ಆರೆಸ್ಸೆಸ್ ನಂಟಿನ ವಕೀಲೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ಶಿಫಾರಸು ವಿರೋಧಿಸಿ ರಾಷ್ಟ್ರಪತಿ, ಕೊಲೀಜಿಯಮ್ಗೆ ವಕೀಲರ ಪತ್ರ

ಚೆನ್ನೈ, ಫೆ. 2: ಮದ್ರಾಸ್ ಹೈಕೋರ್ಟ್(Madras High Court) ನ್ಯಾಯಾಧೀಶರಾಗಿ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯ ಗೌರಿಯನ್ನು ನೇಮಿಸಲು ಮಾಡಲಾಗಿರುವ ಶಿಫಾರಸಿಗೆ ಹೈಕೋರ್ಟ್ ವಕೀಲರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದೆ. ಈ ನೇಮಕಾತಿಯನ್ನು ವಿರೋಧಿಸಿ ಅದು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಮತ್ತು ಸುಪ್ರೀಂ ಕೋರ್ಟ್(Supreme Court) ಕೊಲೀಜಿಯಮ್ ಗೆ ಪತ್ರಗಳನ್ನೂ ಬರೆದಿದೆ ಎಂದು ‘ದ ಲೀಫ್ಲೆಟ್’ ವರದಿ ಮಾಡಿದೆ.
ಈ ವಕೀಲೆಗೆ ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಿರುವ ಇತಿಹಾಸವಿದೆ ಎಂಬುದಾಗಿ ಮದರಾಸು ಹೈಕೋರ್ಟ್ನ ವಕೀಲರ ಸಂಘದ ಸದಸ್ಯರಾಗಿರುವ ವಕೀಲರು ತಮ್ಮ ಪತ್ರಗಳಲ್ಲಿ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್(D.Y. Chandrachud) ನೇತೃತ್ವದ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಜನವರಿ 17ರಂದು ಗೌರಿ ಮತ್ತು ಇತರ ನಾಲ್ವರನ್ನು ನ್ಯಾಯಾಧೀಶರಾಗಿ ನೇಮಿಸಲು ಶಿಫಾರಸು ಮಾಡಿತ್ತು.
‘‘ಗೌರಿಯ ಪ್ರತಿಗಾಮಿ ನಿಲುವುಗಳು ಸಂವಿಧಾನದ ಪ್ರಾಥಮಿಕ ವೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿವೆ ಹಾಗೂ ಅವರಲ್ಲಿ ಆಳವಾಗಿ ಬೇರೂರಿರುವ ಧಾರ್ಮಿಕ ಅಸಹಿಷ್ಣುತೆಯನ್ನು ಪ್ರತಿಫಲಿಸುತ್ತವೆ’’ ಎಂದು ರಾಷ್ಟ್ರಪತಿ ಮತ್ತು ಕೊಲೀಜಿಯಮ್ಗೆ ಬರೆದ ಪತ್ರಗಳಲ್ಲಿ ವಕೀಲರು ಹೇಳಿದ್ದಾರೆ. ಹಾಗಾಗಿ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಳ್ಳುವ ಅರ್ಹತೆ ಅವರಿಗಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ದ್ವೇಷ ಕಾರುವ ಯೂಟ್ಯೂಬ್ ಸಂದರ್ಶನಗಳು
ತಮ್ಮ ವಾದಕ್ಕೆ ಪೂರಕವಾಗಿ ವಕೀಲರು, ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಿರ್ವಹಿಸುತ್ತಿದೆಯೆನ್ನಲಾದ ಯೂಟ್ಯೂಬ್ ಚಾನೆಲೊಂದಕ್ಕೆ ಗೌರಿ ನೀಡಿರುವ ಎರಡು ಸಂದರ್ಶನಗಳನ್ನು ಉಲ್ಲೇಖಿಸಿದ್ದಾರೆ. ಆ ಎರಡು ಸಂದರ್ಶನಗಳ ವಿಷಯ ಹೀಗಿದೆ.
