಥಿತವಾಗಿ ನಿರ್ವಹಣೆ ನಡೆಯಬೇಕು. ಕೆಲವು ಕಡೆ ಮೂಲಭೂತ ಸೌಲಭ್ಯಗಳು ಕೇವಲ ಕಡತಗಳಲ್ಲಿ ಮಾತ್ರ ಇವೆ. ಪ್ರೌಢಾವಸ್ಥೆಯ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಮತ್ತು ಋತುಚಕ್ರ ಸ್ವಚ್ಛತೆಗೆ ನೀರು ಅತ್ಯಂತ ಅಗತ್ಯ. ಈ ಅಗತ್ಯದ ನೀರೇ ಇಲ್ಲದ ಅದೆಷ್ಟು ಶಾಲೆಗಳು ಇವೆಯೋ? ಇದೊಂದು ಸಣ್ಣ ಉದಾಹರಣೆ. ಇಂತಹ ಶಾಲೆಗಳಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳು ಮುಜುಗರವಿಲ್ಲದೇ ಮುಕ್ತವಾಗಿ ಹೇಗೆ ತಾನೇ ಓದಲು ಸಾಧ್ಯ?
ಶಿಕ್ಷಕರ ಕೊರತೆ
ಮಕ್ಕಳ ಸಂಖ್ಯೆ ಹೆಚ್ಚು ಇರುವ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ತಮಗೆ ಪರಿಣತಿ ಇಲ್ಲದ ಎರಡು ವಿಷಯಗಳನ್ನು ಬೋಧನೆ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ಶಾಲೆಗಳಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರ ಹುದ್ದೆಯನ್ನು ಸಹ ಶಿಕ್ಷಕರು ನಿಭಾಯಿಸಬೇಕಾಗಿದೆ. ಶಿಕ್ಷಕರು ಪರಿಣಾಮಕಾರಿ ಬೋಧನಾ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರ ಕೊರತೆಯೂ ತೊಡಕಾಗಿದೆ.
ಶಿಕ್ಷಕರಲ್ಲಿ ಉದಾಸೀನತೆ
ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಶಿಕ್ಷಕರು ಸ್ಥಳೀಯರು. ವೃತ್ತಿ ಭದ್ರತೆಯು ಕರ್ತವ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕಿತ್ತು. ಆದರೆ, ಕೆಲವು ಕಡೆ ಶಾಲಾ ಕರ್ತವ್ಯದಲ್ಲಿ ಉದಾಸೀನತೆ ಎದ್ದು ಕಾಣುತ್ತದೆ. ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಿಗಿಂತ ಇನ್ನಿತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಿದೆ.
ಶಿಕ್ಷಕರಿಗೆ ಇತರ ಜವಾಬ್ದಾರಿಗಳು
ಖಾಸಗಿ ಶಾಲೆಯ ಶಿಕ್ಷಕರಿಗೆ ಮಕ್ಕಳಿಗೆ ಕಲಿಸುವಿಕೆ, ಫಲಿತಾಂಶ ವೃದ್ಧಿಸುವಿಕೆ ಕೆಲಸ ಬಿಟ್ಟರೆ ಮತ್ತಿತರ ಕೆಲಸ ಕಡಿಮೆ. ಆದರೆ ಸರಕಾರಿ ಶಾಲೆಗಳ ಶಿಕ್ಷಕರಿಗೆ ಜವಾಬ್ದಾರಿಗಳು ಹತ್ತು ಹಲವು. ಸರಕಾರದ ಕೆಲವು ಯೋಜನೆಗಳ ಅನುಷ್ಠಾನ, ಪ್ರಗತಿ ಪರಿಶೀಲನೆ, ಸಮೀಕ್ಷೆ ಮಾಡುವುದು, ಚುನಾವಣಾ ಕರ್ತವ್ಯ, ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಹೀಗೆ ಹತ್ತು ಹಲವು ಇನ್ನಿತರ ಕೆಲಸಗಳ ಜವಾಬ್ದಾರಿಯನ್ನೂ ಶಿಕ್ಷಕರು ಹೊರಬೇಕಿದೆ. ವರ್ಷದಲ್ಲಿ ತರಗತಿ ಕೋಣೆಯ ಬೋಧನೆಗಾಗಿ ಸಿಗುವ ದಿನಗಳಿಗಿಂತ ಇತರ ಕೆಲಸಕಾರ್ಯಗಳಿಗಾಗಿಯೇ ಹೆಚ್ಚು ಸಮಯ ವ್ಯಯ ಮಾಡಬೇಕಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ವೈಯಕ್ತಿಕ ಗಮನ ಹರಿಸಲು ಅಸಾಧ್ಯವಾಗಿದೆ.
