ಎತ್ತ ಸಾಗುತ್ತಿದೆ ಮುಸ್ಲಿಮ್ ರಾಜಕಾರಣ?

ಜಸ್ಟಿಸ್ ರಾಜಿಂದರ್ ಸಾಚಾರ್ ವರದಿಯಲ್ಲಿ ದೇಶದ ಮುಸಲ್ಮಾನರ ಪರಿಸ್ಥಿತಿ ಎಂಟು ಪ್ರಮುಖ ಸೂಚ್ಯಂಕಗಳಲ್ಲಿ ದಲಿತರಿಗಿಂತ ಹೀನಾಯವಾಗಿದೆ ಎಂದು ಹೇಳುತ್ತದೆ. ಮುಸ್ಲಿಮರ ಶಿಕ್ಷಣ ದರ ಮಟ್ಟ ರಾಷ್ಟ್ರೀಯ ಮತ್ತು ದಲಿತರ ಸರಾಸರಿಗಿಂತ ಕಡಿಮೆ. ಶಾಲೆಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಸರಕಾರಿ ಉದ್ಯೋಗದಲ್ಲಿ ಮುಸ್ಲಿಮರ ಪಾಲು ತುಂಬಾ ಕಡಿಮೆ. ಐಎಎಸ್-ಐಪಿಎಸ್ ಅಧಿಕಾರಿಗಳ ಸಂಖ್ಯೆಯಂತೂ ಇನ್ನೂ ಕಡಿಮೆ. ಆರ್ಥಿಕತೆ ವಿಷಯಕ್ಕೆ ಬರುವುದಾದರೆ ಮುಸ್ಲಿಮರಲ್ಲಿ ಸ್ವಉದ್ಯೋಗ ಹೆಚ್ಚು. ಸಾಮಾಜಿಕ ಭದ್ರತಾ ಪ್ರಯೋಜನಗಳು ಮತ್ತು ನಿಗದಿತ ಕೆಲಸದ ಸಮಯ ಇರುವ ಔಪಚಾರಿಕ ವಲಯದ ಉದ್ಯೋಗಿಗಳು ಕಡಿಮೆ. ಉದ್ಯೋಗ-ಉದ್ಯಮಕ್ಕಾಗಿ ಬ್ಯಾಂಕ್ ಸಾಲ ಪಡೆಯುವ ಮುಸಲ್ಮಾನರ ಸಂಖ್ಯೆ ಕಡಿಮೆ. ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳೂ ಕಡಿಮೆ, ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ನೀರು, ರಸ್ತೆ, ಶಾಲೆಯಂಥ ಮೂಲಸೌಕರ್ಯಗಳು ಕಡಿಮೆ. ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿರಲು ಸಾಧ್ಯವಿಲ್ಲ.
ರಾಜಕೀಯ ಪ್ರಾತಿನಿಧ್ಯದ ವಿಷಯಕ್ಕೆ ಬರುವುದಾದರೆ ಕರ್ನಾಟಕ ವಿಧಾನಸಭೆಯಲ್ಲಿ 1972ರಲ್ಲಿ ಇದ್ದ ಮುಸ್ಲಿಮ್ ಶಾಸಕರ ಸಂಖ್ಯೆ 12. 1978ರಲ್ಲಿ 16, ನಂತರ ಉಪಚುನಾವಣೆಯಲ್ಲಿ ಒಂದು ಕ್ಷೇತ್ರ ಗೆದ್ದದ್ದರಿಂದ 17 ಆಯಿತು. ನಂತರ ಕುಸಿಯಲಾರಂಭಿಸಿತು. 1983ರಲ್ಲಿ 2, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 6, 1999ರಲ್ಲಿ 12, 2004ರಲ್ಲಿ 6, 2008ರಲ್ಲಿ 9, 2013ರಲ್ಲಿ 11, 2018ರಲ್ಲಿ 7 ಮತ್ತು 2023ರಲ್ಲಿ 9ಕ್ಕೆ ಇಳಿದಿದೆ.
ಇಳಿದಿರುವುದು ಶಾಸಕರ ಸಂಖ್ಯೆ ಮಾತ್ರವಲ್ಲ. ಲೋಕಸಭೆ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳು, ನಾಮ ನಿರ್ದೇಶನಗಳಲ್ಲೂ ಗಣನೀಯವಾಗಿ ಮುಸ್ಲಿಮರನ್ನು ನಗಣ್ಯ ಮಾಡಲಾಗುತ್ತಿದೆ. ರಾಜ್ಯಸಭೆಗೆ ಮಾತ್ರ ಈ ಹಿಂದೆಯೂ ಒಬ್ಬರಿಗೆ ಅವಕಾಶ ಸಿಗುತ್ತಿತ್ತು. ಈಗಲೂ ಒಬ್ಬರಿಗೆ (ನಾಸಿರ್ ಹುಸೇನ್) ಅವಕಾಶ ಕೊಡಲಾಗಿದೆ.