1. ‘ಭಾರತದಲ್ಲಿ ಕ್ರೈಸ್ತ ಮಿಶನರಿಗಳ ಸಾಂಸ್ಕೃತಿಕ ಜನಾಂಗೀಯ ಹತ್ಯೆ, ಮತ್ತು
2. ‘ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಹೆಚ್ಚು ಮಾರಕ ಯಾವುದು? ಜಿಹಾದ್ ಅಥವಾ ಕ್ರೈಸ್ತ ಮಿಶನರಿ?’ ‘‘ಇಸ್ಲಾಮ್ ಹಸಿರು ಭಯೋತ್ಪಾದನೆ ಹೇಗೋ, ಕ್ರೈಸ್ತ ಧರ್ಮವು ಬಿಳಿ ಭಯೋತ್ಪಾದನೆಯಾಗಿದೆ. ಕ್ರೈಸ್ತ ಗುಂಪುಗಳು ಇಸ್ಲಾಮ್ ಗುಂಪುಗಳಿಗಿಂತ ಹೆಚ್ಚು ಅಪಾಯಕಾರಿ. ಲವ್ ಜಿಹಾದ್ ಹಿನ್ನೆಲೆಯಲ್ಲಿ, ಎರಡೂ ಧರ್ಮಗಳು ಸಮಾನ ಅಪಾಯಕಾರಿಯಾಗಿವೆ’’ ಎಂಬುದಾಗಿ ಎರಡನೇ ಸಂದರ್ಶನಲ್ಲಿ ಗೌರಿ ಹೇಳಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಆರೆಸ್ಸೆಸ್(RSS)ನ ಇಂಗ್ಲಿಷ್ ಭಾಷೆಯ ಮುಖವಾಣಿ ಪತ್ರಿಕೆ ‘ಆರ್ಗನೈಸರ್’ನಲ್ಲಿ ಗೌರಿ ಬರೆದಿರುವ ಒಂದು ಲೇಖನದತ್ತ ವಕೀಲರು ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಕೊಲೀಜಿಯಮ್ನ ಗಮನವನ್ನು ಸೆಳೆದಿದ್ದಾರೆ.
‘‘ಕ್ರೈಸ್ತ ವಿಭಜನವಾದ ಮತ್ತು ಅಸಹಿಷ್ಣುತೆ ಹಾಗೂ ಅವರು ಆಮಿಷವೊಡ್ಡಿ ನಡೆಸುತ್ತಿರುವ ನಿರಂತರ ಸಂಘಟಿತ ಮತಾಂತರವು ಬಹುಸಂಖ್ಯಾತ ಹಿಂದೂಗಳನ್ನು ಅಲ್ಪಸಂಖ್ಯಾತರಾಗಿಸಿದೆ’’ ಎಂಬುದಾಗಿ ಗೌರಿ ‘ಆರ್ಗನೈಸರ್’ನಲ್ಲಿ 2012ರಲ್ಲಿ ಬರೆದಿದ್ದರು. ‘‘ಆದರೆ ಆಮಿಷದ ಮತ್ತು ಬಲವಂತದ ಮತಾಂತರಗಳನ್ನು ನಿಲ್ಲಿಸಲು ಹಾಗೂ ಕ್ರೈಸ್ತರು ರೂಪಿಸುತ್ತಿರುವ ಕೋಮು ಸಂಘರ್ಷಗಳನ್ನು ತಡೆಯಲು ಒಂದು ಬೆರಳನ್ನೂ ಎತ್ತಲಾಗಿಲ್ಲ’’ ಎಂಬುದಾಗಿ ಅವರು ಹೇಳಿದ್ದಾರೆ.
ಈ ಸಂದರ್ಶನಗಳು ಮತ್ತು ಲೇಖನಗಳಲ್ಲಿ ಅವರ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮವಾಗುತ್ತವೆ ಹಾಗೂ ಅವುಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮದರಾಸು ಹೈಕೋರ್ಟ್ ವಕೀಲರು ತಮ್ಮ ಪತ್ರಗಳಲ್ಲಿ ಹೇಳಿದ್ದಾರೆ.
