ಬಸವ ಚರಿತೆಯ ಸಮಕಾಲೀನ ನಿರೂಪಣೆ

ಕನ್ನಡದ ಬೌದ್ಧಿಕ (ಅಕಾಡಮಿಕ್)ಸಂಕಥನಗಳಲ್ಲಿ ಅತಿ ಹೆಚ್ಚು ಚರ್ಚೆಗಳಾಗಿ ರುವುದು 12ನೇ ಶತಮಾನದ ವಚನ ಚಳವಳಿ ಮತ್ತು ಬಸವ, ಅಲ್ಲಮ, ಅಕ್ಕ ಹುಟ್ಟುಹಾಕಿದ ಸಮಾಜ ಪರಿವರ್ತನೆಯ ಮಾರ್ಗಗಳು. ಅಧ್ಯಯನ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಹೊಸ ಒಳನೋಟಗಳು ಮತ್ತು ಸಮಕಾಲೀನ ಸಮಾಜದ ತೀಕ್ಷ್ಣ ವಿಮರ್ಶಾತ್ಮಕ ವಿಶ್ಲೇಷಣೆಯ ಅಗತ್ಯತೆ ಇರುವ ಪರಿಸ್ಥಿತಿಯಲ್ಲಿ, ಸಂಶೋಧಕರು ಬಸವ ಚರಿತೆಯನ್ನು, ವಚನ ಚಳವಳಿಯನ್ನು ಮತ್ತೆ ಮತ್ತೆ ಗ್ರಾಂಥಿಕವಾಗಿ ನಮ್ಮ ಮುಂದಿರಿಸುತ್ತಲೇ ಬಂದಿದ್ದಾರೆ. ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳೇ ನಶಿಸಿಹೋಗುತ್ತಿರುವ ಕಾಲದಲ್ಲಿ 12ನೇ ಶತಮಾನದ ಈ ಪರಿವರ್ತಕ ಯುಗ, ‘ಪ್ರಜಾಪ್ರಭುತ್ವ’ದ ಕಲ್ಪನೆಯನ್ನು ಅನುಭವ ಮಂಟಪದ ಮುಖಾಂತರ ಬಿತ್ತಿರುವುದನ್ನು ನೆನಪಿಸುವ ಅಗತ್ಯತೆಯೂ ಇದೆ.
ಇಂತಹ ಒಂದು ವಿದ್ವತ್ಪೂರ್ಣ ಪ್ರಯತ್ನವನ್ನು ಸಂಶೋಧಕ ಡಾ. ಕೆ. ಪಿ. ಮಹಾಲಿಂಗು ಕಲ್ಕುಂದ ತಮ್ಮ ‘ಕಲ್ಯಾಣದ ಬೆಳಕು -ಬಸವಣ್ಣ’ ಕೃತಿಯಲ್ಲಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಬಸವಣ್ಣನ ಹುಟ್ಟು, ಬೆಳವಣಿಗೆ ಮತ್ತು ತಾತ್ವಿಕತೆಯನ್ನು ನಿಷ್ಕರ್ಷೆಗೊಳಪಡಿಸುತ್ತಲೇ ಲೇಖಕರು 10 ಅಧ್ಯಾಯಗಳ ಈ ಕೃತಿಯಲ್ಲಿ, ವರ್ತಮಾನದ ಕಾಲಘಟ್ಟದಲ್ಲಿ ಅಗತ್ಯವಾದ ದಲಿತ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತು ವೈಚಾರಿಕ ಕ್ರಾಂತಿಯನ್ನೂ ಸಹ, ಬಸವ ತತ್ವಗಳ ಮುಖೇನ ವಿಶ್ಲೇಷಣೆಗೊಳಪಡಿಸುತ್ತಾರೆ. ಸಮಾನತೆ ಮತ್ತು ಬಸವ ಎಂಬ ವಿಚಾರವನ್ನು ಪರಾಮರ್ಶಿಸುವ ಹಂತದಲ್ಲಿ ಲೇಖಕರು ಸಾಮಾಜಿಕ ಸಮಾನತೆಯನ್ನೇ ಕೇಂದ್ರೀಕರಿಸುವುದರಿಂದ ಬಸವಣ್ಣನ ಪರಿವರ್ತಕ ತತ್ವಗಳು ಇಂದಿಗೂ ಅಪ್ಯಾಯಮಾನವೆನಿಸುತ್ತವೆ.
