ಉತ್ತರ ಕರ್ನಾಟಕವೆಂದರೆ...

ಕಿತ್ತೂರು ಕರ್ನಾಟಕಕ್ಕೆ ಹೋಲಿಸಿದರೆಕಲ್ಯಾಣ ಕರ್ನಾಟಕ ಎಷ್ಟೋ ವಾಸಿ. ಅಲ್ಲಿನೆಲೆಯೂರಲು ಸಂಘ ಪರಿವಾರ ತನ್ನಇಡೀ ಶಕ್ತಿಯನ್ನು ಹಾಕಿದೆ.ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಚೆಲ್ಲುತ್ತಿದೆ.ರಾಷ್ಟ್ರೋತ್ಥಾನ ಶಾಲೆ, ಕಾಲೇಜುಗಳು,ಬ್ಲಡ್ ಬ್ಯಾಂಕ್ಗಳು ಬಂದಿವೆ.ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೂ ಬೇರು ಬಿಡಲುಆಗುತ್ತಿಲ್ಲ.
ಬೆಂಗಳೂರು, ಮೈಸೂರು ಮುಂತಾದ ಹಳೆಯ ಮೈಸೂರಿನ ಭಾಗದ ಜನರಿಗೆ ಉತ್ತರ ಕರ್ನಾಟಕವೆಂದರೆ ತರಾವರಿ ಕಲ್ಪನೆಗಳಿವೆ. ಬೆಂಗಳೂರಿನಲ್ಲಿರುವ ಅನೇಕರು ನೆಲಮಂಗಲ ದಾಟಿ ಮುಂದೆ ಹೋದ ಉದಾಹರಣೆಗಳು ವಿರಳ. ಮಂಗಳೂರು, ಉಡುಪಿಯವರಾದರೆ ಎಲ್ಲವೂ ಗೊತ್ತಿರುತ್ತದೆ. ಕಾರಣ ಬದುಕು ಕಟ್ಟಿಕೊಳ್ಳಲು ಅವರು ತಮ್ಮ ಊರು ಬಿಟ್ಟು ಎಲ್ಲೆಲ್ಲೋ ಹೋಗುತ್ತಾರೆ. ಮುಂಬೈ, ಚೆನ್ನೈಗೆ ಹೋಗಿ ಹೋಟೆಲ್ ನಡೆಸುವ ದ.ಕ.ದವರು ಎಲ್ಲೆಡೆ ಸಿಗುತ್ತಾರೆ. ಆದರೆ ಬೆಂಗಳೂರು, ಮೈಸೂರಿನವರು ಗಡಿ ದಾಟುವ ಸಾಹಸ ಮಾಡುವುದಿಲ್ಲ. ಆದರೆ ನಮ್ಮ ಉತ್ತರದವರು ಅದರಲ್ಲೂ ಬಿಜಾಪುರದವರು ಎಲ್ಲಿ ಹೋದರೂ ಸಿಗುತ್ತಾರೆ. ಮುಂಬೈ ಮಹಾನಗರದಲ್ಲೂ ದ.ಕ.ದವರನ್ನು ಬಿಟ್ಟರೆ ಎಲ್ಲ ಕಡೆ ಸಿಗುವ ಕನ್ನಡಿಗರೆಂದರೆ ಬಿಜಾಪುರ ಮತ್ತು ಯಾದಗಿರಿ, ರಾಯಚೂರಿನ ಜನ ಮಾತ್ರ. ನಮ್ಮ ಮಹಾನಗರಗಳನ್ನು ಕಟ್ಟಲು ಬೆವರು ಬಸಿದವರಲ್ಲಿ ಇವರದು ಅಗ್ರ ಸ್ಥಾನ.
