ಪ್ರಕೃತಿಯ ಒಡಲಲ್ಲಿ ಕಳೆದ ಓದಿನ ಕ್ಷಣಗಳು

ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ಭಾರತದಲ್ಲಿ ಶೇ. 20ರಷ್ಟು ಜನರು ಅಂದರೆ 30 ಕೋಟಿ ಜನರು, 17 ಸಾವಿರ ಕುಗ್ರಾಮ/ಹಾಡಿಗಳಲ್ಲಿ ವಾಸಿಸುತ್ತಾ ತಮ್ಮ ಆಹಾರ, ಇಂಧನ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಮತ್ತು ನಿಸರ್ಗ ಸಂಪತ್ತನ್ನೇ ಅವಲಂಬಿಸಿದ್ದಾರೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿನದಾಗಿರಲು ಸಾಧ್ಯ. ವಿಪರ್ಯಾಸ ಎಂದರೆ ಸ್ವಾತಂತ್ರ್ಯ ಬಂದ ದಿನದಿಂದಲೂ ನಮ್ಮ ಚುನಾಯಿತ ಸರಕಾರಗಳು ಅನುಸರಿಸಿರುವ ಆರ್ಥಿಕ ಅಭಿವೃದ್ಧಿಯ ಮಾದರಿಯಲ್ಲಿ ನಿಸರ್ಗ ಸಂಪತ್ತು, ಬಳಕೆಯ ವಸ್ತುವಾಗಿ ಕಂಡಿದೆಯೇ ಹೊರತು, ಪ್ರಗತಿಯೊಡನೆ ಹೊಂದಿಕೊಂಡು ಸಮತೋಲನದಿಂದ ಸಾಗಬೇಕಾದ ಸಂಪನ್ಮೂಲವಾಗಿ ಅಲ್ಲ.
77 ವರ್ಷಗಳ ಸ್ವತಂತ್ರ ಹೆಜ್ಜೆಗಳ ನಡುವೆ ಭಾರತೀಯ ಸಮಾಜ ಮತ್ತು ಆಳುವ ವರ್ಗಗಳು ಹೊಸಕಿ ಹಾಕಿರುವ ಹಸಿರು ಸಂಪತ್ತು ಮತ್ತು ಕಿವುಚಿಹಾಕಿರುವ ಪ್ರಾಕೃತಿಕ ಸಂಪನ್ಮೂಲಗಳು ಎಷ್ಟೆಂದು ಗ್ರಹಿಸಲು ಸಹಜವಾಗಿ ವಿಶ್ವವಿದ್ಯಾನಿಲಯಗಳ ಸಂಶೋಧನಾ ಕೃತಿಗಳನ್ನು, ಪಿಎಚ್.ಡಿ. ಥೀಸಿಸ್ಗಳನ್ನು ಆಶ್ರಯಿಸುವುದು ಸ್ವಾಭಾವಿಕ. ಆದರೆ ಇಲ್ಲೊಂದು ‘ವ್ಯಕ್ತಿಯ ಆತ್ಮಕಥೆ’ ಈ ನಡಿಗೆಯ ಗುರುತುಗಳನ್ನು ದಾಖಲಿಸುತ್ತಿದೆ. ಅದು ದಿವಂಗತ ಪ್ರೊ. ಮಾಧವ ಗಾಡ್ಗೀಳ್ ಅವರ ಆತ್ಮಕಥೆ ‘‘ಏರುಘಟ್ಟದ ನಡಿಗೆ -ಸಮುದಾಯ ಮತ್ತು ನಿಸರ್ಗದ ಜೊತೆಗೆ’’ (ಅನುವಾದ ಶಾರದಾ ಗೋಪಾಲ್ ಮತ್ತು ನಾಗೇಶ ಹೆಗಡೆ).
