ಮಾನ್ವಿ | ಕಾರು-ಬೈಕ್ ನಡುವೆ ಭೀಕರ ಅಪಘಾತ : ಇಬ್ಬರು ಮೃತ್ಯು

ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಶನಿವಾರ ಸಂಜೆ ಬೈಕ್ ಹಾಗೂ ಎರಡು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಬೈಕ್ ಸವಾರ ಶೇಖರಪ್ಪ (25) ಹಾಗೂ ಆತನ ಸಹೋದರಿ ಮರಿಯಮ್ಮ(28) ಎಂದು ಗುರುತಿಸಲಾಗಿದೆ. ಎರಡು ವರ್ಷದ ಮಗಳು ಗೌತಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕರೆಗುಡ್ಡ ಗ್ರಾಮದಲ್ಲಿ ಶನಿವಾರ ಜಾತ್ರೆ ಇತ್ತು. ಹೀಗಾಗಿ ಕರೆಗುಡ್ಡ ಗ್ರಾಮದ ನಿವಾಸಿಯಾದ ಶೇಖರಪ್ಪ ತನ್ನ ಅಕ್ಕನನ್ನು ಮರಿಯಮ್ಮನ ಜಾತ್ರೆಗೆ ಕರೆದುಕೊಂಡಲು ಬರಲು ವಲ್ಕಂದಿನ್ನಿ ಗ್ರಾಮಕ್ಕೆ ತೆರಳಿದ್ದರು.
ಅಲ್ಲಿಂದ ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ ಕೊಪ್ಪಳದ ದೇಸಾಯಿ ಕ್ಯಾಂಪ್ಗೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಚಲಿಸುತ್ತಿರುವ ಸಂದರ್ಭದಲ್ಲಿ ಇವರ ಬೈಕ್ಗೆ ಢಿಕ್ಕಿ ಹೊಡೆದಿದೆ. ಬಳಿಕ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಆ ಕಾರು ಪಲ್ಟಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾನ್ವಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







