Raichur | ರೈತರ ಹೋರಾಟ, ಭೂಮಿ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪ: ಗಣಿ ವಾಹನಗಳನ್ನು ತಡೆದು ರಸ್ತೆ ತಡೆ ನಡೆಸಿದ ರೈತರು

ರಾಯಚೂರು: ಹಟ್ಟಿ ಚಿನ್ನದ ಗಣಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹಾಗೂ ರೈತರ ಹೋರಾಟ, ಭೂಮಿ ಬಗ್ಗೆ ಪತ್ರಿಕೆಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಗಣಿ ಅಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಿರತ ರೈತರು ಹಟ್ಟಿ- ರಾಯಚೂರು ಮುಖ್ಯ ರಸ್ತೆಯಲ್ಲಿ ಗಣಿ ವಾಹನಗಳು ತಡೆದು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಹಟ್ಟಿ ಚಿನ್ನದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಹಟ್ಟಿ ಚಿನ್ನದ ಗಣಿಯಿಂದ ಊಟಿ ಹೀರಬುದ್ದಿನಿ ಗಣಿ ಗೆ ಹೊರಡುವ ಹಟ್ಟಿ ಚಿನ್ನದ ಗಣಿ ಕಂಪನಿಯ ಬಸ್ ಗಳನ್ನು ತಡೆದು ರಸ್ತೆ ರೋಕಾ ಹೋರಾಟ ನಡೆಸಿದರು.
ಸುಳ್ಳು ಮಾಹಿತಿ ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಹಟ್ಟಿ ಚಿನ್ನದ ಅಧಿಕಾರಿಗಳ ಮಾಡುತ್ತಿದ್ದಾರೆ. ಸುಳ್ಳು ಮಾಹಿತಿ ಕೊಟ್ಟ ಹ.ಚಿ.ಗಣಿ ಅಧಿಕಾರಿ ಪ್ರಭಾರಿ ಪ್ರಧಾನ ವ್ಯವಸ್ಥಾಪಕರು ಕೂಡಲೇ ಸ್ಥಳಕ್ಕೆ ಬಂದು ಕ್ಷಮೆಯಾಚಿಸಬೇಕೆಂದು ರೈತರು ಪಟ್ಟು ಹಿಡಿದರು.
ಅವರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿದ್ದ ಕಾರಣ ದೂರವಾಣಿ ಮುಖಾಂತರ ಪ್ರತಿಭಟನಾ ರೈತರ ಕ್ಷಮೆಯಾಚಿಸಿದರು.
ತಮ್ಮ ಬೇಡಿಕೆಗಳು ಆದಷ್ಟು ಬೇಗ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿ ರಸ್ತೆ ರೋಕಾ ಹೋರಾಟವನ್ನು ಸ್ಥಗಿತಗೊಳಿಸಿದರು.