ಇದು ಜನ ಸಾಮಾನ್ಯರಿಗೆ ಮಾತ್ರ ಸೀಮಿತವಾದ ವಿಷಯಯವಲ್ಲ. ದಕ್ಷಿಣದ ರಾಜಕಾರಣಿಗಳು ಅದರಲ್ಲೂ ಮಂತ್ರಿಗಳು ಉತ್ತರ ಕರ್ನಾಟಕದ ಬಗ್ಗೆ ಯಾವ ರೀತಿ ವರ್ತಿಸುತ್ತಾರೆ ಎಂಬ ಬಗ್ಗೆ ಹಿರಿಯ ಶಾಸಕ ಬಿ.ಆರ್.ಪಾಟೀಲರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ಬಹಳಷ್ಟು ಮಂತ್ರಿಗಳು ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಅದನ್ನು ಬಿಟ್ಟರೆ ತಮ್ಮ ಕ್ಷೇತ್ರಕ್ಕೆ ಮಾತ್ರ ಬಂದು ಹೋಗುತ್ತಾರೆ. ಆಳಂದ, ಔರಾದ, ಖಾನಾಪುರ, ನಿಪ್ಪಾಣಿ, ಗುರುಮಿಠಕಲ್, ಇಂಡಿಯಂಥ ತಾಲೂಕುಗಳು ಕರ್ನಾಟಕದಲ್ಲಿ ಇವೆ ಎಂಬುದು ಬಹಳಷ್ಟು ಮಂತ್ರಿಗಳಿಗೆ ಗೊತ್ತಿದ್ದಂತಿಲ್ಲ ಎಂದು ಹೇಳಿದರು. ಇದು ನಿಜ, ತಮ್ಮ ಮತಕ್ಷೇತ್ರವನ್ನು ಬಿಟ್ಟರೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ದೂರದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ ಮಂತ್ರಿ, ಶಾಸಕರಿಗೆ ಬೇರೆ ಪ್ರದೇಶವೂ ಗೊತ್ತಿರುವುದಿಲ್ಲ. ಬಿ.ಆರ್.ಪಾಟೀಲರು ಮಂತ್ರಿಯೊಬ್ಬರಿಗೆ ನೀವು ನಮ್ಮ ಕಡೆ ಬರಲಿಲ್ಲ ಎಂದರಂತೆ. ಆಗ ಆ ಮಂತ್ರಿಗಳು ನಿಮ್ಮೂರು ಕಡೆ ಹೋಗಿ ಬಂದೆ ಎಂದರಂತೆ, ಎಲ್ಲಿ ಎಂದು ಕೇಳಿದರೆ ‘ಬೆಳಗಾವಿಗೆ’ ಎಂದರಂತೆ. ಕಲಬುರಗಿ ಮತ್ತು ಬೆಳಗಾವಿಗೆ 400 ಕಿ.ಮೀ. ಅಂತರವಿದೆ ಎಂದು ಬಿ.ಆರ್.ಪಾಟೀಲರು ಉತ್ತರಿಸಿದರಂತೆ. ಇದು ಮಂತ್ರಿ, ಶಾಸಕರಿಗೆ ಮಾತ್ರ ಸೀಮಿತವಾದ ವಿಷಯವಲ್ಲ. ಮಾಧ್ಯಮಗಳಲ್ಲಿ ಕೆಲಸ ಮಾಡುವ ಹಲವರಿಗೆ ಉತ್ತರ ಕರ್ನಾಟಕದ ಯಾವ ಜಿಲ್ಲೆ ಎಲ್ಲಿದೆ? ಯಾವ ತಾಲೂಕು ಯಾವ ಜಿಲ್ಲೆಯಲ್ಲಿ ಇದೆ ಎಂಬ ಸಾಮಾನ್ಯ ತಿಳುವಳಿಕೆ ಇರುವುದು ಅಪರೂಪ. ಹಿಂದೆ ಇಂದಿನಂತೆ ಅತ್ಯಾಧುನಿಕ ಸಂಪರ್ಕ ಸಾಧನಗಳಿರಲಿಲ್ಲ. ಆಗ ಮಾಧ್ಯಮ ಅಂದರೆ ಪತ್ರಿಕೆಗಳು ಮಾತ್ರ. ಹೀಗಾಗಿ ಸುದ್ದಿಯನ್ನು ಬರೆಯುವಾಗ ಧಾರವಾಡ ಜಿಲ್ಲೆಯ ಗೋಕಾಕ್ ಎಂದು ಬೆಳಗಾವಿ ಜಿಲ್ಲೆಯ ಹುನಗುಂದ ಎಂದು, ಕಲಬುರಗಿ ಜಿಲ್ಲೆಯ ಜಮಖಂಡಿ ಎಂದು ತಪ್ಪು ತಪ್ಪಾಗಿ ಬರೆಯುತ್ತಿದ್ದರು. ಹೊಸ ತಂತ್ರಜ್ಞಾನ ಬಂದ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರವಲ್ಲ ಆಡಳಿತದಲ್ಲಿ ಇರುವ ಅಧಿಕಾರಿಗಳಿಗೆ ಪ್ರತಿಯೊಂದು ಜಿಲ್ಲೆಯ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಕರ್ನಾಟಕವೆಂದರೆ ಬೆಂಗಳೂರು ಮಾತ್ರವಲ್ಲ ಎಂಬ ಸ್ಪಷ್ಟತೆ ಅಗತ್ಯ.
ಉತ್ತರ ಕರ್ನಾಟಕದ ಭಾಷೆ, ಆಹಾರ ಪದ್ಧತಿ, ಉಡುಪುಗಳು ಸಾಮಾನ್ಯವಾಗಿ ಒಂದೇ ಆಗಿದ್ದರೂ ಕೆಲವು ವೈವಿಧ್ಯಗಳಿವೆ. ಹುಬ್ಬಳ್ಳಿಯ ಕನ್ನಡ, ಬಿಜಾಪುರದ ಕನ್ನಡ, ಕಲಬುರಗಿ, ಬೀದರಗಳ ಕನ್ನಡಗಳಲ್ಲಿ ಕೆಲವು ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆಹಾರ ಪದ್ಧತಿಯಲ್ಲಿ ಕೂಡ ಇದು ಕಾಣುತ್ತದೆ. ಜೋಳದ ರೊಟ್ಟಿ ಸಾಮಾನ್ಯ ಆಹಾರವಾದರೂ ರೊಟ್ಟಿಯ ಗಾತ್ರ, ಅದರ ಜೊತೆಗಿನ ಪಲ್ಯಕ್ಕೆ ಬಳಸುವ ಖಾರದ ಪ್ರಮಾಣ, ಹೆಚ್ಚು, ಕಡಿಮೆಯಾಗಿರುತ್ತವೆ. ಕಲಬುರಗಿ, ರಾಯಚೂರುಗಳ ಖಾರದ ಪಲ್ಯಗಳನ್ನು ತಿನ್ನಲು ಹುಬ್ಬಳ್ಳಿ, ಧಾರವಾಡದ ಜನ ತುತ್ತಿಗೊಮ್ಮೆ ನೀರು ಕುಡಿಯಬೇಕಾಗುತ್ತದೆ. ಉತ್ತರ ಕರ್ನಾಟಕದ ಜೊತೆಗೆ ಕರಾವಳಿಯ ಉತ್ತರ ಕನ್ನಡ (ಕಾರವಾರ) ಜಿಲ್ಲೆಯೂ ಸೇರಿದೆ. ಅದು ದಕ್ಷಿಣ ಕನ್ನಡ (ಮಂಗಳೂರು-ಉಡುಪಿ) ನಡುವಿನ ಕೊಂಡಿಯಾಗಿದೆ.