ಇಂಥ ನ್ಯಾಯಾಧೀಶರಿಂದ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬಹುದೇ?
‘‘ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಇಷ್ಟು ತೀವ್ರ ಅಸಹನೆಯನ್ನು ಹೊಂದಿರುವ ವ್ಯಕ್ತಿಯೊಬ್ಬರನ್ನು ಸುಪ್ರೀಂ ಕೋರ್ಟ್ ಕೊಲೀಜಿಯಮ್ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಇಂಥ ಹಿನ್ನೆಲೆ ಹೊಂದಿರುವ ಮಹಿಳೆ ಹೈಕೋರ್ಟ್ ನ್ಯಾಯಾಧೀಶರಾದರೆ, ಕ್ರೈಸ್ತ ಅಥವಾ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಅರ್ಜಿದಾರರು ಅವರ ನ್ಯಾಯಾಲಯದಿಂದ ನ್ಯಾಯ ಪಡೆಯುವ ನಿರೀಕ್ಷೆಯನ್ನು ಯಾವತ್ತಾದರೂ ಇಟ್ಟುಕೊಳ್ಳಲು ಸಾಧ್ಯವೇ?’’ ಎಂದು ವಕೀಲರು ರಾಷ್ಟ್ರಪತಿ ಮತ್ತು ಕೊಲೀಜಿಯಮ್ನ್ನು ಪ್ರಶ್ನಿಸಿದ್ದಾರೆ.
ನ್ಯಾಯಾಂಗದ ಪ್ರಾಮಾಣಿಕತೆ, ಸ್ವಾತಂತ್ರದ ಬಗ್ಗೆ ಕಳವಳ
ವಕೀಲೆ ಗೌರಿಯು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ ಹಾಗೂ ಅವರು ತನ್ನನ್ನು ‘ಚೌಕಿದಾರ್ ವಿಕ್ಟೋರಿಯ ಗೌರಿ’ ಎಂಬುದಾಗಿ ಕರೆದುಕೊಂಡಿದ್ದಾರೆ ಎನ್ನುವುದನ್ನೂ ವಕೀಲರು ರಾಷ್ಟ್ರಪತಿ ಮತ್ತು ಕೊಲೀಜಿಯಮ್ ಗಮನಕ್ಕೆ ತಂದಿದ್ದಾರೆ.
ಅವರನ್ನು ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡುವ ಕಡತವನ್ನು ಹಿಂದಿರುಗಿಸುವಂತೆ ಹಾಗೂ ಈ ಹುದ್ದೆಗೆ ಅವರನ್ನು ಹೇಗೆ ಪರಿಗಣಿಸಲಾಯಿತು ಎನ್ನುವ ಬಗ್ಗೆ ಸ್ಪಷ್ಟೀಕರಣವನ್ನು ಕೋರುವಂತೆ ವಕೀಲರು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಒತ್ತಾಯಿಸಿದ್ದಾರೆ.
ಶಿಫಾರಸನ್ನು ವಾಪಸ್ ಪಡೆದುಕೊಳ್ಳಿ ಎಂಬುದಾಗಿ ಕೊಲೀಜಿಯಮ್ಗೆ ಮನವಿ ಮಾಡಿರುವ ವಕೀಲರು, ನ್ಯಾಯಾಂಗದ ಪ್ರಾಮಾಣಿಕತೆ ಮತ್ತು ಸ್ವಾತಂತ್ರದ ಬಗ್ಗೆ ನಾವು ಕಳವಳಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ‘‘ಸ್ವತಃ ತನ್ನದೇ ಆಡಳಿತ ಶೈಲಿಯಿಂದ ನ್ಯಾಯಾಂಗ ದುರ್ಬಲಗೊಳ್ಳುವುದನ್ನು ತಡೆಯುವುದು ಈ ಹಂತದಲ್ಲಿ ಅತ್ಯಂತ ಮಹತ್ವದ ಕಾರ್ಯವಾಗಿದೆ’’ ಎಂದು ವಕೀಲರು ಹೇಳಿದ್ದಾರೆ.