ಶಾಲಾ ಸಿಬ್ಬಂದಿ ಸಾಮರಸ್ಯ ಕೊರತೆ
ಉತ್ತಮ ಫಲಿತಾಂಶ ನಿರೀಕ್ಷಿಸಲು ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಹಾಗೂ ಸಿಬ್ಬಂದಿಯ ನಡುವೆ ಉತ್ತಮ ಸಾಮರಸ್ಯ ಅಗತ್ಯ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆಯ ಕೊರತೆ ಇದೆ. ವಿಷಯ ಶಿಕ್ಷಕರು ಹೊರತಾದ ವಿಶೇಷ ಶಿಕ್ಷಕರು, ಡಿ ವರ್ಗದ ನೌಕರರು ಶಾಲೆಯ ಫಲಿತಾಂಶ ವೃದ್ಧಿಗಾಗಿ ಹೊಂದಾಣಿಕೆ, ವಿಶ್ವಾಸದಿಂದ ಕೆಲಸಮಾಡಬೇಕು.
ಪ್ರತಿಭಾ ಪಲಾಯನ
ಒಂದಷ್ಟು ಆರ್ಥಿಕ ಸಶಕ್ತ ಪೋಷಕರು ತಮ್ಮ ಪ್ರತಿಭಾವಂತ ಮಕ್ಕಳನ್ನು ಮಲೆನಾಡು, ಕರಾವಳಿಯತ್ತ ಓದಿಸಲು ಕಳುಹಿಸುತ್ತಾರೆ. ಸ್ಥಳೀಯವಾಗಿ ಉತ್ತಮ ಶಿಕ್ಷಣ ದೊರಕದು, ತಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂಬ ಮನೋಧೋರಣೆ ಅವರದ್ದು. ಕೆಲವು ಪೋಷಕರಿಗಂತೂ ವಸತಿ ಶಾಲೆಗಳತ್ತ ಆಕರ್ಷಣೆ. ಪ್ರತಿಭಾವಂತ ಮಕ್ಕಳು ತರಗತಿಯ ಕೋಣೆಯಲ್ಲಿ ಇದ್ದರೆ ಬೇರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ನಿಧಾನಗತಿಯ ಕಲಿಕೆ ಮಕ್ಕಳಿಗೆ ಅಥವಾ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೋಧನೆ ಪರೀಕ್ಷಾ ಸಾಧನೆ ಸವಾಲಿನ ಸಂಗತಿ.
ಆಡಳಿತ ವ್ಯವಸ್ಥೆಯ ಲೋಪ
ಪ್ರಗತಿಯತ್ತ ಸಾಗಲು ಉನ್ನತಾಧಿಕಾರಿ ಗಳಿಂದ ಹಿಡಿದು ಶಾಲೆಯ ಮುಖ್ಯೋಪಾ ಧ್ಯಾಯರವರೆಗೂ ಸದಾ ಚುರುಕಾಗಿ ಕೆಲಸ ಮಾಡಬೇಕು. ಕಾಲ ಕಾಲಕ್ಕೆ ಇಲಾಖೆಯು ತೆಗೆದುಕೊಳ್ಳುವ ನಿರ್ಧಾರಗಳು, ಯೋಜನೆಗಳ ಅನುಷ್ಠಾನ, ಪ್ರಗತಿ ಪರಿಶೀಲನೆ, ವಿಚಾರಣೆ, ತಪಾಸಣೆಗಳು, ಶಿಸ್ತು ಕ್ರಮಗಳು ಎಲ್ಲರೀತಿಯ ಕೆಲಸ ಕಾರ್ಯಗಳು ವೇಗವಾಗಿ ನಡೆಯಬೇಕು. ಬೇರೆ ವಿಭಾಗಕ್ಕೆ ಹೋಲಿಸಿದರೆ ಆಡಳಿತದ ಚುರುಕುತನ ಇಲ್ಲಿ ಮಂದವಾಗಿದೆ.