ಒಂದು ರೀತಿಯಲ್ಲಿ ಈ ಕೃತಿ ಗಾಡ್ಗೀಳ್ ಅವರ ಜೀವನಗಾಥೆಯನ್ನು ಓದುಗರ ಮುಂದೆ ತೆರೆದಿಡುತ್ತಾ ಹೋದರೂ, ಪ್ರಾಮಾಣಿಕವಾಗಿ ಹೇಳುವುದಾದರೆ ಇದು ಸ್ವತಂತ್ರ ಭಾರತದ ಆರ್ಥಿಕಾಭಿವೃದ್ಧಿಯ ಹೆಗ್ಗುರುತುಗಳ ನಡುವೆ ವಿನಾಶದ ಅಂಚಿಗೆ ತಲುಪುತ್ತಿರುವ/ಸಂಪೂರ್ಣ ನಾಶವಾಗಿರುವ ಪ್ರಕೃತಿಯೊಡಲ ದುರಂತ ಗಾಥೆಯನ್ನು ಹಂತ ಹಂತವಾಗಿ ಅನಾವರಣಗೊಳಿಸುವ ಒಂದು ಮಹೋನ್ನತ ಕೃತಿ. ಇದು ‘ನಿಸರ್ಗ ಭಾರತದ ದುರಂತ ಕಥೆ’ ಎಂದರೆ ತಪ್ಪೇನಲ್ಲ.
ಈ ಕೃತಿಯ 25 ಅಧ್ಯಾಯಗಳಲ್ಲಿ ಏನಿದೆ ಎಂದು ಹೇಳುತ್ತಾ ಹೋದರೆ ಕಿರುಹೊತ್ತಿಗೆಯಾಗಬಹುದು. ಭಾರತದ ಪ್ರಕೃತಿಯೊಡಲಲ್ಲಿ ಇರಬಹುದಾದ ಸಂಪನ್ಮೂಲ ಮತ್ತು ಸಂಪತ್ತಿನ ಪ್ರಮಾಣಕ್ಕೆ ಸರಿಸಮಾನ ತೂಕದ ಮಾಹಿತಿ, ದತ್ತಾಂಶ, ಜನಜೀವನ ಪರಿಚಯ, ಸಾಮಾಜಿಕ ಸ್ಥಿತ್ಯಂತರಗಳು, ಸಾಂಸ್ಕೃತಿಕ ಚಲನಶೀಲತೆ, ತಳಸಮಾಜದ ನೋವು-ಆತಂಕಗಳು ಹಾಗೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಮಾರುಕಟ್ಟೆ-ಬಂಡವಾಳ ಹಾಗೂ ಔದ್ಯಮಿಕ ಶಕ್ತಿಗಳು ನಡೆಸಿರುವ ನಿಸರ್ಗದ ಮಾರಣಹೋಮದ ಚಿತ್ರಣ ಇವೆಲ್ಲವೂ ಈ ನಾನೂರು ಪುಟಗಳಲ್ಲಿವೆ. ಇದರೊಂದಿಗೆ ಗಾಡ್ಗೀಳ್ ಅವರ ವ್ಯಕ್ತಿಗತ ಬದುಕಿನ ಚಿತ್ರಣವೂ ಇದೆ.
ಜೀವ ವೈವಿಧ್ಯ ಮತ್ತು ಪ್ರಾಕೃತಿಕ ವೈವಿಧ್ಯ ಈ ಎರಡೂ ಆವರಣಗಳಲ್ಲಿ ನಮ್ಮ ದೇಶ ಎಷ್ಟು ಶ್ರೀಮಂತವಾಗಿದೆ, ಎಷ್ಟು ವೈವಿಧ್ಯಪೂರ್ಣವಾಗಿದೆ, ಎಷ್ಟು ಆಳವಾಗಿ, ವಿಸ್ತಾರವಾಗಿ ಹಿಮಾಲಯದಿಂದ ಪಶ್ಚಿಮಘಟ್ಟದವರೆಗೆ ಹರಡಿಕೊಂಡಿದೆ ಎನ್ನುವುದನ್ನು ಪ್ರೊ. ಗಾಡ್ಗೀಳ್ ಅನುಭವಾತ್ಮಕ ನೆಲೆಯಲ್ಲೇ ವಿವರಿಸುತ್ತಾ ಹೋಗುತ್ತಾರೆ. ಜಲಚರ ಜೀವಿಗಳು, ಸಾಮಾಜಿಕ ಪ್ರಾಣಿಗಳು, ವನ್ಯಜೀವಿಗಳು (ಅವುಗಳ ಸಂರಕ್ಷಣೆ), ಬಿದಿರು ಮತ್ತು ಹಸಿರು, ಜಲಸಂಪತ್ತು ಇವೆಲ್ಲವನ್ನೂ ನೇರವಾಗಿ ಸಂಪರ್ಕಿಸಿ, ಸಂಶೋಧನಾತ್ಮಕವಾಗಿ ಸಂದರ್ಶಿಸಿರುವ ಪ್ರೊ. ಗಾಡ್ಗೀಳ್ ಇವೆಲ್ಲವುಗಳೊಡನೆ ಸಂವಹನ ನಡೆಸಿದ್ದಾರೇನೋ ಎನ್ನುವ ರೀತಿಯಲ್ಲಿ ದೇಶದ ಉದ್ದಗಲಕ್ಕೂ ನಮ್ಮ ನಡುವೆ ಇರುವ ನಿಸರ್ಗ ಜೀವಿಗಳನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ.
