ದೇವದುರ್ಗದಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ದೇವದುರ್ಗ: ಕಳೆದ 30 ದಿನಗಳ ಉಪವಾಸ ಪೂರ್ಣಗೊಳಿಸಿದ ಬಳಿಕ ಮುಸ್ಲಿಂ ಬಾಂಧವರು ಶನಿವಾರ ಹೊಸ ಉಡುಪುಗಳನ್ನು ಧರಿಸಿ ಈದುಲ್ ಫಿತ್ರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಪಟ್ಟಣದ ಜಾಮಿಯಾ ಮಸೀದಿಯಲ್ಲಿಯೂ ಹಾಫೀಜ್ ಜಹೀರ ಅಬ್ಬಾಸ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಈದ್ಗಾ ಮೈದಾನದಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರು ಹಾಫೀಜ್ ಜುನೇದ್ ಅವರು, ಈದುಲ್ ಫಿತ್ರ್ ಹಬ್ಬವು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಮಾಝ್, ಕುರಾನ್ ಪಠಣ ಮಾಡುತ್ತಾ, ತಂದೆ-ತಾಯಿಗೆ ಗೌರವ ನೀಡುವುದು ಅತ್ಯಂತ ಮುಖ್ಯ ಎಂದು ಧಾರ್ಮಿಕ ಸಂದೇಶ ನೀಡಿದರು. ಮಕ್ಕಳಿಗೆ ಮೊದಲಿನಿಂದಲೇ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾರ್ಥನೆಗೆ ಆಗಮಿಸಿದ ಮುಸ್ಲಿಂ ಸಮುದಾಯದವರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಅವರು ಭೇಟಿ ನೀಡಿ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ರಂಗಪ್ಪ ಗೋಸಲ್, ಶರಣಗೌಡ ಗೌರಂಪೇಟ್, ಬಾಪೂಗೌಡ ಚಿಕ್ಕಹೊನ್ನಕುಣಿ, ಬಸನಗೌಡ, ವಿನೋದ ಕುಮಾರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