ಜಿಲ್ಲಾ ಕೇಂದ್ರದಿಂದ ದೂರವಿರುವ ಶಾಲೆಗಳು
ಆಡಳಿತ ಕೇಂದ್ರ ಕಚೇರಿಯಿಂದ ಕೆಲವು ಸ್ಥಳಗಳಿಗೆ ಹೋಗಿ ಬರಲು ಸೂಕ್ತ ರಸ್ತೆಗಳೇ ಇಲ್ಲ. ಸುಮಾರು 150 ಕಿಲೋಮೀಟರ್ ದೂರದಲ್ಲಿ ಪ್ರೌಢ ಶಾಲೆಗಳಿವೆ. ಜಿಲ್ಲಾ ಗಡಿ ಶಾಲೆಗಳಿಗೆ ಭೇಟಿ ನೀಡಬೇಕು ಎಂದರೆ ಹರಸಾಹಸ ಪಡಬೇಕು. ವರ್ಷಕ್ಕೆ ಒಂದು ಬಾರಿಯೂ ಅಧಿಕಾರಿಗಳು ಭೇಟಿ ನೀಡದ ಅದೆಷ್ಟೋ ಶಾಲೆಗಳು ಇವೆ. ಇದು ಶಾಲೆಗಳ ಮೇಲ್ವಿಚಾರಣೆಗೆ ತೊಡಕಾಗಿದೆ.
ಗುಳೆ ಹೋಗುವುದು
ತಳಸಮುದಾಯದ ಜನರು ಹೊಟ್ಟೆಪಾಡಿಗಾಗಿ ಉದ್ಯೋಗ ಅರಿಸಿಕೊಂಡು, ಕುಟುಂಬ ಸಮೇತ ಗುಳೆ ಹೋಗುವುದು ಸಾಮಾನ್ಯ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕಟ್ಟಡ ಕೆಲಸ ಮಾಡುವವರು ಬಹುತೇಕ ಕಲ್ಯಾಣ ಕರ್ನಾಟಕದ ಜನರೇ. ಸ್ಥಳೀಯ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇದ್ದರೂ ನಿರಂತರವಾಗಿ ಮಕ್ಕಳು ಗೈರು ಹಾಜರಾಗುತ್ತಾರೆ. ಪರೀಕ್ಷೆಯ ದಿನಗಳಲ್ಲಿ ನೇರವಾಗಿ ಪರೀಕ್ಷೆ ಬರೆಯಲು ಬರುತ್ತಾರೆ. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಪ್ರಬಲ ಜಾತಿ ವ್ಯವಸ್ಥೆ
ಪ್ರಬಲ ಜಾತಿ ವ್ಯವಸ್ಥೆಗೂ ಶಿಕ್ಷಣಕ್ಕೂ ಸಂಬಂಧವಿದೆ! ಸೂಕ್ಷ್ಮವಾಗಿ ಗಮನಿಸಿದಾಗ ಸ್ಥಳೀಯವಾಗಿ ಜಾತಿಯ ಹಿಡಿತದ ಪ್ರಭಾವವು ಎದ್ದು ಕಾಣುತ್ತದೆ. ಒಂದೊಂದು ಊರಿನಲ್ಲಿ ಒಂದೊಂದು ಜಾತಿ ಸಮುದಾಯ ಪ್ರಬಲವಾಗಿದ್ದು ಪರೋಕ್ಷವಾಗಿ ಅಧಿಕಾರದ ದಾಹಕ್ಕಾಗಿ ಅನಕ್ಷರಸ್ಥರನ್ನು ಶಿಕ್ಷಿತರನ್ನಾಗಿ ಮಾಡಲು ಇಚ್ಛಿಸಲಾರರು. ಊರಿನ ಹಿಡಿತ ಎಲ್ಲಿ ಕೈತಪ್ಪಿ ಬಿಡಬಹುದು ಎಂಬ ದುರಾಸೆಯಿಂದ ಶಾಲೆ ಶಿಕ್ಷಣಕ್ಕೆ ಹೆಚ್ಚಿನ ಮನ್ನಣೆ ನೀಡದಿರುವ ಉದಾಹರಣೆಗಳು ಇವೆ.
