ಹೊರರಾಜ್ಯದ ಕಾರ್ಮಿಕರಿಂದ ಸ್ಥಳೀಯ ಪೇಂಟರ್ಗಳಿಗೆ ಅನ್ಯಾಯ ಆರೋಪ : ರಾಯಚೂರಿನಲ್ಲಿ ಬೈಕ್ ರ್ಯಾಲಿ

ರಾಯಚೂರು: ಹೊರರಾಜ್ಯಗಳಿಂದ ಪೇಂಟಿಂಗ್ ಕೆಲಸಕ್ಕೆ ಆಗಮಿಸುವ ಕಾರ್ಮಿಕರಿಂದ ಸ್ಥಳೀಯ ಪೇಂಟಿಂಗ್ ಕಾರ್ಮಿಕರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪೇಂಟರ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಗೌರವಾಧ್ಯಕ್ಷ ಎನ್. ಶರಣಪ್ಪ ಅಸ್ಕಿಹಾಳ ಹಾಗೂ ಜಿಲ್ಲಾಧ್ಯಕ್ಷ ರಾಜು ಅವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ನೂರಾರು ಪೇಂಟಿಂಗ್ ಕಾರ್ಮಿಕರು ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು.
ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಕೆಲ ಕಾರ್ಮಿಕರು ಕೆಲಸದ ಮಾಲೀಕರಿಂದ ಮುಂಗಡ ಹಣ ಪಡೆದು ಕೆಲಸವನ್ನು ಅರ್ಧದಲ್ಲೇ ಬಿಟ್ಟು ತೆರಳುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಪೇಂಟಿಂಗ್ ವೃತ್ತಿಯ ಮೇಲಿನ ನಂಬಿಕೆ ಕುಗ್ಗುತ್ತಿದ್ದು, ಸ್ಥಳೀಯ ಕಾರ್ಮಿಕರಿಗೂ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹೊರರಾಜ್ಯದ ಕಾರ್ಮಿಕರನ್ನು ವಿರೋಧಿಸುವ ಉದ್ದೇಶ ನಮ್ಮದಲ್ಲ. ಆದರೆ ಹೊರರಾಜ್ಯಗಳಿಂದ ಬರುವ ಕಾರ್ಮಿಕರ ಗುರುತು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ವಂಚನೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿಯಲ್ಲಿ ಒತ್ತಾಯಿಸಿದೆ.
ಇದೇ ವೇಳೆ ಪೇಂಟಿಂಗ್ ಕಾರ್ಮಿಕರಿಗೆ ಜೀವವಿಮೆ, ಆರೋಗ್ಯ ಸೌಲಭ್ಯ, ವಾರ್ಷಿಕ ಸಹಾಯಧನ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಮತ್ತು ಲೇಬರ್ ಕಾರ್ಡ್ ವಿತರಣೆಯಲ್ಲಿನ ವಿಳಂಬವನ್ನು ತಪ್ಪಿಸಿ ಶೀಘ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ರೋಹಿತ್, ವಿನೋದ್, ಅಜಯ್, ಜಿ. ನಾರಾಯಣ, ಪಪ್ಪು, ಉಪೇಂದ್ರ, ಪ್ರಸಾದ್ ಲಂಬು, ಬಿಜೇನ್, ಬಾಬು, ಸುರಾಜ್, ಸವೀದ್, ಜಿತೇಂದ್ರ, ಮಾಸಯ್ಯ, ಯೂಸಫ್, ರತ್ನಕುಮಾರ್ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.






