Lingsugur | ಶಿಕ್ಷಕರ ಕೊರತೆ ಆರೋಪಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಹಟ್ಟಿ ಚಿನ್ನದ ಗಣಿ (ಲಿಂಗಸುಗೂರು), ಸೆ.19: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಡಾ. ಇ.ಎ. ಸಿಂಮೇಡ್ಸ್ ಶಾಲೆಯಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಶಿಕ್ಷಕರ ಕೊರತೆಯಿದ್ದು, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೂ ತಾರತಮ್ಯ ಮಾಡಿ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳನ್ನು ಬೋಧಿಸಲು ಶಿಕ್ಷಕರಿಲ್ಲದ ಕಾರಣ ತಮ್ಮ ಕಲಿಕೆಗೆ ತೊಂದರೆಯಾಗುತ್ತಿದೆ. ಹಲವು ಬಾರಿ ಸಮಸ್ಯೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಈ ವೇಳೆ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಾಲಕರು ಮಾತನಾಡಿ, ಸಮಸ್ಯೆ ಕುರಿತು ಹಲವು ಬಾರಿ ಆಡಳಿತ ಮಂಡಳಿಯ ಗುರುಪ್ರಸಾದ್ ಜಾರ್ಜ್ ಅವರಿಗೆ ತಿಳಿಸಿದ್ದರೂ, “ಯಾರಿಗೆ ಬೇಕಾದರೂ ಹೇಳಿ, ನಮಗೆ ಸಂಬಂಧವಿಲ್ಲ” ಎಂಬ ರೀತಿಯ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು. ಜೊತೆಗೆ ಹೆಚ್ಚಿನ ಶುಲ್ಕ ಪಾವತಿಸುವಂತೆ ದೂರವಾಣಿ ಮೂಲಕ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಶಾಲೆಯ ಕೆಲ ಶಿಕ್ಷಕರಿಗೆ ವೇತನ ಪಾವತಿಸದ ಕಾರಣ ಅವರು ಶಾಲೆ ತೊರೆದಿದ್ದಾರೆ. ಇದರಿಂದಲೇ ಶಿಕ್ಷಕರ ಕೊರತೆ ಉಂಟಾಗಿದೆ ಎಂದು ಪಾಲಕರು ಹೇಳಿದರು. ಕಲಿಕಾ ಪುಸ್ತಕಗಳನ್ನು ತರಿಸುವುದಾಗಿ ಹಣ ಪಡೆದುಕೊಂಡಿದ್ದರೂ ಇದುವರೆಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿಲ್ಲ. ಇದರಿಂದ ಮಕ್ಕಳ ಕಲಿಕೆಗೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮೌನೇಶ ಕಾಕಾನಗರ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳ ಸಮಸ್ಯೆ ಬಗೆಹರಿಸಬೇಕು. ನಿರ್ಲಕ್ಷ್ಯ ಮುಂದುವರಿದರೆ ಶಾಲೆಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧವೂ ಪಾಲಕರು ಅಸಮಾಧಾನ ವ್ಯಕ್ತಪಡಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು, ಶಾಲೆಯಲ್ಲಿ ಉತ್ತಮವಾಗಿ ಪಾಠ ಬೋಧಿಸುವ ಶಿಕ್ಷಕರನ್ನು ತೆಗೆದುಹಾಕಲಾಗುತ್ತಿದೆ. ಮುಸ್ಲಿಂ ಶಿಕ್ಷಕಿಯೊಬ್ಬರಿಗೆ ಜಾತಿ ಕಾರಣ ನೀಡಿ ಶಾಲೆ ಬಿಡುವಂತೆ ಹೇಳಲಾಗುತ್ತಿದೆ ಎಂದು ಆರೋಪಿಸಿದರು. ಈ ಆರೋಪಗಳ ಬಗ್ಗೆ ಸ್ವತಂತ್ರ ದೃಢೀಕರಣ ಅಥವಾ ಆಡಳಿತ ಮಂಡಳಿಯ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಸಿಂಚನಾ, ಜ್ಯೋತಿ, ಅಭಿಷೇಕ, ಅಮರೇಶ, ಸತೀಶ್, ಅವಿನಾಶ್, ಮಾಲತಿ, ಕುಮಾರ, ವಿನೋದ್, ಮೌನೇಶ್ ಸೇರಿದಂತೆ ಪಾಲಕರು ಭಾಗವಹಿಸಿದ್ದರು.






