‘ಧಣಿಯ ಹಿಂದಿನ ಧ್ವನಿ’ಯೊಳಗೆ...

ಡಾ.ಯಶವಂತ ಕೊಕ್ಕನವರ ಅವರ ನಾಟಕ ಕೃತಿ ನಮ್ಮ ಸಾಹಿತ್ಯ ಮತ್ತು ರಂಗಭೂಮಿಗಳಲ್ಲಿ ಮತ್ತೆ ಮತ್ತೆ ಕಾಡುವ ದಮನ ಮತ್ತು ಜಾತಿಗಳ ಸಂಘರ್ಷವನ್ನು ಎದುರುಗೊಂಡಿದೆ.
ಬಂಡಾಯದ ಬುನಾದಿ ಹೊಂದಿರುವ ನಾಟಕದ ವಸ್ತು ಹಳೆಯದು. ಆದರೆ ಕೊಕ್ಕನವರ ಅವರು ಅದನ್ನು ಬಿಡಿಸಿರುವ ಬಗೆ ಹೊಸದು. ಈ ವರೆಗೆ ತಂದೆ-ಮಗನ ಅಂದರೆ ಗಂಡಾಳಿಕೆ ದೃಷ್ಟಿಯಿಂದ ಈ ವಸ್ತುವನ್ನು ಪರಿಭಾವಿಸಿ ಬಹು ಸನ್ಮಾನಿತರಾದ ಪ್ರಸಿದ್ಧ ನಾಟಕಕಾರರು ನಮ್ಮಲ್ಲಿದ್ದಾರೆ. ಆದರೆ ಕೊಕ್ಕನವರ ಅವರು ವಸ್ತುವನ್ನು ಗ್ರಹಿಸಿರುವುದು ತಾಯಿ ಮತ್ತು ಮಗನ ಸಂಬಂಧದ ಮೂಲಕ. ಇದೊಂದು ಸ್ವಾಗತಾರ್ಹ ಮಾದರಿ ಪಲ್ಲಟ. ಆಧುನಿಕ ‘ಬಾಡಗಿ-ತಾಯಿ’ ಪರಿಕಲ್ಪನೆಯನ್ನು ಪ್ರಾಚೀನ ಕಾಲದಲ್ಲಿ ಕಲ್ಪಿಸಿ ಬರೆದ ನಾಟಕವಾದರೂ ವಾಸ್ತವಿಕ ಹೊಸ್ತಿಲು ದಾಟಿ ಹೋಗಿಲ್ಲ. ಇದು ನಾಟಕಕಾರರ ವಾಸ್ತವ ಪ್ರಜ್ಞೆಗೆ ಸಾಕ್ಷಿಯೆನ್ನುವಂತಿದೆ.
ಯಶವಂತ ಅವರ ಭಾಷೆಯಲ್ಲಿ ದೇಸಿ ಸೊಗಡು ಗಾಢವಾಗಿದೆ. ಅವರು ತಂದಿರುವ ಕತೆ, ಪಾತ್ರಗಳು ಸ್ವಾರಸ್ಯವಾಗಿವೆ. ಇದಕ್ಕೆ ಅವರು ಅನುಸರಿಸಿರುವ ರಿಯಲಿಸ್ಟಿಕ್ ನಾಟಕ ರಚನಾಕ್ರಮ ಮತ್ತು ಕೆಲವು ಸಲ ಮೆಲೊಡ್ರಾಮಾ ಕಸರತ್ತುಗಳು ನಿರೂಪಣೆಯನ್ನು ಆಗಾಗ ಅಡ್ಡಿಗೊಳಿಸುತ್ತವೆ. ಆದರೆ ಕಾವ್ಯಾತ್ಮಕ ಹೂರಣದಿಂದ ಕೂಡಿದ ಕೃತಿಯನ್ನು ನುರಿತ ನಿರ್ದೇಶಕರು ಯಶಸ್ವಿಯಾಗಿ ಪ್ರಯೋಗಿಸುವರೆಂಬ ವಿಶ್ವಾಸ ನನ್ನದು. ಇದು ಅವರ ಮೊದಲ ನಾಟಕವಾದರೂ ಮಾಗಿದ ಅನುಭವ, ಪೂರ್ವಭಾವಿ ಓದಿನ ವಿಸ್ತಾರ, ಜಗತ್ತನ್ನು ನೋಡಿದ ರೀತಿ, ನಾಟಕ ತಂತ್ರಗಳ ಪರಿಚಯ, ವಸ್ತು ವಿನ್ಯಾಸದ ನಿರೂಪಣೆ ಇವೆಲ್ಲ ಕೊಕ್ಕನವರ ಅವರ ಪ್ರತಿಭಾ ಸ್ಪರ್ಶಕ್ಕೆ ದಕ್ಕಿದ ಪೋಷಕಾಂಶಗಳಾಗಿ ಕೆಲಸ ಮಾಡಿವೆ. ‘ಇತಿಹಾಸ-ವಿಜ್ಞಾನ -ಸಮಾಜ’ ಈ ತ್ರಿಕೋನ ಜ್ಞಾನತರಂಗದ ಮೇಲೆ ಈ ನಾಟಕದ ದಿವ್ಯ ಸೌಧ ನಿರ್ಮಾಣಗೊಂಡಿದೆ. ಇದಕ್ಕೆ ಕೇವಲ ಸಾಹಿತ್ಯಕ ಪ್ರತಿಭೆ ಇದ್ದರೆ ಸಾಲದು ಕಲಾತ್ಮಕತೆಯೂ ಅನಿವಾರ್ಯವಾಗುತ್ತದೆ. ಇವೆರಡರ ಸಮನ್ವಯ ನಾಟಕದಲ್ಲಿ ಮೈದಾಳಿ ಬಂದಿದೆ. ಅವರ ನಾಟಕ ರಚನಾಯಜ್ಞ ಸಾಂಗವಾಗಿ ಮುಂದುವರಿಯಲಿ, ಹೊಸ ಹೊಸ ದಿಗಂತವನ್ನು ಅನ್ವೇಷಿಸಲಿ.
ಕೃತಿ: ಧಣಿಯ ಹಿಂದಿನ ಧ್ವನಿ
ನಾಟಕ
ಮುಖಬೆಲೆ: 190 ರೂ.
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್,
ಯಳಗಲ್ಲು, ಕೋಡೂರು ಅಂಚೆ,
577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ
ಮೊ: 7338437666






