ನಾಳೆ (ಮೇ 7ರಂದು) ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಿಕೆ

ರಾಯಚೂರು : ನಾಳೆ(ಮೇ 7ರಂದು) ರಾಯಚೂರು ತಾಲೂಕಿನ ಶಕ್ತಿನಗರದ ಬಳಿಯಲ್ಲಿನಡೆಯಬೇಕಿದ್ದ ಮಾಕ್ ಡ್ರಿಲ್ ( ಅಣಕು ನಾಗರಿಕರ ರಕ್ಷಣಾ ಕಾರ್ಯಚರಣೆ) ಅನಿವಾರ್ಯ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರಾಯಚೂರು, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಮಾಕ್ ಡ್ರಿಲ್ ಮಾಡುವಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅದೇಶ ಮಾಡಲಾಗಿತ್ತು. ರಾಯಚೂರಿನ ಶಕ್ತಿನಗರದಲ್ಲಿ ವಿದ್ಯುತ್ ಶಾಖೋತ್ಪನ್ನ ಕೇಂದ್ರ ಹಾಗೂ ಯರಮರಸ್ ನಲ್ಲಿ ವಿದ್ಯುತ್ ಕ್ರಿಟಿಕಲ್ ಕೇಂದ್ರ ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಇರುವ ಕಾರಣ ಮಾಕ್ ಡ್ರಿಲ್ ಮಾಡಲು ಆದೇಶ ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶದಂತೆ ಮಾಕ್ ಡ್ರಿಲ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತಿಶ್ ಕೆ. ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಳೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿ.ಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರ್ಯಕ್ರಮ ಆಯೋಜಿಸಿದ್ದು, ಇದೇ ವೇಳೆ ಮಾಕ್ ಡ್ರಿಲ್ ಆದೇಶ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಭದ್ರತೆಯ ದೃಷ್ಠಿಯಿಂದ ತಲೆ ಬಿಸಿಯಾಗಿತ್ತು. ಕಾರ್ಯಕ್ರಮದ ನಿಮಿತ್ತ ಬಳ್ಳಾರಿ, ಯಾದಗಿರಿ ಸೇರಿ 5 ಜಿಲ್ಲೆಗಳಿಂದ ಹೆಚ್ಚುವರಿ ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿತ್ತು.