ಮತ್ತೊಂದು ಅಧ್ಯಾಯದಲ್ಲಿ ಮಹಾಲಿಂಗು ಅವರು ಪ್ರಸಕ್ತ ಯುಗದ ದಲಿತ ಪ್ರಜ್ಞೆಯನ್ನು ಬಸವ ತತ್ವದ ಕಣ್ಣಲ್ಲಿ ನೋಡಿದ್ದಾರೆ. ಜಾತಿ ತಾರತಮ್ಯ, ಅಸಮಾನತೆ ಮತ್ತು ಅಸ್ಪಶ್ಯತೆಗಳ ವಿರುದ್ಧ ದನಿ ಎತ್ತಿದ ಬಸವಣ್ಣ ಜ್ಯೋತಿಷ್ಯ ಶಾಸ್ತ್ರ ಮತ್ತಿತರ ಮೌಢ್ಯಾಚರಣೆಗಳನ್ನೂ ಧಿಕ್ಕರಿಸಿದ್ದು ಇತಿಹಾಸ. 9 ಶತಮಾನಗಳು ಕಳೆದರೂ ಭಾರತೀಯ ಸಮಾಜದಲ್ಲಿ ಈ ಎಲ್ಲ ಪೀಡೆಗಳೂ ವ್ಯವಸ್ಥಿತವಾಗಿ ಜಾರಿಯಲ್ಲಿವೆ. ಈ ಸನ್ನಿವೇಶದಲ್ಲಿ ದಲಿತ ಪ್ರಜ್ಞೆಯನ್ನು ಹುಡುಕುವುದೆಂದರೆ ಅದು ಕೇವಲ ಬುದ್ಧ-ಬಸವರ ಸ್ಮರಣೆಯಿಂದ ಸಾಧ್ಯವಿಲ್ಲ. ಕೃತಿಯ ಕೊನೆಯ ಅಧ್ಯಾಯದಲ್ಲಿ ಲೇಖಕರು ವೈಚಾರಿಕ ಕ್ರಾಂತಿಯನ್ನೂ ಇದೇ ಮೂಸೆಯಲ್ಲಿ ಪ್ರಸ್ತಾಪಿಸುತ್ತಾರೆ.
ಬುದ್ಧ ಬೋಧಿಸಿದ ವೈಚಾರಿಕತೆಗೆ ಭೌತವಾದದ ತಳಹದಿ ಇತ್ತು. ಬಸವಣ್ಣ ಭೌತವಾದವನ್ನು ತಾತ್ವಿಕವಾಗಿ ಅನುಸರಿಸಲಿಲ್ಲ. ಬದಲಾಗಿ ಸಮಾಜದ ಎಲ್ಲ ಸ್ತರ-ವರ್ಗಗಳಲ್ಲೂ ಭೌತಿಕ ಸಮಾನತೆ ಮತ್ತು ಆಧ್ಯಾತ್ಮಿಕ ಏಕತೆಯ ಭಾವವನ್ನು ಮೂಡಿಸುವ ಪ್ರಯತ್ನ ಮಾಡಿದ್ದರು. ಹಾಗಾಗಿ ವೈಚಾರಿಕ ಪ್ರಜ್ಞೆ ಎನ್ನುವುದು ಆಚರಣಾತ್ಮಕ ನೆಲೆಯಲ್ಲೇ ತನ್ನ ಅಂತಿಮ ಗುರಿಯನ್ನು ಕಂಡುಕೊಂಡಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪು ಅವರೂ ಸಹ ವೈಚಾರಿಕತೆಯನ್ನು ಅಧ್ಯಾತ್ಮದ ಸಂಕೋಲೆಯಿಂದ ಪ್ರತ್ಯೇಕಿಸಿ ನೋಡಲಿಲ್ಲ. ಹಾಗೆ ನೋಡಲು ನಾಸ್ತಿಕ ಪರಂಪರೆಯನ್ನು ಒಪ್ಪಿಕೊಳ್ಳಬೇಕಿತ್ತು. ಹಾಗಾಗಿ ವೈಚಾರಿಕ ಪ್ರಜ್ಞೆ ಹಾಗೂ ವೈಜ್ಞಾನಿಕ ಅರಿವು ಎರಡೂ ಪ್ರತ್ಯೇಕ ಮನಸ್ಥಿತಿಗಳಾಗಿಯೇ ಮುಂದುವರಿದವು. ಭಾರತದ ಸಾಂಪ್ರದಾಯಿಕ ಸಮಾಜಗಳಲ್ಲಿ ವೈಜ್ಞಾನಿಕ ಮನೋಭಾವ ಆಳವಾಗಿ ಇಳಿಯದೆ ಮೌಢ್ಯಾಚರಣೆಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಏಕೆಂದರೆ ಸಂಪ್ರದಾಯಬದ್ಧ ಮನಸ್ಸು ಭಿನ್ನ ರೂಪಗಳಲ್ಲಿ ಆಚರಣೆಗಳಿಗೆ ಬದ್ಧವಾಗುತ್ತದೆ. ಲೇಖಕರು ತಮ್ಮ ಮುಂದಿನ ಸಂಶೋಧನೆಯಲ್ಲಿ ಈ ಅಂಶಗಳನ್ನು ಆಳವಾಗಿ ಅಭ್ಯಸಿಸಬಹುದು.