ಅನುದಾನದ ವಿಷಯಕ್ಕೆ ಬರುವುದಾದರೆ ರಾಜ್ಯ ಬಜೆಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೊಡುತ್ತಿರುವ ಹಣ ಬಹಳ ಕಡಿಮೆ. ಆದರೂ ಬಿಜೆಪಿ ಅದನ್ನು ‘ಬ್ರದರ್ಸ್ ಬಜೆಟ್’ ಎಂದು ಜರೆಯುತ್ತದೆ. ಮುಸ್ಲಿಮ್ ಮತಗಳಿಂದಲೇ ಗೆದ್ದು ಬರುವ ಕಾಂಗ್ರೆಸ್ ನಾಯಕರು ಕೂಡ ಮೌನವಾಗಿರುತ್ತಾರೆ. ರಾಜ್ಯದ ಬಜೆಟ್ ಗಾತ್ರ 4,48,008 ಕೋಟಿ ರೂ. ಅದರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕೊಟ್ಟಿರುವುದು 4,790 ಕೋಟಿ ರೂ. ಮಾತ್ರ. ಇದನ್ನು ಒಟ್ಟಾರೆ ಬಜೆಟ್ ಗಾತ್ರಕ್ಕೆ ಶೇಕಡಾವಾರು ಲೆಕ್ಕಾಚಾರದಲ್ಲಿ ಹೋಲಿಸಿ ನೋಡಿದರೆ ಅಲ್ಪಸಂಖ್ಯಾತರಿಗೆ ಸಿಕ್ಕಿರುವುದು ಸುಮಾರು ಶೇ. ಒಂದರಷ್ಟು ಮಾತ್ರ. ಸುಮಾರು ಶೇ. 12ರಿಂದ 13ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪಸಂಖ್ಯಾತರಿಗೆ ಶೇ. ಒಂದರಷ್ಟು ಅನುದಾನ ಕೊಡುವುದು ಅನ್ಯಾಯ ಎಂದು ಯಾರಿಗೂ ಅನಿಸುತ್ತಿಲ್ಲ. ವಿಶೇಷ ಎಂದರೆ ಅನ್ಯಾಯಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತರಿಗೂ ಅನಿಸುತ್ತಿಲ್ಲ. ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದ ಏಕೈಕ ಶಾಸಕ ರಿಝ್ವ್ವಾನ್ ಅರ್ಷದ್.
ನಾಯಕತ್ವ ಸೊರಗಿದರೆ ಪ್ರಾತಿನಿಧ್ಯ ಅನುದಾನಗಳ ವಿಷಯದಲ್ಲಿ ಅನ್ಯಾಯವಾಗುತ್ತದೆ. ಸಂಖ್ಯೆಗಳು ಕಡಿಮೆಯಾಗುವುದಕ್ಕಿಂತ ಬದ್ಧತೆ ಕಡಿಮೆಯಾಗುವುದು ಹೆಚ್ಚು ಅಪಾಯ. ಇದರ ಬಗ್ಗೆ ಮುಸ್ಲಿಮ್ ನಾಯಕರು ಗಂಭೀರವಾದ ಚಿಂತನೆ ನಡೆಸಬೇಕಾಗಿತ್ತು. ಆದರೆ ಸದ್ಯದ ಕರ್ನಾಟಕದ ಮುಸ್ಲಿಮ್ ನಾಯಕರಿಗೆ ಈ ಬಗ್ಗೆ ಅರಿವಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಪ್ರಾತಿನಿಧ್ಯ ಕಡಿಮೆ ಆಗುತ್ತಿರುವುದರಿಂದ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಆತಂಕವಿದ್ದಿದ್ದರೆ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಬಿಟ್ಟು ಕೊಡುತ್ತಿರಲಿಲ್ಲ. ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಕಾಂಗ್ರೆಸ್ ನಾಯಕರು ಟಿಕೆಟ್ ಅನ್ನು ಕಿತ್ತುಕೊಂಡರು ಎನ್ನುವುದು ಎಷ್ಟು ಸತ್ಯವೋ ಮುಸ್ಲಿಮ್ ನಾಯಕರು ತಮ್ಮ ಸ್ವಹಿತಾಸಕ್ತಿಗಳಿಗಾಗಿ ಸಮುದಾಯದ ಹಿತವನ್ನು ಬಲಿ ಕೊಟ್ಟರು ಎನ್ನುವುದು ಅಷ್ಟೇ ಸತ್ಯ.
