ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಎಡ ಪಕ್ಷಗಳಿಂದ ರಾಯಚೂರಿನಲ್ಲಿ ಪ್ರತಿಭಟನೆ

ರಾಯಚೂರು: ಇಸ್ರೇಲ್ ದೇಶ ಫೆಲೆಸ್ತೀನ್ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಮಾನವ ಹತ್ಯಾಕಾಂಡವನ್ನು ಖಂಡಿಸಿ ಎಡಪಕ್ಷಗಳ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಇಸ್ರೇಲ್ ನಡೆಸುತ್ತಿರುವ ಬಾಂಬುಗಳ ದಾಳಿ, ಮಿಲಿಟರಿ ಆಕ್ರಮಣದಿಂದ 55 ಸಾವಿರಕ್ಕೂ ಅಧಿಕ ಫೆಲೆಸ್ತೀನ್ ಯರು ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ಗಾಯಾಗೊಂಡಿದ್ದಾರೆ. . ಅಗತ್ಯ ಮೂಲಸಂರಚನೆ, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತ ವಸತಿ ಕೇಂದ್ರಗಳನ್ನು ಗುರಿಯಿಟ್ಟು ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಫೆಲೆಸ್ತೀನ್ ಹಿಂದೆಂದೂ ಕಂಡರಿಯದ ಮಾನವ ದುರಂತವನ್ನು ಅನುಭವಿಸುತ್ತಿದೆ. ಇದು ಜನಾಂಗ ಹತ್ಯೆಯಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಗಾಝಾ ಪ್ರದೇಶಕ್ಕೆ ಆಹಾರ ಪದಾರ್ಥಗಳನ್ನು ಇಸ್ರೇಲ್ ಬಿಡುತ್ತಿಲ್ಲ ಎಂಬುದು ಆತಂಕಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಝಾ ಮೇಲಿನ ಆಕ್ರಮಣ ಮತ್ತು ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ಇಸ್ರೇಲನ್ನು ಜನಾಂಗೀಯ ದ್ವೇಷದ ಪ್ರಭುತ್ವವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೂಡಲೇ ಇಸ್ರೇಲ್ ಜನಾಂಗೀಯ ಹತ್ಯಾಕಾಂಡವನ್ನು ನಿಲ್ಲಿಸಿ ಯುದ್ಧ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸಿದರು.
ಚಂದ್ರಶೇಖರ ಕ್ಯಾತ್ನಟ್ಟಿ, ಯು.ಬಸವರಾಜ, ವರಲಕ್ಷ್ಮಿ, ಕೆ.ಜಿ.ವೀರೇಶ, ಶರಣಬಸವ, ವೀರೇಶ ಎನ್.ಎಸ್., ಶರಣಪ್ಪ ಉದ್ಬಾಳ, ಮಹೇಶ ಸಿ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







