ರಾಯಚೂರು | ಮಹಾನಗರ ಪಾಲಿಕೆ ಸೆರೆ ಹಿಡಿದಿರುವ ಬೀದಿ ನಾಯಿಗಳನ್ನು ಸಂರಕ್ಷಿಸಲು ಮೇನಕಾ ಗಾಂಧಿ ಒತ್ತಾಯ

Photo | PTI
ರಾಯಚೂರು: ನಗರದಲ್ಲಿ ಮಹಾನಗರ ಪಾಲಿಕೆ ಸೆರೆ ಹಿಡಿದಿರುವ 200ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ನಗರ ಸಮೀಪದ ಮನ್ಸಲಾಪೂರ ಒಳಚರಂಡಿ ಸಂಸ್ಕರಣಾ ಘಟಕದ ಬಳಿ ಬೃಹತ್ ಪಂಜರದಲ್ಲಿ ಕೂಡಿ ಹಾಕಲಾಗಿದ್ದು ಅವುಗಳಿಗೆ ಸರಿಯಾಗಿ ಆಹಾರ ನೀರು ಪೂರೈಸುತ್ತಿಲ್ಲ ಎಂಬ ಮಾಹಿತಿ ದಿಲ್ಲಿಯವರೆಗೂ ತಲುಪಿದೆ.
ಈ ವಿಚಾರವನ್ನು ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಪರಿಸರವಾದಿ ಹಾಗೂ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ)ನ ಸಂಸ್ಥಾಪಕ ಅಧ್ಯಕ್ಷೆ ಮೇನಕಾ ಸಂಜಯ್ ಗಾಂಧಿ ಅವರು ಬಿಜೆಪಿಯ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಸಂದೇಶವನ್ನು ಕಳುಹಿಸಿದ್ದಾರೆ.
ನಾಯಿಗಳಿಗೆ ಆಗುತ್ತಿರುವ ಹಿಂಸೆಯನ್ನು ತಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮೇನಕಾ ಗಾಂಧಿ ಹೇಳಿದ್ದಾರೆ.
ಸಂದೇಶವನ್ನು ಸ್ವೀಕರಿಸಿದ ಕೂಡಲೇ ಕಾರ್ಯ ಪ್ರವೃತ್ತರಾದ ಮಾಜಿ ಸಂಸದರು, ಮಹಾ ನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅವರನ್ನು ಸಂಪರ್ಕಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚಿಸಿದ್ದಾರೆ.