ಉತ್ತರ ಕರ್ನಾಟಕದಲ್ಲೂ ಎರಡು ಕರ್ನಾಟಕಗಳಿವೆ. ಸ್ವಾತಂತ್ರ್ಯಕ್ಕಿಂತ ಮುಂಚೆ ಅಂದರೆ ನಿರ್ದಿಷ್ಟವಾಗಿ ಭಾಷಾವಾರು ರಾಜ್ಯಗಳು ನಿರ್ಮಾಣವಾಗುವವರೆಗೆ ಇಲ್ಲಿನ ಕೆಲವು ಜಿಲ್ಲೆಗಳು ಬಾಂಬೆ ಪ್ರಾಂತದ ಆಡಳಿತಕ್ಕೆ ಸೇರಿದ್ದವು. ಇನ್ನು ಉಳಿದವು ಹೈದರಾಬಾದ್ನ ನಿಜಾಮನ ನಿಯಂತ್ರಣದಲ್ಲಿ ಇದ್ದವು. ಬಳ್ಳಾರಿ ಮಾತ್ರ ಮದ್ರಾಸ್ ಪ್ರಾಂತಕ್ಕೆ ಸೇರಿತ್ತು. ಅವಿಭಜಿತ ಧಾರವಾಡ, ಅಖಂಡ ಬಿಜಾಪುರ, ಬೆಳಗಾವಿ, ಕಾರವಾರ ಜಿಲ್ಲೆಗಳು ಬಾಂಬೆ ವ್ಯಾಪ್ತಿಗೆ ಸೇರಿದ್ದವು. ಇವುಗಳನ್ನು ಬಾಂಬೆ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್ ಜಿಲ್ಲೆಗಳು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ಇವುಗಳನ್ನು ಹೈದರಾಬಾದ್ ಕರ್ನಾಟಕ (ಈಗ ಕಿತ್ತೂರು ಕರ್ನಾಟಕ) ಎಂದು ಕರೆಯಲಾಗುತ್ತದೆ. ಬಾಂಬೆ ಮತ್ತು ಹೈದರಾಬಾದ್ ಕರ್ನಾಟಕಗಳ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ.
ಸ್ವಾತಂತ್ರ್ಯಕ್ಕಿಂತ ಮೊದಲು ಬಾಂಬೆ ಪ್ರಾಂತಕ್ಕೆ ಸೇರಿದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳು ಸಹಜವಾಗಿ ಅಲ್ಪ ಸ್ವಲ್ಪ ಅಭಿವೃದ್ಧಿಯನ್ನು ಹೊಂದಿತ್ತು. ಸ್ವಾತಂತ್ರ್ಯ ನಂತರವೂ ಇದು ಮುಂದುವರಿದಿದೆ.
ಆದರೆ ಹಿಂದಿನ ಹೈದರಾಬಾದ್ ಪ್ರಾಂತಕ್ಕೆ ಸೇರಿದ ಜಿಲ್ಲೆಗಳು ಬಾಂಬೆ ಕರ್ನಾಟಕದ ಜಿಲ್ಲೆಗಳಷ್ಟು ಅಭಿವೃದ್ಧಿಯನ್ನು ಕಾಣಲಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಎಂದು ಎಲ್ಲವನ್ನೂ ಹುಬ್ಬಳ್ಳಿ ಧಾರವಾಡಗಳಿಗೆ ಕೊಡುತ್ತೀರಿ ಎಂಬುದು ಅವರ ಆಕ್ರೋಶವಾಗಿದೆ.
