ಸಿಂಧನೂರು ತಾಲೂಕು ಗ್ರಾಮೀಣ ದಸರಾ ಉತ್ಸವಕ್ಕೆ ಅದ್ದೂರಿ ಚಾಲನೆ

ರಾಯಚೂರು: ಸಿಂಧನೂರು ತಾಲೂಕಾಡಳಿತ, ತಾಲೂಕ ಪಂಚಾಯತ್, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಮ್ಮ ಸಿಂಧನೂರು ಗ್ರಾಮೀಣ ದಸರಾ ಮತ್ತು ಅಂಬಾದೇವಿ ನವರಾತ್ರಿ ದಸರಾ ಉತ್ಸವ ಉದ್ಘಾಟನೆ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಗಳವಾ ಚಾಲನೆ ದೊರೆಯಿತು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮಲಾಪುರದ ಶ್ರೀ ಕ್ಷೇತ್ರ ಸಿದ್ಧಪರ್ವತ ಅಂಬಾಮಠದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಸೋಮಲಾಪುರದ ಕೆ.ಪಿ.ಎಸ್.ಶಾಲೆ ಹತ್ತಿರದ ಕಟ್ಟೆ ಬಸವಣ್ಣ ದೇವಸ್ಥಾನದಿಂದ ಅಂಬಾದೇವಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಹಸಿರು ದಸರಾ ಕಾರ್ಯಕ್ರಮದಡಿ ಸಸಿ ನೆಟ್ಟರು.
ಸಚಿವರಿಂದ ಚಾಲನೆ: ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಚಿವ ಶರಣಬಸಪ್ಪ ದರ್ಶನಾಪುರ ಉತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ನಾಡಹಬ್ಬ ದಸರಾ ಭಕ್ತಿ ಭಾವದ ಪ್ರತೀಕವಾಗಿದೆ. ಸಿಂಧನೂರ ಸೇರಿದಂತೆ ರಾಯಚೂರು ಮತ್ತು ಕೊಪ್ಪಳ ಜನರಿಗೆ ಹಬ್ಬದ ಸಂಭ್ರಮ ನೀಡಲು ಶಾಸಕರಾದ ಹಂಪನಗೌಡ ಬಾದರ್ಲಿ ತಾಲೂಕಾಡಳಿತದಿಂದ ದಸರಾ ಉತ್ಸವ ಆಯೋಜನೆ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದರು.
ಕೊಪ್ಪಳ ಲೋಕಸಭಾ ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ದಸರಾ ನಾಡಿನ ಹೆಮ್ಮೆಯ ಹಬ್ಬವಾಗಿದ್ದು, ಐತಿಹಾಸಿಕ ಹಿರಿಮೆಯನ್ನು ಪ್ರತಿಬಿಂಬಿಸುತ್ತದೆ. ರಾಯಚೂರು ಮತ್ತು ಕೊಪ್ಪಳ ಜನತೆಗೆ ಮಹಾನ್ ದಸರಾ ಹಬ್ಬದ ಸವಿ ಉಣಬಡಿಸುತ್ತಿರುವ ಸಿಂಧನೂರ ಶಾಸಕರ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದರು ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಗ್ರಾಮೀಣ ಕ್ರೀಡೆಗಳಿಗೆ ಜೀವ ತುಂಬಲು ಮತ್ತು ಕೃಷಿಕರ ಜೀವನ ಸುಖಮಯಗೊಳಿಸುವ ನಿಟ್ಟಿನಲ್ಲಿ ದಸರಾ ಉತ್ಸವದಲ್ಲಿ ಕ್ರೀಡೆ ಸೇರಿದಂತೆ ಉತ್ತಮ ಕಾರ್ಯಕ್ರಮ ರೂಪಿಸಿ ಉತ್ಸವವನ್ನು ಜನಪರವಾಗಿ ನಡೆಸಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕನಗೌಡ (ಬಾಬುಗೌಡ) ಬಾದರ್ಲಿ, ಸೋಮಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಗಂ. ಹುಸೇನಪ್ಪ ಮಲ್ಕಾಪುರ, ಅಂಬಾಮಠ ಕಮಿಟಿಯ ಅಧ್ಯಕ್ಷರಾದ ರಂಗನಗೌಡ ಗೊರೇಬಾಳ, ಮುಖಂಡರಾದ ಬಸವರಾಜ ಹಿರೇಗೌಡರ್, ಶ್ರೀದೇವಿ ಶ್ರೀನಿವಾಸ, ತಹಶೀಲ್ದಾರ್ ಅರುಣಕುಮಾರ ದೇಸಾಯಿ, ತಾಲೂಕು ಪಂಚಾಯತ್ ಇಓ ಚಂದ್ರಶೇಖರ ಸೇರಿದಂತೆ ಇತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಸರಿಗಮಪ ಖ್ಯಾತಿಯ ಜ್ಞಾನೇಶ, ಶಿವಾನಿ, ಭೂಮಿಕಾ ಮತ್ತು ತಂಡದವರಿಂದ ನಾನಾ ಗೀತೆಗಳು, ಕೊತಬಾಳದ ಅರುಣೋದಯ ಸಾಂಸ್ಕೃತಿಕ ಕಲಾ ತಂಡದಿಂದ ಜೋಗತಿ ನೃತ್ಯ, ಕೊಪ್ಪಳದ ರಂಗಧಾರ ರೇಪರ್ಟರಿ ತಂಡದಿಂದ ಶಿಕ್ಷಣ, ಆರೋಗ್ಯ, ಕೃಷಿಗೆ ಸಂಬಂಧಿಸಿದಂತೆ ಜಾಗೃತಿ ರೂಪಕ ನಾಟಕಗಳು, ಗ್ರಾಮೀಣ ಕಲಾ ತಂಡಗಳಿಂದ ಕಲೆ-ಸಂಸ್ಕೃತಿ-ಜನಪದ ಕಾರ್ಯಕ್ರಮಗಳು ಹಾಗೂ ಕಾಲೇಜು ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೇವಿ ಮೂರ್ತಿ ಪ್ರತಿಷ್ಠಾಪನೆ: ಸಂಜೆ ವೇಳೆಯಲ್ಲಿ ಸಿಂಧನೂರಿನ ದಸರಾ ಉತ್ಸವ ವೇದಿಕೆಯ ಹತ್ತಿರ ಶ್ರೀ ದೇವಿ ಮೂರ್ತಿಯನ್ನು ವೇ.ಮೂ. ಅಮರಯ್ಯಸ್ವಾಮಿ ಹಿರೇಮಠ, ಅಲಬನೂರು ಇವರಿಂದ ಪ್ರತಿಷ್ಠಾಪನೆ ಮಾಡಲಾಯಿತು.