ಮಕ್ಕಳಲ್ಲಿ ಮೂಲ ಸಾಮರ್ಥ್ಯಗಳ ಕೊರತೆ
ಒಂದು ಸಾಮಾನ್ಯ ಮಗು ಕನಿಷ್ಠ ಓದು ಬರಹ ಮೂಲ ಸಾಮರ್ಥ್ಯಗಳನ್ನು ನಾಲ್ಕನೇ ತರಗತಿಯಲ್ಲಿಯೇ ಕಲಿಯಬಹುದು. ಆದರೆ ಎಂಟನೇ ತರಗತಿಗೆ ಬಂದರೂ ಮೂಲಾಕ್ಷರಗಳ ಓದು ಬರಹ, ಗಣಿತದ ಮೂಲ ಕ್ರಿಯೆಗಳ ಪರಿಜ್ಞಾನದ ಕೊರತೆ ಇರುವ ಮಕ್ಕಳಿಗೆ ಎಸೆಸೆಲ್ಸಿ ಓದು ಕಬ್ಬಿಣದ ಕಡಲೆಯಾಗಿದೆ. ಓದಲು, ಬರೆಯಲು ಬಾರದವರು ಎಸೆಸೆಲ್ಸಿಯ ಲಿಖಿತ ವಾರ್ಷಿಕ ಪರೀಕ್ಷೆ ಪಾಸು ಮಾಡಲು ಹೇಗೆ ಸಾಧ್ಯವಾದೀತು? ಇದನ್ನು ಸ್ಪಷ್ಟ ಪಡಿಸುವ ಅನೇಕ ಸಂಶೋಧನೆಗಳು ನಡೆದಿವೆ. ಪ್ರೌಢ ಶಾಲೆಯಲ್ಲಿ ಮೂರು ವರ್ಷ ಮಕ್ಕಳಿಗೆ ಅಕ್ಷರ ಕಲಿಸಿ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿ ತಿಪ್ಪೆ ಸಾರಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ. ಪ್ರೌಢ ಶಿಕ್ಷಕರು ಮೂಲಾಕ್ಷರ ಕಲಿಸಬೇಕೋ ಪಾಠಗಳ ಪರಿಕಲ್ಪನೆ ಮೂಲಕ ಜ್ಞಾನ ತಿಳುವಳಿಕೆ ಅನ್ವಯದ ಕೌಶಲ್ಯ ವೃದ್ಧಿಸಬೇಕೋ? ಈ ಮೂಲಭೂತ ಪ್ರಶ್ನೆಗೆ ಯಾವಾಗ ಉತ್ತರ ಸಿಗುವುದೋ ಅಂದೇ ಫಲಿತಾಂಶ ವೃದ್ಧಿಯಾಗಬಹುದು. ಈ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ವಸ್ತುಸ್ಥಿತಿಯನ್ನು ಮೊದಲು ಒಪ್ಪಿಕೊಳ್ಳಬೇಕಿದೆ.
ಇಂಗ್ಲಿಷ್ ಕಬ್ಬಿಣದ ಕಡಲೆ
ಕಲ್ಯಾಣ ಕರ್ನಾಟಕದ ಬಹುತೇಕ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಪರಕೀಯ ಭಾಷೆ. ಸ್ಥಳೀಯವಾಗಿ ಒಂದು ಪದವನ್ನೂ ಬಳಸಿ ವ್ಯವಹಾರಿಕವಾಗಿ ಯಾರೂ ಮಾತನಾಡುವುದಿಲ್ಲ. ಒಂದೂ ಪದದ ಉಚ್ಚಾರಣೆ ಮಾಡಲು ಸಾಮರ್ಥ್ಯವಿರದ ಮಗುವಿಗೆ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿಯೇ ನಿರಾಸಕ್ತಿ ಮೂಡುವುದು. ಸದಾ ಭಯ ಆತಂಕದಲ್ಲೇ ಓದಬೇಕು. ಒತ್ತಾಯಕ್ಕಾಗಿ ಕಲಿತರೂ ಪಾಸಾಗುವೆ ಎಂಬ ಆತ್ಮವಿಶ್ವಾಸ ಕೊನೆಯವರೆಗೂ ಮಗುವಿನಲ್ಲಿ ಮೂಡುವುದೇ ಇಲ್ಲ.
ಪ್ರಭುತ್ವದ ಉದಾಸೀನತೆ
ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಜನಪ್ರತಿನಿಧಿಗಳ ಉದಾಸಿನತೆಯೂ ಹೆಚ್ಚಾಗಿದೆ. ಸಂಸದರಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯರ ವರೆಗೂ, ತಮ್ಮ ಕ್ಷೇತ್ರದ ಶಾಲಾ-ಕಾಲೇಜುಗಳ ಬಗ್ಗೆ ಕನಿಷ್ಠ ಕಾಳಜಿ, ಪ್ರಗತಿ ಪರಿಶೀಲನೆ ಮಾಡುವ ವ್ಯವಧಾನ ಇಲ್ಲ. ಕ್ಷೇತ್ರದ ಶಿಕ್ಷಣ ಪ್ರಗತಿಯ ಕನಸಾಗಲಿ, ಆಸಕ್ತಿಯಾಗಲಿ, ದೂರ ದೃಷ್ಟಿಕೋನವಾಗಲಿ ಬಹಳ ಕಡಿಮೆ. ಮೇಲ್ವಿ ಚಾರಣೆ ನಡೆಯದೆ ಹೋದರೆ, ಕಾರ್ಯಾಂಗ ಹೇಗೆ ಚುರುಕಾಗಿ ಕೆಲಸ ಮಾಡೀತು?
