ಮಹಾ ಚೇತನಗಳಿಗೆ ಜಾತಿ ಬಂಧನ

ಯಾವುದೇ ದೇಶ ಪ್ರೇಮಿ ವ್ಯಕ್ತಿಯು ದೇಶದ ಪ್ರಜೆಗಳನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವುದಿಲ್ಲ. ದೇಶದ ನಾಗರಿಕರೆಲ್ಲ ಒಂದೇ, ಅವರೆಲ್ಲರೂ ಭಾರತೀಯರು ಎಂದು ಹೇಳುತ್ತಾನೆ.ಆದರೆ ಹಿಂದೂಗಳೇ ಒಂದಾಗಿ, ಮುಸಲ್ಮಾನರೇ ಒಂದಾಗಿ, ಕ್ರೈಸ್ತರೇ ಒಂದಾಗಿ ಎಂದು ಕರೆ ನೀಡುವವರು ದೇಶಪ್ರೇಮಿಗಳಲ್ಲ. ಅವರು ದೇಶ ದ್ರೋಹಿಗಳು. ಭಾರತೀಯರೇ ಒಂದಾಗಿ ಎಂದು ಹೇಳುವವರು ಮಾತ್ರ ನಿಜವಾದ ದೇಶಪ್ರೇಮಿಗಳು ಅಂದರೆ ತಪ್ಪಿಲ್ಲ.
ನಮ್ಮ ಇತಿಹಾಸದ ಮಹಾ ಚೇತನಗಳು ಎಂದಿಗೂ ತಮ್ಮನ್ನು ಯಾವುದೇ ಜಾತಿ, ಮತದ ಜೊತೆಗೆ ಗುರುತಿಸಿಕೊಂಡವರಲ್ಲ.ಇಂಥ ಜಾತಿಯವರೆಂದು ಹೇಳಿಕೊಂಡವರಲ್ಲ. ರಾಜ ಮನೆತನಗಳಿಂದ ಬಂದವರಿಗೆ ಜಾತಿಯ ಹಂಗಿರಲಿಲ್ಲ. ಸಾಧು, ಸನ್ಯಾಸಿಗಳು ಕೂಡ ಯಾವುದೇ ಜಾತಿ, ಮತಕ್ಕೆ ಸೇರಿದವರಲ್ಲ.ಇವರೆಲ್ಲರಿಗೂ ಜಾತಿ, ಮತ,ಪೂಜೆ, ಪ್ರಾರ್ಥನೆ, ಅರ್ಚನೆ , ಇತ್ಯಾದಿಗಳು ಇದ್ದರೂ ಅದನ್ನು ತಮ್ಮ ಮನೆಯ ಹೊಸ್ತಿಲಿನ ಒಳಗೆ ಮಾತ್ರ ಇಟ್ಟುಕೊಂಡವರು. ಅವರ ದೇಶವೆಂದರೆ ತಮ್ಮ ಸಂಸ್ಥಾನದ ವ್ಯಾಪ್ತಿಗೊಳಪಡುವ ಪ್ರದೇಶ ಮಾತ್ರ. ತಮ್ಮ ಅರಸೊತ್ತಿಗೆಯ ಪ್ರದೇಶದಲ್ಲಿ ಯಾವುದೇ ಪ್ರಜೆಯನ್ನು ಜಾತಿ ಮತದ ಸಂಕುಚಿತ ದೃಷ್ಟಿಯಿಂದ ನೋಡಿದವರಲ್ಲ. ಅಂತಲೇ ಅವರ ಆಸ್ಥಾನಗಳಲ್ಲಿ ಎಲ್ಲ ಕೋಮು ಜಾತಿಗಳಿಗೆ ಸೇರಿದವರು ಇರುತ್ತಿದ್ದರು.
