ಲಿಂಗಸಗೂರು: ಬೀದಿಬದಿ ವ್ಯಾಪಾರಸ್ಥರ ತೆರವು ವಿರೋಧಿಸಿ ಜೂನ್ 1 ರಂದು ಅನಿರ್ಧಿಷ್ಟಾವಧಿ ಧರಣಿ

ಲಿಂಗಸಗೂರು: ಬೀದಿಬದಿ ವ್ಯಾಪಾರಸ್ಥರನ್ನು ಕಾನೂನು ಬಾಹಿರವಾಗಿ, ದೌರ್ಜನ್ಯದಿಂದ ತೆರವುಗೊಳಿಸಿರುವ ಪುರಸಭೆ ಹಾಗೂ ತಾಲೂಕು ಆಡಳಿತದ ನೀತಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಜೂನ್ 1 ರಿಂದ ಪುರಸಭೆ ಕಾರ್ಯಾಲಯದ ಮುಂದೆ ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಗೌರವ ಮಾರ್ಗದರ್ಶಿಗಳು ಹಾಗೂ ಸಿಪಿಐ (ಎಂ.ಎಲ್) ರೆಡ್ಸ್ಟಾರ್ ಪಾಲಿಟಿ ಬ್ಯೂರ್ ಸದಸ್ಯರಾದ ಆರ್.ಮಾನಸಯ್ಯ ತಿಳಿಸಿದರು.
ಪಟ್ಟಣದ ಬೀದಿಬದಿ ವ್ಯಾಪಾರಸ್ಥರನ್ನು ಕಾನೂನು ಬಾಹಿರವಾಗಿ ತೆರವುಗೊಳಿಸಿರುವ ಪುರಸಭೆ ಹಾಗೂ ತಾಲೂಕು ಆಡಳಿತ ಜನವಿರೋಧಿ ನೀತಿಯನ್ನು ಉಗ್ರವಾಗಿ ಖಂಡಿಸುತ್ತೇವೆ. ಅಲ್ಲದೇ ಪಟ್ಟಣದ ಅತಿಥಿ ಹೋಟಲ್ ದಿಂದ ಲಕ್ಷ್ಮಿ ದೇವಸ್ಥಾನ, ಮುದಗಲ್ ರಸ್ತೆ, ಗಡಿಯಾರ ವೃತ್ತ ಸೇರಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಜಂಟಿ ಸರ್ವೆ ಮಾಡಬೇಕು. ರಸ್ತೆ ಅತಿಕ್ರಮಿಸಿಕೊಂಡ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು. ಕೇವಲ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದರೆ ಸಾಲದು, ಪಟ್ಟಣದಲ್ಲಿರುವ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಬೇಕು. ಅಲ್ಲದೇ ಪಟ್ಟಣದಲ್ಲಿರುವ 200 ಲೇಔಟ್ಗಳಲ್ಲಿನ ಉದ್ಯಾನವನ ಹಾಗೂ ನಾಗರೀಕ ಸೌಲಭ್ಯ ಜಾಗದಲ್ಲಿ ನಿರ್ಮಿಸಿಕೊಂಡಿರುವ ಅಕ್ರಮ ಕಟ್ಟಡಗಳನ್ನು ಸಹ ತೆರವುಗೊಳಿಸಬೇಕು. ಬೀದಿಬದಿ ವ್ಯಾಪಾರಸ್ಥರನ್ನು ಪುನಃ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಯಾಕೆಂದರೆ ಸರ್ವೋಚ್ಛ ನ್ಯಾಯಾಲಯದ ಪ್ರಕಾರ ಬೀದಿಗಳು ಬೀದಿಬದಿ ವ್ಯಾಪಾರಸ್ಥರ ಜೀವ ನಾಡಿಗಳು ಎಂದು ಹೇಳಿದೆ. ಆದರೆ ಅದೇ ಜೀವ ನಾಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿರುವುದು ಸಂಪೂರ್ಣ ಕಾನೂನಿನ ಉಲ್ಲಂಘನೆಯಾಗಿದೆ. ಕಾರಣ ಕಾನೂನು ಉಲ್ಲಂಘಿಸಿ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಹಾಗೂ ಪುನಃ ಅದೇ ಸ್ಥಳದಲ್ಲಿ ಅವರ ಡಬ್ಬಾ ಅಂಗಡಿಗಳನ್ನು ಹಾಗೂ ಬಂಡಿಗಳನ್ನು ಮರುಸ್ಥಾಪಿಸಬೇಕು ಅದಕ್ಕೆ ತಗಲುವ ವೆಚ್ಚವನ್ನು ಪುರಸಭೆಯ ಭರಿಸಬೇಕೆಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಸಂಘದ ಸಂಚಾಲಕರು ಹಾಗೂ ನೂರಾರು ಮಾರಾಟಗಾರರು ಇದ್ದರು.