ಅದೊಂದು ಕಾಲ ಇತ್ತು; ಅಝೀಝ್ ಸೇಠ್, ಜಾಫರ್ ಷರೀಫ್, ಬಿ.ಎ. ಮೊಯಿದಿನ್ ಅವರಂಥ ನಾಯಕರಿದ್ದರು. ಸಮುದಾಯದಾಚೆಗೂ ವಿಶ್ವಾಸ ಮೂಡಿಸಿದ್ದರು. ಕ್ರಮೇಣ ಬಂದ ನಾಯಕರು ಕ್ಷೇತ್ರದಾಚೆಗೆ, ಜಿಲ್ಲೆಯಾಚೆಗೆ ಅಪ್ರಸ್ತುತರಾದರು. ಸಮುದಾಯದ ಇನ್ನೊಬ್ಬ ಗೆದ್ದು ಬಂದರೆ ಪ್ರತಿಸ್ಪರ್ಧಿಯಾಗುತ್ತಾನೆ ಎಂದು ಸಹೋದರರ ಸೋಲನ್ನು ಬಯಸಿದರು. ಇದಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಿರುವುದಕ್ಕಿಂತ ಬೇರೊಂದು ಉದಾಹರಣೆ ಬೇಕಾಗಿಲ್ಲ.
ಇದಲ್ಲದೆ ರಾಜ್ಯ ಮುಸ್ಲಿಮ್ ನಾಯಕರು ಹರಿದು ಹಂಚಿಹೋಗಿದ್ದಾರೆ. ಸಚಿವರಾಗಿದ್ದರೂ ಬೀದರ್ ಆಚೆಗೆ ರಹೀಮ್ ಖಾನ್ ಹೆಸರಿಲ್ಲ. ಯು.ಟಿ. ಖಾದರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಬೇರೆ ಗೊತ್ತಿಲ್ಲ. ತನ್ವೀರ್ ಸೇಠ್ ನರಹಿಂಹರಾಜ ಕ್ಷೇತ್ರಕ್ಕಷ್ಟೇ ತೃಪ್ತರಾಗಿದ್ದಾರೆ. ಕಲಬುರಗಿಯ ಕನೀಝ್ ಫಾತಿಮಾ ಅವರು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಷ್ಟನ್ನಷ್ಟೇ ಕೇಳುತ್ತಾರೆ. ಬೆಳಗಾವಿಯ ಆಸಿಫ್ ಸೇಠ್, ಸತೀಶ್ ಜಾರಕಿಹೊಳಿ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ರಾಮನಗರದ ಇಕ್ಬಾಲ್ ಹುಸೇನ್, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಕಣ್ಸನ್ನೆಯಂತೆ ಬಾಯಿಬಿಟ್ಟು ಬೆತ್ತಲಾಗುತ್ತಿರುತ್ತಾರೆ.
ಅತಿ ಹೆಚ್ಚು ಶಾಸಕರಿರುವ ಬೆಂಗಳೂರಿನಲ್ಲಿ ಗುಂಪುಗಳೂ ಜಾಸ್ತಿ. ಝಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಪಾಳೆಯದಲ್ಲಿ ಇದ್ದಾರೆ ಎಂಬ ಏಕೈಕ ಕಾರಣಕ್ಕೆ ಎನ್.ಎ. ಹ್ಯಾರಿಸ್, ಡಿ.ಕೆ.ಶಿವಕುಮಾರ್ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ರಿಝ್ವಾನ್ ಅರ್ಷದ್ ಅವರು ಝಮೀರ್ ಮತ್ತು ಹ್ಯಾರಿಸ್ ಇಬ್ಬರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.
