ಸರಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಸರಕಾರಿ ನೌಕರರ ಸಂಘದಿಂದ ಅಭಿನಂದನೆ
ರಾಯಚೂರು : ಅ.1ರಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಈ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯೋಜನೆ ಜಾರಿಗೆ ಶ್ರಮಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ರಾಯಚೂರು ಜಿಲ್ಲಾ ಶಾಖೆಯ ಜಿಲ್ಲಾ ಅಧ್ಯಕ್ಷ ಶ್ರೀಕೃಷ್ಣ ಶಾವಂತಗೇರಿ, ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳು ವ್ಯಕ್ತಪಡಿಸಲಾಯಿತು.
ಈ ಯೋಜನೆಯ ಪ್ರಮುಖ ಅಂಶಗಳು :
• ಒಂದೇ ಕುಟುಂಬದಲ್ಲಿ ಇಬ್ಬರು ಪತಿ–ಪತ್ನಿ ಸರ್ಕಾರಿ ನೌಕರರಾಗಿದ್ದರೆ, ಒಬ್ಬರಿಗೇ ಮಾತ್ರ ವೇತನದಲ್ಲಿ ವಂತಿಕೆ ನೀಡಲಾಗುವುದು.
• ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ಪಿಂಚಣಿದಾರರ ತಂದೆ–ತಾಯಿಯ ಮಾಸಿಕ ಆದಾಯ ಮಿತಿಯನ್ನು 17,000 ರೂಪಾಯಿಯಿಂದ 27,000 ರೂಪಾಯಿಗಳಿಗೇರಿಸಿದೆ.
• ವಿವಾಹಿತ ಮಹಿಳಾ ನೌಕರರ ಪಿತೃ–ಮಾತೃ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.
• ಮಾಸಿಕ ವಂತಿಕೆ ನೀಡಲು ಇಚ್ಚಿಸದ ನೌಕರರು 18/10/2025 ರೊಳಗೆ ಸಂಬಂಧಿತ ಡಿಡಿಓಗಳಿಗೆ ಲಿಖಿತ ಅರ್ಜಿ ಸಲ್ಲಿಸಬೇಕು.
• ಯೋಜನೆಯ ಸೌಲಭ್ಯ ಪಡೆಯಲು ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿದ ವಂತಿಕೆಯನ್ನು ಅಕ್ಟೋಬರ್ 2025 ಮಾಹೆಯಿಂದ ನೀಡಬೇಕು.
• ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಮತ್ತು 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಎಲ್ಲಾ ಅಧಿಕಾರಿ/ನೌಕರರು HRMS1 ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಶ್ರೀಕೃಷ್ಣ ಶಾವಂತಗೇರಿ ಸಲಹೆ ನೀಡಿದ್ದಾರೆ.







