ಲಿಂಗಸುಗೂರು | ನರೇಗಾ ಕೂಲಿ ಕೆಲಸ ವೇಳೆ ಕುಸಿದು ಬಿದ್ದು ಮಹಿಳೆ ಮೃತ್ಯು

ಸುಕನ್ಯಾ ಮಹಾವೀರ ಸಿಂಗ್
ಲಿಂಗಸುಗೂರು : ತಾಲೂಕಿನ ಚಿಕ್ಕ ನಗನೂರು ಗ್ರಾಮದಲ್ಲಿ ರವಿವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ( ನರೇಗಾ) ಯ ಕೆಲಸದ ವೇಳೆ ಮಹಿಳೆಯೊರ್ವರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಸುಕನ್ಯಾ ಮಹಾವೀರ ಸಿಂಗ್ (50) ಎಂದು ಗುರುತಿಸಲಾಗಿದೆ.
ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ನಗನೂರು ಗ್ರಾಮದ ಶಿವರಾಜ ದೇಸಾಯಿ ಅವರ ಹೊಲದ ಹತ್ತಿರದ ನಾಲಾ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದ ವೇಳೆ ಮಹಿಳೆಗೆ ತೀವ್ರ ಬಿಸಿಲಿಗೆ ತಲೆ ಸುತ್ತು ಬಂದು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಮೃತ ಮಹಿಳೆ ಮನೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಜೆಇ ರಾಘವೇಂದ್ರ ಹಾಗೂ ಬಿಲ್ ಕಲೆಕ್ಟರ್ ವೆಂಕಪ್ಪ ಚಿಕ್ಕ ನಗನೂರು ಭೇಟಿ ನೀಡಿದ್ದಾರೆ.
ಈ ವೇಳೆ ಘಟನೆ ಕುರಿತು ಟಿಯುಸಿಐ ಸಂಘಟನೆ ಮುಖಂಡರಾದ ಶಾಂತಕುಮಾರ ಚಿಕ್ಕನಗನೂರು ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮೃತ ಮಹಿಳೆ ಸುಕನ್ಯಾ ಮಹಾವೀರ ಸಿಂಗ್ ನರೇಗಾ ಕೆಲಸಕ್ಕೆ ಹಾಜರಾಗಿ ,ಎನ್ ಎಂ ಎಂ ಎಸ್ ನಲ್ಲಿ ಹಾಜರಿ ಹಾಕಿ, ಕಾಮಗಾರಿ ಮಾಡುವ ವೇಳೆಯಲ್ಲಿ ಧೀಡೀರ್ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತಳು ನಿರ್ಗತಿಕ ,ಕಡು ಬಡತನದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು. ಮೃತರಿಗೆ ಒಬ್ಬ ಮಗ ನಿದ್ದು, ನೊಂದ ಈ ಬಡ ಕುಟುಂಬ ನಿರ್ವಹಣೆಗೆ ಸರಕಾರದಿಂದ ಕನಿಷ್ಠ 2 ಲಕ್ಷ ರೂ. ಪರಿಹಾರ ಧನ ನೀಡುವಂತೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.







