ರಾಯಚೂರಿನಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ರಾಯಚೂರು : ಈದುಲ್ ಫಿತ್ರ್ ಹಬ್ಬದ ಅಂಗವಾಗಿ ನಗರದ ಅರಬ್ ಮೊಹಲ್ಲಾ ಹಾಗೂ ಯಕ್ಲಾಸಪೂರು ಬಡಾವಣೆಯಲ್ಲಿನ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ನಮಾಝ್ ಮಾಡಿ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅರಬ್ ಮೊಹಲ್ಲಾ ಬಡಾವಣೆಯ ಈದ್ಗಾ ಮೈದಾನದಲ್ಲಿ 9 ಗಂಟೆಗೆ ಹಾಗೂ ಯಕ್ಲಾಸಪೂರ ಈದ್ಗಾ ಮೈದಾನದಲ್ಲಿ 8:30ರಿಂದ 9;30 ಗಂಟೆಯ ವರೆಗೆ ಪ್ರಾರ್ಥನೆ ಸಲ್ಲಿಸಿದರು.
ಇಸ್ಲಾಮಿಕ್ ಕ್ಯಾಂಲಡರ್ ನ ರಮಝಾನ್ ತಿಂಗಳ ಪೂರ್ತಿ ಉಪವಾಸ ಆಚರಿಸಿದ ಬಳಿಕ ಶವ್ವಾಲ್ ತಿಂಗಳ ಮೊದಲನೇ ದಿನ ಈ ಹಬ್ಬ ಆವರಿಸಲಾಗುತ್ತಿದ್ದು ಸಾಮೂಹಿಕ ಪ್ರಾರ್ಥನೆಯಲ್ಲಿ ನಮಾಝ್ ಮಾಡಿ ರಮಝಾನ್ ಹಬ್ಬಕ್ಕೆ ತೆರೆ ಎಳೆದರು. ಮೌಲ್ವಿಗಳು ಕುರಾನ್ ಪಠಣ ಮಾಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಕುಡಿಯುವ ನೀರು ಹಾಗೂ ಕೆಲವರು ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಗಣ್ಯರಿಂದ ಶುಭಾಶಯ :
ಈದ್ಗಾ ಮೈದಾನದ ಬಳಿ ಹಾಕಿದ ಶಾಮಿಯಾನದಲ್ಲಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ ಸೇರಿದಂತೆ ಗಣ್ಯರು ನಮಾಝ್ ಕಾರ್ಯಕ್ರಮ ಆಲಿಸುತ್ತಾ ನಂತರ ನೆರೆದ ಮುಸ್ಲಿಂ ಬಾಂಧವರ ಜೊತೆಗೆ ಆಲಿಂಗನ ಮಾಡಿ ಈದ್ ಮುಬಾರಕ್ ಎನ್ನುತ್ತಾ ಶುಭ ಕೋರಿದರು.
ಅರಬ್ ಮೊಹಲ್ಲಾ ಬಳಿಕ ಈದ್ಗಾ ಮೈದಾನ ಚಿಕ್ಕದಾಗಿರುವ ಕಾರಣ ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆಯ ಮೇಲೆ ನಮಾಝ್ ಮಾಡಲಾಗುತ್ತಿತ್ತು ಇದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಗಿತ್ತು ಹೀಗಾಗಿ ಮತ್ತೊಂದು ಈದ್ಗಾ ಮೈದಾನದ ಬೇಡಿಕೆಯಂತೆ ನಗರದ ಹೊರವಲಯದ ಯಕ್ಲಾಸಪೂರನಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ವರ್ಷ ಅರೆಬರೆ ಕಾಮಗಾರಿ ಮಾಡಿದ್ದರೂ ನಮಾಝ್ ಮಾಡಲಾಗಿತ್ತು. ಈ ಬಾರಿ ಸಂಪೂರ್ಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಹೀಗಾಗಿ ವಾಹನ ನಿಲುಗಡೆಗಾಗಿ ಜಾಲಿ ಗಿಡಗಳನ್ನು ಸ್ವಚ್ಛಗೊಳಿಸಿ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.