ಜಾತಿ ವ್ಯವಸ್ಥೆಯ ಮೇಲು ಕೀಳುಗಳ ವಿರುದ್ಧ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಬಸವಣ್ಣ, ತನ್ನ ರಾಜ ಸಂಸ್ಥಾನಕ್ಕೆ ಬ್ರಿಟಿಷ್ ಆಡಳಿತದಿಂದ ಧಕ್ಕೆ ಬಂದಾಗ ಎಲ್ಲ ಸಮುದಾಯಗಳನ್ನು ಕಟ್ಟಿಕೊಂಡು ಹೋರಾಟ ಮಾಡಿದ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಮಗನಂತಿದ್ದ ಸಂಗೊಳ್ಳಿ ರಾಯಣ್ಣ, ಬ್ರಿಟಿಷ್ ವಸಾಹತುಶಾಹಿಯ ಜೊತೆಗೆ ರಾಜಿ ಮಾಡಿಕೊಂಡಿದ್ದರೆ ಶ್ರೀ ರಂಗಪಟ್ಟಣ ಮಾತ್ರವಲ್ಲ ಮೈಸೂರು ಸಂಸ್ಥಾನದ ರಾಜನಾಗಿ ಮುಂದುವರಿಯಬಹುದಾದ ಟಿಪ್ಪು ಸುಲ್ತಾನ್, ಬೆಂಗಳೂರಿನಲ್ಲಿ ಮುಸಲ್ಮಾನರು ಸೇರಿದಂತೆ ಎಲ್ಲರನ್ನೂ ಸಮಾನವಾಗಿ ಕಂಡ ಮಾಗಡಿ ಕೆಂಪೇಗೌಡ, ಇವರು ನಾಲ್ವರನ್ನು ಉದಾಹರಣೆಯಾಗಿ ಇಟ್ಟುಕೊಂಡರೆ ನಮ್ಮ ಸಮಾಜ ಇವರೆಲ್ಲರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೊತ್ತಾಗುತ್ತದೆ. ಆದರೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಕುಚಿತ ಜಾತಿ , ಮತಗಳ ಭಾವನೆ ನಗಣ್ಯವಾಗಬೇಕಾಗಿತ್ತು.ಆದರೆ ಅದು ಮತ್ತೆ ಹೊಸ ಹೊಸ ರೂಪ ತಾಳಿ ವಕ್ಕರಿಸುತ್ತಲೇ ಇದೆ. ವಿಶ್ವ ಮಾನವರಾಗಲು ರಾಷ್ಟ್ರ ಕವಿ ಕುವೆಂಪು ಅವರು ನೀಡಿದ ಕರೆ ಕೇವಲ ಭಾಷಣಕ್ಕಾಗಿ ಬಳಕೆಯಾಗುತ್ತಿದೆ.ಬದಲಾಗಿ ನಮ್ಮ ಚರಿತ್ರೆಯ ಮಹಾನ್ ಹೋರಾಟಗಾರರನ್ನು,
ಪುರೋಗಾಮಿ ಆಡಳಿತ ಗಾರರನ್ನು ಜಾತಿಯ ಕಂಬಕ್ಕೆ ಕಟ್ಟಿ ಹಾಕಿ ರಾಜಕೀಯ ಲಾಭ ಮಾಡಿಕೊಳ್ಳುವ ಮಸಲತ್ತು ನಡೆದಿದೆ
ಇತಿಹಾಸದ ಮಹಾ ಚೇತನಗಳನ್ನು ಜಾತಿ ಮತ ಮಾತ್ರವಲ್ಲ ಉಪ ಜಾತಿ ರಾಜಕಾರಣಕ್ಕೆ ಬಳಸಿಕೊಳ್ಳುವ ಚಾಳಿ ನಿರಾತಂಕವಾಗಿ ಮುಂದುವರಿದಿದೆ. ಕಿತ್ತೂರು ಚೆನ್ನಮ್ಮ ರಾಣಿಯನ್ನು ಲಿಂಗಾಯತ ಪಂಚಮಸಾಲಿ ಉಪ ಪಂಗಡಕ್ಕೆ ಕಟ್ಟಿ ಹಾಕಲಾಗಿದೆ. ಬಸವಣ್ಣನವರನ್ನು ಲಿಂಗಾಯತರೆಂದು ಹಣೆಪಟ್ಟಿ ಹಚ್ಚಲಾಗುತ್ತದೆ. ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯದ ಐಕಾನ್ ಆಗಿ ಬಿಂಬಿಸಲಾಗುತ್ತದೆ. ಟಿಪ್ಪು ಸುಲ್ತಾನ್ ಮುಸ್ಲಿಮ್ ಆಗಿ ಹುಟ್ಟಿರುವ ಕಾರಣಕ್ಕಾಗಿ ಅವರ ಜಯಂತಿಯನ್ನೇ ಆಚರಿಸಕೂಡದೆಂದು ಆಕ್ಷೇಪ ಮಾಡಲಾಗುತ್ತಿದೆ.
