ರಾಯಚೂರು | ಕಟ್ಟಡದ ಮೇಲೆ ವಾಲಿ ನಿಂತ ಮತ್ತೊಂದು ಕಟ್ಟಡ

ರಾಯಚೂರು: ನಗರದ ಕೋಟ್ ತಲಾರ್ ಬಡಾವಣೆಯ ಮೋತಿ ಮಸ್ಜಿದ್ ಬಳಿಯಲ್ಲಿ ಬಹುಮಹಡಿಯ ಕಟ್ಟಡವೊಂದು ಪಕ್ಕದ ಕಟ್ಟಡದ ಮೇಲೆ ವಾಲಿದ್ದು, ಮನೆಯಲ್ಲಿದ್ದವರನ್ನು ಖಾಲಿ ಮಾಡಿಸಿದ ಘಟನೆ ಶನಿವಾರ ನಡೆದಿದೆ.
ಚರಂಡಿ ನೀರು ನುಗ್ಗಿದ ಪರಿಣಾಮ ಈ ನಾಲ್ಕು ಅಂತಸ್ತಿನ ಕಟ್ಟಡವು ಪಕ್ಕದ ಕಟ್ಟಡದ ಮೇಲೆ ವಾಲಿದೆ ಎನ್ನಲಾಗಿದೆ.
ಮುಹಮ್ಮದ್ ದಸ್ತಗಿರಿ ಎಂಬವರಿಗೆ ಸೇರಿದ ಕಟ್ಟಡವು ಮುಹಮ್ಮದ್ ಸಿರಾಜ್ ಎಂಬವರಿಗೆ ಸೇರಿದ ಮನೆ ಮೇಲೆ ವಾಲಿದೆ.
ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಚರಂಡಿ ನೀರು ನುಗ್ಗಿದೆ. ಇದರಿಂದ ಅಡಿಪಾಯ ಸಡಿಲಗೊಂಡು ಗೋಡೆ ವಾಲಿದೆ ಎನ್ನಲಾಗಿದೆ.
ಸಿವಿಲ್ ಇಂಜಿನಿಯರ್ ಆಗಿರುವ ಮನೆ ಮಾಲಕರಾದ ದಸ್ತಗಿರಿ ಕಳೆದ 14 ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಮನೆಯನ್ನು ಬಾಡಿಗೆ ನೀಡಿದ್ದರು. ಘಟನೆ ಬೆನ್ನಲ್ಲೇ ಮಾಲಕರನ್ನು ಕರೆಯಿಸಿ ವಿಚಾರಣೆ ಮಾಡಲಾಗಿದೆ.
ಸ್ಥಳಕ್ಕೆ ಪಾಲಿಕೆ ಪ್ರಭಾರ ಅಧ್ಯಕ್ಷ ಸಾಜಿದ್ ಸಮೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೆಸಿಬಿ ಮೂಲಕ ಮೇಲ್ಮಹಡಿ ತೆರವುಗೊಳಿಸಿ, ಬುನಾದಿ ದುರಸ್ತಿ ಮಾಡಲು ತೀರ್ಮಾನಕ್ಕೆ ಬರಲಾಗಿದೆ. ಇದರೊಟ್ಟಿಗೆ ಪಾಲಿಕೆ ಇಂಜಿನಿಯರ್ ಅವರಿಂದ ಪರಿಶೀಲನೆ ಮಾಡಿ ಸುಗಮವಾಗಿ ಚರಂಡಿ ನೀರು ಸಾಗಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಪ್ರಭಾರ ಅಧ್ಯಕ್ಷರು ತಿಳಿಸಿದ್ದಾರೆ.
ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸಿಸುತ್ತಿದ್ದು, ಕೆಳ ಮಹಡಿಯಲ್ಲಿ ವಾಣಿಜ್ಯ ಮಳಿಗೆಯಿದ್ದು, ಮುಂಜಾಗೃತಾ ಕ್ರಮವಾಗಿ ಮನೆ ಖಾಲಿ ಮಾಡಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.







