ರಾಯಚೂರಿನಲ್ಲಿ 2,562 ಗಣೇಶ ಪ್ರತಿಷ್ಠಾಪನೆ ; 14 ಕಡೆ ನಿಷೇಧ
700ಕ್ಕೂ ಹೆಚ್ಚು ಪೊಲೀಸರ ಭದ್ರತೆ : 23 ರೌಡಿಗಳು ಗಡಿಪಾರು

ರಾಯಚೂರು: ಜಿಲ್ಲೆಯಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ 2,562 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದ್ದು, ಸಾಮಾಜಿಕ ಸಾಮರಸ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 14 ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವಕ್ಕೂ ಮುನ್ನ ಜಿಲ್ಲೆಯಾದ್ಯಂತ 148 ಶಾಂತಿ ಸಭೆಗಳನ್ನು ನಡೆಸಿ ವಿವಿಧ ಸಮುದಾಯಗಳು ಹಾಗೂ ಗಣೇಶ ಮಂಡಳಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಜಿಲ್ಲೆಯ 1,557 ರೌಡಿ ಶೀಟರ್ಗಳ ಪೈಕಿ 1,454 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 23 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, 19 ಮಂದಿಯನ್ನು ತಾತ್ಕಾಲಿಕವಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಣೇಶೋತ್ಸವ ಭದ್ರತೆಗಾಗಿ 1 ಎಸ್ಪಿ, 4 ಡಿವೈಎಸ್ಪಿ, 15 ಸಿಪಿಐ, 31 ಪಿಎಸ್ಐ, 122 ಎಎಸ್ಐ, 630 ಕಾನ್ಸ್ಟೆಬಲ್, 10 ಸಶಸ್ತ್ರ ಮೀಸಲು ಪಡೆ, 6 ಕೆಎಸ್ಆರ್ಪಿ ತುಕಡಿಗಳು ಹಾಗೂ 500 ಹೋಮ್ಗಾರ್ಡ್ಗಳನ್ನು ನಿಯೋಜಿಸಲಾಗಿದೆ ಎಂದರು.
14 ಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಿಷೇಧ :
ಸಿಂಧನೂರು ತಾಲೂಕಿನ ಏಳುರಾಗಿ ಕ್ಯಾಂಪ್, 3ನೇ ಮೈಲ್ ಕ್ಯಾಂಪ್, ಪಿಡಬ್ಲ್ಯೂಡಿ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್, ಗೋರೆಬಾಳ ಕ್ಯಾಂಪ್, ಹತ್ತಿಗುಡ್ಡ, ಎಲೆಕೂಡ್ಲಿಗಿ, ಗುಂಡಾ ಗ್ರಾಮ, ಬಳಗನೂರು ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಬಾಳ ಮತ್ತು ತಿಮ್ಮಾಪುರ, ಸಿರವಾರ ತಾಲೂಕಿನ ಕಡದಿನ್ನಿ ಹಾಗೂ ಹೊಕ್ರಾಣಿ, ಗಬ್ಬೂರು ಠಾಣೆ ವ್ಯಾಪ್ತಿಯ ಸುಂಕೇಶ್ವರಹಾಳ ಮತ್ತು ಹದ್ದಿನಾಳ, ಜಾಲಹಳ್ಳಿ ಠಾಣೆ ವ್ಯಾಪ್ತಿಯ ಊಟಿ ಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ ಎಂದು ಎಸ್ಪಿ ತಿಳಿಸಿದರು.
ಸಿಸಿಟಿವಿ ನಿಗಾ, 48 ವಿಸರ್ಜನಾ ಸ್ಥಳಗಳಲ್ಲಿ ವಿಶೇಷ ಬಂದೋಬಸ್ತ್ :
ಜಿಲ್ಲೆಯಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ 16,733 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಹಾನಗರ ಪಾಲಿಕೆಯ 180 ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನೂ ಪರಿಶೀಲಿಸಲಾಗುತ್ತಿದೆ. ಗಣೇಶ ವಿಸರ್ಜನೆ ನಡೆಯುವ 48 ಸ್ಥಳಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಿಂಧನೂರು ತಾಲೂಕಿನಲ್ಲಿ ಈಗಾಗಲೇ 3 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಗಣೇಶೋತ್ಸವದ ಹೆಸರಿನಲ್ಲಿ ಗಾಂಜಾ, ಅಕ್ರಮ ಮದ್ಯ ಮಾರಾಟ, ಬೈಕ್ ವೀಲಿಂಗ್, ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆ ನೀಡುವುದು, ಅಶ್ಲೀಲ ಹಾಡುಗಳು, ರಾತ್ರಿ ವೇಳೆ ಡಿಜೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಲು ಅವಕಾಶವಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.
ಗಣೇಶ ಮಂಡಳಿಗಳು ಅಗ್ನಿಶಾಮಕ ವ್ಯವಸ್ಥೆ, ನೀರು, ಮರಳು ಹಾಗೂ ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಮೆರವಣಿಗೆಗಳನ್ನು ಪೊಲೀಸ್ ಇಲಾಖೆ ಅನುಮೋದಿಸಿದ ಮಾರ್ಗದಲ್ಲಿಯೇ ನಡೆಸಬೇಕು. ಕತ್ತಿ, ಖಡ್ಗ, ತಲವಾರ, ಈಟಿ ಸೇರಿದಂತೆ ಅಪಾಯಕಾರಿ ಆಯುಧಗಳ ಪ್ರದರ್ಶನಕ್ಕೆ ಸಂಪೂರ್ಣ ನಿಷೇಧವಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಕೊನೆಯಲ್ಲಿ, ಸಾರ್ವಜನಿಕರು ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಆಚರಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.