ಚುನಾವಣೆಯಲ್ಲಿ ಓಟಿನ ಬ್ಯಾಂಕ್ ಆಗುವ ಸಾಮರ್ಥ್ಯ ವಿಲ್ಲದ ಸಮುದಾಯಗಳಿಗೆ ಸೇರಿದವರೆನ್ನಲಾದ ಮಹಾ ಚೇತನಗಳನ್ನು ಕಡೆಗಣಿಸಿರುವುದೇಕೆ. ಪಂಪ,ರನ್ನ ಇವರ ಹೆಸರಿನಲ್ಲಿ ಒಂದು ಸ್ಮಾರಕ ವಾಗಲಿ, ಪ್ರಾಧಿಕಾರವಾಗಲಿ, ಪ್ರತಿಷ್ಠಾನವಾಗಲಿ ಯಾಕೆ ಇಲ್ಲ. ಈ ಪ್ರಶ್ನೆಯನ್ನು ಕನ್ನಡದ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪನವರು ಹಾಕಿದ್ದಾರೆ.ಸರಕಾರ ನಿರ್ಲಕ್ಷಿಸಿದರೂ ಸಾಹಿತ್ಯ ವಲಯದಿಂದಾದರೂ ಇದಕ್ಕೆ ಒತ್ತಡ ಬರಬೇಕಾಗಿತ್ತಲ್ಲ, ಯಾಕೆ ಬಂದಿಲ್ಲ. ಸರಕಾರದ ಆದ್ಯತೆ ಇದಾಗಿರಲಿಕ್ಕಿಲ್ಲ, ಪ್ರತಿಷ್ಠಾನ, ಪ್ರಾಧಿಕಾರಗಳಿಂದ ಕವಿಯ ಹೆಸರನ್ನು ಉಳಿಸಬೇಕಾಗಿಲ್ಲ ಅವರ ಸಾಹಿತ್ಯವೇ ಸಾರ್ವಕಾಲಿಕ ಎಂದು ಹೇಳಿದರೂ ಕೂಡ ಕವಿಯ ಸಾಹಿತ್ಯ
ಮತ್ತು ವಿಚಾರಗಳ ಅಧ್ಯಯನಕ್ಕೆ ಸಾಂಸ್ಥಿಕ ಪ್ರಯತ್ನ ಬೇಕಲ್ಲವೇ? ಬುದ್ಧ, ಬಸವಣ್ಣ, ಬಾಬಾಸಾಹೇಬರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅದೇ ರೀತಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕನಕದಾಸ, ಇಂಥ ಎಲ್ಲರಿಗೂ ಸೇರಿದ ಬೆಳಕಿನ ಕಿರಣಗಳನ್ನು ಯಾವುದೋ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಬಳಸಿಕೊಂಡು ಚುನಾವಣೆಯಲ್ಲಿ ಟಿಕೆಟ್ ಕೇಳುವುದು, ಗೆದ್ದ ಮೇಲೆ ಮಂತ್ರಿ ಸ್ಥಾನ ಕೇಳುವುದು ಅವರಿಗೆ ಅಪಚಾರ ಮಾಡಿದಂತಲ್ಲದೇ ಬೇರೇನೂ ಅಲ್ಲ. ದೇಶದ ಮಹಾ ಚೇತನಗಳನ್ನು ಅತ್ಯಂತ ಹೆಚ್ಚು ದುರುಪಯೋಗ ಮಾಡಿಕೊಂಡ ಸಂಘಟನೆ ಯಾವುದೆಂಬುದನ್ನು ವಿವರಿಸಬೇಕಾಗಿಲ್ಲ. ತನ್ನ ಜನಾಂಗ ದ್ವೇಷದ ಕೋಮುವಾದಿ ರಾಜಕೀಯಕ್ಕೆ ಈ ಸಂಘಟನೆ ದುರ್ಬಳಕೆ ಮಾಡಿಕೊಂಡ ನಮ್ಮ ಹೆಮ್ಮೆಯ ನೇತಾರರ ಸಂಖ್ಯೆಯನ್ನು ಲೆಕ್ಕ ಇಡಲಾಗುವುದಿಲ್ಲ.ಸ್ವಾಮಿ ವಿವೇಕಾನಂದ, ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಷ್ಚಂದ್ರ ಭೋಸ್, ಬಸವಣ್ಣ, ಶಿವಾಜಿ, ಕಿತ್ತೂರು ಚೆನ್ನಮ್ಮ ಹೀಗೆ ಜಾತಿಮತವನ್ನು ಮೀರಿ ಮಾನವತೆಗಾಗಿ ಮಿಡಿದ ಮಹಾಚೇತನಗಳನ್ನು ಈ ಸಂಘಟನೆ ತನ್ನ ಜನ ವಿಭಜಕ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುತ್ತ ಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ದೇಶವ್ಯಾ ಪಿಯಾಗಿ ಅಲ್ಲಲ್ಲಿ ಹಿಂದೂ ಸಮಾವೇಶಗಳು ನಡೆಯುತ್ತಿವೆ. ಮುಂಚೆ ದೇಶಭಕ್ತಿಯ ಬಗ್ಗೆ, ಭಾರತೀಯತೆ ಬಗ್ಗೆ ಮಾತನಾಡುತ್ತಿದ್ದ ಈ ಸಂಘಟನೆ ಈಗ ಅಪ್ಪಿ ತಪ್ಪಿಯೂ ದೇಶದ ಬಗ್ಗೆ ಮಾತಾಡುವುದಿಲ್ಲ. ಬಹುತ್ವ ಭಾರತದಲ್ಲಿ ಹಿಂದೂಗಳೆಂದು ಈ ಸಂಘಟನೆ ಕರೆಯುವ ವಿವಿಧ ಜಾತಿ ಸಮುದಾಯಗಳ ಜನರು, ಇದರಾಚೆ ಪ್ರತ್ಯೇಕ ಧರ್ಮಗಳೆಂದು ಕರೆಯಲ್ಪಡುವ ಬೌದ್ಧ, ಜೈನ, ಸಿಖ್, ಕ್ರೈಸ್ತ, ಹಾಗೂ ಮುಸ್ಲಿಮ್ ಸಮುದಾಯಗಳು ಎಲ್ಲರೂ ಇದ್ದಾರೆ. ಇವರೆಲ್ಲ ಸೇರಿಯೇ ಬಹುತ್ವ ಭಾರತವಾಗಿದೆ.
