Raichur | ಸರಕಾರಿ ಕಚೇರಿಯಲ್ಲಿ ಮದ್ಯ ಸೇವನೆ ಆರೋಪ : ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಲಿಂಗಸುಗೂರು : ಲಿಂಗಸುಗೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಮದ್ಯ ಪಾರ್ಟಿ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ಕಚೇರಿಗಳು ಸಾರ್ವಜನಿಕ ಸೇವೆಯ ಕೇಂದ್ರಗಳಾಗಬೇಕಾದರೆ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ವೈಯಕ್ತಿಕ ಮೋಜು-ಮಸ್ತಿಯ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ನಿವೃತ್ತ ನೌಕರರು ಹಾಗೂ ಇಲಾಖೆ ಸಿಬ್ಬಂದಿಗಳು ಸೇರಿಕೊಂಡು ರಾತ್ರಿ ವೇಳೆ ಸರ್ಕಾರಿ ಕಚೇರಿಯಲ್ಲೇ ಪಾರ್ಟಿ ನಡೆಸಿದ್ದಾರೆ ಎನ್ನಲಾಗಿದ್ದು, ಕಚೇರಿಯನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿರುವುದು ಸರ್ಕಾರದ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
“ಸರ್ಕಾರಿ ಕಚೇರಿ ಅಧಿಕಾರಿಗಳ ಖಾಸಗಿ ಕ್ಲಬ್ ಅಲ್ಲ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಡವಳಿಕೆ ನಿಯಮಗಳ ಪ್ರಕಾರ ಸರ್ಕಾರಿ ನೌಕರರು ಸೇವಾ ಶಿಸ್ತು, ನೈತಿಕತೆ ಹಾಗೂ ಸಾರ್ವಜನಿಕ ಆಸ್ತಿಯ ಗೌರವ ಕಾಪಾಡುವುದು ಕಡ್ಡಾಯವಾಗಿದೆ. ಕಚೇರಿ ಆವರಣದಲ್ಲಿ ಮದ್ಯಪಾನ ಕೂಟ, ಅನಧಿಕೃತ ಸಭೆ ಅಥವಾ ಅಸಭ್ಯ ವರ್ತನೆ ನಡೆಸುವುದು ಸೇವಾ ಶಿಸ್ತುಭಂಗ ಹಾಗೂ ಸರ್ಕಾರಿ ಆಸ್ತಿಯ ದುರುಪಯೋಗಕ್ಕೆ ಒಳಪಡುವ ಕಾನೂನು ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರಾತ್ರಿ ವೇಳೆ ಹೊರಗಿನ ವ್ಯಕ್ತಿಗಳಿಗೆ ಕಚೇರಿ ಪ್ರವೇಶ ಕಲ್ಪಿಸಿರುವುದು ಭದ್ರತಾ ದೃಷ್ಟಿಯಿಂದಲೂ ಆತಂಕಕಾರಿ ಬೆಳವಣಿಗೆಯಾಗಿದೆ. ಕಚೇರಿಯಲ್ಲಿರುವ ಸಾರ್ವಜನಿಕ ಕಾಮಗಾರಿಗಳ ದಾಖಲೆಗಳು ಹಾಗೂ ತಾಂತ್ರಿಕ ಕಡತಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಮೂಡಿವೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಪ್ಪ ಆದವಾನಿ ಅವರ ಆಡಳಿತ ವೈಫಲ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