‘ಶೋಷಿತ ವರ್ಗದ ವಚನಕಾರರು’ ಅಧ್ಯಾಯದಲ್ಲಿ ಲೇಖಕರು ಇಂದಿನ ಯುವ ಜನಾಂಗಕ್ಕೆ ಅಗತ್ಯವಾದ ಚಿಕಿತ್ಸಕ ಚರಿತ್ರೆಯನ್ನು ಪರಿಚಯಿಸಿದ್ದಾರೆ. ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಮೊದಲಾದವರ ಗತಕಾಲದ ಆಲೋಚನಾ ಕ್ರಮಗಳು ಮತ್ತು ದೂರಗಾಮಿ ದೃಷ್ಟಿಕೋನ ವರ್ತಮಾನಕ್ಕೂ ಪ್ರಸ್ತುತವೇ ಆದರೂ, ನಾವು ಸಾಗುತ್ತಿರುವ ಡಿಜಿಟಲ್ಯುಗದಲ್ಲಿ ಬೌದ್ಧಿಕ ಚಿಂತನೆಗಳನ್ನು ಪ್ರಭಾವಿಸುವ ಶಕ್ತಿಗಳು ಬಹಳಷ್ಟಿವೆ. ಈ ಹಿನ್ನೆಲೆಯಲ್ಲಿ ಯುವ ಮನಸ್ಸುಗಳನ್ನು ಜಾಗೃತಗೊಳಿಸಲು ಈ ಚರಿತ್ರೆಯ ಮರುಓದು ಸಹಾಯಕವಾಗುತ್ತದೆ. ಮಹಾಲಿಂಗು ಅವರು ಪ್ರಾಮಾಣಿಕವಾಗಿ ಈ ಪ್ರಯತ್ನ ಮಾಡಿದ್ದಾರೆ.
‘ಅನುಭವ ಮಂಟಪ ಮತ್ತು ಪ್ರಜಾಪ್ರಭುತ್ವ’ ಅಧ್ಯಾಯದಲ್ಲಿ ಡಾ. ಮಹಾಲಿಂಗು ಅವರ ಚಾರಿತ್ರಿಕ ವಿವರಣೆ ಮತ್ತು ಸಮಕಾಲೀನ ಪ್ರಸ್ತುತತೆಯ ಬಗ್ಗೆ ವಿಶ್ಲೇಷಣೆ ಅರ್ಥಪೂರ್ಣವಾಗಿದೆ. ಆದರೆ 15-16ನೇ ಶತಮಾನದಲ್ಲಿ ಹುಟ್ಟಿಕೊಂಡ ‘ಪ್ರಜಾಪ್ರಭುತ್ವ’ ಒಂದು ಆಡಳಿತಾತ್ಮಕ ಸಂರಚನೆ. ಈ ರಚನೆಯನ್ನು ಒಪ್ಪಿಕೊಳ್ಳುವ ಸಮಾಜಗಳಲ್ಲಿ ಪ್ರಜಾಪ್ರಭುತ್ವೀಯ ಮೌಲ್ಯಗಳು ಆಳವಾಗಿ ಬೇರೂರಿರಬೇಕು. ಅಂದರೆ ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಸಾಂಸ್ಕೃತಿಕ ಸ್ವಾಯತ್ತತೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಬೇರುಗಳು ಗಟ್ಟಿಯಾಗಿರಬೇಕು. ಅನುಭವ ಮಂಟಪ ಮೂಲತಃ ಸೂಚಿಸಿದ್ದು ಈ ಮೌಲ್ಯಗಳನ್ನು ಮಾತ್ರ. ಇಂದು ನಾವು ಕಾಣುತ್ತಿರುವುದು ಸಾಂಸ್ಥಿಕ ರೂಪದ ಚುನಾಯಿತ ಪ್ರಜಾಪ್ರಭುತ್ವವನ್ನು. ಹೀಗೆ ಸಮಾನಾಂತರವಾಗಿ ನೋಡುವಾಗ ಲೇಖಕರು ಎಚ್ಚರವಹಿಸಬೇಕು.