ಬಾಲ್ಯದ ದಿನಗಳಿಂದಲೂ ನಿಸರ್ಗದೊಡನೆಯೇ ಸಂಭಾಷಿಸುತ್ತಾ ತಮ್ಮ ಅಧ್ಯಯನಾಸಕ್ತಿ ಮತ್ತು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದಿರುವ ಪ್ರೊ. ಗಾಡ್ಗೀಳ್ ತಮ್ಮ ಕಲಿಕೆಯ ಹಾದಿಯಲ್ಲಿ ಕಬ್ಬಿಣದ ಕಡಲೆಯಾಗಿದ್ದ ಗಣಿತವನ್ನು ಪತ್ನಿ ಸುಲೋಚನಾ ಅವರಿಂದ ಕಲಿತೆ ಎಂದು ಹೇಳಿರುವುದು ಅವರ ವ್ಯಕ್ತಿ ನಿಷ್ಠೆ ಮತ್ತು ಪ್ರಾಮಾಣಿಕತೆಯ ದ್ಯೋತಕವಾಗಿ ಕಾಣುತ್ತದೆ. ಪ್ರೊ. ಗಾಡ್ಗೀಳ್ ಅವರನ್ನು ವಿಶಾಲಾರ್ಥದಲ್ಲಿ ‘ವಿಜ್ಞಾನಿ’ ಎಂದೇ ಸಂಬೋಧಿಸಬಹುದು. ತಮ್ಮ ಈ ವೈಜ್ಞಾನಿಕ ಶೋಧದಲ್ಲಿ ಅವರು ಆಯ್ದುಕೊಂಡ ಕ್ಷೇತ್ರ ಜೀವ ವೈವಿಧ್ಯ, ಅರಣ್ಯ ಸಂಪತ್ತು, ಜಲಸಂಪನ್ಮೂಲಗಳು. ಈ ಪ್ರಾಕೃತಿಕ ಮಡಿಲನ್ನೇ ಆಶ್ರಯಿಸಿ ಬದುಕು ಸವೆಸುವ ಲಕ್ಷಾಂತರ ಜನರ ಜೀವನ-ಜೀವನೋಪಾಯ ಗಾಡ್ಗೀಳ್ರ ಸಂಶೋಧನೆಯ ಕೇಂದ್ರ ಬಿಂದು ಆಗುತ್ತಾರೆ.
ಹಲವು ವರ್ಷಗಳ ಕಾಲ ‘‘ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್’ ಸಂಸ್ಥೆಯನ್ನು ನಡೆಸಿದ ಪ್ರೊ. ಗಾಡ್ಗೀಳ್ ಪಶ್ಚಿಮ ಘಟ್ಟಗಳ ಅಧ್ಯಯನವನ್ನೂ ಕೈಗೊಂಡಿದ್ದು, ಆಗ ಜೀವಂತವಾಗಿದ್ದ ‘ಯೋಜನಾ ಆಯೋಗದ’ (Planning Commission) ನೀತಿ ನಿರೂಪಣೆಗಳಿಗೆ ಸಹಾಯಕವಾದಂತಹ ವರದಿಗಳನ್ನು ಸಲ್ಲಿಸಿದ್ದರು. ಭಾರತದ ಜೀವ ವೈವಿಧ್ಯ ಕಾನೂನುಗಳನ್ನು ರೂಪಿಸುವಲ್ಲಿ ಗಾಡ್ಗೀಳ್ ಅವರ ಕೊಡುಗೆಯನ್ನು ಈ ಕೃತಿಯಲ್ಲಿ ಗುರುತಿಸಬಹುದು. ಸಿರಿವಂತಿಕೆಯ ಕುಟುಂಬದಲ್ಲಿ ಬೆಳೆದು 1960ರಲ್ಲೇ ವಿದೇಶಗಳಲ್ಲಿ ವ್ಯಾಸಂಗ ಪೂರೈಸಿದ ಗಾಡ್ಗೀಳ್ ತಮ್ಮ ಸೇವೆಯನ್ನು ಮುಡಿಪಾಗಿಸಿದ್ದು ಭಾರತದ ಪ್ರಾಕೃತಿಕ ಒಡಲಿಗೆ.
