ದೇವದುರ್ಗ | ಕನಕದಾಸರ ಕುರಿತ ಮುಕ್ಕಣ್ಣ ಕರಿಗಾರರ ಮೂರು ಕೃತಿಗಳ ಲೋಕಾರ್ಪಣೆ

ದೇವದುರ್ಗ: ಭಾರತೀಯರ ಹೊಸ ವರ್ಷವಾದ ಪರಾಭವ ಸಂವತ್ಸರದ ಯುಗಾದಿ ಪಾಡ್ಯದಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಕ್ಷೇತ್ರನಾಥ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಮುಕ್ಕಣ್ಣ ಕರಿಗಾರರ ರಚನೆಯ ಕನಕದಾಸರ ಕುರಿತ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಮಾರ್ಚ್ 19ರಂದು ಶ್ರೀಕ್ಷೇತ್ರ ಕೈಲಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಗಾಯತ್ರಿ ಶಕ್ತಿ ಪೀಠದ ಪೀಠಾಧ್ಯಕ್ಷರಾದ, ಬಳ್ಳಾರಿ ಮುತ್ತ್ಯಾ ಎಂದು ಪ್ರಸಿದ್ಧರಾಗಿರುವ ಶಿವಯ್ಯ ಸ್ವಾಮಿಗಳು ಈ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಲೋಕಾರ್ಪಣೆಯಾದ ಕೃತಿಗಳಲ್ಲಿ ‘ಕನಕ ದರ್ಶನ’ ಕವನ ಸಂಕಲನ, ‘ಲೋಕಬಂಧು ಕನಕದಾಸರು’ ಹಾಗೂ ‘ಪುರಂದರದಾಸರ ಹೆಸರಿನಲ್ಲಿರುವ ಕನಕದಾಸರ ಕೀರ್ತನೆಗಳು’ ಎಂಬ ಮೂರು ಪ್ರಮುಖ ಪುಸ್ತಕಗಳು ಸೇರಿವೆ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮುಕ್ಕಣ್ಣ ಕರಿಗಾರ ಅವರ ಶಿಷ್ಯ ಷಣ್ಮುಖ ಹೂಗಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾಶೈವಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ದೇಸಾಯಿ, ಬಸವರಾಜ ಭೋಗಾವತಿ,ಶಹಾಪುರದ ಕಲಾನಿಕೇತನ ಟ್ರಸ್ಟಿನ ಅಧ್ಯಕ್ಷರಾದ ಕವಿ ಸಾಹಿತಿ ಬಸವರಾಜ ಸಿನ್ನೂರ, ಪ್ರಗತಿಪರ ಚಿಂತಕ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರೇಶ ದೇಸಾಯಿ, ಪತ್ರಕರ್ತ ಏಳುಬಾವೆಪ್ಪಗೌಡ,ಗೋಪಾಲ ಮಸೀದಪುರ, ಬಾಬುಗೌಡ ಯಾದವ್ ಸುಲ್ತಾನಪುರ, ಮೃತ್ಯುಂಜಯ ಯಾದವ್,ಸಿದ್ರಾಮಯ್ಯಸ್ವಾಮಿ ರಘುನಾಥನಹಳ್ಳಿ, ವಿರುಪಾಕ್ಷಿ ಗೌಡ ಹೊನ್ನಟಗಿ, ಷಣ್ಮುಖ ಹೂಗಾರ,ಬಸವಲಿಂಗ ಕರಿಗಾರ,ದೇವರಾಜ ಕರಿಗಾರ,ರಂಗನಾಥ ಮಸೀದಪುರ, ವೆಂಕಟೇಶ ಮಸೀದಪುರ, ರಾಮಕೃಷ್ಣ ಯಾದವ್,ತಿಪ್ಪಯ್ಯ ಭೋವಿ, ಶಿವಕುಮಾರ್ ವಸ್ತಾರ ಮೊದಲಾದವರು ಉಪಸ್ಥಿತರಿದ್ದರು.