ಬಸವಣ್ಣನ ತತ್ವಗಳಲ್ಲಿ, ವಚನ ಚಳವಳಿಯಲ್ಲಿ ಹಾಗೂ ಶರಣರ ತಾತ್ವಿಕ ನೆಲೆಗಳಲ್ಲಿ ನಾವು ಮೂಲತಃ ಕಾಣಬೇಕಾದದ್ದು ಜಾತಿ ಭೇದ, ತಾರತಮ್ಯ ಇಲ್ಲದ ವಿಶಾಲ ಸಮಾಜವನ್ನು ಮತ್ತು ಆ ಸಮಾಜದೊಳಗೆ ಇರಬೇಕಾದ ಲಿಂಗ ಸಮಾನತೆಯನ್ನು. ಮಹಿಳೆಗೆ ಎಲ್ಲ ಸ್ತರಗಳಲ್ಲೂ ಸಮಾನ ಸ್ಥಾನ ಕಲ್ಪಿಸುವ ಒಂದು ಔದಾತ್ಯವನ್ನು ಈ ಚಿಕಿತ್ಸಕ ಚಳವಳಿಯಲ್ಲಿ ಗುರುತಿಸಬಹುದು. ಶರಣೆಯರ ಸಂದೇಶಗಳು ಇಂದಿಗೂ ಪ್ರಸ್ತುತತೆ ಪಡೆದಿರುವುದು ಅದರೊಳಗಿನ ಬತ್ತದ ಅಂತಃಸತ್ವವನ್ನು ಬಿಂಬಿಸುತ್ತದೆ. ಈ ಚಾರಿತ್ರಿಕ ಅಂಶಗಳನ್ನು ದಾಖಲಿಸುವುದರೊಂದಿಗೇ, ಶಕ್ತಿಶಾಲಿಯಾಗಿದ್ದ, ಬೌದ್ಧಿಕತೆಯ ಔನ್ನತ್ಯವನ್ನು ಪಡೆದಿದ್ದ, ಸಾಮಾಜಿಕ ಮನ್ನಣೆಗೆ ಪಾತ್ರವಾಗಿದ್ದ ವಚನ-ಶರಣ ಚಳವಳಿ ಪಿತೃಪ್ರಧಾನ ಮೌಲ್ಯಗಳನ್ನು ಭೇದಿಸಲೂ ಆಗಲಿಲ್ಲ, ಭಂಜಿಸಲೂ ಆಗಲಿಲ್ಲ. ಈಗಲೂ ವೀರಶೈವ-ಲಿಂಗಾಯತ ಮಠಾಧೀಶರ ಪೀಠ ಪುರುಷಾಧಿಪತ್ಯಕ್ಕೇ ಒಳಗಾಗಿದೆ.
ಈ ದ್ವಂದ್ವಗಳನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಸಮಕಾಲೀನ ಗ್ರಹಿಕೆಯೊಂದಿಗೆ ನೋಡಬೇಕಾಗುತ್ತದೆ. ಬುದ್ಧನನ್ನು ಬಸವಣ್ಣನ ಕಾಲದಲ್ಲಿಟ್ಟು, ಬಸವಣ್ಣ-ಅಲ್ಲಮರನ್ನು ಅಂಬೇಡ್ಕರ್ ಯುಗದಲ್ಲಿಟ್ಟು, ಫುಲೆ, ಅಂಬೇಡ್ಕರ್ರನ್ನು ವರ್ತಮಾನದಲ್ಲಿಟ್ಟು ತುಲನಾತ್ಮಕವಾಗಿ ವಿಮರ್ಶಿಸುವುದು ಈ ಕಾಲದ ತುರ್ತು. ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ತಮ್ಮ ಮುಂದಿನ ಸಂಶೋಧನೆಗಳ ಪಯಣದಲ್ಲಿ ಈ ಪ್ರಯತ್ನ ಮಾಡುತ್ತಾರೆ ಎಂಬ ಭರವಸೆಯನ್ನು ‘ಕಲ್ಯಾಣದ ಬೆಳಕು’ ಕೃತಿ ಮೂಡಿಸುತ್ತದೆ. ಈ ಕಾರಣಕ್ಕಾಗಿ ಡಾ. ಮಹಾಲಿಂಗು ಅಭಿನಂದನಾರ್ಹರು.






