Raichur : ಅರೆನಗ್ನ ಸ್ಥಿತಿಯಲ್ಲಿ ದಲಿತ ಯುವತಿಯ ಮೃತದೇಹ ಪತ್ತೆ; ಅತ್ಯಾಚಾರ ಶಂಕೆ

ರಾಯಚೂರು: ದಲಿತ ಸಮುದಾಯದ ಯುವತಿಯೊಬ್ಬಳ ಮೃತದೇಹ ಬಾವಿಯೊಂದರ ಬಳಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಿರವಾರ ತಾಲೂಕಿನ ಹೊಕ್ರಾಣಿ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಯುವತಿಯನ್ನು ಅಶ್ವಿನಿ ಛಲವಾದಿ ( 22) ಎಂದು ಗುರುತಿಸಲಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬುಧವಾರ ರಾತ್ರಿ 7 ಗಂಟೆಗೆ ಅಶ್ವಿನಿ ಮನೆಯಿಂದ ಬಯಲು ಬಹಿರ್ದೆಸೆಗೆ ಹೋಗಿದ್ದಳು. ಎಷ್ಟೇ ಹೊತ್ತಾದರೂ ಮರಳಿ ಬಾರದ ಕಾರಣ ರಾತ್ರಿಯೆಲ್ಲ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ಗುರುವಾರ ಬೆಳಿಗ್ಗೆ ಹೊಕ್ರಾಣಿಯ ಬಾವಿಯ ಮೆಟ್ಟಿಲ ಬಳಿ ಅರೆ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬಾವಿಯ ಬಳಿ ಅಶ್ವಿನಿಯ ಬಟ್ಟೆ, ಚಪ್ಪಲಿ ಹಾಗೂ ಇತರ ಗಂಡು ಮಕ್ಕಳ ಚಪ್ಪಲಿಗಳು ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಗುರುವಾರ ಬೆಳಿಗ್ಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
ಎಸ್ಪಿ ಅರುಣಾಂಗ್ಷುಗಿರಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಶ್ವಾನ ದಳದಿಂದ ಸ್ಥಳ ಪರಿಶೀಲನೆ ಮಾಡಿದ್ದಾರೆ.