ಪರಿಹಾರ ಕ್ರಮಗಳು
ದೂರದೃಷ್ಟಿಯ ಯೋಚನೆ, ಯೋಜನೆಯು ಖಂಡಿತಾ ಫಲ ನೀಡಬಲ್ಲದು. ಪ್ರಭುತ್ವವು ದಿಟ್ಟ ಕ್ರಮ ಕೈಗೊಂಡು ನಿರಂತರವಾಗಿ ಪರಿಶ್ರಮ ಮೇಲ್ವಿಚಾರಣೆ ಕ್ರಮ ವಹಿಸಿದ್ದೇ ಆದರೆ, ಖಂಡಿತ ಕೆಲವೇ ಕೆಲವು ವರ್ಷಗಳಲ್ಲಿ ಪ್ರಗತಿ ಸಾಧ್ಯವಿದೆ. ಇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕಾರಣಗಳು ಹುಡುಕಿದರೆ ಚಿಕಿತ್ಸಾ ಕ್ರಮಕೈಗೊಳ್ಳುವುದು ಸುಲಭಸಾಧ್ಯ.
► ಪ್ರಾಥಮಿಕ ಶಿಕ್ಷಣಕ್ಕೆ ಶಸ್ತ್ರಚಿಕಿತ್ಸೆ ಮಾಡುವುದು.
► ಸ್ಥಳೀಯರಲ್ಲದ ಎ ಮತ್ತು ಬಿ ದರ್ಜೆಯ ಅಧಿಕಾರಿಗಳ ನೇಮಕ ಮಾಡುವುದು.
► ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಪ್ರೋತ್ಸಾಹ, ಸಹಕಾರ ನೀಡುವುದು.
► ಶಾಲಾ ಮೂಲಭೂತ ಸೌಲಭ್ಯ ಸುಧಾರಿಸುವುದು.
► ಅನುತ್ತೀರ್ಣರಾದ ಮಕ್ಕಳ ಪ್ರಗತಿ ಪರಿಶೀಲನೆ ಮಾಡುವುದು.
► ಪೋಷಕರ ಕುಂದು ಕೊರತೆ ಆಲಿಸಲು ಸಹಾಯವಾಣಿ ಆರಂಭಿಸಿ ಅವರ ದೂರುಗಳಿಗೆ ತಕ್ಷಣ ಸ್ಪಂದಿಸುವುದು.
► ಮೂಲ ತಾಲೂಕಿನಿಂದ ಶಿಕ್ಷಕರ ಕಡ್ಡಾಯ ವರ್ಗಾವಣೆ ಮಾಡುವುದು.
► ಶಿಕ್ಷಣ ವ್ಯವಸ್ಥೆ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು.
► ಶಿಕ್ಷಣದ ಸಮಗ್ರ ಪರಿಶೀಲನೆ ಮತ್ತು ಸಮಗ್ರ ಸಮೀಕ್ಷೆ ನಡೆಯಬೇಕು.
ನಾವು ಎಲ್ಲಿ ಎಡವಿದ್ದೇವೆ, ಎಲ್ಲಿ ಸೋತಿದ್ದೇವೆ ಎಂದು ಪತ್ತೆಹಚ್ಚಿ ಸೂಕ್ತ ಚಿಕಿತ್ಸಕ ಕ್ರಮ ಜರುಗಿಸಬೇಕು. ಈ ಕಾರ್ಯ ಯಾವ ರಾಜಕೀಯ ಲಾಭಕ್ಕಾಗಿಯೂ ಮಾಡಬಾರದು. ಕೇವಲ ಸಂಪೂರ್ಣ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಮಾತ್ರ ನಡೆಯಬೇಕು. ಇಲ್ಲದೆ ಹೋದರೆ ಇಲ್ಲಿನ ಮಕ್ಕಳು ಕೇವಲ ಕಾಗದದ ಕಡತದಲ್ಲಿ ಅಕ್ಷರಸ್ಥರಾಗಿದ್ದು ಶೇ. 30-40ರಷ್ಟು ಮಕ್ಕಳು ವಾಸ್ತವದಲ್ಲಿ ಅನಕ್ಷರಸ್ಥರಾಗಿಯೇ ಉಳಿದು ಶಿಕ್ಷಣದಿಂದ ವಂಚಿತರಾಗುತ್ತಾರೆ.