ಈಗ ಭಾರತ ಕಾಣುತ್ತಿರುವ ನಿಸರ್ಗನಾಶದ ಅಭಿವೃದ್ಧಿ ಮಾದರಿಯನ್ನು ತಮ್ಮ ಜೀವನದುದ್ದಕ್ಕೂ ವಿಮರ್ಶಾತ್ಮಕವಾಗಿ ನೋಡುತ್ತಲೇ ಬಂದ ಪ್ರೊ. ಗಾಡ್ಗೀಳ್ ಅವರಿಗೆ ನಿಸರ್ಗ ಎಂದರೆ ಬಳಕೆಯ ವಸ್ತುವಲ್ಲ, ಅದು ಮಾನವ ಸಮಾಜದ ನಡಿಗೆಯಲ್ಲಿ ಜೊತೆಗೂಡುವ ಸಮತೋಲನದ ಒಂದು ಶಕ್ತಿ. ಅವರ ಪಶ್ಚಿಮ ಘಟ್ಟಗಳ ಅಧ್ಯಯನವನ್ನು ಕಡೆಗಣಿಸಿದ ಕರ್ನಾಟಕ-ಕೇರಳ ಸರಕಾರಗಳು ಎಂತಹ ದುಬಾರಿ ಬೆಲೆ ತೆತ್ತಿವೆ ಎನ್ನುವುದನ್ನು ವಯನಾಡು, ಕೊಡಗು, ಕೊಂಕಣದ ಭೂಕುಸಿತ, ಪ್ರವಾಹಗಳು ನಿರೂಪಿಸಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC)ಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುವ ಮೂಲಕ ನಿಸರ್ಗ ರಕ್ಷಣೆಯ ಮಾರ್ಗಸೂಚಿಯನ್ನು ಕನ್ನಡಿಗರ ಮುಂದಿಟ್ಟಿರುವ ಪ್ರೊ. ಮಾಧವ ಗಾಡ್ಗೀಳ್ ಸರಕಾರಗಳಿಂದ ಮನ್ನಣೆ ಪಡೆಯದಿದ್ದುದು, ನಮ್ಮ ಆಳುವ ವರ್ಗಗಳ ಅಸೂಕ್ಷ್ಮತೆಯ ದ್ಯೋತಕ.
ಆದರೆ ಬಿರುದು, ಸಮ್ಮಾನ, ಪ್ರಶಸ್ತಿಗಳಿಂದಾಚೆಗೂ ಪ್ರೊ. ಗಾಡ್ಗೀಳ್ ಸಮಸ್ತ ಕನ್ನಡದ ಜನತೆ ಓದಲೇಬೇಕಾದ ಒಂದು ವೈಜ್ಞಾನಿಕ ಕೋಶವನ್ನು ತಮ್ಮ ಆತ್ಮಕಥೆಯ ಮೂಲಕ ತೆರೆದಿಟ್ಟಿದ್ದಾರೆ. ಈ ಕಥನವನ್ನು ಶಾರದಾ ಗೋಪಾಲ್ ಮತ್ತು ನಾಗೇಶ್ ಹೆಗಡೆ ಅದ್ಭುತವಾಗಿ ಕನ್ನಡಕ್ಕೆ ಇಳಿಸಿದ್ದಾರೆ. ಈ ಅಮೂಲ್ಯ ಕೃತಿಯ ಒಳಹೊಕ್ಕು ವಾಸ್ತವಗಳನ್ನು ಮನದಟ್ಟುಮಾಡಿಕೊಳ್ಳುವ ಜವಾಬ್ದಾರಿ ಕನ್ನಡ ಜನತೆಯ ಮೇಲಿದೆ.
ಕೃತಿ: ಏರುಘಟ್ಟದ ನಡಿಗೆ
ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ
ಕನ್ನಡಕ್ಕೆ: ಶಾರದಾ ಗೋಪಾಲ,
ನಾಗೇಶ ಹೆಗಡೆ
ಮುಖಬೆಲೆ: 650 ರೂ.
ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಷನ್ಸ್,
ಲೈಟ್ಹೌಸ್ ಹಿಲ್ ರಸ್ತೆ,
ಮಂಗಳೂರು-575001
ಫೋನ್: 08242972002, 7019225774