ಹುಬ್ಬಳ್ಳಿ ಕರ್ನಾಟಕದ ಅತ್ಯಂತ ಆಯಕಟ್ಟಿನ ನಗರ. ಕಾರವಾರ, ಬಿಜಾಪುರ, ಬಾಗಲಕೋಟ, ಬೆಳಗಾವಿ, ಗದಗ, ಹಾವೇರಿ ಹಾಗೂ ದೂರದ ಗೋವಾಗಳಿಗೆ ಹತ್ತಿರದ ಊರು.ಹೀಗಾಗಿ ಅದು ಉತ್ತರ ಕರ್ನಾಟಕದ ಬಹುದೊಡ್ಡ ಆರ್ಥಿಕ ಕೇಂದ್ರವಾಗಿ ಬೆಳೆದಿದೆ. ಆದರೆ ಕೋಮುವಾದಿಗಳು ಇಲ್ಲಿ ನೆಲೆಯೂರಿ ಈದ್ಗಾ ಹೆಸರಿನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ನಂತರ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸಂಶೋಧಕ ಚಿದಾನಂದ ಮೂರ್ತಿ ಅವರ ಸಲಹೆಯಂತೆ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು, ಬಾಂಬೆ ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿ, ಅದರಲ್ಲೂ ವಿಶೇಷವಾಗಿ ಮಧುವರಸನ ಮಗಳ ಮದುವೆಯನ್ನು ಹರಳಯ್ಯನ ಮಗನಿಗೆ ಮದುವೆ ಮಾಡಿಸಲು ಬಸವಣ್ಣನವರು ಸೇರಿದಂತೆ ಶರಣರು ಮುಂದಾದಾಗ ಅಲ್ಲೊಲ ಕಲ್ಲೋಲ ಉಂಟಾಗಿ ರಕ್ತಪಾತವೇ ನಡೆಯಿತು. ಇದರ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿರುವುದು ಸೂಕ್ತ ಎಂದು ಹೇಳಬಹುದು. ಆದರೆ ಇದಷ್ಟೇ ಅಲ್ಲ, ಇನ್ನೂ ಹಲವಾರು ವಿಶೇಷಗಳು ಈ ಭಾಗಕ್ಕಿವೆ. ಬಂದೇ ನವಾಝರ ಸೂಫಿ ಪ್ರಭಾವ, ಬೌದ್ಧ ಧರ್ಮದ ಜೀವಸೆಲೆಗಳು ಇಲ್ಲಿವೆ. ಬೀದರ್ಗೆ ಹೋದರೆ ಸುಮಾರು 700 ವರ್ಷಗಳ ಇತಿಹಾಸವಿರುವ ಮುಹಮ್ಮದ್ ಗವಾನ್ ನಿರ್ಮಿಸಿದ ಮದ್ರಸ ಆ ಕಾಲದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿತ್ತು. ಹದಿನಾಲ್ಕನೇ ಶತಮಾನದ ಸ್ಮಾರಕವಾಗಿರುವ ಇದನ್ನು ಇರಾನ್ನಿಂದ ವ್ಯಾಪಾರ ಮಾಡಲು ಬರುತ್ತಿದ್ದ ಮುಹಮ್ಮದ್ ಗವಾನ್ ತನ್ನ ಸ್ವಂತ ಹಣದಿಂದ ನಿರ್ಮಿಸಿದ. ಈ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಯ ಅಗತ್ಯವನ್ನು ಮನಗಂಡ ಮುಹಮ್ಮದ್ ಗವಾನ್ ಬದ್ಧತೆಯನ್ನು ಗಮನಿಸಿದ ಅಂದಿನ ಬಹಮನಿ ಸುಲ್ತಾನರು ತಮ್ಮ ಆಸ್ಥಾನದಲ್ಲಿ ಗವಾನ್ಗೆ ಆಶ್ರಯ ನೀಡಿದರು. ಆನಂತರ ತಮ್ಮ ಪ್ರಧಾನಿಯನ್ನಾಗಿ ನೇವಕ ಮಾಡಿಕೊಂಡರು. ಆ ಕಾಲದಲ್ಲಿ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತಿದ್ದ ಈ ಮದ್ರಸ 242 ಅಡಿ ಉದ್ದ, 222 ಅಡಿ ಅಗಲವಿತ್ತು ಹಾಗೂ 55 ಅಡಿ ಎತ್ತರವಿತ್ತು. ಈ ಮದ್ರಸದಲ್ಲಿ ಹಲವಾರು ಉಪನ್ಯಾಸ ಕೊಠಡಿಗಳು, 36 ತರಗತಿ ಕೊಠಡಿಗಳು, 3 ಸಾವಿರಕ್ಕೂ ಮಿಕ್ಕಿದ ಹಸ್ತ ಪ್ರತಿಗಳು ಇದ್ದವು. ಇದನ್ನು ದಕ್ಷಿಣ ಭಾರತದ ಮೊದಲ ಮದ್ರಸ ಎಂದು ಹೇಳಲಾಗುತ್ತದೆ. ಗವಾನ್ ನಿರ್ಮಿಸಿದ ಮದ್ರಸ ಕಟ್ಟಡ 1427ರಲ್ಲಿ ಪೂರ್ಣಗೊಂಡಿತು. 1696ರಲ್ಲಿ ಔರಂಗಜೇಬ ಈ ಭಾಗದ ಮೇಲೆ ದಾಳಿ ಮಾಡಿದಾಗ ಈ ಮದ್ರಸ ಕಟ್ಟಡ ಮುಕ್ಕಾಲು ಭಾಗ ನೆಲಸಮಗೊಂಡಿತು.