ಝಮೀರ್ / ಅದರ್ಸ್
ಇಲ್ಲಿಯವರೆಗೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಅವರು ಸಿದ್ದರಾಮಯ್ಯ ಕಾರಣಕ್ಕೆ ಝಮೀರ್ ಜೊತೆ ಇದ್ದರು. ಶಾಮನೂರು ಜೊತೆಗಿದ್ದರೂ ಮುಸ್ಲಿಮರ ವಿಷಯಕ್ಕೆ ಬಂದರೆ ಅಬ್ದುಲ್ ಜಬ್ಬಾರ್ ಕೂಡ ಝಮೀರ್ಗೆ ಜೈ ಎನ್ನುತ್ತಿದ್ದರು. ಹಾಗಾಗಿ ಇದ್ದುದರಲ್ಲಿ ಝಮೀರ್ ಬಣ ಪ್ರಬಲ ಎನಿಸುತ್ತಿತ್ತು. ಆಗಾಗ ಉಳಿದವರೆಲ್ಲಾ ಒಂದಾಗುತ್ತಿದ್ದರಾದರೂ ಆ ಒಗ್ಗಟ್ಟು ತುಂಬಾ ದಿನ ಉಳಿಯುತ್ತಿರಲಿಲ್ಲ. ದಾವಣಗೆರೆ ವಿಷಯದಲ್ಲಿ ಇವರ ಕಿತ್ತಾಟ ಬಟಾ ಬಯಲಾಗಿದೆ.
ಅಬ್ದುಲ್ ಜಬ್ಬಾರ್ ಪರ ಝಮೀರ್ ವಕಾಲತ್ತು ವಹಿಸಿದ್ದೇ ತಡ ಉಳಿದವರೆಲ್ಲಾ ಸೈಯದ್ ಖಾಲಿದ್ಗೆ ಟಿಕೆಟ್ ಕೊಡಬೇಕೆಂದು ಹಠ ಹಿಡಿದಿದ್ದರು. ತಟಸ್ಥವಾಗಿರುವ ನಾಯಕರೊಬ್ಬರ ಪ್ರಕಾರ ಝಮೀರ್ ‘ಮುಸ್ಲಿಮರಿಗೆ ಟಿಕೆಟ್ ಕೊಡುವುದಿದ್ದರೆ ಅಬ್ದುಲ್ ಜಬ್ಬಾರ್ಗೆ ಕೊಡಿ, ಇಲ್ಲದಿದ್ದರೆ ಬೇರೆ ಯಾರಿಗಾದರೂ ಕೊಡಿ’ ಎಂದು ಹೇಳಿದ್ದರಂತೆ. ‘ನಮಗೆ ಹಿನ್ನಡೆಯಾಗಿದ್ದೇ ಆಗ ಝಮೀರ್ ಹಾಗೆ ಹೇಳಿದ ನಂತರವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅಂತಿಮ ತೀರ್ಮಾನ ಮಾಡಿದ್ದು’ ಎನ್ನುತ್ತಾರೆ ಅವರು. ಹಾಗೆಯೇ ‘ಟಿಕೆಟ್ ಪಡದೇ ತೀರಬೇಕು ಎನ್ನುವ ಉದ್ದೇಶವಿದ್ದರೆ ಎಲ್ಲರೂ ಒಗ್ಗಟ್ಟಾಗಿ ಒಂದೇ ಹೆಸರನ್ನು ಸೂಚಿಸಬೇಕಾಗಿತ್ತು. ಅದಕ್ಕೂ ಮೊದಲು ಎಸ್.ಎಸ್. ಮಲ್ಲಿಕಾರ್ಜುನ್ ಜೊತೆಯೂ ಮಾತನಾಡಬೇಕಾಗಿತ್ತು’ ಎನ್ನುತ್ತಾರೆ. ಬೇರೆ ಮೂಲಗಳು ಕೂಡ ಅನುಮೋದಿಸುವುದರಿಂದ ಅವರ ಮಾತನ್ನು ಅಲ್ಲಗೆಳೆಯಲಾಗದು.
ಹೆಚ್ಚುವರಿ ಲಾಭ ಸಿಗುವುದಿಲ್ಲ!
ದಾವಣಗೆರೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುಸ್ಲಿಮ್ ನಾಯಕರು ಮುಖ ಉಳಿಸಿಕೊಳ್ಳಲು ತಮ್ಮ ಸಮುದಾಯಕ್ಕೆ ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಹೆಚ್ಚುವರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಪಕ್ಷ ಒಪ್ಪಿದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಹೆಚ್ಚಿನದೇನೂ ಸಿಗುವುದಿಲ್ಲ. ಜೂನ್-ಜುಲೈ ತಿಂಗಳಲ್ಲಿ ಖಾಲಿಯಾಗುವ 12 ವಿಧಾನ ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸಿಗೆ 10 ಸ್ಥಾನ ಸಿಗುತ್ತವೆ. ಅದರಲ್ಲಿ ನಸೀರ್ ಅಹಮದ್ ನಿವೃತ್ತರಾಗುವುದರಿಂದ ಮುಸ್ಲಿಮರಿಗೆ ಒಂದು ಸ್ಥಾನ ಸಿಗಲೇಬೇಕಿತ್ತು. ಅದು ಮಾತ್ರ ಸಿಗುತ್ತದೆ. ಸಿದ್ದರಾಮಯ್ಯ ಕೃಪೆಯಿಂದಾಗಿ ಬಹುತೇಕ ಅವರು ಮತ್ತೆ ಪರಿಷತ್ ಸದಸ್ಯರಾಗುತ್ತಾರೆ. ಬೇರೆಯವರು ಪರಿತಪಿಸಬೇಕಷ್ಟೇ.
ಇನ್ನು, ರಾಜ್ಯಸಭೆಯಲ್ಲಿ ಈಗಾಗಲೇ ನಾಸಿರ್ ಹುಸೇನ್ ಇದ್ದಾರೆ. ಇನ್ನೊಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ. ಸದ್ಯಕ್ಕೆ ಇದೇ ವರ್ಷ ಕಾಂಗ್ರೆಸ್ಗೆ ಸಿಗುವ ಮೂರು ಸ್ಥಾನಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಮತ್ತೆ ರಾಜ್ಯಸಭೆಗೆ ಹೋಗುವುದು ಗ್ಯಾರಂಟಿಯಾಗಿದೆ. ಉಳಿದ ಎರಡು ಸ್ಥಾನಗಳಲ್ಲಿ ಒಂದನ್ನು ಹಿಂದುಳಿದ ವರ್ಗದವರಿಗೆ ಕೊಡಬೇಕು ಎನ್ನುವ ಮಾತಿದೆ. ಮತ್ತೆ ಬಿ.ಕೆ. ಹರಿಪ್ರಸಾದ್ ಹೋದರೂ ಅಚ್ಚರಿ ಪಡುವಂತಿಲ್ಲ. ಉಳಿದ ಒಂದು ಸ್ಥಾನವನ್ನು ಲಿಂಗಾಯತರಿಗೆ ಕೊಡಬೇಕು ಎನ್ನುವ ಕೂಗಿದೆ. ಪ್ರಬಲ ಸಮುದಾಯದ ಪೈಕಿ ಒಕ್ಕಲಿಗರಾದ ಜಿ.ಸಿ. ಚಂದ್ರಶೇಖರ್ ಅವರಿಗೆ ಅವಕಾಶ ಕೊಟ್ಟಿರುವುದರಿಂದ ಲಿಂಗಾಯತರಿಗೆ ಮಣೆ ಹಾಕಲೇಬೇಕು ಎನ್ನುವ ವಾದವಿದೆ. ಹಾಗಾದರೆ ಈ ಬಾರಿ ಮುಸ್ಲಿಮರಿಗೆ ಕೊಡಲ್ಲ. ಈ ಬಾರಿ ಕೊಡಲಿಲ್ಲ ಎಂದರೆ 2028ರಲ್ಲಿ ಕೊಡಲು ಸ್ವತಃ ನಾಸಿರ್ ಹುಸೇನ್ ಬಿಡುವುದಿಲ್ಲ. ಏಕೆಂದರೆ 2030ಕ್ಕೆ ಅವರ ಅವಧಿ ಮುಗಿಯಲಿದ್ದು ಅವರು ಮತ್ತೆ ಬರಲು 2028ರಲ್ಲಿ ಬೇರೆಯವರು ಬಾರದಂತೆ ತಡೆಗೋಡೆ ನಿರ್ಮಿಸುತ್ತಾರೆ. ಖರ್ಗೆ, ಸುರ್ಜೆವಾಲ ಮತ್ತಿತರ ದಿಲ್ಲಿ ನಾಯಕರ ಬೆಂಬಲ ಇರುವುದರಿಂದ ಅದು ಅವರಿಗೆ ಕಷ್ಟವಾಗಲಾರದು.
ಸಿಎಂ-ಝಮೀರ್ ದೂರಾದೂರ?
