Devadurga | ಎಸ್ಐಆರ್ ಮೂಲಕ ಮತದಾನದ ಹಕ್ಕು ಕಸಿಯುವ ಯತ್ನ: ಎಂ.ಆರ್.ಭೇರಿ ಆರೋಪ

ದೇವದುರ್ಗ: ಎಸ್ಐಆರ್ ಪ್ರಕ್ರಿಯೆಯ ಮೂಲಕ ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಹಾಗೂ ಬಡಜನರ ಮತದಾನದ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್ ಹಾಗೂ ದಲಿತ ಮುಖಂಡ ಎಂ.ಆರ್.ಭೇರಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಓದಿಲ್ಲದವರಾಗಿರಲಿ, ಆಸ್ತಿ ಇಲ್ಲದವರಾಗಿರಲಿ, ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಾಗಿರಲಿ, ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇದೆ ಎಂಬುದು ಭಾರತೀಯ ಸಂವಿಧಾನದ ಸಮಾನತೆಯ ಘೋಷಣೆ. ಆದರೆ ಸಂಘ ಪರಿವಾರದ ಶಕ್ತಿಗಳು ಮಹಿಳೆಯರು, ಅನಕ್ಷರಸ್ಥರು, ನಿರ್ಗತಿಕರು ಹಾಗೂ ದಮನಿತ ವರ್ಗಗಳಿಗೆ ಮತದಾನದ ಹಕ್ಕು ನೀಡಬಾರದು ಎಂಬ ಮನೋಭಾವ ಹೊಂದಿದ್ದವು,” ಎಂದು ಆರೋಪಿಸಿದರು.
ಮೇ 30ರಂದು ವಿವಿಧ ಪ್ರಗತಿಪರ ಸಂಘಟನೆಗಳು, ಚಿಂತಕರು ಹಾಗೂ ಸಾಹಿತಿಗಳ ನೇತೃತ್ವದಲ್ಲಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
“ರಾಜಕೀಯ ದುರುದ್ದೇಶದಿಂದ ಎಸ್ಐಆರ್ ಪ್ರಕ್ರಿಯೆ ಬಳಸಲಾಗುತ್ತಿದೆ. ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹಾಗೂ ವಿರೋಧ ಪಕ್ಷಗಳ ಮತಗಳನ್ನು ಅಳಿಸಲು ಕುಟಿಲ ತಂತ್ರ ರೂಪಿಸಿದೆ,” ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರು ಅಳಿಸುವಿಕೆ ನಡೆದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಗೆಲುವು ಸಾಧಿಸಿರುವುದನ್ನು ಉದಾಹರಿಸಿದ ಅವರು, ಕರ್ನಾಟಕದಲ್ಲಿಯೂ ಇದೇ ಮಾದರಿಯ ಪರಿಸ್ಥಿತಿ ಮರುಕಳಿಸದಂತೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.
“ಹೊಸ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು 11 ದಾಖಲೆಗಳನ್ನು ಕಡ್ಡಾಯಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಸಂಕೀರ್ಣ ಪರಿಸ್ಥಿತಿ ನಿರ್ಮಿಸಲಾಗಿದೆ. ಈ ಪ್ರಕ್ರಿಯೆಯಿಂದ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿಗಳು, ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ಹೇಳಿದರು.
ಮೇ 30ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ್ ಬಿಲ್ಲಿದವ್, ಮೋಹನ್ ಬಲ್ಲಿದವ್, ಫೇರೋಜ್ ಖಾನ್, ಇಮಾಮ್ ಗೌರಂಪೇಟೆ, ಶಿವರಾಜ ರುದ್ರಾಕ್ಷಿ, ಹನುಮಂತ್ರಾಯ ದೊರೆ ಸೇರಿದಂತೆ ಇತರರು ಇದ್ದರು.