ಇವೆಲ್ಲಕ್ಕಿಂತ ಮೊದಲು ರಾಷ್ಟ್ರಕೂಟರ ರಾಜಧಾನಿ ಇದೇ ಕಲಬುರಗಿ ಜಿಲ್ಲೆಯ ಮಳಖೇಡ ಆಗಿತ್ತು. ರಾಷ್ಟ್ರ ಕೂಟ ದೊರೆ ಮೊದಲನೇ ಅಮೋಘವರ್ಷನು ಕ್ರಿ.ಶ. 815ರಿಂದ 878ರವರೆಗೆ ಸುಮಾರು 64 ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ಯುದ್ಧ ಪಟು ಮತ್ತು ಕವಿಯಾಗಿದ್ದ ಅವನು ಕನ್ನಡಿಗರ ಹೆಮ್ಮೆಯ ‘ಕವಿರಾಜ ಮಾರ್ಗ’ ಎಂಬ ಕೃತಿಯನ್ನು ರಚಿಸಿದ್ದಾನೆ. ಅವನ ಆಡಳಿತ ಮಹಾರಾಷ್ಟ್ರದ ಔರಂಗಾಬಾದ್ವರೆಗೆ ಇತ್ತು. ಇದು ಕೂಡ ಕಲ್ಯಾಣ ಕರ್ನಾಟಕದ ಹೆಮ್ಮೆಯ ಅಸ್ಮಿತೆ.
ಇನ್ನು ಬಾಂಬೆ ಕರ್ನಾಟಕಕ್ಕೆ ಅಂದರೆ ಇಂದಿನ ಕಿತ್ತೂರು ಕರ್ನಾಟಕಕ್ಕೆ ಬಂದರೆ ಕಿತ್ತೂರು ಮಾತ್ರವಲ್ಲ ಬಸವಣ್ಣನವರು ಜನಿಸಿದ ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆ ಭವ್ಯ ಇತಿಹಾಸವನ್ನು ಹೊಂದಿದೆ. 15ನೇ ಶತಮಾನದ ಆದಿಲ್ಶಾಹಿ ಕಾಲದಲ್ಲಿ ಬಿಜಾಪುರದ ಜನಸಂಖ್ಯೆ 20 ಲಕ್ಷ ಇತ್ತು ಎಂದು ಚಾರಿತ್ರಿಕ ದಾಖಲೆಗಳಿಂದ ತಿಳಿದು ಬರುತ್ತದೆ. ಇದೇ ಆದಿಲ್ಶಾಹಿ ವಂಶದ ಮುಹಮ್ಮದ್ ಶಾ ಗೋಳ ಗುಮ್ಮಟ, ಇಬ್ರಾಹೀಂ ರೋಝಾ, ಆಸಾರ ಮಹಲ್ನಂಥ ಭವ್ಯ ಇಮಾರತ್ಗಳನ್ನು ನಿರ್ಮಿಸಿದ. ಆ ಕಾಲದಲ್ಲಿ ಬಿಜಾಪುರದ ಪ್ರತೀ ಮನೆಗೂ ನಲ್ಲಿ ನೀರಿನ ವ್ಯವಸ್ಥೆ ಇತ್ತು. ಬಿಜಾಪುರವನ್ನು ಆಳಿದ ಅರಸರಲ್ಲಿ ಎರಡನೇ ಆದಿಲ್ಶಾಹಿ ಇಬ್ರಾಹೀಂನದು ವರ್ಣರಂಜಿತ ವ್ಯಕ್ತಿತ್ವ. ಈತ ಕವಿ, ಕಲಾವಿದ, ಇವನ ಸಂಗೀತ ಪ್ರೇಮ ಅಪರಿಮಿತವಾದದ್ದು.