ಈ ಎಲ್ಲಾ ಬೆಳವಣಿಗೆಗಳಿಗೂ ಮೊದಲೇ ಸಿದ್ದರಾಮಯ್ಯ ಇತ್ತೀಚೆಗೆ ಝಮೀರ್ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದರು. ಝಮೀರ್ ಕಾರಣಕ್ಕೆ ಬೇರೆಯವರಿಂದ ದೂರವಾಗಲು ಅವರು ಸಿದ್ದರಿರಲಿಲ್ಲ. ಈಗ ದಾವಣಗೆರೆ ವಿಷಯದಲ್ಲಿ ಝಮೀರ್ ಬಗ್ಗೆ ಇನ್ನಷ್ಟು ಬೇಸರ ಮಾಡಿಕೊಂಡಿದ್ದಾರೆ. ದಾವಣಗೆರೆ ಸಮಸ್ಯೆ ಇಷ್ಟು ದೊಡ್ಡದಾಗಲು ಜಮೀರ್ ಕಾರಣ ಎಂದುಕೊಂಡಿದ್ದಾರೆ. ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಮನವೊಲಿಸಿ ನಾಮಪತ್ರ ವಾಪಸ್ ತೆಗೆಸು ಎಂದು ಹೇಳಿದರೂ ತಮ್ಮ ಮಾತು ಕೇಳದೆ ಕೇರಳಕ್ಕೆ ಹೋಗಿ ಕುಳಿತಿರುವುದಕ್ಕೆ ಝಮೀರ್ ಬಗ್ಗೆ ಕೋಪಗೊಂಡಿದ್ದಾರೆ. ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ಮನವೊಲಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಿಝ್ವಾನ್ ಅರ್ಷದ್ ಮತ್ತು ಸಲೀಂ ಅಹಮದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಪ್ಪಿತಪ್ಪಿಯೂ ಝಮೀರ್ ಹೆಸರು ಹೇಳಲಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಸ್ಲಿಮ್ ಸಮುದಾಯ ಸಮರ್ಥ ನಾಯಕತ್ವವಿಲ್ಲದೆ ಕಂಗಾಲಾಗಿದೆ.
ಮಂತ್ರಿಯಾಗುತ್ತಾರೋ ಇಲ್ಲವೋ ಖಾದರ್?
ಯು.ಟಿ.ಸ ಖಾದರ್ ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಮೂಲಕ ಸ್ಪೀಕರ್ ಆಗಿ ಇದು ತಮ್ಮ ಕಡೆಯ ಅಧಿವೇಶನ ಎನ್ನುವ ಸುಳಿವು ನೀಡಿದ್ದಾರೆ. ಅವರಿಗೆ ಪಕ್ಷ ಆರೆಸ್ಸೆಸ್ ಬಗೆಗಿನ ಮೃದು ಧೋರಣೆ, ಸಭಾತ್ಯಾಗ ಮಾಡಿ ಸರಕಾರಕ್ಕೆ ಮುಜುಗರ ಉಂಟುಮಾಡಿದ್ದು ಮತ್ತು ದಕ್ಷಿಣ ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಉಳಿದ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಇದು ನಿಮ್ಮ ಕಡೆಯ ಅಧಿವೇಶನ ಎಂಬ ಸುಳಿವು ನೀಡಿದೆ.
ಆಫ್ ದಿ ರೆಕಾರ್ಡ್!
ರಾಜಕೀಯ ನಾಯಕತ್ವಕ್ಕಿಂತಲೂ ಮಿಗಿಲಾದ ಮತ್ತೊಂದು ದೊಡ್ಡ ಅಪಾಯ ಇದೆ. ಮುಸ್ಲಿಮರಲ್ಲಿ ಈಗ ಸರಕಾರ ಮತ್ತು ಸಮಾಜದ ಮೇಲೆ ಪ್ರಭಾವ ಬೀರಬಲ್ಲಂಥ ಬೌದ್ಧಿಕ ವಲಯ ಇಲ್ಲವಾಗಿದೆ. ದಲಿತರು, ಹಿಂದುಳಿದವರನ್ನೂ ಈ ಸಮಸ್ಯೆ ಕಾಡುತ್ತಿದೆ ಎನ್ನುವುದು ನಿಜವಾದರೂ ಅವರಿಗೆ ಮೀಸಲಾತಿ ಮತ್ತು ಸಾಮಾಜಿಕ ಭದ್ರತೆಯಂಥ ಇತರ ಅನುಕೂಲಗಳಿವೆ. ಅವು ಇಲ್ಲದ ಮುಸಲ್ಮಾನರನ್ನು ಈಗ ಕೇಳುವವರು ಯಾರು?