ಬಹು ಧರ್ಮಗಳು, ಬಹು ಸಂಸ್ಕೃತಿಗಳು, ಬಹು ಭಾಷೆಗಳನ್ನು ಒಳಗೊಂಡ ಈ ನೆಲದಲ್ಲಿ ಹಿಂದೂಗಳಿಗೆ ಅಪಾಯ ಎದುರಾಗಿದೆ ಎಂದು ಭಯ ಹುಟ್ಟಿಸಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗುತ್ತದೆ. ಈ ಸಮಾವೇಶಗಳಲ್ಲಿ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಶಿವಾಜಿ ಹಾಗೂ ಬಸವಣ್ಣನವರ ಫೋಟೊಗಳನ್ನು ವೇದಿಕೆಯ ಮೇಲೆ ಹಾಕುವ ಉದ್ದೇಶವೇನು? ಇವರಾರೂ ಕೋಮು ರಾಜಕಾರಣ ಮಾಡಿದವರಲ್ಲ. ಸುಭಾಷ್ ಚಂದ್ರ ಭೋಸ್ ಜಾತ್ಯತೀತ, ಸಮಾಜವಾದಿ ಭಾರತದ ಕನಸು ಕಂಡವರು. ಭಗತ್ ಸಿಂಗ್ ಅವರಂತೂ ಕಟ್ಟಾ ಎಡಪಂಥೀಯರು. ಅವರು ಬಯಸಿದ್ದು ಸಮತಾವಾದಿ ಭಾರತವನ್ನು. ಬಸವಣ್ಣನವರಂತೂ ಅಂತರ್ಜಾತಿ,ಅಂತಧರ್ರ್ಮೀಯ ಮದುವೆಗಳನ್ನು ಮಾಡಿಸುವ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬಲವಾದ ಏಟು ಕೊಟ್ಟವರು. ಶಿವಾಜಿಯಂತೂ ಬಡವರ, ದಲಿತರ, ಹಿಂದುಳಿದವರ ರಾಜ ಎಂದು ಹೆಸರು ಮಾಡಿದವರು.ಇಂಥ ಉದಾತ್ತ ಚೇತನಗಳನ್ನು ಜನ ವಿಭಜಕ ರಾಜಕಾರಣಕ್ಕೆ ಬಳಸಿಕೊಳ್ಳುವುದು ಅವರಿಗೆ ಮಾಡುವ ಅಪಚಾರವಲ್ಲವೇ? ಇವರಾರೂ ಕೋಮುವಾದಿ ಹಿಂದುತ್ವವನ್ನು ಒಪ್ಪಿದವರಲ್ಲ.
ಇತಿಹಾಸದಲ್ಲಿ ಹೆಸರು ಮಾಡಿದವರು,ತ್ಯಾಗ, ಬಲಿದಾನ ಮಾಡಿದವರ ಹೆಸರು ಮತ್ತು ಪಟಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಕಾನೂನು ರೂಪಿಸುವಂತೆ ಸರಕಾರದ ಮೇಲೆ ಒತ್ತಡ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಅದೇ ರೀತಿ ದೇವಾಲಯಗಳ ಬಳಿ, ಪೂಜಾ ಮಂದಿರಗಳು ಹತ್ತಿರ ಜಾತ್ರೆ, ರಥೋತ್ಸವಗಳ ಸಮೀಪ ಕೋಮುವಾದಿ ಶಕ್ತಿಗಳು ನುಸುಳದಂತೆ ಎಚ್ಚರ ವಹಿಸುವುದು ಇಂದಿನ ಅಗತ್ಯವಾಗಿದೆ. ಇವುಗಳನ್ನು ತಮ್ಮ ಕೋಮುವಾದಿ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳು ಅಶಾಂತಿಯನ್ನು ಉಂಟು ಮಾಡುತ್ತಿವೆೆ. ಯಾವುದೇ ದೇಶ ಪ್ರೇಮಿ ವ್ಯಕ್ತಿಯು ದೇಶದ ಪ್ರಜೆಗಳನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವುದಿಲ್ಲ. ದೇಶದ ನಾಗರಿಕರೆಲ್ಲ ಒಂದೇ, ಅವರೆಲ್ಲರೂ ಭಾರತೀಯರು ಎಂದು ಹೇಳುತ್ತಾನೆ.ಆದರೆ ಹಿಂದೂಗಳೇ ಒಂದಾಗಿ, ಮುಸಲ್ಮಾನರೇ ಒಂದಾಗಿ, ಕ್ರೈಸ್ತರೇ ಒಂದಾಗಿ ಎಂದು ಕರೆ ನೀಡುವವರು ದೇಶಪ್ರೇಮಿಗಳಲ್ಲ. ಅವರು ದೇಶ ದ್ರೋಹಿಗಳು. ಭಾರತೀಯರೇ ಒಂದಾಗಿ ಎಂದು ಹೇಳುವವರು ಮಾತ್ರ ನಿಜವಾದ ದೇಶಪ್ರೇಮಿಗಳು ಅಂದರೆ ತಪ್ಪಿಲ್ಲ.