ಈತ ಬರೆದ ಅಮೂಲ್ಯ ಸಂಗೀತ ಗ್ರಂಥ, ‘ಕಿತಾಬ್ ಎ ನವರಸ’ ಎಂಬ ಪುಸ್ತಕ ಇಂದಿಗೂ ಜನರ ಮೆಚ್ಚುಗೆ ಗಳಿಸಿದೆ. ಈತನನ್ನು ಹಿಂದೂಗಳು ಕೂಡ ಎಷ್ಟು ಇಷ್ಟ ಪಡುತ್ತಿದ್ದರೆಂದರೆ ಇವನನ್ನು ‘ಇಬ್ರಾಹೀಂ ಜಗದ್ಗುರು’ ಎಂದು ಕರೆಯುತ್ತಿದ್ದರು.
ಇಂಥ ಉತ್ತರ ಕರ್ನಾಟಕ ಇಂದು ಏನಾಗಿದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಈ ಉತ್ತರದ ನೆಲದಲ್ಲಿ ಕಿತ್ತೂರು ಕರ್ನಾಟಕ ಬಿಜೆಪಿಯ ಪ್ರಭಾವಶಾಲಿ ಕೋಟೆಯಾಗಿದೆ.ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದ ಕೇಂದ್ರವಾಗಿದ್ದ ಹುಬ್ಬಳ್ಳಿ ಈಗ ಕೋಮುವಾದಿಗಳು ಮತ್ತು ಮನುವಾದಿಗಳ ಅತ್ಯಂತ ದೊಡ್ಡ ನೆಲೆಯಾಗಿದೆ. ದಶಕಗಳಿಂದ ಆರೆಸ್ಸೆಸ್ ಸ್ವಯಂ ಸೇವಕರ ಸತತ ಪ್ರಯತ್ನದ ಪರಿಣಾಮವಾಗಿ ಕೋಮು ವಿಭಜನೆಯ ವಾತಾವರಣವಿದೆ. ಅಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳು, ಪಕ್ಷಗಳು ಚೇತರಿಸಲಾಗದ ಸ್ಥಿತಿಯಲ್ಲಿ ಇವೆ. ಧಾರವಾಡ ಕೂಡ ಹಿಂದಿನಂತಿಲ್ಲ. ಬೇಂದ್ರೆ, ಶಂಬಾ, ಕಣವಿ, ಚಂಪಾ ಕಾಲದ ಧಾರವಾಡ ಈಗಿಲ್ಲ. ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಂತರ ಧಾರವಾಡದ ಸಾಂಸ್ಕೃತಿಕ ಜಗತ್ತು ದೀರ್ಘ ಮೌನಕ್ಕೆ ಮೊರೆ ಹೋಗಿದೆ. ಬೆಳಗಾವಿ, ಬಿಜಾಪುರ, ಬಾಗಲಕೋಟ, ಗದಗ, ಹಾವೇರಿಗಳು ಮತ್ತು ಕಾರವಾರ (ಉತ್ತರ ಕನ್ನಡ)ಗಳಲ್ಲೂ ಇದೇ ಸ್ಥಿತಿ.
