ದೇವದುರ್ಗ | ಹುತ್ತಕ್ಕೆ ಹಾಲು ಎರೆಯುವ ಬದಲು ಬಡ ಮಕ್ಕಳಿಗೆ ವಿತರಿಸಿ ಬಸವ ಪಂಚಮಿ ಆಚರಿಸಲು ಕರೆ

ದೇವದುರ್ಗ: ನಾಗರ ಪಂಚಮಿ ಸಂದರ್ಭದಲ್ಲಿ ಹುತ್ತ ಅಥವಾ ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು, ಪೌಷ್ಟಿಕಾಂಶಯುಕ್ತ ಹಾಲನ್ನು ಬಡ ಹಾಗೂ ಅಗತ್ಯವಿರುವ ಮಕ್ಕಳಿಗೆ ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಬೇಕು ಎಂದು ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ರಂಗಪ್ಪನಾಯಕ ಬುಂಕಲದೊಡ್ಡಿ ಹೇಳಿದರು.
ಜಾಲಹಳ್ಳಿ ಸಮೀಪದ ಚಿಂಚೋಡಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಅದನ್ನು ಹುತ್ತ ಅಥವಾ ಕಲ್ಲಿನ ನಾಗರ ಮೂರ್ತಿಗೆ ಎರೆಯುವ ಮೂಲಕ ವ್ಯರ್ಥ ಮಾಡುವ ಬದಲು ಹಸಿದ ಮಕ್ಕಳಿಗೆ ನೀಡುವುದು ಹೆಚ್ಚು ಮಾನವೀಯ ಕಾರ್ಯ ಎಂದರು.
ಬಸವಣ್ಣನವರ “ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರು” ಎಂಬ ವಚನದ ಆಶಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವಿವಿಧೆಡೆ ಬಸವ ಪಂಚಮಿ ಆಚರಿಸಲಾಗುತ್ತಿದೆ. ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಸಂದೇಶವನ್ನು ಅಭಿಯಾನ ಸಾರುತ್ತಿದೆ ಎಂದು ತಿಳಿಸಿದರು.
“ಹಾಲನ್ನು ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ ಕುಡಿಯಲು ನೀಡಿ. ಹಬ್ಬದ ಆಚರಣೆಯೊಂದಿಗೆ ಮಾನವೀಯತೆ ಹಾಗೂ ವೈಚಾರಿಕತೆಯನ್ನು ಬೆಳೆಸೋಣ” ಎಂಬ ಸಂದೇಶದೊಂದಿಗೆ ಬಸವ ಪಂಚಮಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿವಗುಂಡಪ್ಪ ಕೊಂಡಿ ಮಾಜಿ ಸದಸ್ಯರು, ಭೀಮಣ್ಣ ಹಾವಿನಳ, ಚಂದ್ರು ನಾಯಕ, ಹೋಬಳಿ ಸಂಚಾಲಕ ಶಿವಪ್ಪ ಕಂಪುರು, ಶ್ರೀಮೌನ ಸಾಗರ, ಚಲುವಾದಿ ಮಹಾಸಭಾ ಹೋಬಳಿ ಅಧ್ಯಕ್ಷರು ಡಿ ಎಮ್ ಜ್ಯೋತಿ, ಮಹಿಳಾ ಸಂಚಾಲಕಿ ಶಾಂಭವಿ ಹಿರೇಮಠ್, ಉಮಾದೇವಿ ದೊಡ್ಡಮನಿ , ಮರೆಮ್ಮ ಮುಂಡರಗಿ, ಮಹಾದೇವಮ್ಮ ಮುಂದಿನಮನಿ, ಯಮುನಮ್ಮ ಮಂಗಿಹಾಳ, ರೇಣುಕಮ್ಮ, ದುರುಗಮ್ಮ, ಭಾರತಿ, ರಮೇಶ್ ಕಳ್ದೆವನಹಳ್ಳಿ ಶಿವರಾಜ ಮುಂಡರಗಿ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.






