ರಾಯಚೂರು | ಆರ್ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಆರೋಪ : ಕ್ರಮಕ್ಕೆ ಕೆಆರ್ ಎಸ್ ಒತ್ತಾಯ

ರಾಯಚೂರು : ಆರ್ಡಿಸಿಸಿ ಬ್ಯಾಂಕಿನಲ್ಲಿ ನಕಲಿ, ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಮಾಡಿದ ಬ್ಯಾಂಕ್ ವ್ಯವಸ್ಥಾಪಕರು, ಸಿಬ್ಬಂದಿ, ವೃತ್ತ ನಿರೀಕ್ಷಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರೈತ ಸಂಘ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಅವರು ಒತ್ತಾಯಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಜಿಲ್ಲಾ ಸಹಕಾರಿ ಸಂಘ ಆರ್ಡಿಸಿಸಿ ರಾಯಚೂರು ಕೇಂದ್ರ ಕಚೇರಿ ಅಡಿ ಸಿಂಧನೂರಿನಲ್ಲಿ ಆರ್ಡಿಸಿಸಿಯ ಶಾಖಾ ಬ್ಯಾಂಕ್ ಇದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ನೀಡುವ ಶೂನ್ಯ ಬಡ್ಡಿ ಸಾಲರ ಮೊತ್ತವನ್ನು ಸಿಂಧನೂರು ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಮಂಜೂರು ಮಾಡುವುದು ಬ್ಯಾಂಕಿನ ಪ್ರಮುಖ ಉದ್ದೇಶವಾಗಿದೆ. ಸಾಲ ನೀಡುವ ಮುನ್ನ ಸಾಲ ಕೋರಿದ ರೈತನು ಹೊಂದಿದ ಹಿಡುವಳಿ ಮತ್ತು ಅದರ ಮೇಲಿನ ಋಣಭಾರಗಳನ್ನು ಆತ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ತದನಂತರವೇ ಸದರಿ ಬ್ಯಾಂಕ್ ತನ್ನ ಖಾತೆಯಿಂದ ಸಂಬಂಧಪಟ್ಟ ಸಾಲಗಾರರಿಗೆ ಸಾಲ ಮಂಜೂರಿ ಮಾಡುವುದು ಕಾನೂನು ಪ್ರಕಾರ ಕಡ್ಡಾಯವಾಗಿವಾಗಿದೆ.
ಆದರೆ, ಆರ್ಡಿಸಿಸಿ ಸಿಂಧನೂರು ಶಾಖಾ ಬ್ಯಾಂಕಿನಲ್ಲಿ ಸಾಲಮಂಜೂರಾತಿ, ಭದ್ರತಾ ಅಸ್ತಿಪತ್ರ, ಕೃಷಿ ಜಮೀನಿನ ಪಾರದರ್ಶಕತೆ, ಸಾಲ ಕೋರಿದವರಿಗೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆ ಇದಾವುದು ಇಲ್ಲದೆ 4 ಜನ ಬೇನಾಮಿ ರೈತರ ಹೆಸರಲ್ಲಿ 36,75,104 ಲಕ್ಷ ರೂ. ಶೂನ್ಯ ಬಡ್ಡಿ ಸಾಲವನ್ನು ಆರ್ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಕೆ.ಶರಣಪ್ಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಾ, ಕೃ.ಪ.ನ. ಸಂಘ ಹಂಪನಾಳೆ, ಸಿಂದನೂರು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಪಿ.ವೀರೇಶ್. ಸಿಂಧನೂರು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ವಾಣಿ ಹಾಗೂ ಸಿಂಧನೂರು ಬ್ಯಾಂಕಿನ ವೃತ್ತ ನಿರೀಕ್ಷಕ ಕೆ.ಬಸವರಾಜ ಇವರೆಲ್ಲರು ಸೇರಿ ಬೇನಾಮಿ ರೈತರ, ಬೇನಾಮಿ ಭೂಮಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಬ್ಬಾಸಲಿ, ರಾಮಕೃಷ್ಣ, ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.