ಕಿತ್ತೂರು ಕರ್ನಾಟಕಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಎಷ್ಟೋ ವಾಸಿ. ಅಲ್ಲಿ ನೆಲೆಯೂರಲು ಸಂಘ ಪರಿವಾರ ತನ್ನ ಇಡೀ ಶಕ್ತಿಯನ್ನು ಹಾಕಿದೆ. ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಚೆಲ್ಲುತ್ತಿದೆ. ರಾಷ್ಟ್ರೋತ್ಥಾನ ಶಾಲೆ, ಕಾಲೇಜುಗಳು, ಬ್ಲಡ್ ಬ್ಯಾಂಕ್ಗಳು ಬಂದಿವೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೂ ಬೇರು ಬಿಡಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬಸವಣ್ಣನವರು ಮತ್ತು ಬಾಬಾಸಾಹೇಬರು. ಕಲಬುರಗಿಯ ಬಂದೇ ನವಾಝ್ ದರ್ಗಾಕ್ಕೆ ಹಿಂದೂ ಭಕ್ತರೇ ಜಾಸ್ತಿ ಬರುತ್ತಾರೆ. ಉಳಿದ ಕಡೆಗಳಿಗಿಂತ ಇಲ್ಲಿ ಎರಡೂ ಕಮ್ಯುನಿಸ್ಟ್ ಪಕ್ಷಗಳು ಹಾಗೂ ದಲಿತ ಸಂಘಟನೆಗಳು ಪ್ರಭಾವವನ್ನು ಹೊಂದಿವೆ. ನಿಜಾಮರ ಸರಕಾರದಲ್ಲಿ ಮಂತ್ರಿಯಾಗಿದ್ದ ಅಂಬೇಡ್ಕರ್ ಸಮಕಾಲೀನ ಚಿಂತಕ ಶಾಮ ಸುಂದರ್ ಅವರ ಅಭಿಮಾನಿಗಳ ದೊಡ್ಡ ಸಮೂಹವೇ ಇಲ್ಲಿದೆ. ದಶಕಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಅವರು ಮಾಡಿದ ಕೆಲಸಗಳನ್ನು ಜನ ಮರೆತಿಲ್ಲ. ಕಲ್ಯಾಣ ಕರ್ನಾಟಕ ಅದರಲ್ಲೂ ವಿಶೇಷವಾಗಿ ಕಲಬುರಗಿಯಲ್ಲಿ ನಾಲ್ಕು ದಶಕಗಳಿಂದ ಕೋಮು ಗಲಭೆಗಳು ನಡೆದಿಲ್ಲ. ಹಿಂದೂ-ಮುಸ್ಲಿಮ್ ಬಾಂಧವ್ಯಕ್ಕೆ ಇದು ಮಾದರಿಯಾಗಿದೆ.
ಇಲ್ಲಿನ ಶರಣ ಬಸವಣ್ಣನ ಗುಡಿ, ಬಂದೇ ನವಾಝ್ ದರ್ಗಾ, 12 ಶತಮಾನದ ವಚನ ಚಳವಳಿ, ನಿರಂತರವಾಗಿ ನಡೆಯುತ್ತಿರುವ ಜನ ಹೋರಾಟಗಳು ಇವೆಲ್ಲ ಸೇರಿ ಕೋಮು ವೈರಸ್ನಿಂದ ಕಲ್ಯಾಣ ಕರ್ನಾಟಕವನ್ನು ಕಾಪಾಡಿವೆ. ಆದರೆ ಎಲ್ಲ ಕಡೆಗಳಂತೆ ಇಲ್ಲೂ ಹೊಸ ಪೀಳಿಗೆ ಬಂದಿದೆ. ಆದ್ಯತೆಗಳು ಬದಲಾಗಿವೆ. ಮುಂದೆ ಏನಾಗುವುದೋ ಗೊತ್ತಿಲ್ಲ. ಆದರೆ ಕೋಮುವಾದಿಗಳಿಗೆ, ಮನುವಾದಿಗಳಿಗೆ ಕಲ್ಯಾಣ ಕರ್ನಾಟಕವನ್ನು ಗೆಲ್ಲುವುದು ಸುಲಭವಲ್ಲ.







